ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಬೆಳಕಿಗೆ ಬಂದು ಬರೋಬ್ಬರಿ 12 ದಿನಗಳ ಬಳಿ ಪ್ರಧಾನಿ ಮೋದಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರಜ್ವಲ್ ರೇವಣ್ಣ ಅವರಂತಹವರ ವಿಚಾರದಲ್ಲಿ ಸಹನೆ ಇರಬಾರದು. ಅವರ ವಿರುದ್ಧ ನಾವು ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಅವರು ದೇಶದಿಂದ ಓಡಿಹೋಗಲು ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಟ್ಟಿದೆ” ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಮೋದಿ, “ಪ್ರಕರಣವು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದು, ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ವಿಡಿಯೋಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದಿದ್ದರೆ, ಅವರು ನಿಗಾ ಇಡಬೇಕಿತ್ತು. ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆ ವಹಿಸಬೇಕು. ಆತ ದೇಶ ತೊರೆಯದಂತೆ ತಡೆಯಬೇಕಿತ್ತು. ಆದರೆ, ಅವರು ಏನನ್ನೂ ಮಾಡಿಲ್ಲ. ಕೇಂದ್ರ ಸರ್ಕಾಋಕ್ಕೂ ಮಾಹಿತಿ ನೀಡಿಲ್ಲ” ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
“ಕೃತ್ಯದ ಸಾವಿರಾರು ವಿಡಿಯೋಗಳಿವೆ. ಆ ವಿಡಿಯೋಗಳು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿದ್ದ ಕಾಲದ್ದು ಎಂಬುದನ್ನು ಸೂಚಿಸುತ್ತದೆ. ಒಕ್ಕಲಿಗರು ತಮ್ಮ ಮತದಾನದ ಹಕ್ಕು ಚಲಾಯಿಸಿದ ನಂತರ, ಚುನಾವಣೆ ಸಮಯದಲ್ಲಿ ಆ ವಿಡಿಯೋಗಳನ್ನು ಹರಿಬಿಡಲಾಗಿದೆ” ಎಂದು ಹೇಳಿದ್ದಾರೆ.
“ಕಾನೂನುಗಳ ಅಡಿಯಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಆತನನ್ನು ದೇಶಕ್ಕೆ ಕರೆತರಬೇಕು” ಎಂದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಬಳಿಕ, ಮೈತ್ರಿ ಮುರಿದುಕೊಂಡಿತ್ತು. ಈ ಬಾರಿಯ ಚುನಾವಣೆಗಾಗಿ 2023ರ ಸೆಪ್ಟೆಂಬರ್ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣನನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಮೈಸೂರಿನಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಪ್ರಜ್ವಲ್ ಪರವಾಗಿ ಮೋದಿ ಮತ ಯಾಚಿಸಿದ್ದರು.
ಈ ವರದಿ ಓದಿದ್ದೀರಾ?: ಮೋದಿ, ರಾಹುಲ್ ಗಾಂಧಿ ಮತ್ತು ಅಮೇಥಿ; ಓಡಿ ಹೋಗುತ್ತಿರುವವರು ಯಾರು?
ವಿಕೃತ ಕಾಮುಕನ ಪರವಾಗಿ ಮತ ಯಾಚಿಸಿದ ಮೋದಿ ದೇಶದ ಜನರಲ್ಲಿ ಕ್ಷಮೆ ಕೇಳಬೇಕೆಂದು ರಾಷ್ಟ್ರಾದ್ಯಂತ ಒತ್ತಾಯ ಕೇಳಿಬಂದಿದೆ. ಆದರೂ, ಮೋದಿ ಕ್ಷಮೆ ಕೇಳಿಲ್ಲ. ಮಾತ್ರವಲ್ಲ, ಪ್ರಕರಣ ಬೆಳಕಿಗೆ ಬಂದ ಮೇಲೂ ರಾಜ್ಯಕ್ಕೆ ಭೇಟಿ ನೀಡಿದ್ದ ಮೋದಿ, ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಏಪ್ರಿಲ್ 26ರಂದು ನಡೆದ ಮತದಾನಕ್ಕೂ ಮೂರು ದಿನಗಳ ಮುನ್ನ ಪ್ರಜ್ವಲ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್ಡ್ರೈವ್ ಹಾಸನದಲ್ಲಿ ಸಿಕ್ಕಿದ್ದವು. ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಪ್ರಕರಣದ ಓರ್ವ ಸಂತ್ರಸ್ತೆಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರನ್ನು ಎಸ್ಐಟಿ ಬಂಧಿಸಿದೆ. ಪ್ರಜ್ವಲ್ ಬಂಧನಕ್ಕೆ ‘ಬ್ಲೂ ಕಾರ್ನರ್ ನೋಟಿಸ್’ ಜಾರಿ ಮಾಡಲಾಗಿದೆ.