ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡ್ಗೆ ತಲಾ 15 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದರಲ್ಲ, ಆ ಹಣವೆಲ್ಲಾ ಏನಾಯ್ತು ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, ಬೆಂಗಳೂರಿನ ಉದ್ದಗಲಕ್ಕೂ ಬಾಯ್ತೆರಿದಿರುವ ಯಾಮಸ್ವರೂಪಿ ರಸ್ತೆ ಗುಂಡಿಗಳನ್ನು ನೋಡಿದರೆ ಬಹುಶಃ ಆ ದುಡ್ಡೆಲ್ಲವೂ ತಮ್ಮ ಕಮಿಷನ್ ಪಾಲಾದಂತಿದೆ ಅಥವಾ ಈಗ ಚನ್ನಪಟ್ಟಣ ಚುನಾವಣೆ ಖರ್ಚಿಗೆ ಆ ಹಣ ಸಾಗಿಸಿದ್ದೀರೋ? ಬ್ರ್ಯಾಂಡ್ ಬೆಂಗಳೂರು ಕಟ್ಟುವುದು ದೂರದ ಮಾತು ಸ್ವಾಮಿ, ಮೊದಲು ರಸ್ತೆ ಗುಂಡಿ ಮುಚ್ಚಿಸಿ ಜನರ ಪ್ರಾಣ ಉಳಿಸಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರನ್ನು ಪ್ರಶ್ನಿಸಿರುವ ಆರ್ ಅಶೋಕ್, ವಿಶ್ವ ವಿಖ್ಯಾತ ಸರೋದ್ ವಾದಕ ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರು ವಿಧಿವಶರಾಗಿ ಐದು ತಿಂಗಳು ಕಳೆದರೂ ಅವರ ವೈದ್ಯಕೀಯ ಚಿಕಿತ್ಸಾ ವೆಚ್ಚದ ಕಡತವನ್ನ ವಿಲೇವಾರಿ ಮಾಡದೆ ಇನ್ನೂ ಬಾಕಿ ಉಳಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ
ಪಂಡಿತ್ ತಾರಾನಾಥ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ಒಪ್ಪಿದೆ ಎಂದು ಆಗ ಘೋಷಣೆ ಮಾಡಿದ್ದರಲ್ಲ, ನುಡಿದಂತೆ ನಡೆಯುವ ನಿಮ್ಮ ಮುಖ್ಯಮಂತ್ರಿಗಳ ಬದ್ಧತೆ ಬರೀ ಘೋಷಣೆಗೆ ಮಾತ್ರ ಸೀಮಿತಾನಾ? ಪಂಡಿತ್ ತಾರಾನಾಥ್ ಅವರು ಕಳೆದ ದಸರಾ ವೇಳೆ ತಮ್ಮ ಸರ್ಕಾರದ ಭ್ರಷ್ಟಾಚಾರ, ಕಮಿಷನ್ ಕಾಂಡವನ್ನ ಬಯಲು ಮಾಡಿದ್ದರು ಎಂದು ಅವರ ಕುಟುಂಬದ ವಿರುದ್ಧ ಈಗ ಸೇಡು ತೀರಿಸಿಕೊಳ್ಳುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ನಾಡಿನ ಕಲಾವಿದರ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದಿದ್ದರೆ, ಅವರ ಚಿಕಿತ್ಸಾ ವೆಚ್ಚವನ್ನು ಅವರು ಕೇಳುವ ಮುನ್ನವೆ ತಾವೇ ಖುದ್ದಾಗಿ ಹೋಗಿ ಕೊಟ್ಟು ಬರಬೇಕಿತ್ತು. ಆದರೆ ಅವರ ಕಡತ ನಾಲ್ಕು ತಿಂಗಳಿಂದ ವಿಲೇವಾರಿ ಮಾಡದೆ ಕುಟುಂಬಸ್ಥರಿಗೆ ಅವಮಾನ ಮಾಡುತ್ತಿದ್ದೀರಲ್ಲ, ಇದೇನಾ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ರಾಜ್ಯ ಸರ್ಕಾರ ನೀಡುವ ಗೌರವ? ಎಂದು ಟೀಕಿಸಿದ್ದಾರೆ.
