ರಾಜ್ಯಾದ್ಯಂತ ವಕ್ಫ್ ಮೂಲಕ ಹೊಸ ಜಿಹಾದಿ ನಡೆದಿದೆ. ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ಸಿಗರ ನಡೆನುಡಿ ನೋಡಿದರೆ, ಇವರ ದುರುಳತನ ಅರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಸಂಡೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, “ಕಾಂಗ್ರೆಸ್ಸಿಗರನ್ನು ಹುಂಬರು, ತಿಳಿವಳಿಕೆ ಇಲ್ಲದವರು ಎಂದು ಕರೆಯಲು ನಾನು ತಯಾರಿಲ್ಲ. ಅವರೇನು ಮಾತನಾಡುತ್ತಾರೆಂದು ಅವರಿಗೆ ಗೊತ್ತಿದೆ. ವಕ್ಫ್ ಆಸ್ತಿ ಸಂರಕ್ಷಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ. ಇದ್ದ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ಸಿನ ಹಿರಿಯ ನಾಯಕರು ಲೂಟಿ ಮಾಡಿದ್ದರು. ಬಾಡಿಗೆ, ಲೀಸ್ ಮೂಲಕ ಸಾವಿರಾರು ಕೋಟಿ ಹಣ ಪಡೆಯುತ್ತಿದ್ದರು. ಇರುವ ವಕ್ಫ್ ಆಸ್ತಿ ಸಂರಕ್ಷಿಸುವುದಾಗಿ ನಾವು ಹೇಳಿದ್ದೆವು” ಎಂದರು.
“ಈಗ ವಕ್ಫ್ ಛೂ ಬಿಟ್ಟಿದ್ದಾರೆ. ನೂರಾರು ವರ್ಷಗಳ ಮಂದಿರ, ಮಠ ಹೊಡೆಯಲು ಮುಂದಾಗಿದ್ದಾರೆ. ವಿಜಯಪುರ ಜಿಲ್ಲೆಯ ಪಡಗಾನೂರು ಗ್ರಾಮದಲ್ಲಿ ಚಾಲುಕ್ಯರು ಕಟ್ಟಿದ 1500 ವರ್ಷಗಳ ಹಿಂದಿನ ದೇವಸ್ಥಾನ ವಕ್ಫ್ ಎಂದು ಘೋಷಿಸಿದ್ದಾರೆ. ಕೇವಲ ಕಾಲಂ ನಂಬರ್ 11ರಲ್ಲಿ ದಾಖಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಕೇಳಿದರೆ ಸಮರ್ಪಕ ಉತ್ತರ ಸಿಗಲಿಲ್ಲ” ಎಂದು ಆಕ್ಷೇಪಿಸಿದರು.
“ಸೇಲ್ ಡೀಡ್ ಇಲ್ಲದೆ ವಕ್ಫ್ ಷಡ್ಯಂತ್ರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದೆ. ಫಾರೂಕ್ ಅಬ್ದುಲ್ಲ ಭಯೋತ್ಪಾದಕರನ್ನು ಕೊಲ್ಲಬಾರದು ಎನ್ನುತ್ತಿದ್ದಾರೆ. ಪಾಕ್ ಜೊತೆ ಮಾತುಕತೆ ಮಾಡಲು ಕೋರುತ್ತಾರೆ. ಅವರ ಜೊತೆ ಇಂಡಿ ಒಕ್ಕೂಟ ಇದೆ. ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಭ್ರಮಣೆ ಆಗಿದೆಯೇ” ಎಂದು ಪ್ರಶ್ನೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಕ್ಫ್ ಧರಣಿಗೂ, ಬಿಜೆಪಿ ಬಂಡಾಯಕ್ಕೂ ಶೋಭಾ ನಾಯಕಿಯಾಗಿದ್ದೇಕೆ?
“ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರು ಅರ್ಥಾತ್ ಮುಸಲ್ಮಾನರ ತುಷ್ಟೀಕರಣವನ್ನೇ ಧ್ಯೇಯವನ್ನಾಗಿ ಮಾಡಿಕೊಂಡಿದೆ. ಸಿದ್ದರಾಮಯ್ಯನವರು ಮೊದಲನೇ ಅವಧಿಯಲ್ಲಿ 2013-18ರಲ್ಲಿ ನಿರ್ಬಂಧಿತ ಪಿಎಫ್ಐ, ಎಸ್ಡಿಪಿಐ, ಕೆಎಫ್ಡಿ ಸಿಮಿಯ ಪೂರ್ವಾವತಾರವಾದ 175 ಕೇಸುಗಳನ್ನು ವಾಪಸ್ ಪಡೆದಿದ್ದರು. ಬಳಿಕ ಈಚೆಗೆ ಅನೇಕ ಬಾರಿ ಹಿಂದೂ ಸಂಘಟನೆಗಳು, ಮಂದಿರಗಳ ಮೇಲೆ ದಾಳಿ ಆಗಿದೆ. ಆದರೆ, ಕಾಂಗ್ರೆಸ್ಸಿಗರಿಗೆ ಏನೂ ಅನಿಸುತ್ತಿಲ್ಲ. ಸೌಮ್ಯವಾಗಿ ಅವರನ್ನು ನೋಡಿಕೊಂಡಿದ್ದರು” ಎಂದು ಟೀಕಿಸಿದರು.
“ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಆದ ದಾಳಿ ವೇಳೆ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಹಲವಾರು ಪೊಲೀಸ್ ಅಧಿಕಾರಿಗಳ ಜೀವಹಾನಿ ಆಗುತ್ತಿತ್ತೆಂದು ಪೊಲೀಸ್ ಅಧಿಕಾರಿಗಳೇ ತಿಳಿಸಿದ್ದರು. ಯುಎಪಿಎ ಕಾನೂನಿನಡಿ ಇದ್ದ ಕೇಸುಗಳನ್ನು ಹಿಂತೆಗೆದುಕೊಂಡಿದ್ದಾರೆ. ಕಾಂಗ್ರೆಸ್ಸಿನ ದಲಿತ ಶಾಸಕನ ಮನೆಯನ್ನು ಸುಟ್ಟು ಹಾಕಿದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಕೇಸುಗಳನ್ನು ಹಿಂಪಡೆಯಲು ಮುಂದಾಗಿದ್ದಾರೆ” ಎಂದು ದೂರಿದರು.
ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಮಾಜಿ ಸಂಸದ ಪ್ರತಾಪಸಿಂಹ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮೊದಲಾದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.