ಸಾವರ್ಕರ್‌ ಹಿಂದುತ್ವವಾದಿ ಹಾಗೂ ಹಿಂದೂ ವಿರೋಧಿ

Date:

Advertisements

ಸಾವರ್ಕರ್‌ ಅವರು ಹಿಂದೂ ಧರ್ಮದೊಳಗಿನ ಸಾಮಾಜಿಕ ಅನಿಷ್ಠಗಳನ್ನು ಕಟುವಾಗಿ ವಿಮರ್ಶಿಸಲಿಲ್ಲ. ಅದನ್ನು ಬೇಕೆಂತಲೇ ನಿರ್ಲಕ್ಷಿಸಿದ್ದಾರೆ. ಆದರೆ ಗಾಂಧೀಜಿಯವರು ಗೋವನ್ನು ಮಾತೆಯಂತೆ ಪೂಜಿಸಬೇಕು ಎಂದಾಗ ಅದು ತನ್ನ ಕರುವಿಗೆ ಮಾತ್ರ ಮಾತೆ ಎಂದು ಹಿಂದೂ ಧರ್ಮಕ್ಕೆ ವಿರುದ್ಧವಾದ ಮಾತನ್ನಾಡಿದ್ದಾರೆ.

ಆಧುನಿಕ ಭಾರತದ ಇತಿಹಾಸದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಒಂದು ವಿಲಕ್ಷಣ ಹಾಗೂ ವಿವಾದಾತ್ಮಕವಾದ ಹೆಸರು. ಇಂದು ಸಾವರ್ಕರ್ ಅವರನ್ನು ಹಿಂದುತ್ವವಾದಿಗಳು ದೇವಮಾನವನೆಂಬಂತೆ ಚಿತ್ರಿಸುತ್ತಿದ್ದಾರೆ. ವರ್ತಮಾನದಲ್ಲಿ ಆಗುತ್ತಿರುವ ವ್ಯಕ್ತಿ ವೈಭವೀಕರಣದ ಅವಗಢಗಳನ್ನು ವಿಮರ್ಶಿಸಲು ಇತಿಹಾಸದ ಘಟನೆಗಳು ಹಾಗು ಸೈದ್ಧಾಂತಿಕ ಆಧಾರದಲ್ಲಿ ವ್ಯಕ್ತಿಗಳ ಪರಾಮರ್ಶೆ ಅಗತ್ಯ. ಸಾವರ್ಕರ್ ಅವರ ಪ್ಯಾನ್ ಹಿಂದೂ ಯುನಿಟಿ ಪ್ರೋಗ್ರಾಮ್ ಕುರಿತು ಆ ಕಾಲದಲ್ಲಿಯೆ ಅನೇಕ ವಿವಾದಗಳು ಉಂಟಾಗಿದ್ದವು. ಅವರ ಸರ್ವ-ಹಿಂದೂ ಐಕ್ಯತಾ ಕಾರ್ಯಕ್ರಮ ಅನೇಕ ಬಗೆಯ ವೈರುಧ್ಯಗಳನ್ನು ಹೊಂದಿತ್ತು. ರಾಜಕೀಯ ಕಾರಣದಿಂದ ಹಿಂದುತ್ವವನ್ನು ಬಲಪಡಿಸುವ ಹಾಗೂ ಹಿಂದು ಧರ್ಮದ ನಂಬಿಕೆಗಳನ್ನು ಬುಡಮೇಲು ಮಾಡುವ ಅನೇಕ ಪ್ರತಿಪಾದನೆಗಳು ಸಾವರ್ಕರ್ ಪ್ರತಿಪಾದಿಸುತ್ತಿದ್ದರು. ಅವರ ರಾಜಕೀಯ ಚಿಂತನೆ ಅನೇಕ ಅಭಾಸಗಳಿಂದ ತುಂಬಿತ್ತು. “ಹಿಂದುತ್ವ ಒಂದು ಪದವಲ್ಲ ಆದರೆ ಇತಿಹಾಸ” ಎಂದು ಸಾವರ್ಕರ್ ಅವರು ಪ್ರತಿಪಾದಿಸುತ್ತಿದ್ದರು. ಅವರು ಇತಿಹಾಸದ ಕುರಿತು ಮಾಡಿದರೆನ್ನಲಾಗುವ ಸಂಶೋಧನೆಯು ಇತಿಹಾಸದ ಕ್ರಮಬದ್ಧ ಶಾಸ್ತ್ರೀಯ ಆವಿಷ್ಕಾರಗಳತ್ತ ಹಿಂತಿರುಗದೆ ಈಗಾಗಲೆ ಬರೆಯಲಾದ ಹಿಂದೂ ಇತಿಹಾಸವನ್ನು ಬುಡಮೇಲು ಮಾಡುವ ಪ್ರಯತ್ನವಾಗಿತ್ತು.

