2023-24ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಶಾಲಾ-ಕಾಲೇಜು ಅಥವಾ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ವಿರುದ್ಧ ಸುಮಾರು 100 ಪ್ರಕರಣಗಳು ದಾಖಲಾಗಿವೆ.
ಕೇಂದ್ರ ಸರ್ಕಾರವು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ‘ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ’ (COTPA) ಅಡಿ ನಿಷೇಧಿಸಿದೆ. ಈ ನಿಷೇಧ ಜಾರಿಯಾಗಿ ಎರಡು ದಶಕಗಳು ಕಳೆದಿವೆ. ಆದರೂ, 2023-24ರಲ್ಲಿ 100ಕ್ಕೂ ಹೆಚ್ಚು ನಿಷೇಧ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಕಾನೂನಿನ ಪರಿಣಾಮಕಾರಿ ಅನುಷ್ಠಾನವಾಗದೇ ಇರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಬಿಬಿಎಂಪಿಯ ತಂಬಾಕು ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಕಾನೂನು ಜಾರಿಯನ್ನು ಬಿಗಿಗೊಳಿಸಲಾಗಿದೆ. ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಶಾಲಾ-ಕಾಲೇಜು ಕ್ಯಾಂಪಸ್ಗಳ 100 ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ದೂರಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ನಗರದಾದ್ಯಂತ ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅನೇಕ ಸ್ಥಳಗಳಿವೆ. ಇವುಗಳಲ್ಲಿ ಹೆಚ್ಚಿನವು ಕ್ಯಾಂಪಸ್ಗಳಿಂದ 100 ಮೀಟರ್ಗಳ ಒಳಗೆ ಇವೆ ಎಂದು ಹೇಳಲಾಗಿದೆ.
ಹೊಸೂರು ರಸ್ತೆ, ಲ್ಯಾಂಗ್ಫೋರ್ಡ್ ರಸ್ತೆ ಮತ್ತು ಕಟ್ಟಿಗೇನಹಳ್ಳಿ ಬಳಿಯ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ಬಳಿ ಸಿಗರೇಟ್ ಮಾರಾಟ ಮಾಡುವ ಮಳಿಗೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯ ಜಾರಿಯು ಬಿಬಿಎಂಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಪೊಲೀಸರನ್ನು ಒಳಗೊಂಡಿರುವ ಒಂದು ಸಾಮೂಹಿಕ ಪ್ರಯತ್ನವಾಗಿದೆ. ಆದರೂ, ಸಾಮಾನ್ಯ ಕ್ರಮಗಳ ಕೊರತೆ ಮತ್ತು ಶಾಲಾ-ಕಾಲೇಜು ಮಂಡಳಿಗಳ ನಿರ್ಲಕ್ಷ್ಯವು ಸಮಸ್ಯೆಗೆ ಕಾರಣವಾಗಿದೆ.
ತಮ್ಮ ಆವರಣದಲ್ಲಿಯೇ ವಿದ್ಯಾರ್ಥಿಗಳು ತಂಬಾಕು ಸಂಬಂಧಿತ ಚಟಗಳಿಗೆ ಒಳಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲೆಯೂ ಇದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ವರದಿ ಉಲ್ಲೇಖಿಸಿದೆ.
ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ನ ಸಹಾಯಕ ನಿರ್ದೇಶಕಿ ಡಾ.ಪ್ರಗತಿ ಹೆಬ್ಬಾರ್, “ಕರ್ನಾಟಕವು ಕಾಯ್ದೆಯ ಉಲ್ಲಂಘನೆಗಳ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸುವ ರಾಜ್ಯಗಳಲ್ಲಿ ಒಂದಾಗಿದೆ. ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಮತ್ತು ನಿರಂತರವಾಗಿಸಲು ಇನ್ನೂ ಅವಕಾಶವಿದೆ” ಎಂದಿದ್ದಾರೆ.
ಆದಾಗ್ಯೂ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದ್ದಕ್ಕೆ ವಿಧಿಸುವ 200 ರೂ. ದಂಡ ತುಂಬಾ ಕಡಿಮೆ ಮತ್ತು ಇದು ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ತಡೆಯಲಾರದು ಎಂದು ಶಿಕ್ಷಣ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.
ಕರ್ನಾಟಕದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ (ಕೆಎಎಂಎಸ್) ಪ್ರಧಾನ ವ್ಯವಸ್ಥಾಪಕ ಡಿ.ಶಶಿಕುಮಾರ್ ಮಾತನಾಡಿ, “ಅಪ್ರಾಪ್ತ ವಯಸ್ಕರು ಸಿಗರೇಟ್ ಮತ್ತು ಇತರ ವಸ್ತುಗಳಿಗೆ ಒಳಗಾಗದಂತೆ ಜಾಗೃತಿ ಮೂಡಿಸಲು ಎನ್ಜಿಒಗಳು, ಆರೋಗ್ಯ ಇಲಾಖೆ ಹಾಗೂ ತಂಬಾಕು ನಿಯಂತ್ರಣ ಮಂಡಳಿಯೊಂದಿಗೆ ಸಹಕರಿಸಲು ಯೋಜಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಳೆಯಿಂದ ಉಂಟಾಗುವ ಸಮಸ್ಯೆ ಬಗೆಹರಿಸಲು ಸಹಾಯವಾಣಿ ತೆರೆದ ಬಿಬಿಎಂಪಿ, ಬೆಸ್ಕಾಂ
ಬಿಬಿಎಂಪಿ ತಂಬಾಕು ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ಮಾತನಾಡಿ, “2022ರಲ್ಲಿ ನಾವು ಕ್ಷೇತ್ರವಾರು ಜಾರಿ ತಂಡಗಳನ್ನು ರಚಿಸಿದ್ದೇವೆ. ಇದು ಕೋಟ್ಪಾ ಕಾಯ್ದೆಯ ಉಲ್ಲಂಘನೆಗಳ ಮೇಲ್ವಿಚಾರಣೆಯನ್ನು ಹೆಚ್ಚಿಸಲು ಕಾರಣವಾಯಿತು. ಪರಿಣಾಮವಾಗಿ, ಉಲ್ಲಂಘನೆಗಳ ಹೆಚ್ಚಿನ ಗುರುತಿಸುವಿಕೆ ಮತ್ತು ನಂತರದ ದಂಡನೆಗಳನ್ನು ನಾವು ನೋಡುತ್ತೇವೆ. ಜಾರಿ ತಂಡಗಳು ಸಾರ್ವಜನಿಕ ಸ್ಥಳಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸುತ್ತಮುತ್ತ ನಿಯಮಿತವಾಗಿ ಕಣ್ಗಾವಲು ಮಾಡುತ್ತವೆ” ಎಂದು ಅವರು ಹೇಳಿದರು.
“ಸರ್ಕಾರಿ ಅಪ್ಲಿಕೇಶನ್ ‘ಸ್ಟಾಪ್ ಟೊಬ್ಯಾಕೊ’ ಮೂಲಕ ಕೋಟ್ಪಾ ಉಲ್ಲಂಘನೆಗಳನ್ನು ವರದಿ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮಂಡಳಿಯಿಂದ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ” ಎಂದಿದ್ದಾರೆ.
ಮೂಲ : ಡೆಕ್ಕನ್ ಹೆರಾಲ್ಡ್