“ವಿಪಕ್ಷಗಳು ಮಾಡಿಕೊಂಡಿರುವ ಇಂಡಿಯಾ ಮೈತ್ರಿಕೂಟದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆದರೆ ಸಂತೋಷ. ಆದರೆ ಆ ಪರಿಸ್ಥಿತಿ ಅಲ್ಲಿ ಇಲ್ಲ” ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದಲಿತ ಸಮಾಜ ಖರ್ಗೆಯವರನ್ನು ನೋಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದೆ” ಎಂದರು.
“ಇಂಡಿಯಾ ಒಕ್ಕೂಟದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಲಿ ಎಂದು ಹೇಳಿದ್ದಾರೆ. ಅವರು ದಲಿತ ಎಂದಲ್ಲ, ಓರ್ವ ಕನ್ನಡಿಗ ಎಂದು ಈ ಘೋಷಣೆ ಮಾಡಿದ್ದಾರೆ. ಬೇರೆ ರಾಜ್ಯದವರು ಈ ರೀತಿ ಹೇಳಿದರೆ, ಅಹಿಂದ ನಾಯಕ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಮಾತ್ರ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದಿದ್ದಾರೆ” ಎಂದು ಕಿಡಿಕಾರಿದರು.
“ಡಾ. ಜಿ. ಪರಮೇಶ್ವರ್ 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ದಾಗ ಅವರನ್ನು ಮುಗಿಸಲು ಸಿದ್ದರಾಮಯ್ಯ ಪ್ರಯತ್ನ ಪಟ್ಟಿದ್ದರು. ಆದರೆ ಈಗ ಇಬ್ಬರೂ ಚೆನ್ನಾಗಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದು ಗೊತ್ತಿಲ್ಲ. ಸಿದ್ದರಾಮಯ್ಯ ಅವರು ದಲಿತ ಸಮಾಜ, ಅಹಿಂದ ಹೆಸರು ಹೇಳುತ್ತಾರೆ. ಅಧಿಕಾರ ಹಿಡಿಯುವವರೆಗೆ ಅವರಿಗೆ ಅಹಿಂದ, ನಂತರ ‘ಅಹಿಂದ ಹಿಂದೆ, ನಾನು ಮುಂದೆ’ ಇದು ಸಿದ್ದರಾಮಯ್ಯ ನೀತಿ” ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
“ನಾನು ಮಲ್ಲಿಕಾರ್ಜುನ ಖರ್ಗೆ ಪರವಾಗಿ ಬ್ಯಾಟಿಂಗ್ ಮಾಡುತ್ತಿಲ್ಲ. ಆದರೆ ಕರ್ನಾಟದವರು ಪ್ರಧಾನಿ ಆದರೆ ನಮಗೆ ಸಂತೋಷ. ನಾನು ಎನ್ಡಿಎ ಒಕ್ಕೂಟದಲ್ಲಿ ಇರಬಹುದು. ಹಾಗಿದ್ದರೂ, ದೇಶದ ರಾಜಕಾರಣ ನನಗೆ ಗೊತ್ತು. ಖರ್ಗೆ ಪ್ರಧಾನಿ ಆಗುತ್ತಾರೋ, ಬಿಡುತ್ತಾರೋ ಬೇರೆ ಮಾತು. ಅವರು ಈ ದೇಶದ ಪ್ರಧಾನಿ ಆದರೆ ಸಂತೋಷ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಅವರು ಆಗುವ ಸಾಧ್ಯತೆ ಇಲ್ಲ” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
“ನಿನ್ನೆ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂದು ಹೇಳಿ ಸಿದ್ದರಾಮಯ್ಯ ಅವರು ಸಂಕುಚಿತ ಮನೋಭಾವ ತೋರಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ದುಡಿಮೆಗೆ ತಕ್ಕ ಸ್ಥಾನಮಾನ ಸಿಗದೆ ಇದ್ದರೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಅವರು ಅಸ್ಥಿರ ಮಾಡಲಿಲ್ಲ,” ಎಂದು ಸಿದ್ದರಾಮಯ್ಯ ಕಾಲೆಳೆದರು.
ವಿಧಾನಸೌಧವನ್ನು ರಾಜಕೀಯ ಗಂಜಿ ಕೇಂದ್ರಗಳನ್ನಾಗಿಸುತ್ತಿದ್ದಾರೆ
ಸಚಿವ ಸ್ಥಾನ ಸಿಗದಿದ್ದ ಮೂವರು ಶಾಸಕರಿಗೆ ವಿಶೇಷ ಹುದ್ದೆ ನೀಡಿ, ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, “ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ವಿಧಾನಸೌಧವನ್ನು ರಾಜಕೀಯ ಗಂಜಿ ಕೇಂದ್ರಗಳನ್ನಾಗಿ ಸೃಷ್ಟಿ ಮಾಡುತ್ತಿದ್ದಾರೆ” ಎಂದು ತೀವ್ರ ವಾಗ್ದಾಳಿ ನಡೆಸಿದರು.
“ಈ ಸರಕಾರ ರೈತರನ್ನು ಬಹಳ ಕೇವಲವಾಗಿ ನಡೆಸಿಕೊಳ್ಳುತ್ತಿದೆ. ಆದರೆ, ಅಧಿಕಾರವನ್ನು ಭರ್ಜರಿಯಾಗಿ ಅನುಭವಿಸುತ್ತಿದೆ. 14 ಬಜೆಟ್ಗಳನ್ನು ಮಂಡಿಸಿ, ದಾಖಲೆ ಮಾಡಿದವರು ತಮಗೆ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಿಕೊಂಡಿದ್ದಾರೆ. ನೇಮಕ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯನವರಿಗೆ ಹ್ಯಾಟ್ಸಾಫ್” ಎಂದು ವ್ಯಂಗ್ಯವಾಡಿದರು.
ಕೊನೆಗೂ ಜ್ಯಾತ್ಯಾತೀತ ಸಿದ್ಧಾಂತವನ್ನು ನಾಗಪೂರದ ಬಾಸ್ ನ ಪಾತ್ರಗಳಿಗೆ ಸಮರ್ಪಣೆ ಮಾಡಿದಿರಿ,,,, ಶೂದ್ರರನ್ನು ಶೂದ್ರರ ವಿರುದ್ಧ ಛೂ ಬಿಟ್ಟು ತಮ್ಮ ಕೆಲಸ ಸಾಧಿಸಿಕೊಳ್ಳಲು ಬಳಕೆಯಾಗುತ್ತಿದ್ದೀರಿ,,,,, ಸಾವಿರಾರು ಕಾರ್ಯಕರ್ತರಿಗೆ ಕೈಕೊಟ್ಟು ಸರೆಂಡರ್ ಆಗುವ ಒಳಗಿನ ಕಾರಣ,,,,
ಮಲ್ಲಿಕಾರ್ಜುನ ಖರ್ಗೆ ನಿಮ್ಮ ರಾಜ್ಯದವರೇ ಮಾಜಿ ಜ್ಯಾತ್ಯಾತೀತ ಮುಖ್ಯ ಮಂತ್ರಿಗಳೆ,,,ಪಕ್ಷ ಯಾವುದೇ ಇರಲೇ ರಾಜ್ಯದ ಅಭಿಮಾನಕ್ಕೆ ಆದರೂ ವಿರೋಧ ಮಾಡಬಾರದಲ್ವಾ,,,, ರಾಜಕಾರಣ ಮಾಡುವುದು ಸ್ವಹಿತಾಸಕ್ತಿಗೋ ಅಥವಾ ರಾಜ್ಯದ ಹಿತಾಸಕ್ತಿಗೋ,,,,