ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ, ಪೊಲೀಸರು, ಅಧಿಕಾರಿಗಳೊಂದಿಗೆ ಜಗಳ ಮಾಡಿ ಸುದ್ದಿಯಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣವಾಗಿರುವುದು ಅವರು ಮೋದಿ ಹಾಗೂ ಅಮೆರಿಕದ ಬಗ್ಗೆ ನೀಡಿರುವ ಹೇಳಿಕೆ.
ಕಳೆದ ನ.18ರಂದು ಬೆಳ್ತಂಗಡಿ ತಾಲೂಕು ಮಟ್ಟದ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ತಮ್ಮ ಭಾಷಣದಲ್ಲಿ ತುಳು ಭಾಷೆಯಲ್ಲಿ ಮಾತನಾಡುತ್ತಾ, “ಅಮೆರಿಕದಲ್ಲಿ ಯಾವುದೇ ನಿರ್ಧಾರ ಮಾಡುವುದಿದ್ದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿಯೇ ಮಾಡಲಾಗುತ್ತದೆ” ಎಂದು ಹೇಳುವ ಮೂಲಕ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
“ನಮ್ಮ ದೇಶದ ಎಲ್ಲ ಜನರನ್ನು ಭಾರತೀಯರು ಅಂತ ತಿಳಿದುಕೊಂಡು ನರೇಂದ್ರ ಮೋದಿಯವರು ದೇಶದ ಆಡಳಿತವನ್ನು ನಡೆಸುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ಸೂಪರ್ ಪವರ್ ಭಾರತ ನಿರ್ಮಾಣವಾಗುತ್ತದೆ. ರಷ್ಯಾ-ಉಕ್ರೇನ್ ನಡುವೆ ಯುದ್ಧವಾದಾಗ ಅಮೆರಿಕದ ಅಧ್ಯಕ್ಷರನ್ನು ಕರೆಯಲಿಲ್ಲ. ಬದಲಾಗಿ, ಯುದ್ಧ ನಿಲ್ಲಿಸಲು ನರೇಂದ್ರ ಮೋದಿಯವರನ್ನು ಕರೆದಿದ್ದರು. ಮೋದಿಯವರೇ, ನೀವು ಬನ್ನಿ, ಯುದ್ಧ ನಿಲ್ಲಿಸಿ ಅಂತ ಉಕ್ರೇನ್ನ ಅಧ್ಯಕ್ಷ ಮನವಿ ಮಾಡಿದ್ದರು. ಯಾಕೆಂದರೆ, ಭಾರತ ಅಷ್ಟೊಂದು ಸೂಪರ್ ಪವರ್” ಎಂದು ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.
ಅಮೆರಿಕದಲ್ಲಿ ಯಾವುದೇ ನಿರ್ಧಾರ ಮಾಡುವುದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿ: ಬೆಳ್ತಂಗಡಿ ಬಿಜೆಪಿ ಶಾಸಕ @HPoonja ಹೇಳಿಕೆ ವೈರಲ್
— eedina.com ಈ ದಿನ.ಕಾಮ್ (@eedinanews) November 24, 2024
ನಗೆಪಾಟಲಿಗೀಡಾದ @BJP4Karnataka ಹೇಳಿಕೆ: ಬೆಳ್ತಂಗಡಿ ತಾಲೂಕು ಮಟ್ಟದ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಹೇಳಿಕೆ
ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲಿಗೆ ಆಹಾರವಾದ ಶಾಸಕನ ತುಳು ಭಾಷಣ pic.twitter.com/SASh1sInun
ಮುಂದುವರಿದು, “ಪ್ಯಾಲೆಸ್ತೀನ್-ಇಸ್ರೇಲ್ ಯುದ್ಧವಾದಾಗಲೂ ಕೂಡ ನರೇಂದ್ರ ಮೋದಿಯವರನ್ನು ಯುದ್ಧ ನಿಲ್ಲಿಸಲು ಕರೆದಿದ್ದರು. ಅದೇ ರೀತಿ, ಅಮೆರಿಕದ ಅಧ್ಯಕ್ಷರು ಕೂಡ ಇವತ್ತು ಯಾವುದೇ ನಿರ್ಧಾರ ಮಾಡುವುದಿದ್ದರೆ ಮೊದಲು ಯೋಚನೆ ಮಾಡುವುದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು. ಮೋದಿಯವರನ್ನು ಕೇಳಿಯೇ ನಿರ್ಧಾರ ಮಾಡಲಾಗುತ್ತದೆ. ಇದು ನಮಗೆ ಹೆಮ್ಮೆಯ ವಿಷಯವಾಗಬೇಕು. ನಮ್ಮನ್ನು ಕೇಳಿಯೇ ಅಲ್ಲಿ ಆಡಳಿತ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಂತಹ ದೇಶದಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಹೆಮ್ಮೆ ನಮಗಿರಬೇಕು. ಇದಕ್ಕೆಲ್ಲ ಮೋದಿಯವರು ಕಾರಣ. 2030ರ ವೇಳೆಗೆ ಭಾರತ ಸೂಪರ್ ಪವರ್ ದೇಶವಾಗುತ್ತದೆ” ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ತುಳು ಭಾಷೆಯಲ್ಲಿ ಹೇಳಿಕೆ ನೀಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ.
“ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಈ ಹೇಳಿಕೆಯನ್ನು ಕೇಳಿ ನಗಬೇಕೊ ಆಳಬೇಕೊ ಎಂದು ಒಂದೂ ತಿಳಿಯುತ್ತಿಲ್ಲ. ಅಮೆರಿಕ ದೇಶದಲ್ಲಿ ಯಾವುದೇ ನಿರ್ಧಾರ ಮಾಡುವುದು ಭಾರತದ ಪ್ರಧಾನಿ ನರೇಂದ್ರ ಮೋದಿಯ ಮಾತು ಕೇಳಿಯಂತೆ. ಅಮೆರಿಕದ 1 ಡಾಲರ್ ಭಾರತದ 84 ರೂಪಾಯಿಗೆ ಸಮವಾಗಿದೆ. ಇದು ಕೂಡ ಮೋದಿಯ ಸಲಹೆಯಿಂದ ಆಗಿರಬಹುದು. ಮತ ನೀಡಿದ ಮತದಾರರ ಕಿವಿಗೆ ಹೂ ಇಡುವುದರಲ್ಲಿ ಬೆಳ್ತಂಗಡಿ ಶಾಸಕರು ನಿಸ್ಸೀಮರು” ಎಂದು ಬರೆದುಕೊಂಡು ಜನ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
‘ಎಲ್ಲವೂ ಸುಳ್ಳು’ ಎಂದಿದ್ದ ವಿದೇಶಾಂಗ ಇಲಾಖೆ!
ಭಾರತೀಯರನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನೆರವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರ ಮನವಿಗೆ ಸ್ಪಂದಿಸಿ ಉಕ್ರೇನ್ನಲ್ಲಿ ರಷ್ಯಾ ಕೆಲಕಾಲ ದಾಳಿಯನ್ನು ಸ್ಥಗಿತಗೊಳಿಸಿತ್ತು ಎಂದು ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಸಂಘಪರಿವಾರದವರು ಸುದ್ದಿ ಹರಡಿಸಿದ್ದರು. ಇದನ್ನೇ ನಂಬಿದ್ದ ಗೋದಿ ಮಾಧ್ಯಮಗಳು, ವರದಿ ಪ್ರಕಟಿಸಿತ್ತು. ಬಳಿಕ ಎಲ್ಲವೂ ಸುಳ್ಳು ಎಂದು ಗೊತ್ತಾಗಿತ್ತು.
ಬೆಳ್ತಂಗಡಿ : ಅಮೇರಿಕ ದೇಶದಲ್ಲಿ ಯಾವುದೇ ನಿರ್ಧಾರ ತಗೊಳ್ಳೋದು ಭಾರತದ ಪ್ರಧಾನಿ ನರೇಂದ್ರ ಮೋದಿ ಯ ಮಾತು ಕೇಳಿಯಂತೆ !!! pic.twitter.com/XJ9fK5z8mB
— ಕರುನಾಡಿನ ಮಿನುಗುವ ನಕ್ಷತ್ರ💛❤️ (@NaadaPremiSha) November 24, 2024
ಇದಕ್ಕೆ ಸ್ಪಷ್ಟನೆ ನೀಡಿದ್ದ ಆಗಿನ ವಿದೇಶಾಂಗ ಇಲಾಖೆಯ ಅಧಿಕಾರಿ ಅರಿಂದಮ್ ಬಾಗ್ಚಿ, ಎಲ್ಲಾ ವರದಿಗಳನ್ನೂ ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.
“ಭಾರತೀಯರನ್ನು ಉಕ್ರೇನ್ನಿಂದ ವಾಪಸ್ ಕರೆತರಲು ನಮಗೆ ಸೂಕ್ತ ಮಾರ್ಗಗಳನ್ನು ರಷ್ಯಾ ಹಾಗೂ ಉಕ್ರೇನ್ ಸರ್ಕಾರಗಳು ವಿವರಿಸಿದವು. ಹೀಗಾಗಿ, ನಾವು ಉಕ್ರೇನ್ನಲ್ಲಿ ಇರುವ ನಮ್ಮ ಪ್ರಜೆಗಳಿಗೆ ಈ ಮಾಹಿತಿಯನ್ನು ರವಾನಿಸಿ ಅವರನ್ನು ಉಕ್ರೇನ್ ದೇಶದ ಗಡಿ ದಾಟಿಸಿದೆವು. ಈ ರಕ್ಷಣಾ ಕಾರ್ಯಾಚರಣೆಗೆ ಸಹಕಾರ ನೀಡಿದ ದೇಶಗಳಿಗೆ ಧನ್ಯವಾದ ಹೇಳ್ತೇವೆ, ಇದು ನಮಗೆ ಖುಷಿ ತಂದಿದೆ ಎಂದರು. ಎಲ್ಲಕ್ಕಿಂತಾ ಹೆಚ್ಚಾಗಿ ಭಾರತೀಯರ ತೆರವು ಕಾರ್ಯಾಚರಣೆ ವೇಳೆ ಬಾಂಬ್ ದಾಳಿ ನಿಲ್ಲಿಸಲಾಗಿತ್ತು, ನಮ್ಮ ಮನವಿಗೆ ಸೇನೆ ಸ್ಪಂದಿಸಿತು ಅನ್ನೋದು ಸತ್ಯಕ್ಕೆ ದೂರವಾದ ವಿಚಾರ” ಎಂದು ಸ್ಪಷ್ಟಪಡಿಸಿದ್ದರು.
