ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಹಾಗೂ ಮೋದಿ ಸರ್ಕಾರದ ದುಷ್ಕೃತ್ಯಗಳನ್ನು ವಿರೋಧಿಸಿ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ‘ಇಂಡಿಯಾ’ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರಭಟನೆ ನಡೆಸಲಿದ್ದಾರೆ. ಮಾರ್ಚ್ 31ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಯಿದ್ದು, ಪ್ರತಿಭಟನೆಗೆ ಕೈ ಜೋಡಿಸಿ, ಭಾಗಿಯಾಗಬೇಕು ಎಂದುಜಾಗೃತ ಕರ್ನಾಟಕಕ್ಕೆ ಎಎಪಿ ಪತ್ರ ಬರೆದಿದೆ.
“ಭಾರತದ ಸಂವಿಧಾನದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿಯೊಬ್ಬ ಮಗುವಿಗೂ 6ನೇ ವರ್ಷದಿಂದ 14 ವರ್ಷದ ವರೆಗೆ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಇದನ್ನ ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದಿರುವ ರಾಜ್ಯ ದೆಹಲಿ, ಇದರ ಅನುಷ್ಠಾನದಿಂದ ದೆಹಲಿಯ ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿಷ್ಠಿತ ಐಐಟಿಗಳಲ್ಲಿ ಪ್ರವೇಶ ಪಡೆಯುವಂತಾಗಿದೆ” ಎಂದಿದೆ.
“ಉತ್ತಮ ಆರೋಗ್ಯ ಸೇವೆ. ನೀರು, ವಿದ್ಯುತ್, ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಿರುವುದು. ರಾಜ್ಯದ ಬೊಕ್ಕಸವನ್ನ ಲೂಟಿ ಮಾಡದೇ ಪ್ರಾಮಾಣಿಕ ಆಡಳಿತ ನೀಡಿದ ಪರಿಣಾಮ ಜನ ಮತ್ತೆ-ಮತ್ತೆ ಎಎಪಿಯನ್ನು ಚುನಾಯಿಸುತ್ತಾ ಬಂದಿದ್ದಾರೆ. ಎಎಪಿ ಕೇವಲ 10 ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ದೇಶಾದ್ಯಂತ ವ್ಯಾಪಿಸುತ್ತಿದೆ. ದೆಹಲಿ, ಪಂಜಾಬ್ ಆಡಳಿತ ನಮ್ಮಂತಹ ಮೊದಲ ತಲೆಮಾರಿನ ರಾಜಕಾರಣ ಮಾಡಬೇಕೆನ್ನುವವರಿಗೆ ಈ ವಿಷಯಗಳು ಸ್ಫೂರ್ತಿ. ದೇಶದಲ್ಲಿ ಒಂದು ಕ್ರಾಂತಿಕಾರಿ ರಾಜಕೀಯ ಪಕ್ಷವಾಗಿ ಬೆಳೆಯಲು, ದೆಹಲಿ ಮಾದರಿ ಬೆಳವಣಿಗೆಯ ರೂವಾರಿಗಳೂ ಅರವಿಂದ್ ಕೇಜ್ರವಾಲ್ ರವರು. ದುರಂತವೆಂದರೆ ಈಗ ಅವರನ್ನು ಇಲ್ಲಸಲ್ಲದ ಆರೋಪದ ಮೇಲೆ ಬಂಧಿಸಲಾಗಿದೆ. ಇದು ಒಬ್ಬ ವ್ಯಕ್ತಿಯ ಬಂಧನವಲ್ಲ. ಅಭಿವೃದ್ಧಿ, ಮಾದರಿ ರಾಜಕಾರಣದ ಕಗ್ಗೋಲೆ” ಎಂದು ಕಿಡಿಕಾರಿದೆ.
“ಮುಂದಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಅಭಿವೃದ್ಧಿ ಮತ್ತು ವಾಕ್ ಸ್ವಾತಂತ್ರ್ಯದ ಮೇಲೆ ಸಂಪೂರ್ಣ ನಿರ್ಬಂಧ ಹೇರುವ ಲಕ್ಷಣಗಳು ಕಂಡು ಬರುತ್ತಿದೆ. ಇದನ್ನ ನಾವುಗಳು ಪ್ರಾರಂಭ ಹಂತದಲ್ಲೇ ವಿರೋಧಿಸಬೇಕು ಹಾಗೂ ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಉತ್ತಮ ರಾಜಕಾರಣ ಮಾಡುವವರಿಗೆ ಉಳಿಗಾಲ್ಲವಿಲ್ಲ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಸುಳ್ಳು ಸಾಧನೆಗಳು ವಿಜೃಂಭಿಸುತ್ತಿದೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 20ಕ್ಕೂ ಹೆಚ್ಚು ಬಿಲ್ಡರ್ಗಳ ಮನೆ ಮೇಲೆ ಐಟಿ ದಾಳಿ
“ದೇಶ ಅಘೋಷಿತ ಸರ್ವಾಧಿಕಾರದ ಕೈಗೆ ಜಾರುತ್ತಿರುವ ಹಾಗಿದೆ. ದೇಶದ ಹಿತಕ್ಕಾಗಿ ಚಿಂತಿಸುವುದು ನಮ್ಮೆಲ್ಲರ ಕರ್ತವ್ಯ. ಇದೇ ಸಂಬಂಧ ಆಮ್ ಆದಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ವಿಚಾರದಲ್ಲಿ ಕೈ ಜೋಡಿಸಿ ನಮ್ಮ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು” ಎಂದು ಸ್ನೇಹಪೂರ್ವಕವಾಗಿ ವಿನಂತಿಸಿದೆ.
ಮಾರ್ಚ್ 31ರಂದು ಭಾನುವಾರ ನಗರದ ಫ್ರೀಡಂ ಪಾರ್ಕ್’ನಲ್ಲಿ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಎಎಪಿ ಹಾಗೂ ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಲಿದ್ದಾರೆ.