- ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪ್ರಶಂಸಿಸಿದ ಮಲ್ಲಿಕಾರ್ಜುನ ಖರ್ಗೆ
- ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸಿಗೆ ಸಂಪೂರ್ಣ ಬಹುಮತದ ಭರವಸೆ
ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ನಮ್ಮ ಪಕ್ಷಕ್ಕೆ ಮಾತ್ರವಲ್ಲ,ಜಾತ್ಯತೀತತೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಗೌರವಿಸುವ ಹಾಗೂ ಪ್ರೀತಿಸುವ ಜನರ ಗೆಲುವಾಗುತ್ತದೆ. ದೇಶದ ರಾಜಕೀಯ ಚಿತ್ರಣವನ್ನೇ ಈ ಚುನಾವಣೆ ಬದಲಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಕರ್ನಾಟಕದ ಜನರು ಶೇ. 40ರಷ್ಟು ಲಂಚ ತಾಂಡವವಾಡುತ್ತಿರುವ ಬಿಜೆಪಿ ಸರ್ಕಾರ ತೊಡೆದುಹಾಕಲು ನಿರ್ಧರಿಸಿದ್ದಾರೆ. ಪಕ್ಷದ ಅಧ್ಯಕ್ಷನಾಗಿರುವ ನನಗೆ ಎಲ್ಲಾ ಚುನಾವಣೆಗಳು ಪ್ರತಿಷ್ಠಿತ. ನಾನು ಸ್ಪರ್ಧಿಸಿರುವ 12 ಚುನಾವಣೆಗಳಲ್ಲಿ 11 ಗೆದ್ದಿದ್ದೇನೆ. ಆದರೆ ಕರ್ನಾಟಕದ ಈಗಿನ ಚುನಾವಣೆ ಹೆಚ್ಚು ಮಹತ್ವದ್ದಾಗಿದೆ. ನಾನು ಬ್ಲಾಕ್ ಮಟ್ಟದಿಂದ ನೇರವಾಗಿ ಬಂದಿರುವ ಕಾರಣ ಜನರ ನಾಡಿಮಿಡಿತ ಗೊತ್ತಿದೆ. ಈ ಚುನಾವಣೆಯು ನಮಗೆ ಉತ್ತಮ ಫಲಿತಾಂಶ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಕಾಂಗ್ರೆಸ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
“ಯಾವುದೇ ಮೂಲಸೌಕರ್ಯ ಅಭಿವೃದ್ಧಿಯಿಲ್ಲದೆ ಸರ್ಕಾರವು ಕಳಪೆ ನಿರ್ವಹಣೆಯ ಆಡಳಿತ ನೀಡಿದೆ. ನಮ್ಮ ಸುಂದರ ಬೆಂಗಳೂರು ನಗರದ ಜಾಗತಿಕ ಹೆಸರನ್ನು ಹಾಳು ಮಾಡಿದ್ದಾರೆ. ಶೇ. 40ರಷ್ಟು ಭ್ರಷ್ಟಾಚಾರದ ಸರ್ಕಾರವನ್ನು ರಾಜ್ಯದ ಜನರು ಜನರು ತೊಲಗಿಸಲು ಬಯಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಮುಸ್ಲಿಮರ ಮೀಸಲಾತಿ ರದ್ದು; ಏಪ್ರಿಲ್ 25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
“ರಾಜ್ಯದ ನಾಯಕರೇ, ಮೋದಿ ಹೆಸರಲ್ಲಿ ಎಷ್ಟು ದಿನ ಚುನಾವಣಾ ಹೋರಾಟ ಮಾಡುತ್ತೀರಿ? ಮೋದಿ ಕರ್ನಾಟಕ ಸಿಎಂ ಆಗುತ್ತಾರಾ? ಅಮಿತ್ ಶಾ ಕರ್ನಾಟಕದ ಗೃಹ ಸಚಿವರಾಗುತ್ತಾರಾ? ಇಲ್ಲಿ ಸ್ಥಳೀಯ ಸಮಸ್ಯೆಗಳಿವೆ. ನೀವು ಅಧಿಕಾರದ ಪರ ಎಂದು ಹೇಳುತ್ತಿದ್ದರೆ, 40ರಷ್ಟು ಭ್ರಷ್ಟಾಚಾರವನ್ನು ಮೋದಿ ಅನುಮೋದಿಸುತ್ತಾರೆ ಎಂದು ನೀವು ಒಪ್ಪಿಕೊಳ್ಳಬೇಕು. ಕರ್ನಾಟಕದ ಜನರು ಪ್ರಜ್ಞಾವಂತರು. ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ” ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಅಗತ್ಯ
