- ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ
- ಅಧಿಕಾರಿ ವರ್ಗದಿಂದ ಯಾವುದೇ ಅಡಚಣೆಯಾಗುವುದಿಲ್ಲ: ಸಚಿವರ ಭರವಸೆ
ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿಯಾಗಿರುವ ನೂರಾರು ಅಭ್ಯರ್ಥಿಗಳು ಸಚಿವರನ್ನು ಮಂಗಳವಾರ ಭೇಟಿಯಾಗಿ ಅಭಿನಂದಿಸಿದರು. ಬಳಿಕ ಮಾತನಾಡಿದ ಸಚಿವರು, “ಕಳೆದ ಮೂರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗಿರುವ 1208 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ಅಧಿಕಾರಿ ವರ್ಗದಿಂದ ಯಾವುದೇ ಅಡಚಣೆಯಾಗುವುದಿಲ್ಲ” ಎಂದು ಭರವಸೆ ನೀಡಿದರು.
“ಮುಖ್ಯಮಂತ್ರಿಗಳ ಸಹಕಾರದಿಂದ ಕೈಗೊಂಡ ಈ ಕ್ರಮದಿಂದಾಗಿ ಈ ಮೊದಲು ಉಂಟಾಗಿದ್ದಂತಹ ಎಲ್ಲ ಸಮಸ್ಯೆಗಳು ಪರಿಹಾರಗೊಂಡಿದೆ. ಇದರಿಂದ ನೂರಾರು ಕುಟುಂಬಗಳ ಬದುಕು ಹಸನಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ನೀವು ಸರ್ಕಾರದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ನಿಮ್ಮ ಮೇಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲುಗಳಲ್ಲಿ ಪುರುಷರಿಗೆ ನೀಡುವ ಸೌಲಭ್ಯಗಳು ಮಹಿಳೆಯರಿಗೇಕಿಲ್ಲ?
“ಕಡ್ಡಾಯವಾಗಿ ಗ್ರಾಮೀಣ ಭಾಗಕ್ಕೆ ತೆರಳಿ ತಮ್ಮ ವೃತ್ತಿಯನ್ನು ಆರಂಭಿಸಿ ವರ್ಗಾವಣೆಗಾಗಿ ಒತ್ತಡ ಹೇರುವ ಕೆಲಸ ಮಾಡಬೇಡಿ. ನಾನು ನಿಮ್ಮಿಂದ ಇದನ್ನು ಅಷ್ಟೇ ನಿರೀಕ್ಷಿಸುತ್ತೇನೆ. ವಯಸ್ಸಾದ ತಂದೆ, ತಾಯಿ, ಆರೋಗ್ಯ, ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡು ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವುದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ” ಎಂದು ಕಿವಿಮಾತು ಹೇಳಿದರು.
“ಮೂರು ವರ್ಷದಿಂದ ಸಾಕಷ್ಟು ಅಲೆದಾಡಿದ್ದೀರಿ, ಕಷ್ಟಪಟ್ಟಿದ್ದೀರಿ. ಈಗ ಒಳ್ಳೆಯ ದಿನಗಳು ಬರುತ್ತಿವೆ. ಸಮರ್ಥವಾಗಿ ಬಳಸಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ನೀಡಿ. ಸಿಂಧುತ್ವ, ಪೊಲೀಸ್ ಪರಿಶೀಲನೆ, ವೈದ್ಯಕೀಯ ಪರಿಶೀಲನೆ ಎಲ್ಲವನ್ನೂ ತುರ್ತಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲಾ ಪರಿಶೀಲನೆ ಮುಗಿದ ತಕ್ಷಣ ಆಯಾ ಅಭ್ಯರ್ಥಿಗಳಿಗೆ ಹುದ್ದೆ ನಿರ್ವಹಿಸಲು ತತ್ ಕ್ಷಣ ಅವಕಾಶ ಮಾಡಿಕೊಡಲಾಗುತ್ತದೆ” ಎಂದು ವಿವರಿಸಿದರು.