ಬಿಜೆಪಿಯಲ್ಲಿ ಬಹಳ ತಡವಾಗಿದ್ದರೂ ಕೂಡ ಗಜ ಪ್ರಸವ ರೀತಿಯಲ್ಲಿ ಅಂತೂ ರಾಜ್ಯಾಧ್ಯಕ್ಷರ ಆಯ್ಕೆಯಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ,ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಬಿ ವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ಬಹಳ ಸಂತೋಷದ ವಿಚಾರ. ಶಿವಮೊಗ್ಗಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ಬಿಜೆಪಿಯಲ್ಲಿ ಇದೇ ಮೊದಲ ಬಾರಿ ಅತ್ಯಂತ ಸಣ್ಣ ವಯಸ್ಸಿನ ರಾಜ್ಯಾಧ್ಯಕ್ಷರ ನೇಮಕವಾಗಿದೆ. ಯಶಸ್ವಿಯಾಗಿ ಬಹಳ ಎಚ್ಚರದಿಂದ ಕೆಲಸ ಮಾಡಲಿ” ಎಂದು ಹೇಳಿದರು.
“ವಿಜಯೇಂದ್ರ ಇಡುವಂತಹ ಪ್ರತಿಯೊಂದು ಹೆಜ್ಜೆ ಯಡಿಯೂರಪ್ಪ ಅವರ ಮೇಲೆ ಪ್ರಭಾವ ಬೀರುತ್ತದೆ. ವಿಜಯೇಂದ್ರ ಅವರ ಹಿಂದೆ ಯಡಿಯೂರಪ್ಪ ಅವರ ಪ್ರಭಾವವಿದೆ. ಹಾಗಾಗಿ ಅವರ ಸಫಲತೆ ಹಾಗೂ ವಿಫಲತೆ ಎರಡೂ ಕೂಡ ಯಡಿಯೂರಪ್ಪರ ಮೇಲೆ ಪ್ರಭಾವ ಬೀರುತ್ತವೆ. ಯಡಿಯೂರಪ್ಪ ಅವರ ಘನತೆಗೂ ಕೂಡ ಪ್ರಭಾವ ಬೀರುವ ರೀತಿ ಇರುವುದರಿಂದ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು” ಎಂದು ಸಲಹೆ ನೀಡಿದರು.
“ರಾಜಕೀಯ ನಿರ್ಣಯಗಳನ್ನು ಬಹಳ ಮುತುವರ್ಜಿಯಿಂದ ತೆಗೆದುಕೊಳ್ಳಬೇಕು. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬುದನ್ನು ನಾನು ಸದ್ಯಕ್ಕೆ ಹೇಳುವುದಿಲ್ಲ. ಅದನ್ನು ಕಾಲವೇ ನಿರ್ಣಯ ಮಾಡುತ್ತದೆ. ಯಡಿಯೂರಪ್ಪನವರ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ಈ ರೀತಿ ಮಾಡಿದ್ದಾರೆ” ಎಂದರು.
“ಪಾರ್ಲಿಮೆಂಟ್ ಚುನಾವಣೆಗೆ ಯಡಿಯೂರಪ್ಪನವರ ಅವಶ್ಯಕತೆ ಬಿಜೆಪಿಗೆ ತುಂಬಾನೇ ಇದೆ. ಮಗನನ್ನು ಆಯ್ಕೆ ಮಾಡುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿಯನ್ನು ಹೆಚ್ಚು ಸ್ಥಾನದಿಂದ ಗೆಲ್ಲಿಸುವ ಜವಾಬ್ದಾರಿ ವಿಜಯೇಂದ್ರ ಅವರಿಗಿಂತಲೂ ಯಡಿಯೂರಪ್ಪನವರಿಗೆ ಹೆಚ್ಚಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕುಟುಂಬ ರಾಜಕಾರಣಕ್ಕೆ ಬಿಜೆಪಿ ವಿರೋಧವಾಗಿಯೇ ಇದೆ: ಈಶ್ವರಪ್ಪ
“ವಿಜಯೇಂದ್ರ ಆಯ್ಕೆಯಿಂದ ಕಾಂಗ್ರೆಸ್ಗೆ ಯಾವುದೇ ರೀತಿಯ ತೊಂದರೆಗಳಿಲ್ಲ. ಈಗಾಗಲೇ ಕಾಂಗ್ರೆಸ್ ತನ್ನ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದೆ. ಬಿಜೆಪಿ ಈ ಆಯ್ಕೆಯಿಂದ ಅವರ ಆಂತರಿಕ ಕಲಹ, ಭ್ರಷ್ಟಾಚಾರ ಯಾವುದೂ ಕೂಡ ಮಾಯವಾಗುವುದಿಲ್ಲ. ಅವರ ಕೆಲಸಕ್ಕಾಗಿ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದಾರೆಯೇ ಹೊರತು ಇದರಿಂದ ಕಾಂಗ್ರೆಸ್ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ” ಎಂದರು.
“ಬಿಜೆಪಿ ಇನ್ನು ಮುಂದೆಯಾದರೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದನ್ನು ಬಿಡಬೇಕು. ಬಿ ವೈ ವಿಜಯೇಂದ್ರ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಬೇಕು” ಎಂದರು.