ವಿಧಾನ ಪರಿಷತ್ ಚುನಾವಣೆಯನ್ನೂ ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಸುದೀರ್ಘವಾದ ಸಭೆ ನಡೆಸಲಾಗುತ್ತಿದೆ. ಜೆಡಿಎಸ್ ಜೊತೆ ಹೊಂದಾಣಿಕೆ ಕೊರತೆ ಆಗಿಲ್ಲ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ, ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ತಿಳಿಸಿದರು.
ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೆಡಿಎಸ್ ಸ್ಪರ್ಧಿಸಿದ 3 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ನಮ್ಮ ಕಾರ್ಯಕರ್ತರು ಚುನಾವಣಾ ಕಾರ್ಯಕ್ಕೆ ಧುಮುಕಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಸಹಕಾರ ನಮಗೆ ಸಹಕಾರ ಕೊಟ್ಟಿದೆ” ಎಂದರು.
“ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿ ತಯಾರಿ ಪ್ರಕ್ರಿಯೆಗಳನ್ನು ಇವತ್ತು ಆರಂಭಿಸಲಿದ್ದೇವೆ. ವಿಧಾನಪರಿಷತ್ತಿನ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ. ಪದವೀಧರರು, ಶಿಕ್ಷಕರ ಕ್ಷೇತ್ರದಲ್ಲಿ ಈಗಾಗಲೇ ಮತದಾರರ ನೋಂದಣಿ ಪ್ರಕ್ರಿಯೆ ಮುಗಿದು ಸ್ಥಳೀಯ ಮಟ್ಟದಲ್ಲಿ ಮತದಾರರ ಸಂಪರ್ಕ ಕಾರ್ಯ ನಡೆಯುತ್ತಿದೆ. ನಾಳೆ ಬೆಳಿಗ್ಗೆಯೊಳಗೆ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಪ್ರಕಟಿಸಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
ಕಾಂಗ್ರೆಸ್ ಕುಸಿದು ಬೀಳಲಿದೆ
“ಕಾಂಗ್ರೆಸ್ ಸರಕಾರವು ಅವರದೇ ಭಾರದಲ್ಲಿ ಕುಸಿದು ಬೀಳಲಿದೆ. ನಾಯಕತ್ವಕ್ಕಾಗಿ 4 ರೀತಿಯ ಪೈಪೋಟಿ ಕಾಂಗ್ರೆಸ್ ಪಕ್ಷದಲ್ಲಿದೆ. ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಲ್ಲಿ ಮಾಡಿದ ಭಾಷಣ ಇದಕ್ಕೆ ಜ್ವಲಂತ ಉದಾಹರಣೆ. ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ತಮ್ಮ ಕುರ್ಚಿ ಮೇಲೆ ಅಪಾಯ ಇದೆ ಎಂದು ಅವರು ತಿಳಿಸಿದ್ದಾರೆ. ಒಕ್ಕಲಿಗರು ಸಿಎಂ ಆಗುವುದಾಗಿ ಡಿ.ಕೆ.ಶಿವಕುಮಾರ್ ಅವರೂ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾರಕಿಹೊಳಿಯವರು ಗುಪ್ತಗಾಮಿನಿ ರೂಪದಲ್ಲಿ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ಪರಮೇಶ್ವರ್ ಅವರು ಕೂಡ ಈ ನಿಟ್ಟಿನಲ್ಲಿ ಬೇರೆ ಬೇರೆ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಹೇಳಿದರು.
“ಚುನಾವಣೆ ಘೋಷಣೆ ಆದ ದಿನದಿಂದ ಚುನಾವಣೆ ಮುಗಿಯುವ ತನಕ 152 ದೂರುಗಳನ್ನು ಚುನಾವಣಾ ಆಯೋಗಕ್ಕೆ ನಾವು ಕೊಟ್ಟಿದ್ದೇವೆ. ಆಡಳಿತ ಯಂತ್ರದ ಸಂಪೂರ್ಣ ದುರುಪಯೋಗವನ್ನು ಕಾಂಗ್ರೆಸ್ ಸಹಜವಾಗಿ ಕರ್ನಾಟಕದಲ್ಲಿ ಮಾಡಿದೆ. ಎಲ್ಲ ಜಿಲ್ಲೆ- ತಾಲ್ಲೂಕುಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬೆದರಿಸುವ, ಹೆದರಿಸುವ ತಂತ್ರವನ್ನು ಮತ್ತು ಕಾರ್ಯಕರ್ತರ ವಿರುದ್ಧ ಮೊಕದ್ದಮೆ ಹಾಕುವ ವ್ಯಾಪಕ ದೌರ್ಜನ್ಯದ ಕಾರ್ಯವನ್ನು ಆಡಳಿತ ಪಕ್ಷ ಮಾಡಿದೆ. ಇವುಗಳ ವಿರುದ್ಧ ಸ್ಥಳೀಯವಾಗಿ ದೂರು ಕೊಡಲಾಗಿದೆ” ಎಂದು ತಿಳಿಸಿದರು.
ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್, ಪಕ್ಷದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
