ಯುಎಪಿಎ ಪ್ರಕರಣದಡಿ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಜೆಎನ್ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಕುರಿತಾಗಿ ಜೈಬುನ್ನಿಸ ರಝಕ್ ಮತ್ತು ಪರಿಣಿತ ಅವರು ಬರೆದ ಆಂಗ್ಲ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಮಂಗಳೂರಿನ ನಿವೃತ್ತ ಉಪನ್ಯಾಸಕಿ ರಾಜಲಕ್ಷ್ಮೀ. ಎನ್. ಕೆ.
ಪ್ರಿಯ ಉಮರ್
ನಾ ಕೇಳುತ್ತೇನೆ, ನಮ್ಮ ದೇಶದ ಬಗ್ಗೆ ನಿಮಗೇನು ಗೊತ್ತು,
ಅದೇ ಅವರು ನಿನ್ನನ್ನು “ರಾಷ್ಟ್ರ ವಿರೋಧಿ” ಅನ್ನುವವರ
ನಾ ಕೇಳುತ್ತೇನೆ, ಪ್ರೀತಿಯ ಬಗ್ಗೆ ನಿಮಗೇನು ಗೊತ್ತು
ಅದೇ ಅವರೇ, “ಭಯೋತ್ಪಾದನೆ” ಎಂಬ ಹಣೆಪಟ್ಟಿಗಳ ತೂರುವವರ
ಅವರಿಗೆ ಅರಿವಿದೆಯೇ ಪ್ರೀತಿಯ ಎಳೆಗಳ ನೇಯ್ಗೆ ನಾವೆಂದು?
ಸಹಾನುಭೂತಿಯ ಕಡಲಾದ ಹೃದಯದಾಳ ಅರ್ಥವಾದೀತೆ ಅವರಿಗೆ?
ನಮ್ಮ ಇತಿಹಾಸವು ಏಕತೆಯನ್ನು ಬೇಡುವ ಕ್ರಾಂತಿಗಳ ಸಾಕ್ಷಿಯೆಂಬುದು ಅವರಿಗೆ ತಿಳಿದಿದೆಯೇ?
ವೈವಿಧ್ಯತೆಯೇ ಪರಮ ಶಕ್ತಿಯಾಗಿರುವ ಪ್ರಜಾಪ್ರಭುತ್ವ ನಮ್ಮದಿದು ಇದು ಅವರಿಗೆ ತಿಳಿದಿದೆಯೇ?
ಪ್ರಶ್ನಿಸಲು ಧೈರ್ಯ ಮಾಡಿದವರೊಂದಿಗೆ ಜಗತ್ತು ಅರಳಲಾರಂಭಿಸಿತು ಎಂದು ಅವರಿಗೆ ಗೊತ್ತಿದೆಯೇ?
ನಿನ್ನೆಡೆಗೆ ಬೆರಳು ತೋರಿ ಬೆಟ್ಟು ಮಾಡಿದಾಗ ಬಹುಸಂಖ್ಯಾತ ಉನ್ಮಾದದ ದುರ್ಬಲತೆ ಹರಿಯಿತು
ನಿನ್ನ ಕಿವಿಗಳ ಸುತ್ತ ಕಿರುಚುವ ಭಯಾನಕ ಕಣ್ಣುಗಳು, ನಿನ್ನ ದಿಟ್ಟ ಕಣ್ಣುಗಳ ಬೆತ್ತಲೆ ಪ್ರಶ್ನೆಗಳಿಗೆ ಬೆದರಿವೆ.
ಜನಸಾಮಾನ್ಯರ ನಡುವೆ ನೀನು ಮುಷ್ಟಿ ಹಿಡಿದು ನಿಂತಿದ್ದೀಯ
ಕ್ರೂರ ದಬ್ಬಾಳಿಕೆಯ ವಿರುದ್ಧ
ಮತ್ತು ಇಂಕ್ವಿಲಾಬ್ನ ಜಾಗಟೆಗಳಲ್ಲಿ ನಿನ್ನ ತೇರಿದೆ.
ದುರ್ಬಲ ಪ್ರಜಾಪ್ರಭುತ್ವದ ಗೋಡೆಗಳೆಡೆಯಿಂದ ಪ್ರತಿಧ್ವನಿಸುತ್ತಿದೆ,
ನಿನ್ನ ಧ್ವನಿ ಧ್ವನಿಯಿಲ್ಲದವರ ಧ್ವನಿಯ ಬಲಪಡಿಸುತ್ತದೆ,
ನಾವು ನಿನ್ನನ್ನು ಎದುರು ನೋಡುತ್ತಿರುವಾಗ,
ನಾವು ನಿನ್ನ ಕಡೆ ನೋಡುತ್ತಿರುವಾಗ,
ನಮ್ಮೊಳಗೆ ನಿನ್ನಿರವು ಅರಿವಾಯಿತು ಉಮರ್.
