ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣದ ಪ್ರಕರಣದಲ್ಲಿ ಸಂತ್ರಸ್ತೆ ಅಪಹರಣವಾಗಿದೆ. ಆಕೆಯನ್ನು ರೇವಣ್ಣ ಕುಟುಂಬವೇ ಅಪಹರಿಸಿದೆ ಎಂದು ಸಂತ್ರಸ್ತೆಯ ಮಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಜ್ವಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಕೆ.ಆರ್ ನಗರದ ಸಂತ್ರಸ್ತ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಆಕೆಯ ಮಗ ರಾಜು ಎಂಬವರು ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
“ಏಪ್ರಿಲ್ 29ರಂದು ತಮ್ಮ ಮನೆಗೆ ಬಂದಿದ್ದ ರೇವಣ್ಣ ಅವರ ಸಹಚರ ಸತೀಶ್ ಬಾಬಣ್ಣ ಎಂಬಾತ ‘ರೇವಣ್ಣ ಅವರು ನಿಮ್ಮನ್ನ ಬರಲು ಹೇಳಿದ್ದಾರೆಂದು’ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾನೆ. ಎಲ್ಲಿಗೆ ಕರೆದುಕೊಂಡು ಹೋದರು. ಆಕೆಯನ್ನು ಕರೆದೊಯ್ದ ನಂತರವಷ್ಟೇ, ಆಕೆಯ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿರುವುದು ನಮಗೆ ತಿಳಿಯಿತು” ಎಂದು ಸಂತ್ರಸ್ತೆಯ ಮಗ ದೂರಿನಲ್ಲಿ ವಿವರಿಸಿದ್ಧಾರೆ.
ಆರೋಪಿ ಕುಟುಂಬವೇ ಸಂತ್ರಸ್ತೆಯನ್ನು ಅಪಹರಣ ಮಾಡಿರುವುದು ಬಿಹಾರದಂತಹ ಪರಿಸ್ಥಿತಿ ಕರ್ನಾಟಕದಲ್ಲಿಯೂ ಎದುರಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಕ್ಷ್ಯನಾಶಕ್ಕಾಗಿ ಆರೋಪಿಗಳು ಸಂತ್ರಸ್ತೆಯರು ಮತ್ತು ಸಾಕ್ಷಿಗಳನ್ನು ಅಪಹರಿಸುವ ಘಟನೆಗಳು ಬಿಹಾರದಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಂತದ್ದೇ ಘಟನೆಗಳು ರಾಜ್ಯದಲ್ಲಿಯೂ ನಡೆಯುತ್ತಿವೆ. ಈ ಬೆಳವಣಿಗೆಗಳು ಆತಂಕವನ್ನು ಹೆಚ್ಚಿಸುತ್ತಿವೆ.
ಪ್ರಜ್ವಲ್ ಲೈಂಗಿಕ ಹಗರಣದ ತನಿಖೆಯನ್ನು ಎಸ್ಐಟಿಗೆ ವಹಿಸಿರುವ ಸರ್ಕಾರ, ಕೈತೊಳೆದುಕೊಂಡು ಕುಳಿತಿದೆ. ಸಂತ್ರಸ್ತರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಭಾವಿ ಕುಟುಂಬದ ವಿರುದ್ಧ ದೂರು ಆರೋಪಗಳು ಬಂದಾಗ, ಪ್ರಭಾವಿಗಳು ತಮ್ಮ ಪ್ರಭಾವ ಬಳಸಿ ಸಾಕ್ಷ್ಯ ನಾಶಕ್ಕೆ ಯತ್ನಿಸುತ್ತಾರೆ ಎಂಬುದು ಗೊತ್ತೇ ಇರುವ ಸಂಗತಿ. ಆ ಕಾರಣಕ್ಕಾಗಿ ಹಲವಾರು ಪ್ರಕರಣಗಳಲ್ಲಿ ಪ್ರಭಾವಿಗಳನ್ನು ಬಂಧಿಸಿದರೆ, ಅವರಿಗೆ ಜಾಮೀನನ್ನೂ ಸಹ ನೀಡುವುದಿಲ್ಲ. ಜಾಮೀನು ನೀಡಿದರೂ, ಸಂತ್ರಸ್ತ ಕುಟುಂಬ ಅಥವಾ ಕೃತ್ಯ ನಡೆದಿದ್ದ ಜಿಲ್ಲೆಗೆ ಆರೋಪಿಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಜೊತೆಗೆ, ದೂರುದಾರರು ಅಥವಾ ಸಂತ್ರಸ್ತರಿಗೆ ರಕ್ಷಣೆಯನ್ನೂ ನೀಡಬೇಕಾಗುತ್ತದೆ.
ಹೀಗಿದ್ದರೂ, ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯು ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸೇರಿದ್ದು, ಇನ್ನೂ ಆತನ ಬಂಧನವಾಗಿಲ್ಲ. ಇಂತಹ ಸಂದರ್ಭದಲ್ಲಿಯೂ ಸಂತ್ರಸ್ತರಿಗೆ ಸರ್ಕಾರ ರಕ್ಷಣೆ ನೀಡಿಲ್ಲ. ಇದು ಆಡಳಿತ ನಿರ್ಲಕ್ಷ್ಯವೆಂದು ಆಕ್ರೋಶ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ, “ಸಿದ್ದರಾಮಯ್ಯನವರೇ ಇನ್ನೂ ಏನು ಮಾಡ್ತಾ ಇದ್ದೀರಿ? ಸಾಕ್ಷಿ ನಾಶ ಮಾಡುವ ಈ ದುಷ್ಟರನ್ನು ಬೇಗ ಬಂಧಿಸಿ, ಇಲ್ಲದಿದ್ದರೆ ಆ ಪಾಪಕ್ಕೆ ನಿಮ್ಮ ಕೊಡುಗೆಯೂ ಇರುತ್ತೆ ಮರೆಯಬೇಡಿ” ಎಂದು ಹಲವಾರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.