ಬಿಜೆಪಿ ಸರ್ಕಾರದ ಅಡಿಯಲ್ಲಿ ದಲಿತರ ಮೇಲಿನ ದೌರ್ಜನ್ಯದ ವಿಚಾರದಲ್ಲಿ ಉತ್ತರ ಪ್ರದೇಶ ದೇಶದಲ್ಲಿಯೇ ನಂಬರ್ ಒನ್ ರಾಜ್ಯವಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, “ಬಿಜೆಪಿಯಲ್ಲಿರುವ ದಲಿತ ನಾಯಕರಿಗೆ ನಿಜವಾದ ಅಧಿಕಾರವನ್ನು ಎಂದಿಗೂ ನೀಡುವುದಿಲ್ಲ. ಕೆಲವೇ ಆಯ್ದ ಮಂದಿಗೆ ಮಾತ್ರ ಅಧಿಕಾರ ನೀಡಲಾಗುತ್ತದೆ” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ದಲಿತ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಮೂತ್ರ ವಿಸರ್ಜಿಸಿ ವಿಕೃತಿ
“ಬಿಜೆಪಿ ಸರ್ಕಾರದ ಅಡಿಯಲ್ಲಿ ದಲಿತರ ಮೇಲಿನ ದೌರ್ಜನ್ಯದಲ್ಲಿ ಯುಪಿ ನಂಬರ್ ಒನ್ ಆಗಿದೆ” ಎಂದು ಹೇಳಿರುವ ಅಖಿಲೇಶ್, ರಾಜ್ಯದಲ್ಲಿ ದಲಿತ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಹೇಳುವ ಸುದ್ದಿ ವರದಿಯ ವಿಡಿಯೋ ಕ್ಲಿಪ್ ಅನ್ನು ಸಹ ಹಂಚಿಕೊಂಡಿದ್ದಾರೆ.
“ದಲಿತರ ಮೇಲೆ ಅದರಲ್ಲೂ ವಿಶೇಷವಾಗಿ ದಲಿತ ಮಹಿಳೆಯರ ಮೇಲೆ ಅಧಿಕವಾಗಿ ಅಪರಾಧಗಳು ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ಯಾಕೆ ನಡೆಯುತ್ತವೆ ಎಂಬುದು ಪ್ರಶ್ನೆಯಾಗಿದೆ” ಎಂದು ಹೇಳಿದರು.
“ಬಿಜೆಪಿ ಮೂಲಭೂತವಾಗಿ ಸರ್ವಾಧಿಕಾರಿಗಳ ಪಕ್ಷ. ಅದರ ಸದಸ್ಯರ ಮನಸ್ಥಿತಿ ಆಳವಾಗಿ ಊಳಿಗಮಾನ್ಯ ಮನಸ್ಥಿತಿ. ಇವರ ಆಡಳಿತದಡಿಯಲ್ಲಿ ಬಡವರು, ಬಡತನದ ಅಂಚಿನಲ್ಲಿರುವವರು, ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರಿಗೆ ಅವಮಾನ ಮತ್ತು ದಬ್ಬಾಳಿಕೆ ಮಾತ್ರ ಇರುತ್ತದೆ” ಎಂದು ಯಾದವ್ ಟೀಕಿಸಿದ್ದಾರೆ.
दलितों पर अत्याचार के मामले में भाजपा सरकार के समय में यूपी नंबर 1 बन गया है। सवाल ये है कि दलितों पर हमलों और दलितों के ख़िलाफ़ सबसे ज़्यादा अपराधों में, वो भी ख़ासतौर से दलित महिलाओं के उत्पीड़न और दुर्व्यवहार की वारदातों में उप्र, राजस्थान, मप्र, बिहार, ओड़िशा, महाराष्ट्र जैसे… pic.twitter.com/Xc8rLgnMOp
— Akhilesh Yadav (@yadavakhilesh) April 21, 2025
“ಬಿಜೆಪಿ ನಾಯಕರು ಸ್ವಾತಂತ್ರ್ಯಪೂರ್ವದ ಮನಸ್ಥಿತಿ ಹೊಂದಿದ್ದಾರೆ. ಸಂವಿಧಾನವನ್ನು ವಿರೋಧಿಸುತ್ತಾರೆ” ಎಂದು ಆರೋಪಿಸಿರುವ ಅಖಿಲೇಶ್, “ಬಿಜೆಪಿ ಮತ್ತು ಅವರ ಸರ್ಕಾರ ಎರಡರಲ್ಲೂ, ಆಯ್ದ ಕೆಲವರು ಮಾತ್ರ ನಿಜವಾದ ಅಧಿಕಾರವನ್ನು ಹೊಂದಿದ್ದಾರೆ. ಇತರರನ್ನು ಬ್ಯಾನರ್ ಮತ್ತು ಧ್ವಜಗಳನ್ನು ಹೊತ್ತೊಯ್ಯುವಂತಹ ಕೀಳು ಕೆಲಸಗಳಿಗೆ ಇಳಿಸಲಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದಲಿತರು ಮತ್ತು ಇತರ ಹಿಂದುಳಿದ ಜಾತಿಯವರಿಗೆ ಬಿಜೆಪಿಯಲ್ಲಿ ಸಾಂಕೇತಿಕ ಸ್ಥಾನಗಳನ್ನು ನೀಡಬಹುದು. ಆದರೆ ಅವರಿಗೆ ನಿಜವಾದ ಅಧಿಕಾರವನ್ನು ಎಂದಿಗೂ ಬಿಜೆಪಿ ನೀಡುವುದಿಲ್ಲ” ಎಂದು ಯಾದವ್ ಹೇಳಿದ್ದಾರೆ.
“ಚುನಾವಣೆಗಳನ್ನು ದಲಿತರ, ಹಿಂದುಳಿದವರ ಹೆಸರಿನಲ್ಲಿ ಎದುರಿಸಲಾಗುತ್ತದೆ. ಆದರೆ ಅವರಿಗೆ ಮುಖ್ಯಮಂತ್ರಿ ಕುರ್ಚಿ ಅಥವಾ ನಿಜವಾದ ನಾಯಕತ್ವವನ್ನು ನೀಡಲಾಗುವುದಿಲ್ಲ” ಎಂದು ಹೇಳಿರುವ ಎಸ್ಪಿ ನಾಯಕ ದಲಿತರು ಬಿಜೆಪಿಯನ್ನು ತಿರಸ್ಕರಿಸುವಂತೆ ಕರೆ ನೀಡಿದರು. “ಇಂದು ದಲಿತರು ನಮಗೆ ಬಿಜೆಪಿ ಬೇಡ ಎಂದು ಹೇಳಬೇಕು” ಎಂದರು.
