- ಜು. 4ರಂದು ಬಿಎಸ್ವೈ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ
- ಸದನದ ಒಳಗೆ ಬಿಜೆಪಿ ಶಾಸಕರಿಂದ ಹೋರಾಟ ನಡೆಯಲಿದೆ
ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತಮ್ಮ ಆಶ್ವಾಸನೆ ಈಡೇರಿಸದೆ ಮಾತಿಗೆ ತಪ್ಪಿದೆ. ಇದರ ವಿರುದ್ಧ ‘ಮೋಸ ನಿಲ್ಲಿಸಿ, ಗ್ಯಾರಂಟಿ ಜಾರಿಗೊಳಿಸಿ’ ಹೋರಾಟಕ್ಕೆ ಬಿಜೆಪಿ ಮುಂದಾಗಿದೆ ಎಂದು ಮಾಜಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಭಂಡತನ ತೋರುತ್ತಿದೆ. ಕಂಡಿಷನ್ ಇಲ್ಲದೆ ಗ್ಯಾರಂಟಿಗಳನ್ನು ಜಾರಿ ಮಾಡಲು ಆಗ್ರಹಿಸಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದ್ದೇವೆ” ಎಂದು ಹೇಳಿದರು.
“ಶೇ. 50 ಕ್ಕಿಂತ ಹೆಚ್ಚು ವಿದ್ಯುತ್ ದರ ಏರಿಸಿದ್ದು, ಕೈಗಾರಿಕೆಗಳು, ಜನಸಾಮಾನ್ಯರು ವಿದ್ಯುತ್ ದರ ಏರಿಕೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಏರಿಕೆ ಮಾಡಿರುವ ವಿದ್ಯುತ್ ದರವನ್ನು ಕೂಡಲೇ ಇಳಿಕೆ ಮಾಡಬೇಕು. ಈ ಸರ್ಕಾರ ಬೆಲೆ ಏರಿಕೆ, ಭ್ರಷ್ಟಾಚಾರಕ್ಕೆ ಸಾಕ್ಷಿಯಾಗುತ್ತಿದೆ” ಎಂದು ಆರೋಪಿಸಿದರು.
“ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅಧಿಕಾರಕ್ಕೆ ಬಂದಾಕ್ಷಣ ಅವುಗಳ ಅನುಷ್ಠಾನ ಮಾಡುವುದಾಗಿ ತಿಳಿಸಿತ್ತು. ಆದರೆ, ಅದನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಜುಲೈ 4ರಂದು ಹೋರಾಟ ರೂಪಿಸಲಾಗುತ್ತಿದೆ. ಅಂದು ಸದನದ ಹೊರಗೆ ಪಕ್ಷದ ಹಿರಿಯರಾದ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಸದನದ ಒಳಗೆ ಬಿಜೆಪಿ ಶಾಸಕರಿಂದ ಹೋರಾಟ ನಡೆಯಲಿದೆ” ಎಂದು ಮಾಹಿತಿ ನೀಡಿದರು.
“10 ಕೆಜಿ ಅಕ್ಕಿ ಈಗ 5 ಕೆಜಿಗೆ ಬಂದಿದೆ. ಈಗ 5 ಕೆಜಿ ಕೊಡಲು ಬಹಳ ಕಷ್ಟಪಡುತ್ತಿದ್ದಾರೆ. ಮಾತಿನಂತೆ 10 ಕೆಜಿ ಅಕ್ಕಿ ಕೊಡಿ. 200 ಯೂನಿಟ್ ಉಚಿತ ವಿದ್ಯುತ್ ಎಂದಿದ್ದರು. ಈಗ 200 ಯೂನಿಟ್ ಮಾಯವಾಗಿ 10 ತಿಂಗಳ ಸರಾಸರಿ ಮಾಡಿ ಹೆಚ್ಚುವರಿ ಶೇ. 10 ಕರೆಂಟ್ ಕೊಡುವ ಮಾತನಾಡುತ್ತಿದ್ದಾರೆ. ಎಲ್ಲರೂ ಇಲೆಕ್ಟ್ರಿಕ್ ಸ್ಟವ್ ಕೊಂಡುಕೊಂಡು ಕಾಯುತ್ತಿದ್ದಾರೆ. ಕಂಡಿಷನ್ ಇಲ್ಲದೆ 200 ಯೂನಿಟ್ ವಿದ್ಯುತ್ ನೀಡಬೇಕು” ಎಂದರು.
“ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ 2 ಸಾವಿರ ರೂ. ಕೊಡುವುದಾಗಿ ಪ್ರಿಯಾಂಕಾ ಗಾಂಧಿ ಅವರೇ ಘೋಷಿಸಿದ್ದರು. ಈಗ ಮನೆಯೊಡತಿಗೆ ಮಾತ್ರ ಎನ್ನುವ ಮೂಲಕ ಮನೆಯಲ್ಲಿ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮಹಿಳೆಗೂ ಹಣ ಕೊಡಿ” ಎಂದು ಒತ್ತಾಯಿಸಿದರು.
“2022-23ರಲ್ಲಿ ಪಾಸಾಗಿ ಉದ್ಯೋಗ ಸಿಗದವರು ಮಾತ್ರ ನಿರುದ್ಯೋಗಿಗಳೇ? ಹಿಂದಿನ ನಿರುದ್ಯೋಗಿಗಳನ್ನು ಪರಿಗಣಿಸಬೇಕಲ್ಲವೇ? ಚುನಾವಣೆ ವೇಳೆ ಇದೇ ಮಾತನ್ನು ಹೇಳಿದ್ದೀರಾ? ಪ್ರತಿಯೊಬ್ಬ ಪದವಿ ಪಡೆದು ನಿರುದ್ಯೋಗಿ ಆಗಿರುವವರಿಗೆ 3 ಸಾವಿರ ಮತ್ತು ಡಿಪ್ಲೊಮಾ ನಿರುದ್ಯೋಗಿಗಳಿಗೆ 1,500 ರೂ. ಭತ್ಯೆ ಕೊಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಪಕ್ಷ ನಾಯಕ ಸ್ಥಾನದ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳುವುದು ಬೇಡ; ಬಿಜೆಪಿ ತಿರುಗೇಟು
“ರಾಜ್ಯದಲ್ಲಿ ಶಕ್ತಿ ಯೋಜನೆ ಘೋಷಿಸಲಾಗಿದೆ. ಆದರೆ, ಸಾಕಷ್ಟು ಬಸ್ಸುಗಳಿಲ್ಲ. ಮೂರು ಮತ್ತೊಂದು ಬಸ್ಗಳಿವೆ. ಹಲವಷ್ಟು ರಿಪೇರಿಗೆ ಬಂದಿವೆ. ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಅನಾನುಕೂಲತೆ ಉಂಟಾಗಿದೆ. ಬೇಕಾಬಿಟ್ಟಿ ಘೋಷಣೆ ಮಾಡಿದ್ದಾರೆ. ಅವರಾಗಲೀ, ಅವರ ಕುಟುಂಬದವರಾಗಲೀ ಈ ಬಸ್ಗಳಲ್ಲಿ ಓಡಾಡಬೇಕಿಲ್ಲವಲ್ಲವೇ. ಜನರಿಗೆ ನರಕಯಾತನೆ ಆಗುತ್ತಿದೆ” ಎಂದು ಆರೋಪಿಸಿದರು.
“ವಿಪಕ್ಷ ನಾಯಕನ ನೇಮಕಾತಿ ಶೀಘ್ರವೇ ಆಗಲಿದೆ” ಎಂದ ಅವರು, “ಈ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿಗೆ ಹೇಳುವ ನೈತಿಕತೆ ಇಲ್ಲ. ವಿಪಕ್ಷ ನಾಯಕನ ಸ್ಥಾನಕ್ಕೆ ಯಾರೂ ಅರ್ಜಿ ಹಾಕುತ್ತಿಲ್ಲ, ಯಾಕೆಂದರೆ ಇದು ಕಾಂಗ್ರೆಸ್ ಪಕ್ಷವಲ್ಲ. ಅಂಥ ಸಂಸ್ಕೃತಿ ನಮ್ಮದಲ್ಲ” ಎಂದು ಪ್ರಶ್ನೆಗೆ ಉತ್ತರಿಸಿದರು.
“ನಮ್ಮದು ಕುಟುಂಬದ ಪಕ್ಷವಲ್ಲ. ಇದು ಜನರ ಪಕ್ಷ. ಜನರ ಭಾವನೆ, ಮಿಡಿತಗಳನ್ನು ಗಮನಿಸಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ. ಅವರಲ್ಲಿ ನಿವೃತ್ತಿ ಆಗುತ್ತೇನೆ ಎಂದವರು ಮುಖ್ಯಮಂತ್ರಿ ಆಗಿದ್ದಾರೆ. ಅವರಲ್ಲಿ ಎಷ್ಟು ಗುಂಪಿದೆ ನೋಡಿ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ, ವರ್ಗಾವಣೆ ದಂಧೆ ಶುರುವಾಗಿದೆ” ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.