ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಎಲ್ಲ ಮುಗಿದಿದೆ ಎನ್ನುವಷ್ಟರಲ್ಲಿ ವಿಮಾನದಲ್ಲಿ ಕುಳಿತ ನಂತರವೂ ವಿಮಾನದೊಳಗಿನ ಹೆಚ್ಚುವರಿ ತಪಾಸಣೆಯಿಂದ ಸಿಟ್ಟಿಗೆದ್ದ ಪ್ರಯಾಣಿಕನೊಬ್ಬ ‘ಬ್ಯಾಗ್ನಲ್ಲಿ ಬಾಂಬ್ ಇದೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.
ಇನ್ನೇನು ವಿಮಾನ ಟೇಕ್ಆಫ್ ಆಗುವ ಕೆಲವೇ ನಿಮಿಷಗಳ ಮುಂಚೆ ವ್ಯಕ್ತಿಯೊಬ್ಬ ಬ್ಯಾಗ್ನಲ್ಲಿ ಬಾಂಬ್ ಇರುವುದಾಗಿ ಹೇಳಿದ್ದು, ಸದ್ಯ ಆತನನ್ನು ಕೆಂಪೇಗೌಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಸಜು ಕೆ ಕುಮಾರನ್ (48) ಬಂಧಿತ ಆರೋಪಿ. ಈತನು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಸಜು ಕೆ ಕುಮಾರನ್ ಸಹೋದರಿ ತಂಗಿಯ ನವಜಾತ ಶಿಶು ಹೆರಿಗೆಯ ಸಮಯದಲ್ಲಿ ಸಾವನ್ನಪ್ಪಿದೆ. ಹೀಗಾಗಿ, ಆತ ತರಾತುರಿಯಲ್ಲಿ ಕೇರಳದ ಕೊಚ್ಚಿಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಬೆಂಗಳೂರಿನಿಂದ ಕೊಚ್ಚಿಗೆ ತೆರಳುವ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿದ್ದನು. ಈ ವೇಳೆ, ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಎಲ್ಲ ಮುಗಿದು ವಿಮಾನ ನಿಲ್ದಾಣದ ಒಳಗೆ ಕುಳಿತಾಗ ಮತ್ತೆ ಭದ್ರತಾ ಸಿಬ್ಬಂದಿ ತಪಾಸಣೆ ಮಾಡಲು ಆರಂಭಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಆತ ನಾನೇನು ಬಾಂಬ್, ಚಾಕು ಇಟ್ಟುಕೊಂಡು ಹೋಗುತ್ತಿದ್ದೇನೆ ಎಂದು ಶಂಕೆ ಮಾಡುತ್ತಿದ್ದಾರಾ ಎಂದು ಕೇಳಿದ್ದ ಎಂಬುದಾಗಿ ಮೂಲಗಳು ತಿಳಿಸಿವೆ.
“ಭಾನುವಾರ ಸಂಜೆ 5.25ಕ್ಕೆ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಕೊಚ್ಚಿಗೆ ತೆರಳುವ ವಿಮಾನ ಸಂಖ್ಯೆ ‘I5 990’ರ ನಿರ್ಗಮನಕ್ಕೆ ಕೇವಲ ಐದು ನಿಮಿಷದ ಮೊದಲು ಆರೋಪಿಯು ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾನೆ. ಆರೋಪಿಯೂ ಸಿಬ್ಬಂದಿಗೆ ಬ್ಯಾಗ್ ಪರಿಶೀಲನೆ ಮಾಡಲು ಬಿಟ್ಟಿಲ್ಲ. ಹಾಗಾಗಿ ಆತನನ್ನು ವಿಮಾನದಿಂದ ಇಳಿಸಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದರು” ಎಂದು ವಿಮಾನ ನಿಲ್ದಾಣ ಪೊಲೀಸರು ಹೇಳಿದ್ದಾರೆ.
ಇದು ಅಕ್ಷಮ್ಯ ಅಪರಾಧವಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯದಿಂದ ಅನುಮತಿ ಕೋರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ವಿಶ್ವವಿದ್ಯಾಲಯ | ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆ: ‘ಕಟ್ಟುಪಾಡು ಬದಲಾಗದು’ ಎಂದ ವಿದ್ಯಾರ್ಥಿಗಳು
ಸದ್ಯ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 505ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನವಜಾತ ಶಿಶುವಿನ ಮರಣವನ್ನು ದೃಢಪಡಿಸಿದ ನಂತರ, ಸಜು ಕುಮಾರನ್ ಕ್ಷಮೆಯಾಚಿಸಿದರೆ ಕೇವಲ ದಂಡದೊಂದಿಗೆ ಆತನನ್ನು ಬಿಟ್ಟು ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಥವಾ ಆರೋಪ ಸಾಬೀತಾದರೇ, ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.