ಸಾವರ್ಕರ್ ಅವರು ವಾಸ್ತವವಾಗಿ ತಮ್ಮ ‘ಸಹಾ ಸೋನೆರಿ ಪಾನೆ’ ಪುಸ್ತಕದಲ್ಲಿನ ವಿಧಾನಗಳಲ್ಲಿ ಸ್ಥಿರತೆ ಹೊಂದಿರಲಿಲ್ಲ. ಅವರು “ಇಂದಿನ ಸಂಶೋಧನೆ” ಎಂದು ಗುರುತಿಸಲಾದ ಮೂಲಭೂತ ಶಿಷ್ಠಾಚಾರಗಳನ್ನು ಉಲ್ಲಂಘಿಸಿದ್ದರು. ಅವರು ಪಕ್ಷಪಾತ, ಭೇದಭಾವ ಮತ್ತು ತಿರುಚಲ್ಪಟ್ಟ ಇತಿಹಾಸಗಳ ಬಗ್ಗೆ ಹೆಚ್ಚು ಆಶಕ್ತಿ ವಹಿಸಿದ್ದರು. ಅವರ 1857ರ ಸ್ವಾತಂತ್ರ್ಯ ಸಂಗ್ರಾಮ ಮತ್ತು ಹಿಂದೂ ಪದ್ ಪಾದಶಾಹಿ ಸೇರಿದಂತೆ ಅನೇಕ ಬರಹಗಳಲ್ಲಿ ಇದನ್ನು ಕಾಣಬಹುದು. ಸಹಾ ಸೋನೆರಿ ಪಾನೆಯಲ್ಲಿ, ಅವರು ಈ ವಿರೂಪಗಳನ್ನು ಇತಿಹಾಸಕಾರರು ಅಳವಡಿಸಿಕೊಂಡ “ಸದ್ಗುಣದ ವಿಕೃತ ಪ್ರಜ್ಞೆ” ಎಂದು ಹೇಳಿದ್ದಾರೆ. ಅಂತಿಮವಾಗಿ ಇದರ ಅರ್ಥವಿಷ್ಟೆˌ ಸಾವರ್ಕರ್ ವ್ಯಾಖ್ಯಾನಿಸಿದಂತೆ ಇತಿಹಾಸಕಾರರು ಹಿಂದೂ ವಿಷಯಕ್ಕೆ ಆದ್ಯತೆ ನೀಡದಿದ್ದರೆ, ಅದನ್ನು ಕಟುವಾದ ಪದಗಳಿಂದ ಅಲ್ಲಗಳೆಯುವುದು. ಸಾವರ್ಕರ್ ಅವರು ವಸ್ತುನಿಷ್ಟ ಇತಿಹಾಸಕಾರರನ್ನು ಮನಸ್ಸಿಗೆ ಬಂದಂತೆ ಟೀಕಿಸುತ್ತಾರೆ. “ಭಾರತದ ಇತಿಹಾಸವು ಕೆಲವು ಅರೆ-ಹುಚ್ಚˌ ಅಸೂಯಾಪರ ಇತಿಹಾಸಕಾರರು, ವಿದೇಶಿ ಹಾಗೂ ಭಾರತೀಯ ಅಥವಾ ಡಾ. ಅಂಬೇಡ್ಕರ್ ಅವರಂತಹ ಕೆಲವು ಹಿಂದೂ-ದ್ವೇಷಿಗಳು ಅಥವಾ ಕೆಲವು ಅಜ್ಞಾನಿ ಲೇಖಕರಿಂದ ಅಪಹಾಸ್ಯಕ್ಕೊಳಗಾಗಿದೆ” ಎನ್ನುತ್ತಾರೆ. ಈ ರೀತಿಯ ಉದ್ವೇಗವು ಸಾವರ್ಕರ್ ಅವರ ಬರಹಗಳುದ್ದಕ್ಕೂ ಎದ್ದು ಕಾಣುತ್ತದೆ.

Advertisements

ಏಕೆಂದರೆ ಸಾವರ್ಕರ್ ಅವರು ಸಮಕಾಲೀನ ಸಂಶೋಧನೆಯನ್ನು ಸತ್ಯದ ನೆಲೆಯಲ್ಲಿ ಪರಿಗಣಿಸದೆ ಹಿಂದುತ್ವದ ಹಿನ್ನೆಲೆಯಲ್ಲಿ ಪ್ರತಿಪಾದಿಸುತ್ತಾರೆ. ಅವರ ಇತಿಹಾಸದ ವ್ಯಾಖ್ಯಾನ ಹಿಂದೂತ್ವದ ಸುತ್ತ ತಿರುಗುತ್ತದೆಯೇ ಹೊರತು ವಸ್ತುನಿಷ್ಠತೆಯ ಕಡೆಗೆ ಮುಖ ಮಾಡುವುದಿಲ್ಲ. ಅವರು “ಭಾರತದ ಇತಿಹಾಸವು ಮೊದಲಿನಿಂದಲೂ ಗುಲಾಮ ಜನರ ಇತಿಹಾಸವಾಗಿದೆ, ವಿದೇಶಿ ದಾಸ್ಯದಲ್ಲಿ ಆಳವಾಗಿ ಮುಳುಗಿದೆ ಮತ್ತು ನಿರಂತರವಾಗಿ ವಿದೇಶಿ ನೆರಳನ್ನೇ ತುಳಿದಿದೆ” ಎಂದು ಬರೆಯುತ್ತಾರೆ. ಆಧುನಿಕ ಇತಿಹಾಸದ ಸಂಶೋಧನೆಯಲ್ಲಿ ಬಳಸುವ ಅಗತ್ಯ ಪರಿಕರಗಳನ್ನು ಪ್ರತಿಪಾದಿಸುವ ಸಾವರ್ಕರ್ ತನ್ನನ್ನು ತಾವೇ ಒಂದು ಕ್ರಮ‌ ಶಾಸ್ತ್ರೀಯ ಮೂಲೆಗೆ ತಳ್ಳಿಕೊಂಡಿದ್ದು ಇದರಿಂದ ಸ್ಪಷ್ಟವಾಗುತ್ತದೆ. ಇತಿಹಾಸ ಬರೆಯುವ ಮಾರ್ಗದಲ್ಲಿ ಬಹು ಪಠ್ಯಗಳನ್ನು ಪರಿಶೀಲಿಸುವಾಗ, ಅವರು ಪಾಶ್ಚಿಮಾತ್ಯ ಓರಿಯಂಟಲಿಸ್ಟ್‌ಗಳು ಅಥವಾ ಇಂಗ್ಲಿಷ್ ಇತಿಹಾಸಕಾರರ ವ್ಯಾಖ್ಯಾನಗಳನ್ನು ಅದು ತಮ್ಮ ಉದ್ದೇಶಗಳಿಗೆ ಸರಿಹೊಂದಿದಾಗ ಸ್ವೀಕರಿಸುತ್ತಾರೆ, ಮತ್ತು ಅದು ತಮ್ಮ ಹಿಂದುತ್ವದ ಕಲ್ಪಿತ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದಾಗ ಮತ್ತು ಹಿಂದುತ್ವದ ನಿಲುವುಗಳ ಬಗ್ಗೆ ವಿಮರ್ಶಾತ್ಮಕವಾಗಿದ್ದಾಗ ಅವರು ಅದನ್ನು ತಳ್ಳಿಹಾಕುತ್ತಾರೆ.

