- 'ಮಹಾ ಕುಂಭ ದುರಂತ, ಮೋರ್ಬಿ ಸೇತುವೆ ದುರಂತದ ಹಿಂದೆ ಸರ್ಕಾರ ಅಡಗಿಕೊಳ್ಳಲು ಸಾಧ್ಯವಿಲ್ಲ' - ಅತಿ ಭಾವುಕತೆಯ ಪ್ರಯೋಜನ ಪಡೆಯುತ್ತಿರುವವರಾರು? ಬೆಲೆ ತೆರುತ್ತಿರುವವರು ಯಾರು: ಕಿಶೋರ್ ಪ್ರಶ್ನೆ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮ ವೇಳೆ ಉಂಟಾದ ಕಾಲ್ತುಳಿತದಲ್ಲಿ11 ಅಭಿಮಾನಿಗಳು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ನಟ ಕಿಶೋರ್ ಕುಮಾರ್ ಪ್ರತಿಕ್ರಿಯಿಸಿದ್ದು, “ಅಸಮರ್ಪಕ ಸುರಕ್ಷಾ ವ್ಯವಸ್ಥೆಗಾಗಿ ಸರಕಾರ ಹೊಣೆ ಹೊರಲೇಬೇಕು” ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಾಲ್ತುಳಿತ ಘಟನೆ ಬಗ್ಗೆ ಬರೆದುಕೊಂಡಿರುವ ಅವರು, “ನಾವೆಲ್ಲರೂ ಜವಾಬ್ದಾರರು. ಈ ಅದ್ಭುತ ವಿಜಯವನ್ನು ಈಗ ಈ ದುರಂತಕ್ಕಾಗಿ ಮಾತ್ರ ನೆನಪಿಸಿಕೊಳ್ಳಲಾಗುತ್ತದೆ ಎಂಬುದು ನಿಜಕ್ಕೂ ದುಃಖಕರ. ಅಗಲಿದವರು ಮತ್ತೆ ಬರಲು ಸಾಧ್ಯವಿಲ್ಲ. ಅವರ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಶಾಶ್ವತವಾಗಿ ಕಳೆದುಕೊಂಡಿವೆ. ಅವರ ನಷ್ಟವನ್ನು ತುಂಬಲು ಅಥವಾ ವಿವರಿಸಲು ಯಾವ ಪದಗಳಿಂದಲೂ ಸಾಧ್ಯವಿಲ್ಲ” ಎಂದಿದ್ದಾರೆ.
“ಅಸಮರ್ಪಕ ಸುರಕ್ಷಾ ವ್ಯವಸ್ಥೆಗಾಗಿ ಸರಕಾರ ಹೊಣೆ ಹೊರಲೇಬೇಕು. ಇದು ಸರಕಾರದ, ಪೊಲೀಸರ, ಕ್ರಿಕೆಟ್ ಮಂಡಳಿಯ, ಆಯೋಜಕರ ವೈಫಲ್ಯ. ಮೃತರ ಸಂಖ್ಯೆಯನ್ನೂ ಮುಚ್ಚಿಟ್ಟ ಮಹಾ ಕುಂಭ ದುರಂತದ ಅಥವಾ ದೆಹಲಿ ರೈಲ್ವೆ ನಿಲ್ದಾಣ ಅಥವಾ ಮೋರ್ಬಿ ಸೇತುವೆ ದುರಂತದ ಹಿಂದೆ ಸರ್ಕಾರ ಅಡಗಿಕೊಳ್ಳಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಇಲ್ಲಿ ಸತ್ಯವನ್ನು ಇತರ ಸ್ಥಳಗಳಂತೆ ಮರೆಮಾಚಲಾಗುತ್ತಿಲ್ಲ ಎಂದು ಸಮಾಧಾನ ಪಡಬಹುದೇನೋ” ಎಂದು ಹೇಳಿದ್ದಾರೆ.
