ರಾಜ್ಯ ಸಚಿವಾಲಯದ ಅಧಿಕೃತ ಪತ್ರ ವ್ಯವಹಾರಗಳಲ್ಲಿ ನಮೂದಿಸಲಾಗುವ ವಿಳಾಸದಲ್ಲಿ ‘ಡಾ. ಬಿ.ಆರ್ ಅಂಬೇಡ್ಕರ್ ವೀದಿ’ ಎಂದು ಕಡ್ಡಾಯವಾಗಿ ಬರೆಯಬೇಕು ಎಂದು ಕರ್ನಾಟಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಸಂದೀಪ್ ಬಿ.ಕೆ ತಿಳಿಸಿದ್ದಾರೆ.
ಪತ್ರಗಳಲ್ಲಿ ‘ಡಾ. ಬಿ.ಆರ್ ಅಂಬೇಡ್ಕರ್ ವೀದಿ’ ಎಂದು ವಿಳಾಸ ಬಳಸುವ ಬಗ್ಗೆ ಸಂದೀಪ್ ಅವರು ಸುತ್ತೋಲೆ ಹೊರಡಿಸಿದ್ದಾರೆ. “ಸರ್ಕಾರದ ಸಚಿವಾಲಯ ಮತ್ತು ಹಲವು ಇಲಾಖೆಗಳು ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕಟ್ಟಡಗಳು ಬೆಂಗಳೂರಿನ ಅಂಬೇಡ್ಕರ್ ವೀದಿಯಲ್ಲಿವೆ. ಆದರೆ, ಯಾವುದೇ ಇಲಾಖೆಯು ತಮ್ಮ ಪತ್ರ ವ್ಯವಹಾರದಲ್ಲಿ ‘ಅಂಬೇಡ್ಕರ್ ವೀದಿ’ ಎಂಬುದಾಗಿ ವಿಳಾಸ ನಮೂದಿಸುತ್ತಿಲ್ಲ” ಎಂದು ಗಮನ ಸೆಳೆದಿದ್ದಾರೆ.

“ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರನ್ನು ಒಳಗೊಂಡಿರುವ ವೀದಿಯ ಹೆಸರನ್ನು ಬಳಸದೇ ಇರುವುದು ಅಸಮಂಜಸವಾಗುತ್ತದೆ. ಆದ್ದರಿಂದ, ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಎಲ್ಲ ಇಲಾಖೆಗಳು ತಮ್ಮ ಎಲ್ಲ ರೀತಿಯ ಅಧಿಕೃತ ಪತ್ರ ವ್ಯವಹಾರದಲ್ಲಿಕ ಡ್ಡಾಯವಾಗಿ ‘ಡಾ.ಬಿ.ಆರ್ ಅಂಬೇಡ್ಕರ್ ವೀದಿ’ ಎಂದು ವಿಳಾಸವನ್ನು ನಮೂದಿಸಬೇಕು” ಎಂದು ಸೂಚಿಸಿದ್ದಾರೆ.