ಈ ದಿನ ವಿಶೇಷ | ಬೂದುಗುಂಬಳಕಾಯಿಗೆ ಎಚ್. ನರಸಿಂಹಯ್ಯನವರು ಬರೆದ ಒಂದು ಪತ್ರ

Date:

Advertisements
ಇಂದು ಆಯುಧ ಪೂಜೆ. ಈ ವಿಶೇಷ ದಿನದಲ್ಲಿ ಆಯುಧ ಪೂಜೆಯ ನೆಪದಲ್ಲಿ ಬೂದುಗುಂಬಳಕಾಯಿಯನ್ನು ಅಮಾನುಷವಾಗಿ ಕೊಂದದ್ದನ್ನು ಕಂಡ ಗಾಂಧಿವಾದಿ ಎಚ್. ನರಸಿಂಹಯ್ಯನವರು, ಬೂದುಗುಂಬಳಕಾಯಿಗೆ ಪತ್ರ ಬರೆದು, ತಮ್ಮ ನೋವು, ಸಂಕಟಗಳನ್ನು ನಿವೇದಿಸಿಕೊಂಡಿದ್ದಾರೆ. ನಿಮ್ಮ ಮೊಬೈಲ್ ಫೋನನ್ನು ಆಯುಧಪೂಜೆಗೆ ಇಡುವ ಮೊದಲು ಒಂದ್ಸಲ ಓದಿ...

ಪ್ರಿಯ ದಿವಂಗತ ಬೂದುಗುಂಬಳ ಕಾಯಿಗೆ,

ನಾನು ತುಂಬಾ ನೊಂದುಕೊಂಡು ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇನೆ. ನಿನ್ನೆಯ ದಿನ ಆಯುಧಪೂಜೆ. ನಾನು ಡಿ.ವಿ.ಜಿ. ರಸ್ತೆಯಲ್ಲಿ ಉದ್ದಕ್ಕೆ ನಡೆದುಕೊಂಡು ಒಬ್ಬ ಸ್ನೇಹಿತನ ಮನೆಗೆ ಹೋಗುತ್ತಿದ್ದೆ. ದಾರಿಯುದ್ದಕ್ಕೂ ನಿನ್ನನ್ನು ಅಮಾನುಷವಾಗಿ ಕೊಂದಿರುವ ಹತ್ತಾರು ದಾರುಣ ದೃಶ್ಯವನ್ನು ನೋಡಿ ನನಗೆ ತಡೆಯಲಾರದಷ್ಟು ದುಃಖವಾಯಿತು. ಬಡವರಿಂದ ಮೊದಲ್ಗೊಂಡು ಪಂಚತಾರಾ ಹೋಟೆಲುಗಳ ಅಡುಗೆ ಮನೆಗಳಲ್ಲಿ ಉಳಿದ ದಿನಗಳಲ್ಲಿ ತುಂಬಾ ಪ್ರೀತಿ ಆದರಗಳಿಂದ ನಿನ್ನನ್ನು ಹೆಚ್ಚಿ ಹುಳಿಯನ್ನೋ, ಮಜ್ಜಿಗೆ ಹುಳಿಯನ್ನೋ ಮಾಡಿ ತಿಂದು ಸಂತೋಷಪಡುತ್ತಾರೆ. ನಿನಗೂ ಅದೇ ಬೇಕಾದದ್ದು, ಮಜ್ಜಿಗೆ ಹುಳಿಯಲ್ಲಿ ನಿನ್ನ ಜೀವನದ ಸಾರ್ಥಕತೆಯನ್ನು ಕಾಣುತ್ತೀಯಾ. ಸಾವಿನಲ್ಲೂ ಸಂತೋಷಪಡುತ್ತೀಯಾ. ನಿನ್ನಂತಹ ನಿಸ್ವಾರ್ಥ, ನಿಷ್ಕಪಟ ಹುತಾತ್ಮರು ಮನುಷ್ಯರಲ್ಲಿ ಸಿಗುವುದೇ ಅಪರೂಪ.