ಈ ರಾತ್ರಿ ದ್ವೇಷದ ಗೋಡೆಗಳು ಪ್ರೀತಿಯಿಂದ ಮುಚ್ಚಲ್ಪಟ್ಟಿವೆ,
ನನಗೆ ತಿಳಿದಿದೆ, ಪ್ರತಿರೋಧ, ಭಿನ್ನಾಭಿಪ್ರಾಯದ ಶಕ್ತಿಯಿಂದ ಅದು ಕರಗುತ್ತದೆ
ಸೌಮ್ಯವಾದ ಸ್ನೇಹವು ಅನೇಕ “ಅನ್ಯಗೊಳಿಸುವ” ಕ್ರೌರ್ಯಗಳ ಗಡಿಗಳ ಮೀರಿದಾಗ ಅದು ಕರಗುತ್ತದೆ .
ಕೈ ಕೈ ಹಿಡಿದು ನಮ್ಮ ರಾಷ್ಟ್ರದ ಗಟ್ಟಿ ನೆಲದ ಮೇಲೆ ನಾವು ನಿಂತಿರುವಾಗ.
ನನಗೆ ಕಾಣುತ್ತಿದೆ ಈ ಗೋಡೆಗಳು ಕೇವಲ ಬಣ್ಣದಿಂದ ಚಿತ್ರಿಸಲ್ಪಟ್ಟಿಲ್ಲ,
ಬದಲಿಗೆ ವರ್ಣರಂಜಿತ ಐಕಮತ್ಯದ ಭಾವಪರವಶತೆಯನ್ನು ಬಿಚ್ಚಿಡುತಿದೆ.
ನಾವು ಕಾಯುತ್ತೇವೆ ಉಮರ್, ನಿನ್ನ ಬರುವಿಕೆಗಾಗಿ ನಾವು ಕಾಯುತ್ತೇವೆ.
ನೀನು ಬರುತ್ತೀಯ ಎಂದು ತಾಳ್ಮೆಯಿಂದ ರಾಷ್ಟ್ರ ಕಾಯುತ್ತಿದೆ.
ಆದರೆ ನೋಡಿಲ್ಲಿ ನೀನು ಬಂದಿದ್ದೀಯ.
ಪದಗಳು, ಕವನಗಳು ಮತ್ತು ಚಿತ್ರಗಳ ನಡುವೆ ನೀನು ನಮ್ಮ ಬಳಿ ಬಂದಿದ್ದೀಯ.
ಸ್ನೇಹಿತರು, ಕಣ್ಣೀರು ಮತ್ತು ನಗುವಿನ ನಡುವೆ ನೀನು ನಮ್ಮ ಬಳಿ ಬಂದಿದ್ದೀಯ.
ತರಗತಿಗಳಲ್ಲಿ ವಿನಿಮಯವಾಗುವ ಆಳವಾದ ಸಂಭಾಷಣೆಗಳ ನಡುವೆ ನೀನು ಬಂದಿದ್ದೀಯ.
ತಾಯಂದಿರ ತುಟಿಗಳ ಮೇಲೆ ರೂಪುಗೊಂಡ ಪ್ರಾರ್ಥನೆಗಳ ನಡುವೆ ನೀನು ಬಂದಿದ್ದೀಯ.
ನೀನು ಬಂದಿದ್ದೀಯ ಮತ್ತು ಈಗ ನಾವು ಬೆಳಕನ್ನು ನೋಡಲು ಬದುಕುತ್ತೇವೆ
ನಾವು ಅದನ್ನು ಬೆಳಕಿಗೆ ತರುತ್ತೇವೆ.
ಸ್ವಲ್ಪ ಆಯಾಸ,
ಸ್ವಲ್ಪ ಒಡೆತ,
ಸ್ವಲ್ಪ ಕೋಪ,
ಆದರೆ ತುಂಬು ಪ್ರೀತಿ ಇದೆ.
ಈ ಕ್ರಾಂತಿಯ ಅಂತ್ಯದ ಮೂಲಕ ನಾವು ನೋಡುತ್ತೇವೆ,
ಗೆಲುವು.
