“ಬೆಂಗಳೂರಿನಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಕೊರತೆ ಉಂಟಾಗಿದೆ. ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ನಗರದಲ್ಲಿ ಅಂತರ್ಜಲ ಮರುಪೂರಣಕ್ಕೆ ಅಗತ್ಯವಿರುವ ಜಲಮಂಡಳಿಯ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಬೆಂಗಳೂರು ನೀರು ಸರಬರಾಜು ಮಾತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಮಾರ್ಚ್ 19ರಂದು ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ, ನಾಯಂಡಹಳ್ಳಿ ಕೆರೆ, ಕೆಂಗೇರಿ ಎಸ್ಟಿಪಿ, ಮಂಡಳಿ ವತಿಯಿಂದ ಸಂಸ್ಕರಿಸಿದ ನೀರನ್ನ ಕೆಂಗೇರಿ ಕೆರೆಗೆ ತುಂಬಿಸಲು ಕೈಗೊಂಡಿರುವ ಕಾಮಗಾರಿಯ ಸ್ಥಳ ಪರಿಶೀಲನೆ, ಮಂಡಳಿ ವತಿಯಿಂದ ಸಂಸ್ಕರಿಸಿದ ನೀರನ್ನು ದುಬಾಸಿಪಾಳ್ಯ, ಹೊಸಹಳ್ಳಿಕೆರೆ ಹಾಗೂ ಅಲಗೆವಡೆರಹಳ್ಳಿ ಕೆರೆಗೆ ತುಂಬಿಸುವ ಸಲುವಾಗಿ ನಡೆಸುತ್ತಿರುವ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
“ಬೆಂಗಳೂರಿನಲ್ಲಿ ಅವ್ಯಾಹತವಾಗಿ ಅಂತರ್ಜಲದ ಬಳಕೆ ಆಗುತ್ತಿದೆ. ಸಮರ್ಪಕವಾದ ಮಳೆ ನೀರು ಮರುಪೂರಣ ವ್ಯವಸ್ಥೆ ಮಾಡದೇ ಇರುವ ಹಿನ್ನಲೆ, ಹೆಚ್ಚಿನ ಪ್ರಮಾಣದ ನೀರು ಒಳಚರಂಡಿಗೆ ಹರಿಯುತ್ತಿದೆ. ಇದು ಒಳಚರಂಡಿಯ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ. ಅಲ್ಲದೇ, ಅಂತರ್ಜಲ ಮರುಪೂರಣ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಈ ಕೊರತೆಯನ್ನು ತಪ್ಪಿಸಲು ಹಾಗೂ ಭವಿಷ್ಯದ ನೀರಿನ ಅವಶ್ಯಕತೆಯನ್ನು ಪೂರೈಸಲು ಅಂತರ್ಜಲ ಮರುಪೂರಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅನಗತ್ಯ ನೀರು ಪೋಲು ತಡೆಗೆ ‘ವಾಟರ್ ಟ್ಯಾಪ್ ಮಾಸ್ಕ್’ ಅಳವಡಿಕೆ ಕಡ್ಡಾಯ: ಜಲಮಂಡಳಿ ಅಧ್ಯಕ್ಷ
ಸಂಸ್ಕರಿಸಿದ ನೀರನ್ನ ಕೆರೆಗಳಿಗೆ ತುಂಬಿಸುವ ಕಾರ್ಯ ಚುರುಕು ಗೊಳಿಸಲು ಸೂಚನೆ
“ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ನಾಯಂಡಹಳ್ಳಿ ಕೆರೆ ಸೇರಿದಂತೆ 14 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೆರೆಗಳಿಗೆ ನೀರನ್ನು ತುಂಬಿಸುವುದು ನಮ್ಮ ಗುರಿಯಾಗಿದೆ. ಕೆಂಗೇರಿ ಕೆರೆ, ದುಬಾಸಿ ಪಾಳ್ಯ, ಹೊಸಹಳ್ಳಿ ಕೆರೆ ಹಾಗೂ ಅಲಗೆವಡೆರಹಳ್ಳಿ ಕೆರೆಗೆ ನೀರು ತುಂಬಿಸುವಂತಹ ಕಾಮಗಾರಿಗಳನ್ನು ಚುರುಕುಗೊಳಿಸಬೇಕು” ಎಂದು ಅಧಿಕಾರಿಗಳಿಗೆ ಜಲಮಂಡಳಿ ಅಧ್ಯಕ್ಷರು ಸೂಚನೆ ನೀಡಿದರು.