ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ-2020)ಯ ತರಾತುರಿ ಅನುಷ್ಠಾನದಿಂದ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಅಖಿಲ ಭಾರತ ಶಿಕ್ಷಣ ಉಳಿಸುವ ಸಮಿತಿ (ಎಐಎಸ್ಇಸಿ) ವರದಿ ಬಿಡುಗಡೆ ಮಾಡಿದೆ. ಎನ್ಇಪಿ ಬದಲು ರಾಜ್ಯ ಶಿಕ್ಷಣ ನೀತಿ ರಚನೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಎನ್ಇಪಿ ಕುರಿತು ಸಮೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ಸಮಿತಿಯು ರಾಜ್ಯ ಶಿಕ್ಷಣ ನೀತಿಯ ಅಧ್ಯಕ್ಷ ಸುಖದೇವ್ ಥೋರಟ್ ಅವರಿಗೆ ಸಲ್ಲಿಸಿದೆ.
ರಾಜ್ಯದ 24 ಜಿಲ್ಲೆಗಳಲ್ಲಿ ಸಮೀಕ್ಷೆಗೆ ಒಳಪಟ್ಟ ವಿದ್ಯಾರ್ಥಿಗಳ ಪೈಕಿ 96.32% ವಿದ್ಯಾರ್ಥಿಗಳು ಎನ್ಇಪಿಯು ಶಿಕ್ಷಣವನ್ನು ಕಡಿತಗೊಳಿಸುವ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಖಚಿತಪಡಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಲ್ಕು ವರ್ಷಗಳ ಪದವಿ ಕೋರ್ಸ್ಗಳನ್ನು ಕರ್ನಾಟಕ ಕೈಬಿಡಬೇಕು ಎಂದಿದ್ದಾರೆ.
ಸಮಿತಿ ಕೂಡ ನಾಲ್ಕು ವರ್ಷಗಳ ಪದವಿ ಕೋರ್ಸ್ಅನ್ನು ಕೈಬಿಡುವಂತೆ ಶಿಫಾರಸು ಮಾಡಿದೆ. ”ನಾಲ್ಕು ವರ್ಷಗಳ ತರಗತಿಗಳನ್ನು ನಡೆಸಲು, ಹೆಚ್ಚಿನ ಕಾಲೇಜುಗಳಲ್ಲಿ ತರಗತಿ ಕೊಠಡಿಗಳು ಮತ್ತು ಸಮರ್ಥ ಉಪನ್ಯಾಸಕರು ಇಲ್ಲ. ನಾಲ್ಕು ವರ್ಷಗಳ ಪದವಿಯನ್ನು ಜಾರಿಗೆ ತಂದರೆ ಉನ್ನತ ಪದವಿ ಅಥವಾ ಮೂರು ವರ್ಷಗಳ ಪದವಿ ಯಾವುದು? ಜೊತೆಗೆ ಪಿಎಫ್ಡಿ ಮಾಡುವವರ ಕತೆಯೇನು? ಎಂಬ ಗೊಂದಲ ಸೃಷ್ಟಿಸುತ್ತದೆ” ಎಂದು ಸಮಿತಿ ಹೇಳಿದೆ.
ಸಮಿತಿಯು ಮೂರು ಹಂತಗಳ ಪ್ರಮುಖ ಪದವಿಗಳನ್ನು – ಸ್ನಾತಕೋತ್ತರ, ಸ್ನಾತಕ ಹಾಗೂ ಪಿಎಚ್ಡಿ – ಸಮರ್ಥಿಸಿದೆ. “ಈ ಪದವಿಗಳು ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಅವಕಾಶಗಳನ್ನು ನೀಡುತ್ತದೆ. ಮೂರು ಹಂತದ ಪದವಿಗಳು ಅಭ್ಯರ್ಥಿಗಳಿಗೆ ಸಮಗ್ರ ಜ್ಞಾನವನ್ನು ಒದಗಿಸುತ್ತದೆ. ಆದರೆ, ಎನ್ಇಪಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶವನ್ನು ನಿರಾಕರಿಸುತ್ತದೆ” ಎಂದು ಹೇಳಿದೆ.
