- ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಅನರ್ಹತೆಯ ನಂತರ ಬಂಗಲೆ ತೆರವಿಗೆ ನೋಟಿಸ್
- ಮೋದಿ ಉಪನಾಮ ಟೀಕೆ ಪ್ರಕರಣದಲ್ಲಿ ರಾಹುಲ್ಗೆ ಎರಡು ವರ್ಷ ಜೈಲು ಶಿಕ್ಷೆ
ರಾಹುಲ್ ಗಾಂಧಿ ಅವರು ಲೋಕಸಭಾ ಸದಸ್ಯರಿಗೆ ನೀಡಿರುವ ದೆಹಲಿಯಲ್ಲಿರುವ ಅಧಿಕೃತ ಬಂಗಲೆಯನ್ನು ಶನಿವಾರ (ಏಪ್ರಿಲ್ 22) ತೆರವು ಮಾಡಲಿದ್ದಾರೆ.
ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕ ರಾಹುಲ್ ಅವರನ್ನು ಅನರ್ಹಗೊಳಿಸಿದ ನಂತರ ಸಂಸತ್ ಸದಸ್ಯರ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಲು ಕಳೆದ ತಿಂಗಳು ಲೋಕಸಭಾ ವಸತಿ ಸಮಿತಿಯು ಅವರಿಗೆ ನೋಟಿಸ್ ನೀಡಿತ್ತು.
ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆ ಪ್ರಕಟಗೊಂಡ ನಂತರ ರಾಹುಲ್ ಗಾಂಧಿ ಅವರಿಗೆ ಲೋಕಸಭಾ ಸದಸ್ಯತ್ವದಿಂದ ಅನರ್ಹ ಮಾಡಲಾಗಿದೆ.
ರಾಹುಲ್ ಅವರಿಗೆ ಸೇರಿದ ಎಲ್ಲ ವಸ್ತುಗಳನ್ನು ಶುಕ್ರವಾರ (ಏಪ್ರಿಲ್ 21) ತೆರವು ಮಾಡಲಾಗಿದೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿ ಶುಕ್ರವಾರ ತಮ್ಮ ಅಧಿಕೃತ ನಿವಾಸ 12 ಸಂಖ್ಯೆಯ ತುಘಲಕ್ ಲೇನ್ ಬಂಗಲೆಯನ್ನು ಲೋಕಸಭೆಯ ಕಾರ್ಯಾಲಯಕ್ಕೆ ಹಸ್ತಾಂತರಿಸಲಿದ್ದಾರೆ.
ಶಿಕ್ಷೆಗೆ ತಡೆ ಕೋರಿ ಮನವಿ ಮಾಡಿದ್ದ ಅವರ ಅರ್ಜಿಯನ್ನು ಸೂರತ್ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ರಾಹುಲ್ ಗಾಂಧಿ ಅವರು ಏಪ್ರಿಲ್ 14 ರಂದು ಬಂಗಲೆಯಲ್ಲಿದ್ದ ತಮ್ಮ ಕಚೇರಿ ಹಾಗೂ ಕೆಲವು ವೈಯಕ್ತಿಕ ವಸ್ತುಗಳನ್ನು ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸಕ್ಕೆ ಸ್ಥಳಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಏಪ್ರಿಲ್ 14ರಂದು ರಾಹುಲ್ ಅವರು ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದರು. ಶುಕ್ರವಾರ ಸಂಜೆ ಬಂಗಲೆಯಲ್ಲಿದ್ದ ಉಳಿದ ವಸ್ತುಗಳನ್ನು ಸ್ಥಳಾಂತರಿಸಲಾಗಿದೆ.
ರಾಹುಲ್ ಅವರು ಈಗಾಗಲೇ ತಮ್ಮ ತಾಯಿ ಸೋನಿಯಾ ಗಾಂಧಿಯವರೊಂದಿಗೆ ಜನಪಥ್ ನಿವಾಸದಲ್ಲಿ ವಾಸಿಸುತ್ತಿದ್ದಾರೆ.
