- ವಿಶ್ವ ಮಾದಕ ವಸ್ತು ವಿರೋಧಿ ದಿನ – ವಿದ್ಯಾರ್ಥಿಗಳಿಂದ ಕಾಲ್ನಡಿಗೆ ಜಾಥಾ
- ವಿಧಾನಸೌಧದಿಂದ ಶಾಲಾ ಮಕ್ಕಳ ಜೊತೆ ಹೆಜ್ಜೆ ಹಾಕಿದ ಡಿಕೆ ಶಿವಕುಮಾರ್
ವಿದ್ಯಾರ್ಥಿಗಳ ಜೀವನದಲ್ಲಿ ಈ ದಿನ ಐತಿಹಾಸಿಕ ದಿನವಾಗಲಿದೆ. ನೀವೆಲ್ಲ (ವಿದ್ಯಾರ್ಥಿಗಳು) ‘ವಿಶ್ವ ಮಾದಕ ವಸ್ತು ವಿರೋಧಿ ದಿನ’ದಂದು ಜಾಗೃತಿ ಮೂಡಿಸಲು ಬಂದಿದ್ದೀರಿ. ಈ ಘಳಿಗೆ ನಿಮ್ಮ ಜೀವನದಲ್ಲಿ ಶಾಶ್ವತವಾಗಿ ನೆನಪು ಉಳಿಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ವಿಶ್ವ ಮಾದಕ ವಸ್ತು ವಿರೋಧಿ ದಿನ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸೌಧ ಮುಂದೆ ಆಯೋಜಿಸಿದ್ದ ವಿದ್ಯಾರ್ಥಿಗಳಿಂದ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೆರೆದಿದ್ದೀರಿ. ನಿಮ್ಮ ಉತ್ಸಾಹ ನೋಡಿ ನನಗೂ ಸಂತೋಷವಾಗಿದೆ. ನಾನು ನಿಮ್ಮ ಜೊತೆ ವಿಧಾನಸೌಧದಿಂದ ಕಂಠೀರವ ಸ್ಟೇಡಿಯಂವರೆಗೂ ಹೆಜ್ಜೆ ಹಾಕುವೆ” ಎಂದರು.
“ವಿದ್ಯಾರ್ಥಿ ಸಮೂಹ ಈ ದೇಶದ ಆಸ್ತಿ. ನಮ್ಮ ಸಂಸ್ಕೃತಿ ಉಳಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೆ. ನೀವು ಮನಸ್ಸು ಮಾಡಿದರೆ ನೀವು ಕೂಡ ಡಿಕೆ ಶಿವಕುಮಾರ್ ಆಗಬಹುದು” ಎಂದು ಹೇಳಿದರು.
“ವಿಧಾನಸೌಧ ಮತ್ತು ಹೈಕೋರ್ಟ್ ನಡುವೆ ನೀವೆಲ್ಲ ಸೇರಿದ್ದೀರಿ. ಇದೊಂದು ಅಭೂತಪೂರ್ವ ಕ್ಷಣ. ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸಲು ನಾವು ನೀವು ಸೇರಿ ಒಂದಾಗಿ ಹೋರಾಡೋಣ. ಆರೋಗ್ಯವೇ ಭಾಗ್ಯ ಎಂಬುದನ್ನು ಸಾರೋಣ” ಎಂದು ಕರೆ ನೀಡಿದರು.
ನಮ್ಮ ರಾಜ್ಯದಲ್ಲಿ ಡ್ರಗ್ಸ್ ದಂಧೆ ಕಂಟ್ರೋಲ್ನಲ್ಲಿದೆ. ನಾವು ಯಾವುದೇ ಹೋರಾಟಕ್ಕೂ ಕಾಲ್ನಡಿಗೆ ಮೂಲಕವೇ ಉತ್ತರಿಸಿದ್ದೇವೆ. ಮೇಕೆದಾಟು, ಭಾರತ್ ಜೋಡೋ ಈಗ ನಿಮ್ಮ ಜೊತೆ ಕಾಲ್ನಡಿಗೆ. ನಿಮ್ಮ ಜೀವನದಲ್ಲೂ ಇದು ಪವಿತ್ರ ದಿನವಾಗಲಿ” ಎಂದು ಶುಭ ಕೋರಿದರು. ಬಳಿಕ ವಿಧಾನಸೌಧದಿಂದ ಶಾಲಾ ಮಕ್ಕಳ ಜೊತೆ ಡಿಕೆ ಶಿವಕುಮಾರ್ ಹೆಜ್ಜೆ ಹಾಕಿದರು.

ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಮಾನ್ಯ ಸಭಾಧ್ಯಕ್ಷ ಖಾದರ್ ಅವರು ನೂತನ ಶಾಸಕರಿಗೆ ಯಾವ ದಿಕ್ಕು ತೋರಿಸುತ್ತಿದ್ದಾರೆ?
ಮಾದಕ ಮುಕ್ತ ರಾಜ್ಯ ಮಾಡುತ್ತೇವೆ: ಬಿ.ನಾಗೇಂದ್ರ
“ಮಾದಕ ಮುಕ್ತ ರಾಜ್ಯ ಮಾಡುವುದಕ್ಕೆ ನಾವು ಪಣ ತೊಟ್ಟಿದ್ದೇವೆ. ಪ್ರತಿ ದಿನ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಬಹಳಷ್ಟು ದೊಡ್ಡ ದೊಡ್ಡ ವ್ಯಕ್ತಿಗಳು ಮಾದಕ ವ್ಯಸನಿಗಳಾಗಿದ್ದಾರೆ. ನಮ್ಮ ಇಲಾಖೆ ಮಾದಕ ವಸ್ತು ಮುಕ್ತ ರಾಜ್ಯ ಮಾಡಲು ಹೊಣೆ ಹೊತ್ತಿದೆ” ಎಂದು ಕ್ರೀಡಾ ಸಚಿವ ಬಿ. ನಾಗೇಂದ್ರ ತಿಳಿಸಿದರು.
“ಡ್ರಗ್ಸ್ ಮಾರಾಟ ಮಾಡುವವರ ಮೇಲೆ ಕಠಿಣ ಕೇಸ್ ಹಾಕುತ್ತೇವೆ. ಡ್ರಗ್ಸ್ ಮಾರಾಟಕ್ಕೆ ಕಡಿವಾಣ ಹಾಕಲು ಸಹಾಯವಾಣಿ ಓಪನ್ ಮಾಡುತ್ತೇವೆ. ಸಹಾಯವಾಣಿಗೆ ಕರೆ ಮಾಡುವವರ ಹೆಸರನ್ನು ಬಹಿರಂಗಪಡಿಸಲ್ಲ” ಎಂದು ಇದೇ ವೇಳೆ ಅವರು ತಿಳಿಸಿದರು.