ಅಡುಗೆ ಮನೆಯಲ್ಲಿ ನಿನ್ನನ್ನು ಹಚ್ಚುವುದೇ ಒಂದು ಕಲೆ. ಆದರೆ ಆಯುಧ ಪೂಜೆ ದಿನ ಬೀದಿಯಲ್ಲಿ ಹಾಡು ಹಗಲಿನಲ್ಲಿ ನಿನ್ನನ್ನು ಕೊಲೆ, ಕಗ್ಗೊಲೆ ಮಾಡುತ್ತಾರೆ. ನಿನ್ನನ್ನು ನೆಲದ ಮೇಲೆ ತೆಂಗಿನಕಾಯಿಯನ್ನು ಬಂಡೆಯ ಮೇಲೆ ಈಡುಗಾಯಿ ಒಡೆದಂತೆ ಬಡಿದಾಗ ನಿನ್ನ ಹೋಳುಗಳು ದಿಕ್ಕಾಪಾಲಾಗಿ ಅಸ್ತವ್ಯಸ್ತವಾಗಿ ಬಿದ್ದಿರುವ ದೃಶ್ಯ ಎಂತಹವರ ಮನಸ್ಸನ್ನೂ ಕರಗಿಸುತ್ತದೆ. ಜೊತೆಗೆ ರಕ್ತದ ನೆನಪು ತಂದುಕೊಡಲು ಕೆಂಪು ಬಣ್ಣ ಬೇರೆ. ನಿಜವಾಗಿಯೂ ನಿನ್ನದು ಆಕಾಲ ಹೃದಯ ವಿದ್ರಾವಕ, ಅಪಮೃತ್ಯು. ಇದೆಲ್ಲಾ ಅನುಭವಿಸುವುದು ನಿನ್ನ ಕರ್ಮ ಅಂತ ಕಾಣುತ್ತದೆ.

Advertisements

ಹಾಗೇ ಇನ್ನು ನಾಲ್ಕು ಹೆಜ್ಜೆ ಮುಂದೆ ಬಂದೆ. ಗಾಂಧೀ ಬಜಾರ್ ಕಾಲು ಹಾದಿಯಲ್ಲಿ ಬಾಳೆಕಂದು, ಕಂದಮ್ಮಗಳನ್ನು ಕತ್ತರಿಸಿ ಸಾಲಾಗಿ ಮಲಗಿಸಿದ್ದರು. ಇದು ಶಿಶುಹತ್ಯೆ. ಮತ್ತೊಂದು ಹೃದಯ ವಿದ್ರಾವಕ ದೃಶ್ಯ. ಅಸಹಾಯಕರಾದ ಲಕ್ಷಾಂತರ ಕಂದಮ್ಮಗಳನ್ನು ಶೈಶವಾವಸ್ಥೆಯಲ್ಲಿಯೇ ಕೊನೆಯುಸಿರು ಎಳೆಯುವಂತೆ ಈ ಕ್ರೂರಿ ಮನುಷ್ಯರು ಮಾಡಿದರು.

