ನಮ್ಮ 'ನಂದಿನಿ' ವಹಿವಾಟು ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಳವಾಗಿದೆ. ಜೊತೆಗೆ ಪ್ರಮುಖ ಬ್ರ್ಯಾಂಡ್ಗಳ ಸಾಲಿಗೆ ಸೇರಿ, ದೇಶದಲ್ಲೇ ಅಗ್ರ ಶ್ರೇಯಾಂಕವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.
ಕರ್ನಾಟಕ ಸಹಕಾರಿ ಹಾಲು ಮಾರಾಟ ಮಹಾಮಂಡಳದ (ಕೆಎಂಎಫ್) ಬ್ರ್ಯಾಂಡ್ ‘ನಂದಿನಿ’ ಈಗ ದೇಶದ ಆಹಾರ ಮತ್ತು ಪಾನೀಯ ಉತ್ಪನ್ನಗಳ ಮಾರಾಟ ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿ, ಅಗ್ರ ಶ್ರೇಯಾಂಕವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.
ವಿಶ್ವದ ಪ್ರಮುಖ ಬ್ರ್ಯಾಂಡ್ ಮೌಲ್ಯಮಾಪನ ಸಂಸ್ಥೆಯಾದ ‘ಬ್ರ್ಯಾಂಡ್ ಫೈನಾನ್ಸ್’ ತನ್ನ 2025ರ ವರದಿಯನ್ನು ಬಿಡುಗಡೆ ಮಾಡಿದ್ದು, ವರದಿಯ ಪ್ರಕಾರ ‘ನಂದಿನಿ’ ಗಮನಾರ್ಹ ಪ್ರಗತಿ ಸಾಧಿಸಿದೆ. ದೇಶದ ಪ್ರಮುಖ ಬ್ರ್ಯಾಂಡ್ಗಳೊಂದಿಗೆ ತೀವ್ರ ಪೈಪೋಟಿ ನಡುವೆಯೂ ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ‘ನಂದಿನಿ’ ದೇಶದಲ್ಲೇ ನಾಲ್ಕನೆಯ ಸ್ಥಾನವನ್ನು ಕಾಯ್ದುಕೊಂಡಿದೆ.
ದಕ್ಷಿಣ ಭಾರತದಲ್ಲಿ ‘ನಂದಿನಿ’ ವಿಸ್ತಾರಗೊಂಡಿದೆ. ಉತ್ತರ ಪ್ರದೇಶದಲ್ಲಿ ಹಂತ ಹಂತವಾಗಿ ವಹಿವಾಟನ್ನು ವಿಸ್ತರಿಸುತ್ತಿದೆ. ಸಿಂಗಪುರ ಮತ್ತು ದುಬೈ ರಾಷ್ಟ್ರಕ್ಕೂ ‘ನಂದಿನಿ’ ವ್ಯಾಪಾರ ವಹಿವಾಟು ಆರಂಭಿಸಿದೆ. ಈಗ ತುಪ್ಪಕ್ಕೆ ಗಣನೀಯ ಬೇಡಿಕೆ ಬಂದಿದ್ದು, ತಿರುಪತಿ ದೇವಸ್ಥಾನಕ್ಕೆ ತಿಂಗಳಿಗೆ 300 ಮೆಟ್ರಿಕ್ ಟನ್ ತುಪ್ಪವನ್ನು ಕೆಎಂಎಫ್ ಪೂರೈಸುತ್ತಿದೆ.
ಬ್ರ್ಯಾಂಡ್ ಫೈನಾನ್ಸ್ ಮೌಲ್ಯಮಾಪನ ಸಂಸ್ಥೆ ಬ್ರ್ಯಾಂಡ್ಗಳ ಆರ್ಥಿಕ ಸದೃಢತೆ, ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ಗಳ ಮೌಲ್ಯಮಾಪನವನ್ನು ಅಳೆಯುವ ಸಂಸ್ಥೆಯಾಗಿದೆ. ಲಂಡನ್ನಲ್ಲಿ ಇದರ ಕೇಂದ್ರ ಕಚೇರಿ ಇದ್ದು, ಇದು 25ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ವಾರ್ಷಿಕವಾಗಿ 6,000ಕ್ಕೂ ಹೆಚ್ಚು ಬ್ರ್ಯಾಂಡ್ಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಬ್ರ್ಯಾಂಡ್ ಫೈನಾನ್ಸ್ ವಿವಿಧ ಬ್ರ್ಯಾಂಡ್ಗಳ ಆರ್ಥಿಕ ಮೌಲ್ಯವನ್ನು ಅಳೆಯುವುದರಿಂದ ಕಂಪನಿಗಳು ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಸಂಸ್ಥೆಯ ವರದಿ ಸಹಾಯ ಮಾಡುತ್ತದೆ.