(ಆಂಗ್ಲ ಮೂಲ:ಜೈಬುನ್ನಿಸ ರಝಕ್)
ಉಮರ್ಗಾಗಿ…
ಬೀದಿಗಳ ತುಂಬಾ ಬರಹಗಳು ಗೀಚಿಲ್ಲ
ಕೋಪದುರಿಯುರಿತದ ಪತಾಕೆಗಳು ಗಗನ ಮುಟ್ಟಿ ಹಾರುತ್ತಿಲ್ಲ
ನಗರದಲ್ಲಿಮೇಳೈಸಿ ಜನ ಒಟ್ಟಾಗಿ ನಡೆಯುತ್ತಿಲ್ಲ
ಯುವಕನಿವನು ಬಂಧಿತನಾದನಲ್ಲ ಎಂದು
ಚಾಣಾಕ್ಷ ಮೇಸ್ತ್ರಿಗಳನ್ನೇ ನೇಮಿಸಿದರವರು ಆತನ ಸುತ್ತ ಗೋಡೆ ಕಟ್ಟಲು
ಆದರಾತ ಗೋಡೆಯಾಚೆಗೆಲ್ಲಾ ವ್ಯಾಪಿಸಿದ್ದಾನೆ
ಆತನ ಕುರಿತು ನೀರವವಾದ ಮೂಲೆ ತಿರುವುಗಳಲ್ಲಿ ಆಡಿದ ಮಾತು
ನಿಲ್ಲಿಸಲಾಗದ ಪಿಸು ಮಾತಾಗಿ ಹರಡಿ ಹೊರಳಿದೆ ಎಲ್ಲೆಡೆ
“ಎಲ್ಲಿದ್ದಾನೆ ಅವನು?” ಅವರು ಕೇಳುತ್ತಿದ್ದಾರೆ
ಅವರ ಭಯಗಳಿಗೆ ಅವನನ್ನು ಬಂಧಿಯಾಗಿಸಿದವರು
“ಅವನ ಧ್ವನಿ ಏಕೆ ನಮ್ಮ ಸಿಂಹಾಸನದ ಅಡಿಯಲ್ಲಿ
ಮತ್ತು ನಮ್ಮ ಮನೆಯ ನೀರವದಲ್ಲಿ ಕೇಳುತ್ತಿದೆ?”
ಆತ ಧ್ವ ನಿಗಳ ನಡುವಿನ ಧ್ವನಿಯಾಗಿದ್ದಾನೆ,
ಆತ ಮೌನಿಗಳ ಒಡಲೊಳಗಡಗಿದ ಕ್ರೋಧವಾಗಿದ್ದಾನೆ
ಆತ ಭಯವನ್ನು ಮೀರಿದ ಪ್ರೀತಿಯಾಗಿದ್ದಾನೆ
ಆತ ಪ್ರಾರ್ಥನೆಯ ಅಂಚಿನಲ್ಲಿ ಮಿಂಚುವ ಭರವಸೆಯಾಗಿದ್ದಾನೆ
ಆತ ತನ್ನ ಹೆಸರನ್ನು ಮೀರಿ ಬೆಳೆದಿ ದ್ದಾನಲ್ಲ, ಉಮರ್ ಖಾಲಿದ್
ಆತ ತನ್ನ ಬಂಧಿಖಾನೆಯ ಸಂಖ್ಯೆಯ ಅಂಕೆ ಮೀರಿ ದ್ವಿಗುಣಿತನಾಗಿದ್ದಾನಲ್ಲ
ಆತ ನಮ್ಮ ನೆನಪಿನ ಸುಳಿಯೊಳಗೆ ನುಸುಳಿದ್ದಾನೆ
ಆತ ನಮ್ಮ ವರ್ತಮಾನದ ಅಶಾಂತ ಮನಸ್ಸಾಗಿದ್ದಾನೆ
ಆ ಗೋಡೆಗಳು ಅವನನ್ನು ಹುಡುಕುತ್ತಿವೆ ಅವನನ್ನು ಸುತ್ತುವರೆಯಲು ನಿರ್ಮಿತವಾಗಿದ್ದವು
ಆತನಿಲ್ಲ ಆವರಣದೊಳಗೀಗ
ಆತ ಬೀದಿಗಳಲ್ಲಿ ಸುಳಿದಾಡುತ್ತಿದ್ದಾನೆ
ಆತ ಕನಸಿನಲ್ಲಿ ಅಕ್ರಮ ಪ್ರವೇಶ ಮಾಡುತ್ತಿದ್ದಾನೆ
ಆತ ಪ್ರೀತಿಯ ಕಿಚ್ಚನ್ನು ಹಚ್ಚುತ್ತಿದ್ದಾನೆ
ದ್ವೇಷದ ಚಳಿಗಾಲದಲ್ಲಿ
ಆಂಗ್ಲ ಮೂಲ: ಪರಿಣಿತ