1920-30ರ ದಶಕದಲ್ಲಿ, ಸಾವರ್ಕರ್ ಅವರು ರತ್ನಗಿರಿ ಜಿಲ್ಲೆಯಲ್ಲಿ ದೇವಸ್ಥಾನ ಪ್ರವೇಶ ಮತ್ತು ಅಸ್ಪೃಶ್ಯರ ಜೊತೆಗಿನ ಸಹಪಂಕ್ತಿ ಭೋಜನ ಎರಡನ್ನೂ ಒತ್ತಾಯಿಸುವ ಜಾತಿ ನಿರ್ಮೂಲನಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದರು. ಇದು ಹಿಂದುತ್ವದ ತೆಕ್ಕೆಗೆ ದಲಿತರನ್ನು ಸೆಳೆಯುವ ಅವರ ನಾಟಕದ ಭಾಗವಾಗಿತ್ತು. ಅಂಬೇಡ್ಕರ್ ಅವರ ಹಿಂದೂ ಧರ್ಮದ ಅನಿಷ್ಟ ಪದ್ದತಿಗಳ ಖಂಡನೆಯನ್ನು ಜೀರ್ಣಿಸಿಕೊಳ್ಳಲು ಆಗದೆ ಸಾವರ್ಕರ್ ಅವರು ಹಿಂದೂ ಧರ್ಮದ ಚೌಕಟ್ಟನ್ನು ವಿಸ್ತರಿಸಲು ಹಿಂದೂ ಏಕತೆಯ ಕಾರ್ಯಕ್ರಮ ಹಾಕಿಕೊಂಡಿದ್ದರು. 1929ರಲ್ಲಿ, ರತ್ನಗಿರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಬ್ಲ್ಯೂ ಗಿಲ್ಲಿಗನ್ ಅವರು ಗೌಪ್ಯ ವರದಿಯೊಂದರಲ್ಲಿ ಸಾವರ್ಕರ್ ಅವರ ಹಿಂದೂ ಏಕತಾ ಕಾರ್ಯಸೂಚಿಯು ಸಮಾಜದಲ್ಲಿ ಸಂಘರ್ಷವನ್ನು ಉಂಟುಮಾಡಬಹುದು ಮತ್ತು ಆ ಪ್ರದೇಶದಲ್ಲಿ ಅಂಬೇಡ್ಕರ್ ಅವರ ಜಾತಿ ವಿನಾಶ ಹಾಗೂ ಅಸ್ಪೃಶ್ಯರ ಜಾಗೃತಾ ಅಭಿಯಾನದಲ್ಲಿ ಹಸ್ತಕ್ಷೇಪ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದರು.
ಸಾವರ್ಕರ್ ಅವರು ರತ್ನಗಿರಿ ಜಿಲ್ಲೆಯಾದ್ಯಂತ ಸಂಚರಿಸಿ ಜಾತಿ ವ್ಯವಸ್ಥೆಯ ಸಮಸ್ಯೆಗಳ ಕುರಿತು ಉಪನ್ಯಾಸಗಳನ್ನು ನೀಡುತ್ತಿದ್ದರು ಮತ್ತು “ಅಸ್ಪೃಶ್ಯರ” ವಿರುದ್ಧದ ಸಾಮಾಜಿಕ ನಿರ್ಬಂಧಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು.

ಸಾವರ್ಕರ್ ಅವರ “ಹಿಂದೂ ಏಕತಾ” ಹೆಸರಿನ ಜಾತಿವಿನಾಶ ಕಾರ್ಯಕ್ರಮವನ್ನು ಸನಾತನಿಗಳು ತೀವ್ರವಾಗಿ ವಿರೋಧಿಸಿದ್ದರು. ಪತ್ರಿಕಾ ವರದಿ ಮತ್ತು ಸರ್ಕಾರಿ ಅಧಿಕಾರಿಗಳ ವರದಿಗಳು ಹೇಳುವಂತೆ, ಸಾವರ್ಕರ್ ಅವರ ಈ ಸಭೆಗಳಿಗೆ ನೂರಾರು ಮತ್ತು ಕೆಲವೊಮ್ಮೆ ಸಾವಿರಾರು ಜನರು ಸೇರುತ್ತಿದ್ದರಂತೆ. ಸಾವರ್ಕರ್ ಅವರ ಸಂದೇಶಗಳನ್ನು ವಾಸ್ತವವಾಗಿ ಹೇಗೆ ಅರ್ಥೈಸಲಾಗಿತ್ತು ಎಂಬುದರ ಕುರಿತು ಗೊಂದಲಗಳಿವೆ. ಆದರೆ ಗಿಲ್ಲಿಗನ್ ಅವರು “ಮಹಾರ್ ವರ್ಗಗಳಲ್ಲಿನ ಸಾವರ್ಕರ್ ಅವರ ಆಸಕ್ತಿಗಳ ಕಾರಣದಿಂದಾಗಿ ಬ್ರಾಹ್ಮಣರು ಅವರನ್ನು ಇಷ್ಟಪಡುತ್ತಿಲ್ಲ” ಎಂದು ವರದಿ ಕೊಟ್ಟಿದ್ದರಂತೆ. “ಅಸ್ಪೃಶ್ಯ”ರ ಹಕ್ಕುಗಳಿಗಾಗಿ ಸಾವರ್ಕರ್ ಅವರ ಬೇಡಿಕೆಗಳು ಸಾಂಪ್ರದಾಯಿಕ ಹಿಂದೂಗಳ ಭಾವನೆಗಳಿಗೆ ಹಾನಿಯುಂಟುಮಾಡುತ್ತಿದೆ ಎಂದು ಪ್ರತಿಪಾದಿಸಿದ ಬ್ರಾಹ್ಮಣರು ಪ್ರಬಲ ಆಕ್ಷೇಪಣೆಗಳನ್ನು ಎತ್ತಿದ್ದರಂತೆ. ಸಾವರ್ಕರ್ ಅವರು ಏಕೀಕೃತ ಹಿಂದೂ ಐಡೆಂಟಿಟಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಾದವು ಪ್ರಬಲವಾದ ಮೇಲ್ಜಾತಿಯ ಜನರು ಸ್ವಾಭಾವಿಕವಾಗಿ ಒಪ್ಪರಲಿಲ್ಲ. ಸನಾತನಿಗಳು ವಿಶೇಷವಾಗಿ ಸಾವರ್ಕರ್ ವಿರುದ್ಧ ತಮ್ಮ ಧ್ವನಿ ಎತ್ತಿದ್ದರು. ಮೇಲ್ಜಾತಿ ಹಿಂದೂ ಪ್ರತಿಭಟನಾಕಾರರು ಅನೇಕ ಕಾರ್ಯಕ್ರಮಗಳಲ್ಲಿ ಸಾವರ್ಕರ್ ಅವರನ್ನು ತಡೆದಿದ್ದರು.

ಸಾವರ್ಕರ್ ಅಸ್ಪೃಶ್ಯರ ಪರವಾಗಿ ಮಾಡುತ್ತಿರುವ ಕೆಲಸವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು. ರತ್ನಗಿರಿಯಲ್ಲಿ ದೇವಾಲಯ ಪ್ರವೇಶ ಕುರಿತು ಸಾವರ್ಕರ್ ಅವರ ವಿಚಾರಗಳನ್ನು ಮಂಡಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಸರಕಾರಕ್ಕೆ ಪ್ರತಿಭಟನಾ ಪತ್ರಗಳನ್ನು ನೀಡಲಾಗಿತ್ತು. ಬಾಂಬೆಯ ಗವರ್ನರ್‌ಗೆ ಸಲ್ಲಿಸಿದ ಮನವಿಯಲ್ಲಿ, ಮಾಲ್ವಾನ್ ಪ್ರದೇಶದ ಇನಾಮದಾರ್ ಆಗಿದ್ದ ಅನಂತ ದತ್ತಾತ್ರಯ ಸಭಾಲೆಯವರು, ಸಾವರ್ಕರ್ ಅವರು ಸನಾತನಿ ಹಿಂದೂಗಳ ಭಾವನೆಗಳನ್ನು ನೋಯಿಸುವ ಅನೈತಿಕ ಮತ್ತು ಅಧರ್ಮದ ಉಪದೇಶಗಳನ್ನು ನೀಡುತ್ತಿದ್ದಾರೆ ಎಂದು ವಾದಿಸಿದರು. ಸಾವರ್ಕರ್ ಅವರಿಗೆ ಅಸ್ಪೃಶ್ಯತೆಯ ಬಗ್ಗೆ ಮಾತನಾಡಲು ಅವಕಾಶ ನೀಡುವಲ್ಲಿ ಸರ್ಕಾರದ ಪಾತ್ರವು “ಧಾರ್ಮಿಕ ವಿಷಯಗಳಲ್ಲಿ ಸರ್ಕಾರದ ತಟಸ್ಥತೆಯನ್ನು ಖಾತರಿಪಡಿಸುತ್ತದೆ” ಎಂದು ಪತ್ರಬರೆದಿದ್ದರು. ರಾಮಚಂದ್ರ ಮಹಾದೇವ್ ಸೋನಿ, ಹೆಸರಿನ ಮತ್ತೊಬ್ಬ ವ್ಯಕ್ತಿ, ಸಾವರ್ಕರ್ ಅವರು ಸನಾತನ ಹಿಂದೂ ಧರ್ಮದ ತತ್ವಗಳಿಗೆ ವಿರುದ್ಧವಾದ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಸಾಂಪ್ರದಾಯಿಕ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದಾರೆ ಎಂದು ಅರ್ಜಿಯನ್ನು ಸಲ್ಲಿಸಿದ್ದರು.

ಸಾವರ್ಕರ್ ಅವರನ್ನು ಸಂಪೂರ್ಣವಾಗಿ ರತ್ನಗಿರಿಯಿಂದ ಗಡಿಪಾರು ಮಾಡುವ ಮೂಲಕ ಸರಕಾರವು ಅವರ ಆಲೋಚನೆಗಳಿಂದ ಜನರನ್ನು ರಕ್ಷಿಸುವ ಅಗತ್ಯವಿದೆ ಎಂದು ಅವರು ಮನವಿ ಮಾಡಿದ್ದರು. ಇದರ ಪರಿಣಾಮವಾಗಿ ಸನಾತನಿಗಳು ಸಾವರ್ಕರ್ ವಿರುದ್ಧ ಪ್ರತಿಭಟನಾ ಸಭೆಗಳನ್ನು ಸಂಘಟಿಸಿದರು. ಆಗ ಸನಾತನಿಗಳು ಸಾವರ್ಕರ್ ಬೆಂಬಲಿಗರ ಮೇಲೆ ಕಲ್ಲು ಮತ್ತು ಚಪ್ಪಲಿ ಎಸೆಯುವ ಮೂಲಕ ಚಳವಳಿ ಹಿಂಸಾಚಾರಕ್ಕೆ ತಿರುಗಿತ್ತು. ಸ್ಥಳೀಯ ಅಧಿಕಾರಿಗಳು ಸಾವರ್ಕರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಲ್ಲದೆˌ ಸನಾತನಿಗಳ ದಾಳಿಗೆ ಸಾವರ್ಕರ್ ಪ್ರಚೋದನೆ ನೀಡಿರಬಹುದು ಎಂದು ಅವರ ಮನೆಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ದೇಶದ್ರೋಹದ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಮಗ್ರಿಗಳಿಗಾಗಿ ಶೋಧ ನಡೆಸಲಾಗಿತ್ತು ಎಂದು ವಿನಾಯಕ್ ಚತುರ್ವೇದಿಯವರು ತಮ್ಮ ಪುಸ್ತಕ “ಹಿಂದುತ್ವ ಮತ್ತು ಹಿಂಸೆ: ವಿ. ಡಿ. ಸಾವರ್ಕರ್ ಮತ್ತು ಇತಿಹಾಸದ ರಾಜಕೀಯ” ದಲ್ಲಿ ಬರೆದಿದ್ದಾರೆ. 1934 ಮೇ ತಿಂಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಸರ್ದಾರ್ ಮುಹಮ್ಮದ್ ಅವರು ಅವರ ಚಟುವಟಿಕೆಗಳ ಬಗ್ಗೆ ಸಾವರ್ಕರ್ ಅವರನ್ನು ಸಂದರ್ಶಿಸಿದಾಗ, “ನಾನು ಅಸ್ಪೃಶ್ಯತೆ ನಿರ್ಮೂಲನೆಯ ಪ್ರಯತ್ನವನ್ನು ಮುಕ್ತ ಮತ್ತು ಖಚಿತವಾದ ರೀತಿಯಲ್ಲಿ ನಡೆಸುತ್ತಿದ್ದೇನೆ ಎಂದು ಹೇಳಿದ್ದರು.

“ಈ ಕುರಿತು ನೂರಾರು ಉಪನ್ಯಾಸಗಳನ್ನು ನೀಡಿದ್ದೇನೆ. ಆ ಕುರಿತು ಸರಕಾರಕ್ಕೆ ನಿಯಮಿತವಾಗಿ ವರದಿ ಕೂಡ ಮಾಡಿದ್ದೇನೆ.” ಆ ಸಮಯದಲ್ಲಿ ಸಾವರ್ಕರ್ ಅವರಿಗೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲವಾದ್ದರಿಂದ, ಸಾಮಾಜಿಕ ಸುಧಾರಣೆಯಲ್ಲಿ ಕೆಲಸ ಮಾಡಲು ಅವರಿಗೆ ಅನುಮತಿ ನೀಡಲಾಗಿತ್ತು; ಅವರು ಹಿಂದೂತ್ವದ ಎಸೆನ್ಷಿಯಲ್ಸ್ ಮತ್ತು ಹಿಂದೂ ಏಕತೆಗಾಗಿ ತಮ್ಮ ವಾದಗಳನ್ನು ಮಂಡಿಸಲು ಅವಕಾಶವನ್ನು ಪಡೆದರು. 1937 ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸಾವರ್ಕರ್ ಆಯ್ಕೆಯಾದ ನಂತರ, ಹಿಂದುತ್ವದ ಅಗತ್ಯಗಳನ್ನು ಪ್ರಸಾರ ಮಾಡುವ ಅವರ ಕಾರ್ಯಕ್ರಮಕ್ಕಾಗಿ ಅಂಬೇಡ್ಕರ್ ಅವರು ಗುರುತಿಸಿದ್ದ ದಮನಿತ ವರ್ಗಗಳ ಬೆಂಬಲವನ್ನು ಬಳಸಿಕೊಳ್ಳಲು ಸಾವರ್ಕರ್ ತಮ್ಮ ಕಾರ್ಯಸೂಚಿಯನ್ನು ವಿಸ್ತರಿಸಿದ್ದರು. ಎಸೆನ್ಷಿಯಲ್ಸ್ ಆಫ್ ಹಿಂದುತ್ವದಲ್ಲಿ ಸಾವರ್ಕರ್ ಅವರು ಪ್ರತಿಯೊಬ್ಬರು ಹಿಂದೂ ರಕ್ತ ಹೊಂದಿರಬೇಕೆಂಬ ಚರ್ಚೆಯನ್ನು ಹುಟ್ಟುಹಾಕಿದ್ದರು. ಆದರೆ ಕೆಲವರು ಹುಟ್ಟಿನಿಂದಲೇ ಹೀನಕುಲದವರಾಗಿರುತ್ತಾರೆ ಎಂಬ ಮೇಲ್ವರ್ಗದ ಹಿಂದುಗಳ ಜಾತಿವಾದದಿಂದ ದೂರ ಹೋಗಲು ಅಂಬೇಡ್ಕರ್ ಯಶಸ್ವಿಯಾಗಿ “ಅಸ್ಪೃಶ್ಯರು” ಹಿಂದೂ ಧರ್ಮದ ಹಿಡಿತದಿಂದ ಹೊರಹೋಗಲು ಸಾಮೂಹಿಕ ಚಳುವಳಿಯನ್ನು ರೂಪಿಸಿದರು.

ಸಾವರ್ಕರ್‌ ಅವರು ಹಿಂದೂ ಧರ್ಮದೊಳಗಿನ ಸಾಮಾಜಿಕ ಅನಿಷ್ಟಗಳನ್ನು ಕಟುವಾಗಿ ವಿಮರ್ಶಿಸಲಿಲ್ಲ. ಅದನ್ನು ಬೇಕೆಂತಲೆ ನಿರ್ಲಕ್ಷಿಸಿದ್ದಾರೆ. ಆದರೆ ಗಾಂಧೀಜಿಯವರು ಗೋವನ್ನು ಮಾತೆಯಂತೆ ಪೂಜಿಸಬೇಕು ಎಂದಾಗ ಸಾವರ್ಕರ್ ಅವರು ಅದು ತನ್ನ ಕರುವಿಗೆ ಮಾತ್ರ ಮಾತೆ ಎಂದು ಹಿಂದೂ ಧರ್ಮಕ್ಕೆ ವಿರುದ್ಧವಾದ ಮಾತನ್ನಾಡಿದ್ದಾರೆ. ಗಾಂಧಿ ಹಾಗೂ ಅಂಬೇಡ್ಕರ ಅವರು ಇತಿಹಾಸವನ್ನು ವಿಮರ್ಶಿಸುವ ವಿಧಾನವು ಸಾವರ್ಕರ್ ಅವರ ಹಿಂದೂ ಇತಿಹಾಸ ಪರಿಕಲ್ಪನೆಗೆ ಸಮಾನಾಂತರ ಅಥವಾ ತದ್ವಿರುದ್ದವಾದ ಯೋಜನೆಯಾಗಿತ್ತು. ಅಂಬೇಡ್ಕರ್ ಅವರು ಭಾರತದ ಇತಿಹಾಸ ರಚನೆಯಲ್ಲಿ ಹಿಂದೂಗಳೆಂದು ಕರೆಯಲ್ಪಡುವ ಆರ್ಯರ ಕೇಂದ್ರೀಕರಣವನ್ನು ತಿರಸ್ಕರಿಸಿದ್ದಾರೆ. ಆರ್ಯನ್ ಬುಡಕಟ್ಟುಗಳಿಂದ ಭಾರತದ ಮೂಲನಿವಾಸಿಗಳ ಮೇಲೆ ಯಶಸ್ವಿ ಆಕ್ರಮಣದ ನಿರೂಪಣೆಯನ್ನು ಪರಿಷ್ಕರಿಸುವ ಕೆಲಸ ಡಾ. ಅಂಬೇಡ್ಕರ್ ಮಾಡಿದ್ದಾರೆ. ಭಾರತದ ರಾಜಕೀಯ ಇತಿಹಾಸವು ನಾಗಾ ಎಂಬ ಆರ್ಯೇತರ ಜನರ ಉದಯದೊಂದಿಗೆ ಪ್ರಾರಂಭವಾಗುತ್ತದೆˌ ನಾಗಾ ಸಮುದಾಯ ಆರ್ಯನ್ನರಿಗಿಂತ ಅತ್ಯಂತ ಪ್ರಬಲರು ಎನ್ನುವುದು ಅಂಬೇಡ್ಕರ್ ಅವರ ವಾದವಾಗಿತ್ತು.

ಗಾಂಧೀಜಿಯವರಿಗೆ ಹಿಂದು ಧರ್ಮದ ಎಲ್ಲಾ ಜನರ ಒಳಗೊಳ್ಳುವಿಕೆಯ ಕುರಿತು ಕಾಳಜಿ ಇದ್ದರೆ ಸಾವರ್ಕರ್ ಅವರಿಗೆ ಹಿಂದುತ್ವದ ಪರಿಕಲ್ಪೆಯ ಆಧಾರದ ಇತಿಹಾಸ ಈ ದೇಶದ ಮೂಲ ನಿವಾಸಿˌ ಅಸ್ಪೃಶ್ಯˌ ದಲಿತ ದಮನಿತರು ಸೇರಿದಂತೆ ಉಳಿದ ಜನರನ್ನು ದಮನಿಸುವ ಹಿನ್ನೆಲೆಯದಾಗಿತ್ತು. ಬೌದ್ಧ ಧರ್ಮದ ಅವನತಿಗೆ ಬ್ರಾಹ್ಮಣರ ಕುತಂತ್ರವೆ ಕಾರಣವೆಂದು ಅಂಬೇಡ್ಕರ್ ನಂಬಿದ್ದರು. ಇಲ್ಲಿ ನಾವೆಲ್ಲ ಗಮನಿಸಬೇಕಾದ ಅಂಶವೆಂದರೆˌ ಸಾವರ್ಕರ್ ಒಬ್ಬ ಹುಟ್ಟು ಕರ್ಮಟ ಮತ್ತು ಅಪಾಯಕಾರಿ ಬ್ರಾಹ್ಮಣವಾದಿಯಾಗಿದ್ದರು. ಅವರು ಬ್ರಿಟಿಷ್ ಸರಕಾರಕ್ಕೆ ಕ್ಷಮೆಯಾಚಿಸಿ ಮುಚ್ಚಳಿಕೆ ಬರೆದುಕೊಟ್ಟು ಜೈಲಿನಿಂದ ಬಿಡುಗಡೆಗೊಂಡು ಬಂದು ಬ್ರಿಟಿಷ್ ಸರಕಾರದಿಂದ ಪಿಂಚಣಿ ಪಡೆದು ಬದುಕಿದವರು. ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ನಿರ್ಬಂಧವಿದ್ದ ಕಾರಣ ಅವರು ತಮ್ಮ ಹಿಂದುತ್ವದ ಮೂತಭೂತವಾದಿ ಚಟುವಟಿಕೆಯಲ್ಲಿ ಭಾಗವಹಿಸದೆˌ ದಮನಿತರಿಗೆ ದೇವಾಲಯ ನಿಷೇಧದ ತೆರವು ಮತ್ತು ಜಾತಿ ವಿನಾಶದಂತ ಸಾಮಾಜಿಕ ಚಟುವಟಿಕೆಯ ಬಾಹ್ಯ ಅಜೆಂಡಾ ಇಟ್ಟುಕೊಂಡು ಆಂತರ್ಯದಲ್ಲಿ ಬ್ರಾಹ್ಮಣವಾದವನ್ನು ಬಲಪಡಿಸುವ ಉದ್ದೇಶ ಹೊಂದಿದ್ದರೆಂದು ಬೇರೆ ಹೇಳುವ ಅಗತ್ಯವಿಲ್ಲ.

ಇದನ್ನೂ ಓದಿ ಯಾವುದಕ್ಕೂ ತಲೆ ಹಾಕದ ನನ್ನ ಪತ್ನಿಯನ್ನು ರಾಜಕಾರಣಕ್ಕೆ ಎಳೆದು ತಂದಿದ್ದನ್ನು ಕ್ಷಮಿಸ್ತೀರಾ: ಜನ‌ಮಾನಸಕ್ಕೆ ಸಿಎಂ ಪ್ರಶ್ನೆ