ಮೀಸಲಾತಿಯು ಜನಸಂಖ್ಯೆಗೆ ಅನುಗುಣವಾಗಿರಬೇಕು ಎಂದು ಸಂವಿಧಾನದಲ್ಲಿದೆ. ಶೋಷಿತ ವರ್ಗಕ್ಕೆ ಡಾ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಮೀಸಲಾತಿ ತೆರವುಗೊಳಿಸಿರುವುದು ಅಪಾಯಕಾರಿ ನಡೆ. ಮೂಲತಃ ಮನುವಾದಿಯಾಗಿರುವ ನೀವು ಚುನಾವಣಾ ರಾಜಕಾರಣಕ್ಕಾಗಿ ಮಾತ್ರ ದಲಿತರ ಹಿತೈಷಿಗಳಾಗಿದ್ದೀರಿ” ಎಂದು ಇತ್ತೀಚಿಗಷ್ಟೆ ಜಾರಿಗೊಳಿಸಿದ ಮೀಸಲಾತಿ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ದೇಶವನ್ನು ಒಗ್ಗೂಡಿಸಿದ ಭಾರತ್ ಜೋಡೋ
“ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಹಮ್ಮಿಕೊಳ್ಳಲಾದ ಭಾರತ್ ಜೋಡೋ ಅಭಿಯಾನ ಭಾರತವನ್ನು ಒಗ್ಗೂಡಿಸಿತು. ಯಾತ್ರೆಗೆ ವಿವಿಧ ಸ್ತರದ ಜನರು ಸಹಕಾರ ನೀಡಿದರು. ಭಾರತ್ ಜೋಡೋ ಯಾತ್ರೆಯ ಜೊತೆ, ಹಾಥ್ ಸೆ ಹಾಥ್ ಜೋಡೋ, ಡಿಜಿಟಲ್ ಸದಸ್ಯತ್ವ ಮುಂತಾದ ಅಭಿಯಾನಗಳು ಯಶಸ್ವಿಯಾದವು. ಏಕತೆ ವಿಷಯ ಬಂದಾಗ ಕಾಂಗ್ರೆಸಿಗೆ ದೇಶದ ಜನತೆ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲೂ ನೀಡುತ್ತಾರೆ. ಇತ್ತೀಚಿಗೆ ಜೈಪುರದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಮಹಿಳೆಯರಿಗೆ ಪಕ್ಷದಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು ಎಂದು ನಿರ್ಣಯ ಅಂಗೀಕರಿಸಿದ್ದೇವೆ” ಎಂದರು.
“ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದವರು ಮಾತ್ರವಲ್ಲ, ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರು ಕಾಂಗ್ರೆಸನ್ನು ಪ್ರಬಲವಾಗಿ ಬೆಂಬಲಿಸಲಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರಂಥ ನಾಯಕರನ್ನೇ ಬಿಜೆಪಿ ದೂರ ತಳ್ಳಿದೆ. ಕೋಮುವಾದಿ ಪಕ್ಷಕ್ಕೆ ಸಜ್ಜನ ಹಾಗೂ ಅಧಿಕಾರ ಸಂಘಟಿಸುವ ನಾಯಕರು ಬೇಕಾಗಿಲ್ಲ. ಅಧಿಕಾರ ಇರುವಾಗಲೂ ಈ ಹಿರಿಯ ನಾಯಕರಿಗೆ ಸಂಪೂರ್ಣ ಸ್ವತಂತ್ರವನ್ನು ನೀಡಿರಲಿಲ್ಲ. ಮತದಾರರು ಎಲ್ಲವನ್ನು ಗಮನಿಸಿದ್ದಾರೆ, ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ” ಎಂದು ತಿಳಿಸಿದರು.