ವಿಧಾಸಭಾ ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ ಈವರೆಗೂ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ಕುರಿತು ಬಿಜೆಪಿ ತೀವ್ರ ಮುಜುಗರ ಅನುಭವಿಸುತಿದ್ದು, ಅದರ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿಗೆ ಸರಣಿ ಪ್ರಶ್ನೆಗಳನ್ನು ಕೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ”ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ ಎರಡು ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದಿರುವುದಕ್ಕೆ ಕಾರಣಗಳೇನು?” ಎಂದು ಪ್ರಶ್ನಿಸಿದೆ.
“ರಾಜ್ಯ ಬಿಜೆಪಿಯ ಬಗ್ಗೆ ಹೈಕಮಾಂಡಿನ ತಿರಸ್ಕಾರವೇ? 66 ಶಾಸಕರಲ್ಲಿ ಒಬ್ಬರಿಗೂ ಯೋಗ್ಯತೆ ಇಲ್ಲವೇ? ಆಂತರಿಕ ಕಚ್ಚಾಟದಲ್ಲಿ ಯಾರೊಬ್ಬರನ್ನು ಆಯ್ಕೆ ಮಾಡಲಾಗದ ತೊಳಲಾಟವೇ?” ಎಂದು ಕುಟುಕಿದೆ.
“ಆ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ, ಇನ್ನೂ ನಿಗದಿಪಡಿಸಿದ ಮೊತ್ತಕ್ಕೆ ಬಿಡ್ಡಿಂಗ್ ಆಗಿಲ್ಲವೇ? ನಮ್ಮ ಸರ್ಕಾರವನ್ನು ವಿರೋಧಿಸಲು ಸಕಾರಣಗಳು ಸಿಗುವುದಿಲ್ಲ ಎಂಬ ನಿರಾಸೆಯೇ?” ಎಂದು ವ್ಯಂಗ್ಯವಾಡಿದೆ.
“ಸೋಲಿನ ಆಘಾತದಿಂದ ಇನ್ನೂ ಸುಧಾರಿಸಿಕೊಂಡಿಲ್ಲವೇ? ಶಾಸನ ಸಭೆಯ ಪಟ್ಟುಗಳು, ನೀತಿ ನಿಯಮಗಳು ತಿಳಿದಿರುವಂತ ನಾಯಕರ ಕೊರತೆಯೇ? ಸಂತೋಷ್ – ಯಡಿಯೂರಪ್ಪ ಅವರ ಆಂತರಿಕ ಯುದ್ಧದ ಪರಿಣಾಮವೇ? ಕಾರಣವೇನು ಎನ್ನುವುದನ್ನಾದರೂ ರಾಜ್ಯದ ಜನತೆಗೆ ತಿಳಿಸಲಿ” ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಸುದ್ದಿ ಓದಿದ್ದೀರಾ? ಆಷಾಢದ ಬಳಿಕ ನಿವಾಸ ಬದಲಾಯಿಸಲಿರುವ ಸಿಎಂ ಸಿದ್ದರಾಮಯ್ಯ