ಬಿಜೆಪಿಯಿಂದ ಉಚ್ಚಾಟಿತನಾಗಿ, ಮತ್ತೆ ಬಿಜೆಪಿಯ ಟಿಕೆಟ್ ಪಡೆದು ತೆಲಂಗಾಣದ ಗೋಶಾಮಹಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಸಕ ರಾಜಾ ಸಿಂಗ್ ಮತ್ತೊಮ್ಮೆ ಗೆಲುವು ಪಡೆಯುವತ್ತ ಮುನ್ನಡೆ ಸಾಧಿಸಿದ್ದಾರೆ.
13ನೇ ಸುತ್ತಿನ ಮತ ಎಣಿಕೆಯ ವೇಳೆಗೆ 25,000 ಮತಗಳ ಮುನ್ನಡೆಯನ್ನು ರಾಜಾ ಸಿಂಗ್ ಕಾಯ್ದುಕೊಂಡಿದ್ದಾರೆ. ಬಿಆರ್ಎಸ್ ಪಕ್ಷದ ನಂದಕಿಶೋರ್ ವ್ಯಾಸ್ ಎರಡನೇ ಸ್ಥಾನದಲ್ಲಿದ್ದರು.
ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ರಾಜಾ ಸಿಂಗ್ ಅವರನ್ನು 2022ರ ಆಗಸ್ಟ್ನಲ್ಲಿ ಅಮಾನತು ಮಾಡಲಾಗಿತ್ತು. ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿಯವರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗಳನ್ನು ರಾಜಾ ಸಿಂಗ್ ಪುನರಾವರ್ತಿಸಿದ್ದರು. ಹೈದರಾಬಾದ್ನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ಭುಗಿಲೆದ್ದ ನಂತರ ಎಚ್ಚೆತ್ತುಕೊಂಡ ಬಿಜೆಪಿ, ಶಾಸಕ ರಾಜಾ ಸಿಂಗ್ ವಿರುದ್ಧ ಕ್ರಮ ಜರುಗಿಸಿತ್ತು.
ನೂಪುರ್ ಶರ್ಮಾ ನೀಡಿದ ಹೇಳಿಕೆ ಅರಬ್ ರಾಷ್ಟ್ರಗಳಲ್ಲಿ ಭಾರೀ ಸದ್ದು ಮಾಡಿತ್ತು. ಭಾರತದೊಂದಿಗಿನ ವ್ಯಾಪಾರ ವಹಿವಾಟುಗಳಿಗೆ ಮಾರಕವಾಗುವಂತಹ ಬೆಳವಣಿಗೆಗಳು ಆಗಿದ್ದವು.
“ಪಕ್ಷಕ್ಕೆ ಅಗೌರವ ತರುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ” ಎಂದು ರಾಜಾಸಿಂಗ್ ಬರೆದುಕೊಟ್ಟ ಬಳಿಕವೇ ಟಿಕೆಟ್ ನೀಡಲಾಗಿತ್ತು. ಹೈದ್ರಾಬಾದ್ ಲೋಕಸಭಾ ವ್ಯಾಪ್ತಿಯಲ್ಲಿ ಬರುವ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಗೋಶಾಮಹಲ್ ಕೂಡ ಒಂದು.
ಪಕ್ಷದಿಂದ ಅಮಾನತುಗೊಳಿಸಿದ ನಂತರವೂ ರಾಜಾ ಸಿಂಗ್ ಮುಸ್ಲಿಮರ ವಿರುದ್ಧ ಹಲವಾರು ಬಾರಿ ದ್ವೇಷದ ಭಾಷಣಗಳನ್ನು ಮಾಡಿದ್ದರು.
“ಬುರ್ಖಾ ಧರಿಸುವ ಮಹಿಳೆಯರೊಂದಿಗೆ ಸ್ನೇಹ ಬೆಳೆಸಬೇಡಿ” ಎಂದು ಹಿಂದೂ ಮಹಿಳೆಯರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದರು.
