ಬೆಂಗಳೂರಿನಲ್ಲಿ ಎದುರಾಗಿರುವ ನೀರಿನ ಅಭಾವ ಕಾವೇರಿ ನೀರಿನ ಕೊರತೆಯಿಂದ ಅಲ್ಲ. ಅಂತರ್ಜಲದ ಮೇಲೆ ಅವಲಂಬಿತರಾಗಿದ್ದ ಲಕ್ಷಾಂತರ ಜನರಿಗೆ ನೀರು ಒದಗಿಸುತ್ತಿದ್ದ ಕೊಳವೆ ಬಾವಿಗಳು ಬತ್ತಿ ಹೋದ ಕಾರಣ ನೀರಿನ ಅಭಾವ ಕಂಡುಬಂದಿತ್ತು. ಮಳೆ ಪ್ರಾರಂಭವಾಗುವ ಮುನ್ನವೇ ಬೆಂಗಳೂರಿನಾದ್ಯಂತ 986 ಮಳೆ ನೀರು ಇಂಗು ಗುಂಡಿಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್ಎಸ್ಬಿ) ನಿರ್ಮಾಣ ಮಾಡಿದೆ.
“ಮಳೆ ನೀರು ಕೊಯ್ಲು ಅಳವಡಿಸಿಕೊಂಡಿರುವ ಹಲವಾರು ಕಟ್ಟಡಗಳಲ್ಲಿ ಮಳೆ ನೀರಿನ ಇಂಗುಗುಂಡಿಗಳನ್ನು ರಚಿಸದೇ ಇರುವ ಕಾರಣ ಅಂತರ್ಜಲ ಮರುಪೂರಣ ಸರಿಯಾಗಿ ಆಗುತ್ತಿಲ್ಲ. ಮರುಪೂರಣ ಆಗದೇ ಇರುವ ಕಾರಣ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಜನರು ಮಳೆ ನೀರು ಮರುಪೂರಣಕ್ಕೆ ಇಂಗು ಗುಂಡಿಗಳನ್ನ ನಿರ್ಮಿಸಬೇಕು ಎನ್ನುವ ಜಾಗೃತಿ ಮೂಡಿಸಬೇಕು” ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
“ಅಂತರ್ಜಲ ಕುಸಿತದಿಂದ ನೀರಿನ ಅಭಾವಕ್ಕೆ ತುತ್ತಾಗಿರುವ ಬೆಂಗಳೂರಿನಲ್ಲಿ ಅಂತರ್ಜಲ ವೃದ್ಧಿಸುವ ಹಾಗೂ ಕೆರೆಗಳಿಗೆ ಮಳೆ ನೀರು ತುಂಬಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಸಮುದಾಯ ಮಳೆ ಕೋಯ್ಲು (ಕಮ್ಯೂನಿಟಿ ರೈನ್ ಹಾರ್ವೆಸ್ಟಿಂಗ್)ಗೂ ಬಹಳಷ್ಟು ಒಲವು ವ್ಯಕ್ತವಾಗಿದೆ. ಕಮ್ಯೂನಿಟಿ ರೈನ್ ಹಾರ್ವೆಸ್ಟಿಂಗ್ ಅಳವಡಿಸುವ 74 ಪ್ರಸ್ತಾವನೆಗಳ ಬಗ್ಗೆ ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಸದ್ಯದಲ್ಲೇ ಮೊದಲ ಯೋಜನೆಗೆ ಚಾಲನೆ ದೊರೆಯಲಿದೆ” ಎಂದಿದ್ದಾರೆ.
“ಕಡಿಮೆ ಸಮಯದಲ್ಲಿ 986 ಇಂಗುಗುಂಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಹೆಚ್ಚಿನ ಕಡೆಗಳಲ್ಲಿ ನಿರ್ಮಿಸುವ ಮೂಲಕ ಮಳೆ ನೀರು ನಮ್ಮ ಅಂತರ್ಜಲವನ್ನು ಸಮೃದ್ದಗೊಳಿಸಲು ಅನುವು ಮಾಡಿಕೊಡುವುದು. ಸಾರ್ವಜನಿಕರು ತಮ್ಮ ಕಟ್ಟಡಗಳಲ್ಲಿ ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದ ಸಮೃದ್ಧ ಬೆಂಗಳೂರಿಗೆ ಕೊಡುಗೆ ನೀಡುವಂತೆ ಮನವೊಲಿಸುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ: ಹವಾಮಾನ ಇಲಾಖೆ
ನಗರದಲ್ಲಿ ಜಲಮಂಡಳಿಯ ಅಧೀನದಲ್ಲಿರುವ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲಿ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಬೇಕು ಎಂದು ಜಲಮಂಡಳಿ ಅಧ್ಯಕ್ಷರು ಸೂಚನೆ ನೀಡಿದ್ದರು.
ಈ ನಿಟ್ಟಿನಲ್ಲಿ ಕಾರ್ಯತತ್ಪರರಾದ ಜಲಮಂಡಳಿ ಅಧಿಕಾರಿಗಳೂ ಒಂದು ತಿಂಗಳ ಅವಧಿಯಲ್ಲಿ 986 ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಿದ್ದಾರೆ. ವಲಯವಾರು ನಿರ್ಮಿಸಲಾಗುವ ಇಂಗುಗುಂಡಿಗಳ ಮೂಲಕ ಮಳೆಯ ನೀರು ಯಾವುದೇ ಕಲ್ಮಶವಿಲ್ಲದೇ ನೆಲದಡಿಗೆ ಇಳಿಯುವಂತೆ. ಹಾಗೆಯೇ, ರಸ್ತೆಗಳಲ್ಲಿನ ನೀರು ಹರಿದು ಒಳಚರಂಡಿಗೆ ಸೇರ್ಪಡೆ ಆಗಿ ತೊಂದರೆ ಆಗದಂತೆ ತಡೆಯಲು ಇದು ಸಹಕಾರಿಯಾಗಲಿದೆ.