“ಕ್ರಿಕೆಟ್ ಅನ್ನು ನಮ್ಮ ಧರ್ಮವೆಂದು ಪರಿಗಣಿಸುವ ನಾವು, ನಮ್ಮ ಸೆಲೆಬ್ರಿಟಿಗಳನ್ನು ದೇವತೆಗಳನ್ನಾಗಿ ಮಾಡಿ, ನಮ್ಮ ಕ್ರಿಕೆಟ್, ಚಲನಚಿತ್ರ ಮತ್ತು ರಾಜಕೀಯ ನಾಯಕರ ಮೇಲಿನ ಪ್ರೀತಿಯಲ್ಲಿ ಕುರುಡರಾದ ನಾವು. ಕನಿಷ್ಟ ನಾಗರಿಕ ಪ್ರಜ್ಞೆಯೂ ಇಲ್ಲದ ನಾವು ಜವಾಬ್ದಾರರಲ್ಲವೇ? ಇಂದು ನಮ್ಮನ್ನು ನಾವು ಒಂದು ಬಹು ಮುಖ್ಯ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಕ್ರೀಡೆ, ರಾಷ್ಟ್ರೀಯತೆ, ಧರ್ಮದಿಂದ ಹಿಡಿದು ಭಾಷೆ ಮತ್ತು ಜಾತಿಯವರೆಗೆ ಎಲ್ಲದರಲ್ಲೂ ನಾವು ಅತಿ ಭಾವುಕರಾಗುತ್ತಿಲ್ಲವೇ? ಈ ಅತಿ ಭಾವುಕತೆಯ ಪ್ರಯೋಜನ ಪಡೆಯುತ್ತಿರುವವರಾರು? ಬೆಲೆ ತೆರುತ್ತಿರುವವರು ಯಾರು” ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಈ ಸ್ಟೋರಿ ಓದಿದ್ದೀರಾ? ಸಮೂಹ ಸನ್ನಿಯ ಬಿತ್ತಿ ಹಣದ ಬೆಟ್ಟವನ್ನೇ ಬಾಚುತ್ತಿರುವ ಐಪಿಎಲ್; ಅಭಿಮಾನಿಗಳ ಕಣ್ಣಿಗೆ ಮಣ್ಣೆರಚುತ್ತಿದೆ!
ತನಿಖೆಗೆ ಆದೇಶ
ಆರ್ಸಿಬಿ ತಂಡ ಐಪಿಎಲ್ ಹದಿನೆಂಟನೇ ಆವೃತ್ತಿಯಲ್ಲಿ ಚಾಂಪಿಯನ್ ಆದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ದುರಂತದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದೆ.
ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನಾಗಿ ಜಗದೀಶ್ ಜಿ, ಐಎಎಸ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ಗಳ ಬಳಿ ಉಂಟಾದ ಕಾಲ್ತುಳಿತ ಹಾಗೂ ಮೃತಪಟ್ಟವರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ ಹಾಗೂ ಸನ್ನಿವೇಶಗಳ ಬಗ್ಗೆ ಮತ್ತು ಈ ಪ್ರಕರಣದಲ್ಲಿ ಲೋಪ ಉಂಟಾಗಿದ್ದಲ್ಲಿ ಉಂಟಾಗಿರಬಹುದಾದ ಲೋಪಗಳ ಕುರಿತು. ಈ ಲೋಪಕ್ಕೆ ಕಾರಣರಾದವರ ಬಗ್ಗೆ ಹಾಗೂ ನಿರ್ಲಕ್ಷ್ಯತೆಯಿಂದ ಉಂಟಾಗಿದೆಯೇ ಎಂಬ ಬಗ್ಗೆ ಸಮಗ್ರವಾಗಿ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಯಲಿದೆ.
ವಿಚಾರಣಾಧಿಕಾರಿಯವರು ಈ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಮ್ಯಾಜಿಸ್ಪೀರೀಯಲ್ ವಿಚಾರಣೆಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಆದೇಶಿಸಲಾಗಿದೆ.