ನಿನ್ನ ಬಗ್ಗೆ ಮೊದಲಿನಿಂದಲೂ ತುಂಬಾ ಅನುಕಂಪ. ನಾನು ಉಪಕುಲಪತಿಯಾಗಿದ್ದಾಗ ನಮ್ಮ ವಿಶ್ವವಿದ್ಯಾಲಯದ ವಾಹನಗಳ ಚಾಲಕರು, ಕಂಡಕ್ಟರ್‌ಗಳು ಒಂದು ದಿನ ನನ್ನ ಆಫೀಸಿಗೆ ಬಂದರು. ಏನಪ್ಪಾ ವಿಷಯ ಅಂದೆ. ನಾಳೆ ಆಯುಧಪೂಜೆ ಸಾರ್ ಅಂದರು. ಎಂತೆಂತಹ ವಿದ್ಯಾವಂತರಿಗೆ, ವಿಜ್ಞಾನಿಗಳಿಗೆ ವೈಜ್ಞಾನಿಕ ಮನೋಭಾವದ ಅಭಾವವಿರುವುದರಿಂದ ಇವರಿಗೆ ವೈಚಾರಿಕ ಮನೋಭಾವವನ್ನು ಬೋಧಿಸುವುದು ಸರಿಯಲ್ಲವೆಂದು ನಾಲ್ಕು ಸೆಕೆಂಡ್ ಯೋಚನೆ ಮಾಡಿ. ”ಆಯುಧಪೂಜೆ ಮಾಡಿಯಪ್ಪ. ಆದರೆ ನನ್ನದೊಂದು ಸಲಹೆ, ಎಲ್ಲಾ ವಾಹನಗಳನ್ನು ಒಟ್ಟಿಗೆ ನಿಲ್ಲಿಸಿ ಅವುಗಳಿಗೆಲ್ಲಾ ಸೇರಿ ಒಂದೇ ಒಂದು ಬೂದುಗುಂಬಳಕಾಯಿ ಒಡೆಯಿರಿ” ಎಂದೆ. ಅದಕ್ಕೆ ಅವರು ಏನು ಸಾರ್ ಹೀಗಂತೀರಿ. ಒಂದೊಂದು ವಾಹನಕ್ಕೂ ಒಂದೊಂದು ಬೂದುಗುಂಬಳಕಾಯಿ ಒಡದೇ ಆಕ್ಸಿಡೆಂಟ್‌ಗಳು ಕಡಿಮೆ ಆಗಲಿಲ್ಲ. ಅಂದ ಮೇಲೆ ಎಲ್ಲಾ ವಾಹನಗಳಿಗೂ ಸೇರಿ ಒಂದೇ ಒಂದು ಬೂದುಗುಂಬಳಕಾಯಿ ಒಡೆದರೆ ನಮ್ಮ ಗತಿ ಏನ್ ಸಾರ್? ಅಂತ ಕೇಳಿದರು. ಚರ್ಚಿಸಿ ಉಪಯೋಗವಿಲ್ಲವೆಂದು ಸರಿ, ಹಿಂದಿನಂತೆಯೇ ಆಯುಧಪೂಜೆ ಮಾಡಿ ಅಂದೆ. ಒಂದೊಂದು ವಾಹನಕ್ಕೂ ನಿನ್ನ ವಂಶದ ಒಬ್ಬೊಬ್ಬರನ್ನು ಬಲಿ ಕೊಟ್ಟರು. ಆ ಪಾಪದಲ್ಲಿ ನಾನೂ ಭಾಗಿಯಾದೆ.

ಇದನ್ನು ಓದಿದ್ದೀರಾ?: ಕೇಂದ್ರದ ಹುನ್ನಾರಕ್ಕೆ ಬಲಿಯಾದ ಮಹದಾಯಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!

ನಿನ್ನನ್ನು ಹೀಗೆ ಆಯುಧಪೂಜೆ ದಿನ ಬೀದಿಯಲ್ಲಿ ಕೊಲೆ ಮಾಡುವುದರಿಂದ ಅಪಘಾತಗಳು ಕಡಿಮೆ ಆಗುವುದಿಲ್ಲ ಎಂದು ಹಲವು ದಶಕಗಳಿಂದ ಬಡುಕೋತ ಇದ್ದೀನಿ. ಯಾರೂ ಇಲ್ಲಿಯತನಕ ಜಗ್ಗಿಯೇ ಇಲ್ಲ. ಈಗಿನ ಶಿಕ್ಷಣಪದ್ದತಿಯಿಂದ, ವಿಜ್ಞಾನದ ಬೆಳವಣಿಗೆಯಿಂದ ಇಂತಹ ಅರ್ಥವಿಲ್ಲದ ನಂಬಿಕೆಗಳನ್ನು ಸಾಕಷ್ಟು ಕಡಿಮೆ ಮಾಡಲು ಆಗಿಲ್ಲ. ಹೇಳಿಕೊಳ್ಳುವಂತಹ ಸಮಾಜ ಸುಧಾರಣೆ ಆಗಿಲ್ಲ. ವಿಜ್ಞಾನದ ಪಾಡಿಗೆ ವಿಜ್ಞಾನ. ಮೂಢನಂಬಿಕೆಗಳ ಪಾಡಿಗೆ ಮೂಢನಂಬಿಕೆಗಳು.

