ರೈತರ ಜಮೀನು ಮುಟ್ಟಿದವರು ಯಾರೂ ಕುರ್ಚಿ ಮೇಲೆ ಕೂಡಲು ಆಗುವುದಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ನರಗುಂದ ಮಾದರಿ ರೈತ ಬಂಡಾಯ ಆಗಲಿದೆ. ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ವಕ್ಪ್ ನೋಟಿಫಿಕೇಷನ್ ರದ್ದು ಪಡಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ರಾಜ್ಯ ಸರ್ಕಾರ ವಕ್ಪ್ ಬೋರ್ಡ್ ಮೂಲಕ ರೈತರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಶಿಗ್ಗಾಂವಿ ಮಂಡಲ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ನಮ್ಮ ಶಿಗ್ಗಾಂವಿ ತಾಲೂಕಿನ ಸರ್ವೆ ನಂಬರ್ 417 ರಲ್ಲಿ ನೂರಾರು ಜನ ಬಡವರಿಗೆ ಸ್ಲಮ್ ಬೋರ್ಡ್ ನಿಂದ ಮನೆ ಕಟ್ಟಲು ಅನುಮತಿ ನೀಡಿದ್ದೇವೆ. ಅದು ವಕ್ಪ್ ಆಸ್ತಿ ಅಂತ ದಾವೆ ಹೂಡಿದ್ದಾರೆ. ಶಿಗ್ಗಾಂವಿ ಬಡವರಿಗೆ ತಲೆ ಮೇಲೆ ಸೂರು ಇಲ್ಲದಂತ ವ್ಯವಸ್ಥೆ ಈ ವಕ್ಪ್ ಬೋರ್ಡ್ ನಿಂದ ಆಗಿದೆ” ಎಂದು ಆರೋಪಿಸಿದರು.
“ಶಿಗ್ಗಾಂವಿಯಲ್ಲಿ 220 ಕೆವಿ ವಿದ್ಯುತ್ ಸ್ಟೇಷನ್ ಮಾಡಲು ಹೋದಾಗ ಅದು ವಕ್ಪ್ ಆಸ್ತಿ ಎಂದು ಅದರ ವಿರುದ್ಧ ಕೊರ್ಟ್ಗೆ ಹೋಗಿದ್ದಾರೆ. ಅದನ್ನು ಹೋರಾಡಿ ಗೆದ್ದಿದ್ದೇವೆ. ವಿದ್ಯುತ್ ಸ್ಟೇಷನ್ ಮಾಡಿದ್ದೇವೆ. ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ ಸ್ಥಾಪನೆ ಮಾಡಲು ಅಡ್ಡಿ ಮಾಡಿದರು, ಅದರ ವಿರುದ್ದ ಹೋರಾಡಿ ಚೆನ್ನಮ್ಮ ಮೂರ್ತಿ ಸ್ಥಾಪನೆ ಮಾಡಿದ್ದೇನೆ. ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ನಾನು ಕೆಲವೇ ದಿನಗಳಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ವಕ್ಫ್ ಆಸ್ತಿ ಕಾಪಾಡ್ತೀವಿ ಎಂದಿದ್ದ ಬಿಜೆಪಿಯವರು ಈಗ ಡಬಲ್ ಗೇಮ್ ಆಡಬಹುದಾ: ಸಿದ್ದರಾಮಯ್ಯ ಪ್ರಶ್ನೆ
“ನಾನು ವಕ್ಪ್ ಬೋರ್ಡ್ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿದ್ದವರು ಕಾಂಗ್ರೆಸ್ ನವರು ವಕ್ಪ್ ಆಸ್ತಿ ನುಂಗಿದ್ದಾರೆ ಎಂದು ಚೀಟಿ ಕೊಟ್ಟರು. ಕಾಂಗ್ರೆಸ್ ದೊಡ್ಡ ದೊಡ್ಡ ನಾಯಕರೇ ವಕ್ಪ್ ಆಸ್ತಿ ನುಂಗಿದ್ದಾರೆ. ಅದನ್ನು ವಾಪಸ್ ಪಡೆಯಬೇಕು ಎಂದು ವಕ್ಪ್ ಬೋರ್ಡ್ಗೆ ಹೇಳಿದ್ದೆ. ಅದನ್ನು ಈಗ ತಿರುಚಿ ನಾನು ರೈತರ ಜಮೀನು ವಾಪಸ್ ಪಡೆಯಲು ಹೇಳಿದ್ದೆ ಎಂದು ತಿರುಚುತ್ತಿದ್ದಾರೆ. ನಾನು ಹಾಗೆ ಹೇಳಲು ಸಾಧ್ಯವೇ” ಎಂದು ಪ್ರಶ್ನಿಸಿದರು.
“ಶಿಗ್ಗಾಂವಿ ಸವಣೂರು ರೈತರು ನಿಮಗೆ ವಕ್ಪ್ ಬೋರ್ಡ್ ನಿಂದ ಬಂದ ನೋಟಿಸನ್ನು ನನ್ನ ಕಚೇರಿಗೆ ತಂದು ಕೊಡಿ. ನಿಮ್ಮ ಪರವಾಗಿ ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ. ಶಿಗ್ಗಾಂವಿ ಸವಣೂರಿನ ರೈತರ ಒಂದಿಂಚು ಜಮೀನು ಬಿಡುವುದಿಲ್ಲ. ನಿಮ್ಮ ಜಮೀನಿನ ಜವಾಬ್ದಾರಿ ನನಗೆ ಬಿಡಿ, ನಾನು ರಕ್ಚಣೆ ನೀಡುತ್ತೇನೆ” ಎಂದು ಭರವಸೆ ನೀಡಿದರು.
ಪ್ರತಿಭಟನೆಯಯಲ್ಲಿ ಮಾಜಿ ಸಚಿವರಾದ ಸಿ.ಟಿ. ರವಿ, ರಾಜು ಗೌಡ, ಸಿ.ಸಿ.ಪಾಟೀಲ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಪಿ. ರಾಜೀವ್ , ದತ್ತಾತ್ರೇಯ ಪಾಟೀಲ್ ರೇವೂರ ಹಾಜರಿದ್ದರು.