ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಹುಟ್ಟಿಸಿತ್ತು. ಇದೀಗ ನಗರದ ಹೊರ ವಲಯದಲ್ಲಿರುವ ಬೊಮ್ಮನಹಳ್ಳಿಯ ಕೂಡ್ಲು, ಸಿಂಗಸಂದ್ರ ಬಳಿ ಅ.29ರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ. ಇದು ನಿವಾಸಿಗಳಲ್ಲಿ ಭಯ ಮೂಡಿಸಿದೆ.
ಬೆಂಗಳೂರಿನ ಸಿಂಗಸಂದ್ರದ ಎಇಸಿಎಸ್ ಲೇಔಟ್ನ ದಾಮೋದರ್ ರೆಡ್ಡಿ ಎಂಬುವವರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು, ಬೀದಿ ನಾಯಿಗಳು ಚಿರತೆಯನ್ನು ಓಡಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ನೋಡಿದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿಯ ಕೂಡ್ಲು ಸಿಂಗಸಂದ್ರ ಬಳಿ ಬಡಾವಣೆಗಳ ರಸ್ತೆಯಲ್ಲಿ ಚಿರತೆ ಓಡಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದಾಗಿ ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಹೆಚ್.ಎಸ್.ಆರ್ ಲೇಔಟ್ ಸೇರಿದಂತೆ ಸುತಮುತ್ತಲ ಜನರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದಾರೆ.
ಕೆ.ಆರ್.ಪುರಂ ವಲಯ ಅರಣ್ಯ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ. ಜತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೊಮ್ಮನಹಳ್ಳಿ, ಎಚ್.ಎಸ್.ಆರ್.ಲೇಔಟ್, ಬಿಟಿಎಂ ಲೇಔಟ್ಗಳಲ್ಲಿ ಜನರು ರಾತ್ರಿ ವೇಳೆ ಒಬ್ಬೊಬ್ಬರೇ ಓಡಾಡದಂತೆ ಎಚ್ಚರಿಕೆ ನೀಡಿದ್ದಾರೆ. ಅನಿವಾರ್ಯವಿದ್ದರೆ ಕಾರಿನಲ್ಲಿ ಓಡಾಡುವಂತೆ ಮೈಕ್ಗಳಲ್ಲಿ ಅನೌನ್ಸ್ ಮಾಡಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜು, “ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಹುಡುಕಾಟದಲ್ಲಿದ್ದಾರೆ. ವಿಡಿಯೋಗಳಲ್ಲಿ ಕಂಡು ಬರುತ್ತಿರುವ ದೃಶ್ಯ ಬನ್ನೇರುಘಟ್ಟ ಸಮೀಪದ ಸಿಂಗಸಂದ್ರ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸಿಂಗಸಂದ್ರ, ಕೂಡ್ಲು ಗೇಟ್, ಎಇಸಿಎಸ್ ಲೇಔಟ್ ಸೇರಿದಂತೆ ಬೆಂಗಳೂರಿನ ಆಗ್ನೇಯ ಭಾಗದಲ್ಲಿ ಹುಡುಕಾಟ ಮುಂದುವರೆಸಿದ್ದಾರೆ. ಚಿರತೆ ಕಂಡು ಬಂದಿರುವ ಪ್ರದೇಶ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರವಾಗಿದೆ. ಈ ಪ್ರದೇಶದ ಸುತ್ತಮುತ್ತ ಇನ್ಫೋಸಿಸ್ ಬಯೋಕಾನ್ ಸೇರಿದಂತೆ ಅನೇಕ ಐಟಿ ಬಿಟಿ ಕಂಪನಿಗಳಿವೆ” ಎಂದರು.
“ಚಿರತೆಯನ್ನು ಹಿಡಿಯಲು ಶನಿವಾರ ತಡರಾತ್ರಿಯಿಂದಲೇ ಪ್ರಯತ್ನ ನಡೆಸಿದ್ದೇವೆ. ಆದರೆ, ಎಲ್ಲಿಯೂ ಚಿರತೆಯ ಕುರುಹು ಕಂಡು ಬಂದಿಲ್ಲ. ಒಮ್ಮೆ ಗಾಬರಿಯಾದರೆ ಚಿರತೆಗಳು ಆ ಪ್ರದೇಶವನ್ನು ಬಿಟ್ಟು ತೆರಳುತ್ತವೆ. ಆದ್ದರಿಂದ ಸಾರ್ವಜನಿಕರು ಆತಂಕಪಡಬೇಕಾಗಿಲ್ಲ” ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮತ್ತೊಂದು ಅಗ್ನಿ ಅವಘಡ; 10ಕ್ಕೂ ಹೆಚ್ಚು ಖಾಸಗಿ ಬಸ್ಗಳಿಗೆ ಬೆಂಕಿ
ಬೆಂಗಳೂರು ಸುತ್ತಮುತ್ತ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಎಲೆಕ್ಟ್ರಾನಿಕ್ ಸಿಟಿ ಮತ್ತು ಬೆಂಗಳೂರು ದಕ್ಷಿಣ ಭಾಗದಲ್ಲಿ ಚಿರತೆ ಸಂಚರಿಸಿರುವ ಕುರುಹುಗಳು ಕಂಡು ಬಂದಿದ್ದವು. ಚಿರತೆ ಓಡಾಡಿರುವ ಗುರುತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ನೌಕರರು ಮತ್ತು ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ರಾತ್ರಿ ವೇಳೆ ಸಂಚರಿಸದಂತೆ ಸುತ್ತೋಲೆ ಹೊರಡಿಸಲಾಗಿತ್ತು.
LEOPARD SPOTTED IN BENGALURU
A Leopard has been spotted roaming on the roads at AECS Layout – A Block, Kudlu Gate. Kindly do the needful at the earliest @aranya_kfd before it attacks anyone@BlrCityPolice @MTF_Mobility @osd_cmkarnataka pls help this info reach the concerned… pic.twitter.com/vwyY5s2gv3
— Karnataka Weather (@Bnglrweatherman) October 30, 2023
ತುರಹಳ್ಳಿ ಅರಣ್ಯದ ಸಮೀಪ ಇರುವ ಕೆಂಗೇರಿ, ಕುಂಬಳಗೋಡು ಮತ್ತು ಕೋಡಿಪಾಳ್ಯ ಹಾಗೂ ದೇವನಹಳ್ಳಿಯಲ್ಲಿ ಚಿರತೆ ಸಂಚಾರ ನಡೆಸಿರುವುದು ಕಂಡು ಬಂದಿತ್ತು.