“ಹಣೆಯ ಮೇಲೆ ತಿಲಕವನ್ನು ಹೊಂದಿರುವವರು ನನ್ನ ಸಹೋದರರು. ತಿಲಕವನ್ನು ಧರಿಸುವ ಜನರೊಂದಿಗೆ ಮಾತ್ರ ನಾನು ಸ್ನೇಹ ಬೆಳೆಸುತ್ತೇನೆ. ನಮ್ಮ ಸಹೋದರಿಯರೇ, ಬುರ್ಖಾ ಧರಿಸಿದ ಮಹಿಳೆಯರೊಂದಿಗೆ ಸ್ನೇಹ ಬೆಳೆಸಬೇಡಿ” ಎಂದು ಪ್ರಚೋದಿಸಿದ್ದರು.
ಮುಸ್ಲಿಂ ಪುರುಷರಷ್ಟೇ ಅಲ್ಲ, ಮಹಿಳೆಯರಿಂದಲೂ ಹಿಂದೂಗಳು ಅಪಾಯವನ್ನು ಎದುರಿಸುತ್ತಿದ್ದಾರೆ. ಒಂದು ಕಾಲದಲ್ಲಿ ನಾವು ಅಫ್ತಾಬ್ನಿಂದ ಅಪಾಯವನ್ನು ಎದುರಿಸಿದ್ದೇವೆ, ಆದರೆ ಈಗ ಆಯೇಷಾರಿಂದಲೂ ಅಪಾಯವಿದೆ. ಅಫ್ತಾಬ್ಗೆ [ಹಿಂದೂ ಮಹಿಳೆಯರನ್ನು] ಪರಿಚಯಿಸಿದ್ದು ಇದೇ ಆಯೇಷಾ ಎಂದಿದ್ದರು.
ಮಾರ್ಚ್ ತಿಂಗಳು ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಜಾ ಸಿಂಗ್ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು. 2026ರ ವೇಳೆಗೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲಾಗುವುದು ಎಂದು ತಿಳಿಸಿದ್ದರು.
ಮಹಾರಾಷ್ಟ್ರದ ಔರಂಗಾಬಾದ್ ನಗರಕ್ಕೆ ಛತ್ರಪತಿ ಸಂಭಾಜಿನಗರ ಎಂದು ಮರುನಾಮಕರಣ ಮಾಡುವುದನ್ನು ಬೆಂಬಲಿಸಲು ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಜಾ ಸಿಂಗ್, “ಲವ್ ಜಿಹಾದ್ ಪ್ರಕರಣಗಳು ಕಂಡುಬಂದರೆ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದರು.
ಭಾರತದಲ್ಲಿ 100 ಕೋಟಿ ಹಿಂದೂಗಳಿದ್ದಾರೆ. ಹಿಂದೂಗಳು ಜಿಹಾದ್ ಮಾಡಲು ಪ್ರಾರಂಭಿಸಿದರೆ, ನಿಮಗೆ [ಮುಸ್ಲಿಮರಿಗೆ] ಮದುವೆಯಾಗಲು ಹೆಣ್ಣುಗಳು ಸಿಗುವುದಿಲ್ಲ ಎಂದು ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು.
ಅಸಾದುದ್ದೀನ್ ಓವೈಸಿ ಮತ್ತು ಅಕ್ಬರುದ್ದೀನ್ ಓವೈಸಿ ಅವರಿಗೆ ನಿಂದನೀಯ ಪದಗಳನ್ನು ಬಳಸಿದ್ದರು. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕರನ್ನು ನಾಯಿಗಳಿಗೆ ಹೋಲಿಸಿದ್ದರು.
ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯ ಭಾವಚಿತ್ರ ಪ್ರದರ್ಶನ ಮತ್ತು ಅಖಂಡ ಭಾರತ ನಿರ್ಮಾಣಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು.