ಪ್ರತಿವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬಜೆಟ್ನಲ್ಲಿ ಕಸ ವಿಲೇವಾರಿಗೆಂದೇ ಹಣ ಮೀಸಲಿಟ್ಟಿದ್ದಾರೆ. ಪ್ರತಿವರ್ಷವೂ ಆಸ್ತಿ ತೆರಿಗೆ ಮೂಲಕ ಘನತ್ಯಾಜ್ಯ ನಿರ್ವಹಣೆ (ಎಸ್ಡಬ್ಲೂಎಮ್) ಸೆಸ್ ಎಂದೇ ತೆರಿಗೆ ಪಾವತಿಸಿದ್ದೇವೆ. ಹೀಗಿದ್ದರೂ ಮತ್ತೊಮ್ಮೆ ಘನತ್ಯಾಜ್ಯ ನಿರ್ವಹಣಾ ಕಂಪನಿ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ಐದು ವರ್ಷದಲ್ಲಿ ಬೆಂಗಳೂರಿನ ನಾಗರಿಕರಿಂದ ಬರೋಬ್ಬರಿ ಒಂದು ಸಾವಿರದ ನೂರು ಕೋಟಿ ರೂಪಾಯಿಗಳನ್ನು ಆಸ್ತಿ ತೆರಿಗೆ ಮೂಲಕ ಘನತ್ಯಾಜ್ಯ ನಿರ್ವಹಣೆ ಸೆಸ್ ಅನ್ನು ಸಂಗ್ರಹಿಸಲಾಗಿದೆ. ಕೇಂದ್ರ ಸರ್ಕಾರ ಸಹ ಸ್ವಚ್ಛ ಭಾರತ ಸೆಸ್ ಎಂದು ಆದಾಯ ತೆರಿಗೆ ಮೂಲಕ ಮಹಾನಗರಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತಿದೆ” ಎಂದಿದ್ದಾರೆ.
“ಬಿಬಿಎಂಪಿ ಕೂಡ ಪ್ರತಿವರ್ಷ ಕಸ ವಿಲೇವಾರಿಗಾಗಿ ₹450 ರಿಂದ ₹750 ಕೋಟಿ ಖರ್ಚು ಮಾಡುತ್ತಿದೆ. 2023-24ರಲ್ಲಿ ₹650 ಕೋಟಿ ಕಸ ವಿಲೇವಾರಿಗೆ ಖರ್ಚು ಮಾಡಲಾಗಿದೆ ಎಂದಿದೆ. ಹೀಗಿದ್ದರೂ ಬಳಕೆದಾರರ ಶುಲ್ಕ ಎಂದು ತಿಂಗಳಿಗೆ ₹100 ರಿಂದ ₹500 ಸಂಗ್ರಹಿಸಲು ಮುಂದಾಗಿದ್ದಾರೆ. ಇದರಿಂದ ವಾರ್ಷಿಕ ₹800 ಕೋಟಿ ಘನತ್ಯಾಜ್ಯ ಕಂಪನಿಗೆ ಆದಾಯ ಬರಲಿದೆ. ಪ್ರತಿವರ್ಷ ಬಿಬಿಎಂಪಿ ಬಜೆಟ್ನಲ್ಲಿ ಮೀಸಲಿಡುವ ಹಣ ಎಲ್ಲಿಗೆ ಹೋಗುತ್ತಿದೆ. ಇದು ಡಿಕೆ ಶಿವಕುಮಾರ್ ಅವರ ಟ್ಯಾಕ್ಸ್ ಆಗಿದೆಯಾ?” ಎಂದು ಪ್ರಶ್ನಿಸಿದರು.
“ಈಗಾಗಲೇ ನೀವು ಘನತ್ಯಾಜ್ಯ ನಿರ್ವಹಣೆ ಸೆಸ್, ಸ್ವಚ್ಛ ಭಾರತ ಸೆಸ್ ಎಂದು ಆದಾಯ ಗಳಿಸುತ್ತಿದ್ದೀರಿ. ಕಸ ವಿಲೇವಾರಿಗಾಗಿ ಮತ್ತೆ ಸಂಗ್ರಹಿಸಲು ಮುಂದಾಗಿರುವ ₹800 ಕೋಟಿ ಯಾರ ಜೇಬಿಗೆ ಹೋಗುತ್ತದೆ. ಬೆಂಗಳೂರಿನ ಅಭಿವೃದ್ಧಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರು ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿದ್ದೀರಿ. ಜನಸಾಮಾನ್ಯರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಬೆಂಗಳೂರಿನ ಸಾವಿರಾರು ಮನೆಗಳಿಗೆ ಭೇಟಿ ನೀಡಿ ಈ ಬಗ್ಗೆ ಕೇಳಿದ್ದಕ್ಕೆ ಅವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಶೇ.85 ರಿಂದ ಶೇ.90ರಷ್ಟು ಮಂದಿ ಇದು ಹಗರಣವಲ್ಲದೆ ಮತ್ತೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ” ಎಂದು ಮೋಹನ್ ದಾಸರಿ ತಿಳಿಸಿದರು.
“ಇದೇ ವಿಚಾರವಾಗಿ ಸೋಮವಾರದಿಂದ 10 ದಿನಗಳ ಕಾಲ ಬೆಂಗಳೂರಿನಾದ್ಯಂತ ಜನಾಭಿಪ್ರಾಯ ಸಂಗ್ರಹ ಮಾಡುತ್ತೇವೆ. ಆ ಅಭಿಯಾನದ ಮುಖಾಂತರ ಬೆಂಗಳೂರಿನ ಜನತೆಗೆ ಕಸ ವಿಲೇವಾರಿ ಹೆಸರಿನಲ್ಲಿ ಹೇಗೆ ಸಾವಿರಾರು ಕೋಟಿ ರೂ. ಹಗರಣ ಆಗುತ್ತಿದೆ ಎನ್ನುವ ಮಾಹಿತಿ ನೀಡುವುದರ ಜತೆಗೆ ಬೇರೆ ಬೇರೆ ನಗರಗಳಲ್ಲಿ ಕಡಿಮೆ ಖರ್ಚಿನಲ್ಲಿ ಹೇಗೆ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತೇವೆ. ಜನಾಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದಿಡಲಿದ್ದೇವೆ” ಎಂದು ಹೇಳಿದರು.
ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ ಮೃತ್ಯುಂಜಯ ಮಾತನಾಡಿ, “ಕಸದಿಂದ ರಸ ಮಾಡುವ ಕಾಲದಲ್ಲಿ ಕಸ ನಿರ್ವಹಣೆಗೆಂದೇ ಹೆಚ್ಚುವರಿ ಬಳಕೆದಾರರ ಶುಲ್ಕ ವಿಧಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. 46 ಲಕ್ಷ ಆಸ್ತಿಯಲ್ಲಿ ಕೇವಲ 16 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿಸಿದ್ದಾರೆ. ಇನ್ನುಳಿದ 30 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿಸಿಲ್ಲ. ಹೀಗಿರುವಾಗ ಆಸ್ತಿ ತೆರಿಗೆ ಪಾವತಿಸಿರುವವರಿಗೆ ಮತ್ತೆ ಬರೆ ಹಾಕಲು ಮುಂದಾಗಿದ್ದಾರೆ. ಬಿಬಿಎಂಪಿಯ 2,100 ಕೋಟಿ ರೂ. ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಜನರ ಮೇಲೆ ಬರೆ ಎಳೆಯಲು ಮುಂದಾಗಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಚನ್ನಪಟ್ಟಣ ಉಪಚುನಾವಣೆಯಲ್ಲಿ ದರ್ಶನ್ ಕಣಕ್ಕಿಳಿಸಲು ಡಿಕೆ ಸಹೋದರರು ಯೋಜಿಸಿದ್ದರು: ಸಿಪಿ ಯೋಗೇಶ್ವರ್
“ನಿಮ್ಮ ಕೆಲಸ ನೀವು ಸರಿಯಾಗಿ ಮಾಡಿ. ಈಗಾಗಲೇ ವಿಧಿಸಲಾಗಿರುವ ತೆರಿಗೆಗಳನ್ನು ಪ್ರತಿಯೊಬ್ಬರಿಂದ ಸಂಗ್ರಹಿಸಿ. ಅದನ್ನ ಬಿಟ್ಟು ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾದರೆ ಆಮ್ ಆದ್ಮಿ ಪಾರ್ಟಿ ಹೋರಾಟ ಮಾಡಲಿದೆ. ಯಾವುದೇ ಕಾರಣಕ್ಕೂ ಜನರಿಗೆ ಬರೆ ಎಳೆಯಲು ನಾವು ಬಿಡುವುದಿಲ್ಲ. ಹಿಂದಿನ ಬಿಜೆಪಿ ಸರ್ಕಾರವೂ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ನೀವು ಕೂಡ ಅದೇ ಕೆಲಸದಲ್ಲಿ ತೊಡಗಿದ್ದೀರಿ. ಈ ಕೂಡಲೇ ನೀವು ಈ ನಿರ್ಧಾರವನ್ನು ಹಿಂಪಡೆಯಬೇಕು. ಆಮ್ ಆದ್ಮಿ ಪಾರ್ಟಿಯ ಗ್ಯಾರಂಟಿಗಳನ್ನು ಕದ್ದು ಉಚಿತವಾಗಿ ನೀಡುತ್ತಿದ್ದರೂ, ಭ್ರಷ್ಟಾಚಾರ ನಿಂತಿಲ್ಲ. ಘನತ್ಯಾಜ್ಯ ನಿರ್ವಹಣೆಗೆ ಶುಲ್ಕ ವಿಧಿಸಲು ಮುಂದಾಗಿರುವ ನಿಮ್ಮ ನಿರ್ಧಾರದಿಂದ ಹಿಂದೆ ಸರಿಯಿರಿ” ಎಂದು ಹೇಳಿದರು.