ಯಾರು ಸಂವಿಧಾನ, ಪ್ರಜಾಪ್ರಭುತ್ವ ಉಳಿಸಬೇಕು ಎಂದು ಬಯಸುತ್ತಾರೋ ಅವರೆಲ್ಲರೂ ಸೋಮವಾರ ನಡೆಯುವ ಕಾಂಗ್ರೆಸ್ ಮಿತ್ರ ಪಕ್ಷಗಳ ಸಭೆಯ ಭಾಗಿಯಾಗುತ್ತಾರೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ನಡೆಯುವ ಕಾಂಗ್ರೆಸ್ ಮಿತ್ರ ಪಕ್ಷಗಳ ಸಭೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
“ದೇಶದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಆ ಒಂದು ದೃಷ್ಟಿಯಿಂದ ಎಲ್ಲ ಮಿತ್ರ ಪಕ್ಷಗಳು ಒಗ್ಗೂಡಿ ದೇಶದಲ್ಲಿ ನಡೆಯುತ್ತಿರುವ ದುರಾಡಳಿತ ವಿರುದ್ಧ ಒಂದು ತೀರ್ಮಾನ ಮಾಡುತ್ತವೆ” ಎಂದರು.
“ಒಗ್ಗಟ್ಟಾಗಿ ಮುಂಬರುವ ಲೋಕಸಭಾ ಚುನಾವಣೆ ತಯಾರಿ ನಡೆಯುತ್ತದೆ. ಎಲ್ಲ ರೀತಿಯ ಪೂರ್ವಸಿದ್ಧತೆಗಳು ಆಗಿವೆ. ದೇಶದಲ್ಲಿರುವ ಎಲ್ಲ ಪ್ರತಿಪಕ್ಷಗಳು ಸಭೆಯಲ್ಲಿ ಭಾಗಿಯಾಗುತ್ತವೆ” ಎಂದು ತಿಳಿಸಿದರು.
ಮೈಸೂರು ದಸರಾ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, “ಅಧಿಕಾರಿಗಳ ಸಭೆ ಕರೆದಿದ್ದೇನೆ. ದಸರಾ ಜಂಬೂ ಸವಾರಿಗೆ ಆನೆಗಳು ಇನ್ನಿತರ ತಯಾರಿ ಬಗ್ಗೆ ಸವಿಸ್ತಾರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಮಾಹಿತಿ ನೀಡಿದರು.
ಸಿಂಹದ ಮರಿಗಳಿಗೆ ನಾಮಕರಣ
“ಸಚಿವ ಆದ ಬಳಿಕ ಮೊದಲ ಬಾರಿಗೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದೇನೆ. ವಿಶೇಷವಾಗಿ ಈ ಮೃಗಾಲಯದಲ್ಲಿ ಐದು ಸಿಂಹಗಳಿವೆ, ರಾಜು ಮತ್ತು ನಿರ್ಭಯ ಸಿಂಹಗಳಿಗೆ ಜನಿಸಿದ ಮೂರು ಮರಿಗಳಿಗೆ ಸೂರ್ಯ, ಚಂದ್ರ, ಕಬಿನಿ ಎಂದು ನಾಮಕರಣ ಮಾಡಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಅವಕಾಶವಾದಿ ಜೆಡಿಎಸ್ ಪಕ್ಷ ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ; ದಿನೇಶ್ ಗುಂಡೂರಾವ್ ಟೀಕೆ
“ಮೃಗಾಲಯದ ಅಧಿಕಾರಿಗಳು ಮೃಗಾಲಯವನ್ನು ತುಂಬಾ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಲಕ್ಷಾಂತರ ಜನ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಪ್ರಾಣಿಗಳ ಕುರಿತು ತಿಳುವಳಿಕೆ ನೀಡುವಲ್ಲಿ ಮೃಗಾಲಯ ಪ್ರಮುಖವಾಗುತ್ತಿದೆ. ಅರಣ್ಯ ಇಲಾಖೆಯ ವತಿಯಿಂದ ಮೃಗಾಲಯದ ಅಭಿವೃದ್ಧಿಯ ಕುರಿತು ಸಭೆಯನ್ನೂ ನಡೆಸುತ್ತೇನೆ” ಎಂದು ಹೇಳಿದರು.