ನಮ್ಮ ದೇಶದಲ್ಲಿ ಅಸಂಖ್ಯಾತ ದೇವಸ್ಥಾನಗಳು, ಅವ್ಯಾಹತವಾಗಿ ಪೂಜೆ, ಪುಣ್ಯಕ್ಷೇತ್ರಗಳಲ್ಲಿ ಕೋಟ್ಯಂತರ ರೂಪಾಯಿಗಳ ಕಾಣಿಕೆ ಅರ್ಥಾತ್ ದೇವರಿಗೆ ಲಂಚ. ಲಕ್ಷಾಂತರ ಮಂದಿ ಗಂಗಾನದಿಯಲ್ಲಿ, ಉಳಿದ ಪುಣ್ಯನದಿಗಳಲ್ಲಿ ಆಗಾಗ ಸ್ನಾನ. ವರ್ಷವೆಲ್ಲಾ ವಾರಕ್ಕೊಂದು ಸಲ ಲಕ್ಷಾಂತರ ಮಂದಿಯಿಂದ ದೂರದರ್ಶನದಲ್ಲಿ ರಾಮಾಯಣ ವೀಕ್ಷಣೆ. ಈಗ ಮಹಾಭಾರತ ಮೊದಲಾಗಿದೆ. ಇವು ಯಾವುವೂ ಜನರ ಮನೋಭಾವವನ್ನು ಸರಿಯಾದ ದಿಕ್ಕಿನಲ್ಲಿ ಕಿಂಚಿತ್ತಾದರೂ ಬದಲಾಯಿಸಿಲ್ಲ. ಮಾಮೂಲಿ ಸ್ವಾರ್ಥ, ಅಪ್ರಾಮಾಣಿಕತೆ, ಸಮಾಜಘಾತಕ ಕೃತ್ಯಗಳು, ಮೋಸ, ದಗಾ ಜೊತೆ ಜೊತೆಯಲ್ಲಿಯೇ ಸಾಗುತ್ತಿವೆ. ನಿತ್ಯಜೀವನದ ಮೇಲೆ ಧರ್ಮವು ಪ್ರಭಾವ ಬೀರಿಲ್ಲ. ವಿಜ್ಞಾನವೂ ಬೀರಿಲ್ಲ. ಧರ್ಮ ಲೇವಾದೇವಿಯಾಗಿದೆ. ವಿಜ್ಞಾನ ಕೇವಲ ಜೀವನೋಪಾಯವಾಗಿದೆ.

ಇಷ್ಟು ದಿನ ಓದಿದವರಲ್ಲಿ ವಿಜ್ಞಾನಿಗಳಲ್ಲಿ ಯಾರಾದರೂ ಒಬ್ಬರು ಹೇಳಲಿ ಮೊಟ್ಟಮೊದಲನೆಯದಾಗಿ ಯಾವುದೇ ಬಲಿಯಿಂದ ಏನು ಪ್ರಯೋಜನ? ಪ್ರಯೋಜನವಿದ್ದರೆ ನಿನ್ನನ್ನೇ ಏಕೆ ಬಲಿ ಕೊಡಬೇಕು? ಇದನ್ನು ಸಮಂಜಸವಾಗಿ ಉತ್ತರಿಸುವ ಭೂಪ ಇನ್ನೂ ಹುಟ್ಟಿಲ್ಲ. ನಿನಗೆ ಆಗದವನು ಯಾವನೋ ನಿನ್ನನ್ನು ಮೊದಲು ಬಲಿ ಕೊಟ್ಟ. ಸರಿ. ಅಲ್ಲಿಂದ ಮೊದಲಾಯಿತು ಈ ಅಸಂಖ್ಯಾತ ವಾರ್ಷಿಕ ಭೀಕರ ಕೊಲೆಗಳು.

