ಪೊಲೀಸ್ ಠಾಣೆಗಳು ಈಗ ಕಾಂಗ್ರೆಸ್ ಕಚೇರಿಗಳಾಗಿವೆ. ಕಾಂಗ್ರೆಸ್ ಸರ್ಕಾರವು ಪೊಲೀಸರನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಆರೋಪಿಸಿದ್ದಾರೆ.
ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಅಶೋಕ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಈ ಘಟನೆಯು ನಮ್ಮ ಕಾರ್ಯಕರ್ತರಿಗೆ ನೋವುಂಟು ಮಾಡಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮಕ್ಕಳನ್ನು ಉಳಿಸದೆ ನೂರು ಸಮಾವೇಶ ಮಾಡಿದರೂ ವ್ಯರ್ಥ: ಸರ್ಕಾರದ ವಿರುದ್ಧ ಆರ್.ಅಶೋಕ್ ಆಕ್ರೋಶ
“ವಿನಯ್ ಒಳ್ಳೆಯ ವಿದ್ಯಾವಂತ, ಪತ್ನಿ ಸಾಫ್ಟ್ವೇರ್ ಇಂಜಿನಿಯರ್. 2-3 ತಿಂಗಳಿಂದ ಎಸ್ಪಿ ಮೂಲಕ ಕಾಂಗ್ರೆಸ್ ಶಾಸಕರು, ಶಾಸಕರ ಆಪ್ತ ತೆನ್ನೀರ ಮಹಿನಾ ಕಿರುಕುಳ ನೀಡಿದ್ದಾರೆ. ಶಾಸಕ ಬೆದರಿಕೆ ಹಾಕಿರುವುದನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ವಿನಯ್ ಮಡಿಕೇರಿ ಬಿಟ್ಟು ಬೆಂಗಳೂರಿನ ಮನೆಗೆ ಬಂದರೂ ಪೊಲೀಸರು ಕಿರುಕುಳ ನೀಡಿದ್ದಾರೆ. ಪೊಲೀಸ್ ಠಾಣೆಗಳೆಲ್ಲವೂ ಕಾಂಗ್ರೆಸ್ ಕಚೇರಿಗಳಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಾಂಗ್ರೆಸ್ ಸರ್ಕಾರವು ಪೊಲೀಸರನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳಲು ಬಳಸಿಕೊಳುತ್ತಿದೆ. ಸಿಎಂ ಪದಕ ಲಭಿಸಿದ ಪೊಲೀಸ್ ಮೇಲೆ ಲೋಕಾಯುಕ್ತ ದಾಳಿ ಆಗಿದೆ. ವಿನಯ್ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಆಗಬೇಕು, ಅದಕ್ಕಾಗಿ ಸೂಕ್ತ ತನಿಖೆ ಆಗಬೇಕು. ಕೊಡಗು ಎಸ್ಪಿ ಅಮಾನತಾಗಬೇಕು. ನಾಳೆ ನಮ್ಮ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ. ತೆನ್ನೀರಾ, ಪೊನ್ನಣ್ಣ, ಮಂತರ್ ಗೌಡ ವಿರುದ್ಧ ದೂರು ನೀಡಿದ್ದೇವೆ” ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವಿದ್ದಾಗ ಪೊಲೀಸರನ್ನು ಸರ್ಕಾರ ದುರ್ಬಳಕೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುವುದು, ಬಿಜೆಪಿ ಸರ್ಕಾರವಿದ್ದಾಗ ಸರ್ಕಾರ ಪೊಲೀಸರನ್ನು ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ.