ಬ್ರಾಹ್ಮಣ ಕೇಂದ್ರಿತ ಇತಿಹಾಸವನ್ನು ಮುನ್ನೆಲೆಗೆ ತರುವ ಸಾವರ್ಕರ್ ಉದ್ದೇಶವನ್ನು ಡಾ. ಅಂಬೇಡ್ಕರ್ ಅವರು ನಿರಾಕರಿಸಿ ದ್ರಾವಿಡ ಕೇಂದ್ರಿತ ನೈಜ ಇತಿಹಾಸವನ್ನು ರೂಪಿಸುತ್ತಿದ್ದರು. ಡಾ. ಅಂಬೇಡ್ಕರ್ ಕಾರ್ಯವನ್ನು ದಿಕ್ಕು ತಪ್ಪಿಸುವುದೇ ಸಾವರ್ಕರ್ ಅವರ ದುರುದ್ದೇಶವಾಗಿತ್ತು ಎನ್ನುವುದು ನಾವು ಇಲ್ಲಿ ಗ್ರಹಿಸಬೇಕಾದ ಅಂಶವಾಗಿದೆ. ಗಾಂಧಿಜಿಯವರ ಹಿಂದೂ ಪರಿಕಲ್ಪನೆಯು ಒಳಗೊಳ್ಳುವಿಕೆಯದಾಗಿದ್ದರೆ ಸಾವರ್ಕರ್ ಅವರ ಹಿಂದತ್ವದ ಪರಿಕಲ್ಪನೆ ವಿಭಜಕ ನೀತಿಯ ಆಧಾರದಲ್ಲಿತ್ತು. ಆ ಕಾರಣದಿಂದ ಸಾವರ್ಕರ್ ಅವರು ಏಕಕಾಲಕ್ಕೆ ಡಾ. ಅಂಬೇಡ್ಕರ್ ಅವರ ದಲಿತ ದಮನಿತರನ್ನು ಹಿಂದುತ್ವದ ಅಪಾಯದಿಂದ ವಿಮೋಚನೆಗೊಳಿಸುವ ಹಾಗೂ ಗಾಂಧಿಜಿಯವರ ಹಿಂದುಗಳೆಲ್ಲರೂ ಕೂಡಿ ಬಾಳಬೇಕೆನ್ನುವ ಸಿದ್ದಾಂತಕ್ಕೆ ವಿರುದ್ಧವಾದ ವಿಘಟನಕಾರಿ ಹಿಂದುತ್ವದ ಪ್ರತಿಪಾದನೆ ಮಾಡಿದರು. ಅದಕ್ಕಾಗಿ ಅವರು ಹಿಂದೂ ಧರ್ಮದ ಪರಂಪರಾಗತ ನಂಬಿಕೆಗಳ ವಿರುದ್ಧ ಕೂಡ ಮಾತನಾಡುತ್ತಿದ್ದರು ಎನ್ನುವುದನ್ನು ನಾವು ಗಮನಿಸಬೇಕು. ಮೊನ್ನೆ ಸಚಿವ ದಿನೇಶ್ ಗುಂಡೂರಾವ್ ಸಾಂದರ್ಭಿಕವಾಗಿ ಅದನ್ನೇ ಹೇಳಲು ಹೊರಟಿದ್ದರು. ಆದರೆ ಇತಿಹಾಸˌ ವರ್ತಮಾನ ಹಾಗೂ ಭವಿಷ್ಯ ಈ ಮೂರರ ಪರಿಜ್ಞಾನವಿಲ್ಲದ ಬಿಜೆಪಿಯ ಪುಢಾರಿಗಳ ಅರಣ್ಯರೋಧನ ಕೇವಲ ಮತಬ್ಯಾಂಕಿಗಾಗಿ ಸಮಾಜವನ್ನು ಒಡೆಯುವ ಹಿಂದುತ್ವದ ವಿಕೃತ ಸಿದ್ಧಾಂತದ ಅಡಿಯಲ್ಲಿ ಪ್ರದರ್ಶನಗೊಂಡಿರುವುದು ಆಶ್ಚರ್ಯದ ಅಥವಾ ಸೋಜಿಗದ ಸಂಗತಿಯೇನಲ್ಲ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

8 COMMENTS

  1. ಸಾವರ್ಕರ್ ಅವರ ಬಗ್ಗೆ ಸುಳ್ಳು ವಿಚಾರಗಳನ್ನು ಹರಡುವುದನ್ನು ನಿಲ್ಲಿಸಿ, ನಿಜವಾಗಿಯೂ ಅಂಬೇಡ್ಕರ್ ಅವರು ಸಮಾನತೆ ಬೆಂಬಲಿಗರಾಗಿದ್ದರೇ ಅವರು ಸಂವಿಧಾನದಲ್ಲಿ ಜಾತಿ ಧರ್ಮಗಳ ಹೆಸರಲ್ಲಿ ಮೀಸಲಾತಿ ಬಣ್ಣ ಹಚ್ಚಲು ಹೋಗುತ್ತಿರಲಿಲ್ಲ

  2. ನೀನು ……..ತು….ge hu,….. ವ ಎಂದು, ನಾನೂ ಕೂಡಾ ಹೇಳುವ ಅಗತ್ಯವೂ ಇಲ್ಲ ಅನ್ಸುತ್ತೆ. ಡಾ. js ಹೌಲ ಪದವಿ ಸಾಹೇಬ್ರೆ ನಿಮ್ಮಪ್ಪನ ಹೆಸರು ದಯಮಾಡಿ ತಿಳಿಸಿಕೊಡಿ……
    ನೀ………… ನ. ನಾ.,……….I ಅಲ್ಲ BSDK.

  3. ಕೇವಲ ಅಸತ್ಯ ಹಾಗೂ ಹಿಂದೂ ವಿರೋಧಿ ನೀತಿ ತುಂಬಿರುವ ಮತ್ತು ಒಂದು ವರ್ಗದ ಓಲೈಕೆ ಮಾಡಿ ಬರೆದಿರುವ ಲೇಖನ ಇದು…

  4. ನಿನ್ನಂತ ಕಾಂಗ್ರೆಸ್ ಪರವಾಗಿರುವ ಹಂದಿಗಳು ಇದೆ ರೀತಿ ಹಿಂದೂಗಳ ವಿರುದ್ಧ ಲೇಖನ ಬರೆದರೆ ಅದನ್ನ ನಂಬೋಕೆ. ಹಿಂದೂಗಳು ಮುಟ್ಟಾಳರಲ್ಲ. ವೀರ ಸಾವರ್ಕರ್ ಭಾರತ ದೇಶ ಇರೋವರೆಗೂ ಹಿಂದೂಗಳ ಆರಾಧ್ಯ ದೈವ ನೆನಪಿರಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X