ಫೆಬ್ರವರಿ 12ರಿಂದ ಫೆಬ್ರವರಿ 23ರವರೆಗೆ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 16ರಂದು ಕರ್ನಾಟಕ ರಾಜ್ಯ ಬಜೆಟ್ ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಧಾನಮಂಡಲದ ಅಧಿವೇಶನದ ಮೊದಲ ದಿನವಾದ ಫೆ.12ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಈ ಸಂಬಂಧ ಇಂದಿನ ಸಚಿವ ಸಂಪುಟಲ್ಲಿ ಚರ್ಚೆ ಮಾಡಿ ತೀರ್ಮಾನಿಸಲಾಗಿದೆ.
ಮುಂದೆ ಲೋಕಸಭಾ ಚುನಾವಣೆ ಬರಲಿದೆ. ಹೀಗಾಗಿ ಚುನಾವಣೆ ನೀತಿ ಸಂಹಿತೆ ಇದೇ ಮಾರ್ಚ್ನಿಂದಲೇ ಜಾರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್ ನ್ನು ಫೆಬ್ರವರಿಯಲ್ಲಿ ಮಂಡಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಮುಂದೆ ಲೋಕಸಭಾ ಚುನಾವಣೆ ಇರುವುದರಿಂದ ಈ ಬಾರಿ ಸಿಎಂ ಸಿದ್ದರಾಮಯ್ಯನವರು ಮಂಡಿಸಲಿರುವ ಬಜೆಟ್, ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನು ಓದಿದ್ದೀರಾ? ರೈಲ್ವೆ ಪ್ರಯಾಣಿಕನಿಗೆ ಮನಬಂದಂತೆ ಹಲ್ಲೆಗೈದ ಟಿಟಿಇ: ವಿಡಿಯೋ ವೈರಲ್
ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, 2024 -25ನೇ ಸಾಲಿನ ಬಜೆಟ್ ಮಂಡನೆಗೆ ಈಗಾಗಲೇ ಇಲಾಖಾವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಜನರಲ್ಲಿ ಹೊಸ ಭರವಸೆ ಮೂಡಿಸುವ, ನಿರೀಕ್ಷೆಗೆ ಸ್ಪಂದಿಸುವ ಗಂಭೀರ ಸವಾಲು ಎದುರಾಗಿದೆ. ಬಜೆಟ್ ಮಂಡನೆಯಲ್ಲಿ ಅನುಭವಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಜೆಟ್, ದಾಖಲೆಯ 15ನೇ ಬಜೆಟ್ ಆಗಲಿದೆ. 2023ರ ಜುಲೈ 7ರಂದು ಸಿದ್ದರಾಮಯ್ಯ, ತಮ್ಮ 14ನೇ ಬಜೆಟ್ ಮಂಡಿಸಿದ್ದರು.