- ಕುದುರೆ ವ್ಯಾಪಾರ ಮೆರೆದಾಡುತ್ತಿದ್ದು, ಇದನ್ನೆಲ್ಲ ಹೇಳಲು ನನಗೆ ನಾಚಿಕೆ: ನ್ಯಾ. ಸಂದೇಶ್
- ಒಕ್ಕಲಿಗರ ಸಂಘವು ಜು.17ರ ವರೆಗೆ ಯಾವುದೇ ಸಭೆ ನಡೆಸದಂತೆ ಹೈಕೋರ್ಟ್ ಸೂಚನೆ
ರಾಜ್ಯ ಒಕ್ಕಲಿಗರ ಸಂಘದೊಳಗಿನ ಕಿತ್ತಾಟಕ್ಕೆ ಸಂಬಂಧಿಸಿದಂತೆ, “ದೇಶದ ವ್ಯವಸ್ಥೆ ಕುಲಗೆಟ್ಟು ಹೋಗಿದ್ದು, ಎಲ್ಲೆಡೆ ಕುದುರೆ ವ್ಯಾಪಾರ ಮೆರೆದಾಡುತ್ತಿದೆ. ಇದನ್ನೆಲ್ಲ ಹೇಳಲು ನನಗೆ ನಾಚಿಕೆಯಾಗುತ್ತಿದೆ” ಎಂದು ಹೈಕೋರ್ಟು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಿ.ಎನ್.ಬಾಲಕೃಷ್ಣ ಮತ್ತು ಕೋನಪ್ಪ ರೆಡ್ಡಿ ನೇತೃತ್ವದ ಕಾರ್ಯಕಾರಿ ಸಮಿತಿ ವಿರುದ್ಧ ಕೆಂಚಪ್ಪಗೌಡರ ಗುಂಪು 2023ರ ಮೇ 9ರಂದು ಅವಿಶ್ವಾಸ ನಿರ್ಣಯ ಮಂಡಿಸಿ, ನಂತರ ಚುನಾವಣೆ ನಡೆಸಿ ಅಧಿಕಾರ ಪಡೆದದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅಸಲು ದಾವೆಯಲ್ಲಿನ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ, ಒಕ್ಕಲಿಗರ ಸಂಘವು ಜುಲೈ 17ರ ವರೆಗೆ ಯಾವುದೇ ಸಭೆ ನಡೆಸುವುದು ಮತ್ತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಂತೆ ಆದೇಶಿಸಿದೆ.
ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಸಂಘದ ಕಾರ್ಯಕಾರಿ ಸಮಿತಿ ಸಭೆಯನ್ನು ಪ್ರಶ್ನಿಸಿ ಸಂಘದ ಸದಸ್ಯರಾದ ಹಾಸನ ಜಿಲ್ಲೆಯ ಸಂಕ್ಲಾಪುರದ ಎಸ್.ಎಸ್.ರಘುಗೌಡ, ಸೇರಿದಂತೆ ನಾಲ್ವರು ಸದಸ್ಯರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಕೆಂಚಪ್ಪಗೌಡರ ಪರ ಹಾಜರಾಗಿದ್ದ ಹಿರಿಯ ವಕೀಲ ಡಿ.ಆರ್.ರವಿಶಂಕರ್ ಅವರು ವಾದಮಂಡಿಸಿ, “ಉಭಯ ಬಣಗಳು 17ರವರೆಗೆ ಯಾವುದೇ ಸಭೆ ಹಾಗೂ ನಿರ್ಧಾರ ತೆಗೆದುಕೊಳ್ಳದಂತೆ ನಿರ್ದೇಶಿಸಬೇಕು. ಇಲ್ಲದಿದಲ್ಲಿ ಇದು ರೆಸಾರ್ಟ್ ರಾಜಕೀಯಕ್ಕೆ ದಾರಿ ಮಾಡಿಕೊಡುತ್ತದೆ’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಮನವಿ ಪರಿಗಣಿಸಿದ ನ್ಯಾಯಮೂರ್ತಿ ಎಚ್ ಪಿ ಸಂದೇಶ ಅವರು, ಹೈಕೋರ್ಟ್ ಮೆಟ್ಟಿಲೇರಿರುವ ಸದಸ್ಯರನ್ನು ಹೊರತುಪಡಿಸಿ ಉಳಿದ ಸದಸ್ಯರಿಗೆ ಪೂರ್ವ ನೋಟಿಸ್ ನೀಡಿ ಅವಿಶ್ವಾಸ ನಿರ್ಣಯ ಮಂಡಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಜು. 17ಕ್ಕೆ ಮುಂದೂಡಿದರು.
ಸಂಘದ ನಡೆ ಬಗ್ಗೆ ಅಸಮಾಧಾನ
ಒಕ್ಕಲಿಗರ ಸಂಘದ ಕುರಿತು ಪ್ರತಿಕ್ರಿಯಿಸಿರುವ ಪೀಠ, “ಸಂಘದಲ್ಲಿ ಮೆಡಿಕಲ್ ಸೀಟುಗಳನ್ನು ಅನಿವಾಸಿ ಭಾರತೀಯರಿಗೆ ಕೋಟಿಗಟ್ಟಲೇ ರೂಪಾಯಿಗಳಿಗೆ ಮಾರಿಕೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಈ ಕುಸ್ತಿ ನಡೆಯುತ್ತಿದೆ. 1904ರಲ್ಲಿ ಸ್ಥಾಪನೆಗೊಂಡ ಈ ಸಂಘದ ಮೂಲ ಉದ್ದೇಶಗಳೇ ಇಂದು ಮರೆಯಾಗಿವೆ. ಸಂಘದ ಸದಸ್ಯರ ಆತ್ಮಾವಲೋಕನಕ್ಕೆ ಇದು ಸಕಾಲವಾಗಿದೆ” ಎಂದು ನ್ಯಾಯಮೂರ್ತಿಗಳು ಉಚ್ಛರಿಸಿದರು.
“ನನ್ನ ಮಗಳಿಗೆ ಕಿಮ್ಸ್ನಲ್ಲಿ (ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ವೈದ್ಯಕೀಯ ಪದವಿಗೆ ಸೇರಿಸುವಂತೆ ನನ್ನನ್ನು ಬಲ್ಲವರೊಬ್ಬರು ಸಲಹೆ ನೀಡಿದ್ದರು. ಆದರೆ, ಸಂಘದೊಳಗಿನ ಕಿತ್ತಾಟ ನೋಡಿ ಇವರ ಸಹವಾಸವೇ ಬೇಡ ಎಂದು ಕಿಮ್ಸ್ನಿಂದ ದೂರ ಉಳಿದೆ” ಎಂದು ತಮ್ಮ ಅನುಭವ ಹಂಚಿಕೊಂಡರು.