“ಎನ್ಇಪಿ ಬದಲಿಗೆ ಎಸ್ಇಪಿ ಜಾರಿಗೆ ತರುವುದಾದರೆ, ಅದರಲ್ಲಿ, ವಿದ್ಯಾರ್ಥಿಯ ಮೂಲ ಪದವಿಯನ್ನು ಬೆಂಬಲಿಸಲು ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ), ಮಾರ್ಕೆಟಿಂಗ್ ಮತ್ತು ಡಿಜಿಟಲ್ ಫ್ಲೂಯೆನ್ಸಿಯಂತಹ ಒಂದು ಮುಕ್ತ ಆಯ್ಕೆಯನ್ನು ಪರಿಚಯಿಸಬಹುದು” ಎಂದು ಸಮಿತಿ ತಿಳಿಸಿದೆ.
“ಸುಮಾರು 97% ವಿದ್ಯಾರ್ಥಿಗಳು ಎನ್ಇಪಿಯಲ್ಲಿ ಸೂಚಿಸಲಾದ ತಮ್ಮ ಆಯ್ಕೆ ವಿಷಯಗಳಿಗೆ ತರಬೇತಿ ಪಡೆದ ಉಪನ್ಯಾಸಕರೇ ಇಲ್ಲವೆಂದು ಹೇಳಿದ್ದಾರೆ” ಎಂದು ಸಮಿತಿಯು ಗಮನ ಸೆಳೆದಿದೆ.
ಎನ್ಇಪಿ ಕುರಿತ ಸಮೀಕ್ಷೆಗಾಗಿ 83 ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಒಟ್ಟು 2,536 ಮಂದಿಯನ್ನು ಸಂದರ್ಶಿಸಲಾಗಿದೆ. ಇವರಲ್ಲಿ, ನಗರ, ಗ್ರಾಮೀಣ, ಸರ್ಕಾರಿ, ಖಾಸಗಿ ಮತ್ತು ಸ್ವಾಯತ್ತ ಸಂಸ್ಥೆಗಳ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ ಎಂದು ಸಮೀಕ್ಷೆ ವಿವರಿಸಿದೆ.
ಈ ಸುದ್ದಿ ಓದಿದ್ದೀರಾ?:‘ಮಲ ಹೊರುವ’ ಪ್ರಕರಣಗಳಲ್ಲಿ ಒಂದೇ ಒಂದು ಶಿಕ್ಷೆಯಾಗಿಲ್ಲ ಏಕೆ?; ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ವಿಶ್ವವಿದ್ಯಾನಿಲಯಗಳಲ್ಲಿ ಎನ್ಇಪಿ ಹಲವಾರು ವಿಷಯಗಳ ಬಗ್ಗೆ ಭರವಸೆ ನೀಡಿದ್ದರೂ, ಅವು ಮೂಲಭೂತ ಸೌಕರ್ಯಗಳ ಕೊರತೆಯನ್ನು ಹೊಂದಿವೆ. ಎಲ್ಲ ವಯೋಮಾನದವರಿಗೂ ಹೆಚ್ಚಿನ ತರಗತಿ ಕೊಠಡಿಗಳನ್ನು ನಿರ್ಮಿಸಲು, ಬೋಧನೆಯ ಹೊಸ ವಿಧಾನಗಳನ್ನು ಪರಿಚಯಿಸಲು ಮತ್ತು ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಗಮನಹರಿಸಬೇಕು ಎಂದು ಸಮಿತಿ ಹೇಳುತ್ತದೆ.
ಕೇಂದ್ರೀಕೃತ ಪ್ರವೇಶ ಪ್ರಕ್ರಿಯೆ ಮತ್ತು ಯುನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಯುಯುಸಿಎಂಎಸ್) ಅನೇಕ ಬಡ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸಲು ಕಾರಣವಾಗಿದೆ ಎಂದು ವರದಿಯು ಒತ್ತಿಹೇಳಿದೆ.