- ಇಂದಿನ ರಾಜಕಾರಣ ನನಗೆ ಒಗ್ಗುವುದಿಲ್ಲ: ರಾಯರೆಡ್ಡಿ
- ‘ಕೆಕೆಆರ್ಡಿಬಿ ಅಧ್ಯಕ್ಷನಾಗಲು ನನಗೆ ಆಸಕ್ತಿ ಇರಲಿಲ್ಲ’
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ದೂರದ ಮಾತು. ಇನ್ನುಮುಂದೆ ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದುಕೊಂಡಿದ್ದೇನೆ. ಇಂದಿನ ರಾಜಕಾರಣ ನನಗೆ ಒಗ್ಗುವುದಿಲ್ಲ ಎಂದು ಮಾಜಿ ಸಚಿವ ಮತ್ತು ಹಾಲಿ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಕೊಪ್ಪಳದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, “ಲೋಕಸಭೆಗೆ ನಾನು ಸ್ಪರ್ಧೆ ಮಾಡಿದರೆ ಜನ ನನ್ನನ್ನು ಸೋಲಿಸುತ್ತಾರೆ. ಇಂದಿನ ಚುನಾವಣೆ ವ್ಯವಸ್ಥೆ ಸರಿ ಇಲ್ಲ. ನಮ್ಮಂತವರನ್ನು ಜನ ಗೆಲ್ಲಿಸುವುದಿಲ್ಲ. ಈ ಹಿಂದೆ ಎಂಪಿ ಆಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೂ ನನ್ನನ್ನು ಸೋಲಿಸಿದ್ದರು” ಎಂದರು.
“ಕೆಕೆಆರ್ಡಿಬಿ ಅಧ್ಯಕ್ಷನಾಗಲು ನನಗೆ ಆಸಕ್ತಿ ಇರಲಿಲ್ಲ. ನಾನೇ ಅಜಯ್ ಸಿಂಗ್ ಅಧ್ಯಕ್ಷ ಆಗಲಿ ಎಂದು ಬರೆದುಕೊಟ್ಟಿದ್ದೇನೆ. ಕೆಕೆಆರ್ ಡಿಬಿಗೆ ನಾನೇ ಎಲ್ಲ ಸದಸ್ಯರ ಹೆಸರು ಶಿಫಾರಸ್ಸು ಮಾಡಿದ್ದೇನೆ” ಎಂದು ತಿಳಿಸಿದರು.
ಭ್ರಷ್ಟಾಚಾರ ಹೆಚ್ಚುತ್ತಿದೆ
“ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂಬ ಚರ್ಚೆ ಬಗ್ಗೆ ನನಗೂ ಬೇಸರ ಇದೆ. ಇದರಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮರ್ಯಾದೆ ಹಾಳಾಗುತ್ತಿದೆ. ನಾವು 40% ಪರ್ಸೆಂಟೇಜ್ ಸರ್ಕಾರ ಎಂದು ಆರೋಪ ಮಾಡಿದ್ದೆವು. ಈಗ ಅವರು 15% ರಷ್ಟು ಕಮಿಷನ್ ಎಂದು ಆರೋಪ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕ ಭ್ರಷ್ಟ ರಾಜ್ಯ ಆಗುತ್ತಿದೆ” ಎಂದರು.
ಭ್ರಷ್ಟಾಚಾರ ವಿಚಾರದಲ್ಲಿ ಒಟ್ಟಾರೆ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತಿದೆ. ಭ್ರಷ್ಟಾಚಾರ ತೊಲಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡಬೇಕಿದೆ. ವಿರೋಧ ಪಕ್ಷದ ನಾಯಕರನ್ನು ಕರೆದು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು” ಎಂದರು.
“ಇಂದಿನ ಔತಣಕೂಟಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ಚುನಾವಣೆಯಲ್ಲಿ ಕೆಲಸ ಮಾಡಿದ ಕಾರ್ಯಕರ್ತರು, ಮುಖಂಡರು ಹಾಗೂ ಅಧಿಕಾರಿಗಳಿಗೆ ಔತಣಕೂಟಕ್ಕೆ ಕರೆಯುತ್ತಿದ್ದೆ. ಈ ಹಿಂದೆಯೂ ನಾನು ಊಟಕ್ಕೆ ಕರೆದಿದ್ದೇನೆ. ಇದು ಕೂಡ ನನ್ನ ಕ್ಷೇತ್ರವೇ. ಯಾರು ಏನೇ ಅರ್ಥ ಮಾಡಿಕೊಂಡರೂ ನಾನು ಏನು ಕೇರ್ ಮಾಡುವುದಿಲ್ಲ” ಎಂದು ಹೇಳಿದರು.