ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲು ಡಿಕ್ಕಿಯಿಂದಾಗಿ ಸಂಚಾರ ಸ್ಥಗಿತಗೊಂಡು ಕೊಲ್ಕತ್ತಾದ ಹೌರಾದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತರಲು ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದ್ದು, ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೊಲ್ಕತ್ತಾ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆತರಲು ಅವರೆಲ್ಲರಿಗೂ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ.
ಭಾನುವಾರ ಬೆಳಗ್ಗೆ ಮುಂಜಾನೆ 4.15 ಕ್ಕೆ ಇಂಡಿಗೋ ವಿಮಾನದಲ್ಲಿ ಹೊರಟು ಬೆಂಗಳೂರು ನಗರಕ್ಕೆ 6.50ಕ್ಕೆ 32 ಮಂದಿ ವಾಲಿಬಾಲ್ ಆಟಗಾರರು ಬಂದಿಳಿಯಲಿದ್ದಾರೆ.
ಕೊಲ್ಕತ್ತಾದಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮಹಿಳಾ, ಪುರುಷ ಆಟಗಾರರು, ಕೋಚ್ ಸೇರಿದಂತೆ 32 ಮಂದಿ ಪಾಲ್ಗೊಂಡಿದ್ದರು. ಪಂದ್ಯ ಮುಗಿಸಿ ವಾಪಸ್ ಬರುವಾಗ ಒಡಿಶಾದಲ್ಲಿ ರೈಲು ದುರಂತ ಸಂಭವಿಸಿದ್ದರಿಂದ ಕೊಲ್ಕತ್ತಾದಲ್ಲಿ ಈ ಆಟಗಾರರು ಸಂಕಷ್ಟಕ್ಕೆ ಸಿಲುಕಿದ್ದರು.
ಇದರಿಂದಾಗಿ ತಕ್ಷಣವೇ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಟಿಕೆಟ್ ಬುಕ್ ಮಾಡುವ ಜತೆಗೆ ವಾಪಸ್ ಬರುವ ತನಕವೂ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.