ನಿನ್ನನ್ನು ಹೀಗೆ ಅಮಾನುಷವಾಗಿ ಕೊಲೆ ಮಾಡುವುದನ್ನು ಸ್ನೇಹಿತರೊಂದಿಗೆ ಖಂಡಿಸುತ್ತಿದ್ದೆ. ಭಾಷಣಗಳಲ್ಲೂ ಅದೇ ಕೆಲಸ ಮಾಡುತ್ತಿದ್ದೆ. ಈ ಸಲವಂತೂ ನೀನು ಮತ್ತು ನಿನ್ನ ವಂಶದ ಹಲವಾರು ಬೀದಿಯಲ್ಲಿ ಕೊಲೆಗೀಡಾಗಿ ಅಸ್ತವ್ಯಸ್ತವಾಗಿ ಬಿದ್ದಿರುವುದನ್ನು ನೋಡಿ ದುಃಖ ತಡೆಯಲಾರದೇ ನಿನಗೆ ಈ ಕಾಗದವನ್ನು ಬರೆದಿದ್ದೇನೆ. ನೀನು ಓದಲು ಆಗದೇ ಇರಬಹುದು. ಆದರೆ ನಿನಗೆ ಬರೆದ ಪತ್ರವನ್ನು ಬಹಿರಂಗಪಡಿಸುವುದರಿಂದ ನಿನ್ನ ಕೊಲೆಪಾತಕರಾದರೂ ಇದನ್ನು ಓದಿ ನಿನ್ನನ್ನು ಇಂತಹ ದುರ್ಗತಿಗೆ ಈಡು ಮಾಡದೇ ಹೋಗಲಿ ಎಂದು ಬರೆದಿದ್ದೇನೆ.

ನಾನು ಇಷ್ಟು ಮಾತ್ರ ನಿನಗೆ ಆಶ್ವಾಸನೆ ಕೊಡುತ್ತೇನೆ. ನಿನ್ನನ್ನು ಕೊಲೆಗೀಡು ಮಾಡುತ್ತಿರುವಂತಹ ಅಸಂಖ್ಯಾತ ಮೂಢನಂಬಿಕೆಗಳ, ಅರ್ಥವಿಲ್ಲದ ಸಂಪ್ರದಾಯಗಳ ವಿರುದ್ಧ ಒಬ್ಬನೇ ಆದರೂ ಚಿಂತೆ ಇಲ್ಲ, ಎದೆ ಗುಂದದೆ ಕೊನೆಯತನಕ ಹೋರಾಡುತ್ತಲೇ ಇರುತ್ತೇನೆ.

ಬದುಕಿರುವಾಗ ದೇಹಕ್ಕೆ ಮನಸ್ಸಿಗೆ ಸಾಕಷ್ಟು ಕಷ್ಟಕೊಟ್ಟು ಸತ್ತಾಗ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುವ ಜನ ನಾವು. ನಿನ್ನ ದೇಹಕ್ಕೆ ಮತ್ತು ಮನಸ್ಸಿಗೆ ಅಸಾಧ್ಯ ನೋವಾಗಿದೆ ಎಂದು ನನಗೆ ಚೆನ್ನಾಗಿ ಗೊತ್ತು. ಗೊತ್ತಿಲ್ಲದ ಆತ್ಮದ ಬಗ್ಗೆ ನಾನು ಏನನ್ನೂ ಹೇಳಲೂ ಇಚ್ಛಿಸುವುದಿಲ್ಲ.

ಇತಿ,

ನಿನ್ನ ವಂಶದ ಶ್ರೇಯೋಭಿಲಾಷಿ
ಎಚ್. ನರಸಿಂಹಯ್ಯ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X