2005ರಿಂದಲೂ ಬಂಗಲೆಯಲ್ಲಿದ್ದ ರಾಹುಲ್
ರಾಹುಲ್ ಗಾಂಧಿ ಮೊದಲ ಬಾರಿ 2004ರಲ್ಲಿ ಸಂಸದರಾಗಿದ್ದರು. ಅಂದಿನಿಂದಲೂ 12 ತುಘಲಕ್ ಲೇನ್ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸವಾಗಿದ್ದರು.
ಲೋಕಸಭೆಯ ವಸತಿ ಸಮಿತಿಯು ಏಪ್ರಿಲ್ 22ರೊಳಗೆ ಒಳಗಡೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಿತ್ತು. ನಿಯಮಗಳ ಪ್ರಕಾರ ಸಂಸದ ಸ್ಥಾನದಿಂದ ಅನರ್ಹಗೊಂಡವರು ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸುವ ಹಾಗಿಲ್ಲ.
ಒಂದೂವರೆ ದಶಕಗಳಿಗಿಂತಲೂ ಹೆಚ್ಚು ಸಮಯ ವಾಸವಿದ್ದ ಮನೆಯನ್ನು ಖಾಲಿ ಮಾಡಿರುವ ರಾಹುಲ್ ಅವರು ಸದ್ಯಕ್ಕೆ ತಮ್ಮ ತಾಯಿ ಸೋನಿಯಾ ಗಾಂಧಿ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ.
ಈಗಾಗಲೇ ತಾಯಿ ಜೊತೆ ಇರುವ ಅವರು ಕಳೆದ ವಾರ ಮನೆಯ ಕೆಲವು ಸಾಮಗ್ರಿಗಳನ್ನು ಟ್ರಕ್ನಲ್ಲಿ ಸಾಗಿಸಿದ್ದರು. ಇದೀಗ ಸಂಪೂರ್ಣ ಮನೆಯನ್ನು ಶುಕ್ರವಾರ ತೆರವು ಮಾಡಲಾಗಿದೆ.
ಶಿಕ್ಷೆ ತಡೆ ಕೋರಿದ್ದ ಮನವಿ ತಿರಸ್ಕಾರ
ಮೋದಿ ಉಪನಾಮಕ್ಕೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಅವರಿಗೆ ಸೂರತ್ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಹಿನ್ನಡೆಯಾಗಿತ್ತು.
ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ರಾಬಿನ್ ಮೊಗೇರಾ ಅವರ ಪೀಠ, ರಾಹುಲ್ ಅವರ ಮನವಿಯನ್ನು ತಿರಸ್ಕರಿಸಿದೆ.
ತನಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯದ ಆದೇಶದ ವಿರುದ್ಧದ ಮೇಲ್ಮನವಿ ಬಾಕಿ ಇರುವವರೆಗೆ ತನ್ನ ದೋಷಾರೋಪಣೆಯನ್ನು ತಡೆಹಿಡಿಯಬೇಕೆಂದು ರಾಹುಲ್ ಅವರು ಮನವಿ ಮಾಡಿದ್ದರು.
ಏನಿದು ಪ್ರಕರಣ?
2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ “ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ” ಎಂದು ರಾಹುಲ್ ಅವರು ಲೇವಡಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಸಿಬಿಐ ವಿಚಾರಣೆಗೆ ನೋಟಿಸ್ ಪಡೆದ ಸತ್ಯಪಾಲ್ ಮಲಿಕ್
ಈ ಹೇಳಿಕೆಯನ್ನು ಖಂಡಿಸಿ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಅಪರಾಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.
ಕಳೆದ ತಿಂಗಳು ಪ್ರಕಟವಾದ ಸೂರತ್ ನ್ಯಾಯಾಲಯದ ತೀರ್ಪಿನಲ್ಲಿ ರಾಹುಲ್ ಅವರನ್ನು ದೋಷಿ ಎಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.