ಆ್ಯಸಿಡ್ ದಾಳಿ ಹಿಂಸಾತ್ಮಕ ಆಕ್ರಮಣದ ಒಂದು ರೂಪವಾಗಿದೆ. ಸಾಮಾನ್ಯವಾಗಿ ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣಗಳು ಕಂಡುಬಂದಿವೆ. ಇದೀಗ, ರಾಜ್ಯ ರಾಜಧಾನಿ ಬೆಂಗಳೂರಿನ ಜನರನ್ನು ಬೆಚ್ಚಿಬೀಳಿಸುವ ಆಘಾತಕಾರಿ ವಿಷಯವೊಂದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ಸಿಆರ್ಬಿ) ವರದಿ ಬಿಡುಗಡೆ ಮಾಡಿದ್ದು, 19 ಮೆಟ್ರೋಪಾಲಿಟನ್ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಆ್ಯಸಿಡ್ ದಾಳಿ ನಡೆದಿವೆ ಎಂದು ಹೇಳಿದೆ.
ಎನ್ಸಿಆರ್ಬಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ”ಪಟ್ಟಿ ಮಾಡಲಾದ 19 ಮೆಟ್ರೋಪಾಲಿಟನ್ ನಗರಗಳ ಪೈಕಿ, ಕಳೆದ ವರ್ಷ(2022) ಬೆಂಗಳೂರಿನಲ್ಲಿ ಎಂಟು ಮಹಿಳೆಯರು ಆ್ಯಸಿಡ್ ದಾಳಿಗೆ ಒಳಗಾಗಿದ್ದಾರೆ. ಇದರಿಂದ ಒಟ್ಟಾರೆ, ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಮೂವರು ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಯತ್ನ ನಡೆದಿದೆ ಮತ್ತು ಐದು ಮಹಿಳೆಯರ ಮೇಲೆ ಆ್ಯಸಿಡ್ ಹಾಕಲಾಗಿದೆ” ಎಂದು ತಿಳಿಸಿದೆ.
”ಹೊಸದಿಲ್ಲಿಯಲ್ಲಿ ಏಳು ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ರಾಷ್ಟ್ರ ರಾಜಧಾನಿಯು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐದು ಆ್ಯಸಿಡ್ ಪ್ರಕರಣಗಳು ದಾಖಲಾಗಿರುವ ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ. ಹೈದರಾಬಾದ್ ಮತ್ತು ಅಹಮದಾಬಾದ್ ನಗರದಲ್ಲಿ ತಲಾ ಎರಡು ಆ್ಯಸಿಡ್ ದಾಳಿ ಯತ್ನ ಪ್ರಕರಣಗಳು ನಡೆದಿವೆ” ಎಂದು ಎನ್ಸಿಆರ್ಬಿ ವಿಶ್ಲೇಷಣೆ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಪಾರ್ಟ್ಮೆಂಟ್ನಿಂದ ಆಯತಪ್ಪಿ ಬಿದ್ದು ನವವಿವಾಹಿತೆ ಸಾವು
2022ರಲ್ಲಿ ಯುವತಿ ಮೇಲೆ ನಡೆದ ಆ್ಯಸಿಡ್ ದಾಳಿ
2022ರ ಏಪ್ರಿಲ್ನಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣವೊಂದು ಇಡೀ ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು.
ಸುಂಕದಕಟ್ಟೆಯಲ್ಲಿ 24 ವರ್ಷದ ಎಂ.ಕಾಂ ಪದವೀಧರೆ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಈ ಪ್ರಕರಣದ ಆರೋಪಿ ನಾಗೇಶ್ ಬಾಬು. ಆರೋಪಿ ಸಂತ್ರಸ್ತ ಯುವತಿಯನ್ನು ಹಲವು ವರ್ಷಗಳಿಂದ ಹಿಂಬಾಲಿಸುತ್ತಿದ್ದನು. ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಯುವತಿಯನ್ನು ಪೀಡಿಸುತ್ತಿದ್ದನು. ಯುವತಿಯು ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆರೋಪಿಯು ಆ್ಯಸಿಡ್ ಎರಚಿದ್ದನು.
ಬಳಿಕ ಆರೋಪಿ ತಮಿಳುನಾಡಿನ ತಿರುವಣ್ಣಾಮಲೈ ಆಶ್ರಮಕ್ಕೆ ಹೋಗಿ ತಲೆಮರೆಸಿಕೊಂಡಿದ್ದನು. ಈ ವ್ಯಕ್ತಿಯನ್ನು ಮೇ ತಿಂಗಳಲ್ಲಿ ತಿರುವಣ್ಣಾಮಲೈ ಆಶ್ರಮದಲ್ಲಿ ಸ್ವಾಮಿ ವೇಷದಲ್ಲಿದ್ದಾಗ ಪೊಲೀಸರು ಬಂಧಿಸಿದ್ದರು.
2023ರ ಜೂನ್ನಲ್ಲಿ ಸಂತ್ರಸ್ತ ಯುವತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಅವರ ಸೆಕ್ರೆಟರಿಯೇಟ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಯಿತು.
ಇದೇ ರೀತಿಯ ಮತ್ತೊಂದು ಪ್ರಕರಣವು ಜೂನ್ 10, 2022 ರಂದು ವರದಿಯಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಸ್ನೇಹಿತೆಯ ಮುಖದ ಮೇಲೆ ಆ್ಯಸಿಡ್ ಎರಚಿದ್ದನು.