45 ವರ್ಷದ ವ್ಯಕ್ತಿಯೊಬ್ಬ ಮ್ಯಾಟ್ರಿಮೋನಿಯಲ್ ಸೈಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ 259ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ, ಅವರ ಪೋಷಕರಿಗೆ ಹಣ ನೀಡುವಂತೆ ಆಮಿಷವೊಡಿದ್ದವನನ್ನು ಬೆಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ನರೇಶ್ ಪೂಜಾರಿ ಗೋಸ್ವಾಮಿ (45) ಬಂಧಿತ ವ್ಯಕ್ತಿ. ಈತ ಮೂಲತಃ ರಾಜಸ್ಥಾನದವನು. ಕಳೆದ 20 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾನೆ.
ಈತ ಮ್ಯಾಟ್ರೀಮೋನಿಯಲ್ ಸೈಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಕಲಿ ಪ್ರೊಫೈಲ್ ಸೃಷ್ಟಿ ಮಾಡುತ್ತಿದ್ದನು. ತನ್ನ ಪ್ರೊಫೈಲ್ಗಳಿಗೆ ಸುಂದರ ಯುವಕರ ಫೋಟೋ ಬಳಸಿ ಆನ್ಲೈನ್ನಲ್ಲಿ ಪ್ರೊಫೈಲ್ ರಚಿಸುತ್ತಿದ್ದನು. ಅಲ್ಲದೇ, ತನ್ನನ್ನು ಕಸ್ಟಮ್ ಅಧಿಕಾರಿ ಮತ್ತು ಸಾಫ್ಟ್ವೇರ್ ಎಂಜಿನಿಯರ್ ಎಂದು ಹೇಳಿಕೊಳ್ಳುತ್ತಿದ್ದನು. ಈತ ಹೆಚ್ಚಾಗಿ ವಿಧವೆಯರು ಹಾಗೂ ವಿಚ್ಛೇದಿತ ಮಹಿಳೆಯರಿಗೆ ವಂಚನೆ ಮಾಡುತ್ತಿದ್ದನು.
ತಡರಾತ್ರಿಯವರೆಗೂ ಮಹಿಳೆಯರೊಂದಿಗೆ ಸಂದೇಶ ಕಳುಹಿಸಿ, ಅವರೊಂದಿಗೆ ಮಾತನಾಡುತ್ತಿದ್ದನು. ಅವರ ವಿಶ್ವಾಸ ಗಳಿಸಿ ಹಣ ನೀಡುವಂತೆ ಮಹಿಳೆಯರು ಮತ್ತು ಅವರ ಪೋಷಕರಿಗೆ ಆಮಿಷವೊಡ್ಡುತ್ತಿದ್ದನು. ಈತ ಮಹಿಳೆಯರೊಂದಿಗೆ ಮಾತನಾಡಲು ಬೇರೆ ಬೇರೆ ನಕಲಿ ಹೆಸರಿನ ಸಿಮ್ ಕಾರ್ಡ್ಗಳನ್ನು ಬಳಸಿದ್ದಾನೆ ಎಂದು ಬೆಂಗಳೂರಿನ ರೈಲ್ವೆ ಡಿಐಜಿಪಿ ಡಾ. ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಕೊಯಮತ್ತೂರು ಮೂಲದ ಮಹಿಳೆಯೊಬ್ಬರನ್ನ ಮದುವೆ ಮಾತುಕತೆಗೆ ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದನು. ಬಳಿಕ, ಟಿಕೆಟ್ ರಿಸರ್ವೇಷನ್ ಮಾಡಿಸಬೇಕಿರುವುದರಿಂದ ಪರ್ಸ್ ಮನೆಯಲ್ಲಿಯೇ ಬಿಟ್ಟು ಬಂದಿದ್ದಾಗಿ ತಿಳಿಸಿ ಹಣ ಪಡೆಯುತ್ತಿದ್ದನು. ಆರೋಪಿ ಎರಡು ಸಿಮ್ ಕಾರ್ಡ್ಗಳನ್ನ ಬ್ಲಾಕ್ನಲ್ಲಿ ಬಳಸುತ್ತಿದ್ದನು.
ಆರೋಪಿ ಕೊಯಮತ್ತೂರು ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಲು ಬೆಂಗಳೂರಿಗೆ ಕರೆದಿದ್ದನು. ತನ್ನ ಸಂಬಂಧಿಕರಿಗೆ ಟಿಕೆಟ್ ಕಾಯ್ದಿರಿಸುವುದಾಗಿ ಹೇಳಿ ರೈಲ್ವೆ ನಿಲ್ದಾಣದಲ್ಲಿ ಅವರಿಂದ ₹10 ಸಾವಿರ ಪಡೆದು ರೈಲು ನಿಲ್ದಾಣದಿಂದ ಪರಾರಿಯಾಗಿದ್ದಾನೆ. ಕೊಯಮತ್ತೂರಿನ ಸಂತ್ರಸ್ತೆಯೊಬ್ಬರು ಈ ಬಗ್ಗೆ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತೆರವು ವೇಳೆ ಜೆಸಿಬಿಗೆ ಬೆಂಕಿ ಹಚ್ಚಿದ ಒತ್ತುವರಿದಾರ
ಬಂಧಿತ ವ್ಯಕ್ತಿ ಸುಮಾರು 259 ಮಹಿಳೆಯರಿಗೆ ವಂಚನೆ ಮಾಡಿದ್ದಾಗಿ ತಿಳಿದುಬಂದಿದೆ. ರಾಜಸ್ಥಾನದಿಂದ 56, ಉತ್ತರ ಪ್ರದೇಶದ 32, ದೆಹಲಿಯಿಂದ 32, ಕರ್ನಾಟಕದಿಂದ 17, ಮಧ್ಯಪ್ರದೇಶದಿಂದ 16, ಮಹಾರಾಷ್ಟ್ರದಿಂದ 13, ಗುಜರಾತ್ನಿಂದ 11, ತಮಿಳುನಾಡಿನಿಂದ 6, ಬಿಹಾರ ಮತ್ತು ಜಾರ್ಖಂಡ್ನಿಂದ 6 ಮತ್ತು ಆಂಧ್ರಪ್ರದೇಶ 2 ಮಹಿಳೆಯರಿಗೆ ಈತ ವಂಚನೆ ಮಾಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.