ಬ್ರ್ಯಾಂಡ್ ಫೈನಾನ್ಸ್ ಬಿಡುಗಡೆ ಮಾಡಿರುವ 2025ರ ವರದಿಯಲ್ಲಿ ‘ನಂದಿನಿ’ 2024ರಲ್ಲಿ 43ನೇ ಸ್ಥಾನದಿಂದ 2025ರಲ್ಲಿ 38ನೇ ಸ್ಥಾನಕ್ಕೆ ಏರಿದೆ. ಭಾರತೀಯ ಬ್ರ್ಯಾಂಡ್ಗಳ ಅಗ್ರ ನೂರರಲ್ಲಿ ‘ನಂದಿನಿ’ ಬ್ರ್ಯಾಂಡ್ ಮೌಲ್ಯವು 1,079 ಮಿಲಿಯನ್ಗೆ (107.9 ಕೋಟಿ ರೂ) ಏರಿಕೆಯಾಗಿದೆ. ಇದು ಹಿಂದಿನ ವರ್ಷಕ್ಕಿಂತ 139 ಮಿಲಿಯನ್ (13.9 ಕೋಟಿ ರೂ.) ಬ್ರ್ಯಾಂಡ್ ಮೌಲ್ಯ ಹೆಚ್ಚಳವಾಗಿದೆ.
ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ‘ನಂದಿನಿ’ ದೇಶದಲ್ಲೇ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದೆ. ಮೊದಲ ಸ್ಥಾನದಲ್ಲಿ ‘ಅಮುಲ್’ ಇದ್ದರೆ, ಎರಡು ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ‘ಮದರ್ ಡೈರಿ’ ಮತ್ತು ‘ಬ್ರಿಟಾನಿಯಾ’ ಇದೆ. ಐದನೇ ಸ್ಥಾನದಲ್ಲಿದೆ ‘ಡಾಬರ್’.

ಬ್ರ್ಯಾಂಡ್ ಫೈನಾನ್ಸ್ ವರದಿಯಲ್ಲಿ ಬ್ರ್ಯಾಂಡ್ಗಳ ಸದೃಢತೆ, ಗ್ರಾಹಕ ನಿಷ್ಠೆ, ಮಾರುಕಟ್ಟೆ ಪಾಲು ಸೇರಿದಂತೆ ನಾನಾ ಅಂಶಗಳನ್ನು ಪರಿಗಣಿಸಲಾಗುತ್ತದೆ. ಉನ್ನತ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ ಬ್ರ್ಯಾಂಡ್ಗಳು ಜನಮಾನಸದಲ್ಲಿ ಬಾಂಧವ್ಯ, ಸ್ಥಿರವಾದ ಕಾರ್ಯಕ್ಷಮತೆ ಮತ್ತು ಬಲಿಷ್ಠ ಮಾರುಕಟ್ಟೆಯನ್ನು ಪ್ರತಿಬಿಂಬಿಸುತ್ತವೆ. ಈ ವರದಿ ಪ್ರಕಾರ ‘ನಂದಿನಿ’ಯ ನಿರಂತರ ಕಾರ್ಯಕ್ಷಮತೆ ಮತ್ತು ಮೌಲ್ಯವೃದ್ಧಿಯಿಂದ ಬೆಳೆದಿರುವ ಬ್ರ್ಯಾಂಡ್ ಆಗಿದ್ದು, ದಕ್ಷಿಣ ಭಾರತ ಮತ್ತು ಇತರೆ ರಾಜ್ಯಗಳಲ್ಲಿನ ಗ್ರಾಹಕರ ನಂಬಿಕೆ ಉಳಿಸಿಕೊಂಡು ವೃದ್ಧಿಸಿದೆ.
ಈ ಸುದ್ದಿ ಓದಿದ್ದೀರಾ? ₹20 ಸಾವಿರ ಕೋಟಿ ವಹಿವಾಟಿನ ಕೆಎಂಎಫ್ ಅಧ್ಯಕ್ಷ ಸ್ಥಾನದತ್ತ ಡಿ ಕೆ ಸುರೇಶ್ ಕಣ್ಣು?
ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ‘ನಂದಿನಿ’ ಸಾಧನೆ ಬಗ್ಗೆ ಈ ದಿನ.ಕಾಂ ಜೊತೆ ಮಾತನಾಡಿ, “ವಾರ್ಷಿಕ ವಹಿವಾಟು, ಉತ್ಪನ್ನಗಳ ಗುಣಮಟ್ಟ ಹಾಗೂ ಬ್ರ್ಯಾಂಡ್ನ ವಿಸ್ತಾರವನ್ನು ಗಮನದಲ್ಲಿಟ್ಟುಕೊಂಡು ‘ಬ್ರ್ಯಾಂಡ್ ಫೈನಾನ್ಸ್’ ತನ್ನ 2025ರ ವರದಿಯನ್ನು ಬಿಡುಗಡೆ ಮಾಡಿದೆ. ನಮ್ಮ ‘ನಂದಿನಿ’ ವಹಿವಾಟು ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಳವಾಗಿದೆ. ಜೊತೆಗೆ ಪ್ರಮುಖ ಬ್ರ್ಯಾಂಡ್ಗಳ ಸಾಲಿಗೆ ಸೇರಿ, ದೇಶದಲ್ಲೇ ನಾಲ್ಕನೆಯ ಸ್ಥಾನವನ್ನು ಉಳಿಸಿಕೊಂಡಿದೆ” ಎಂದು ಹೇಳಿದರು.
”ನಮ್ಮ ಪ್ರಿಯ ಗ್ರಾಹಕರಿಗೆ, ನಿಷ್ಠಾವಂತರಾದ ಹಾಲು ಉತ್ಪಾದಕರಿಗೆ, ವಿಶ್ವಾಸಾರ್ಹ ಪಾಲುದಾರರಿಗೆ ಹಾಗೂ ಸಮರ್ಪಿತ ತಂಡಗಳಿಗೆ ನಾವು ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತೇವೆ. ನಂದಿನಿಯ ಬೆಳವಣಿಗೆ ಹಾಗೂ ಗೌರವಪೂರ್ಣ ಸ್ಥಾನಕ್ಕೆ ಅವರೆಲ್ಲರ ನಿರಂತರ ಬೆಂಬಲ ಮತ್ತು ನಂಬಿಕೆಯೇ ಕಾರಣವಾಗಿದೆ. ಪ್ರತಿದಿನವೂ ನಾವು ಮೌಲ್ಯ, ಪೋಷಣೆ ಮತ್ತು ವಿಶ್ವಾಸಾರ್ಹತೆ ಒದಗಿಸಲು ನಿಸ್ಸಂದೇಹವಾಗಿ ಬದ್ಧರಾಗಿದ್ದೇವೆ. ‘ನಂದಿನಿ’ಯ ಪರಂಪರೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಹೊಸ ಮೈಲಿಗಲ್ಲುಗಳನ್ನು ತಲುಪಲು ನಮ್ಮ ಹೆಜ್ಜೆಗಳಿಗೆ ಮತ್ತಷ್ಟು ಶಕ್ತಿ ತುಂಬಿಕೊಳ್ಳುತ್ತೇವೆ” ಎಂದು ಶಿವಸ್ವಾಮಿ ತಿಳಿಸಿದರು.

1983ರಲ್ಲಿ ‘ನಂದಿನಿ’ ಬ್ರ್ಯಾಂಡ್ ಪರಿಚಯ
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಸಂಘಕ್ಕೆ (ಕೆಎಂಎಫ್) ಐವತ್ತು ವರ್ಷಗಳ ಇತಿಹಾಸ ಇದೆ. 1974ರಲ್ಲಿ ಕರ್ನಾಟಕ ಡೈರಿ ಡೆವಲಪ್ಮೆಂಟ್ ಕಾರ್ಪೊರೇಶನ್ ಆಗಿ ಅಸ್ತಿತ್ವಕ್ಕೆ ಬಂತು. 1984ರಲ್ಲಿ ಕೆಎಂಎಫ್ ಎಂದು ಇದರ ಹೆಸರು ಬದಲಿಸಲಾಯಿತು. 1983ರಲ್ಲಿ ‘ನಂದಿನಿ’ ಬ್ರ್ಯಾಂಡ್ ಅನ್ನು ಪರಿಚಯಿಸಲಾಯಿತು.
ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ ಟಿ-20 ವಿಶ್ವಕಪ್ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ. ಕರ್ನಾಟಕದ ಹಾಲಿನ ಸಂಸ್ಥೆಯೊಂದು ಈ ಹಂತಕ್ಕೆ ಬೆಳೆದಿರುವುದು ಶ್ಲಾಘನೀಯ. ಕೆಎಂಎಫ್ನ 50 ವರ್ಷದ ಮೈಲಿಗಲ್ಲಿಗೆ ಇದೊಂದು ಮಹತ್ವದ ಬೆಳವಣಿಗೆ ಆಗಿದೆ. ಪ್ರಸ್ತುತ ₹20 ಸಾವಿರ ಕೋಟಿ ರೂ. ವಹಿವಾಟು ಹೊಂದಿರುವ ಕೆಎಂಎಫ್ನೊಂದಿಗೆ ಸುಮಾರು 26.89 ಲಕ್ಷ ಹಾಲು ಉತ್ಪಾದಕರು ನೋಂದಾಯಿಸಲ್ಪಟ್ಟಿದ್ದಾರೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.