ಒಂದೇ ವಾರದಲ್ಲಿ ಸರ್ಕಾರದ ಹೆಸರಿನಲ್ಲಿ ಎರಡು ನಕಲಿ ಆದೇಶದ ಪ್ರತಿಗಳು ಹರಿದಾಡಿದ್ದು, ಸದ್ಯ ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ನಕಲಿ ಆದೇಶ ಪ್ರತಿಗಳು ಹರಿದಾಡುತ್ತಿರುವುದರಿಂದ ಭಾರೀ ಸಮಸ್ಯೆ ಉಂಟಾಗುತ್ತಿದೆ. ಒಂದು ನಕಲಿ ಆದೇಶ ಪ್ರತಿಯಲ್ಲಿ, ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿಗಳ ಹೆಸರಿನಲ್ಲೇ ನೇಮಕಾತಿ ಬಗ್ಗೆ ಹೊರಡಿಸಿದ್ದರೆ, ಮತ್ತೊಂದರಲ್ಲಿ ವಕ್ಫ್ ಬೋರ್ಡ್ ಕಾರ್ಯದರ್ಶಿ ಹೆಸರಿನಲ್ಲಿ ಕಾಂಟ್ರಾಕ್ಟ್ ಪಡೆದ ನಕಲಿ ಆದೇಶವಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಎನ್ಎಚ್ಎಂಗಳನ್ನು (ನ್ಯಾಷನಲ್ ಹೆಲ್ತ್ ಮಿಷನ್ ಸಿಬ್ಬಂದಿ) ಒಳಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಎನ್ಎಚ್ಎಂ ನೌಕರರನ್ನು ಕಾಯಂಗೊಳಿಸಿ ಮುಖ್ಯಮಂತ್ರಿ ಅಪರ ಮುಖ್ಯ ಕಾರ್ಯದರ್ಶಿಯವರ ಹೆಸರಿನಲ್ಲಿ ನಕಲಿ ಆದೇಶ ಹೊರಡಿಸಲಾಗಿದೆ. ನಕಲಿ ಆದೇಶದ ಪ್ರತಿಯನ್ನು ದುಷ್ಕರ್ಮಿಗಳು ಆರ್ಥಿಕ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನಿಸಿದ್ದಾರೆ.
ಈ ಆದೇಶ ಕುರಿತು ನೈಜತೆ ಪರಿಶೀಲನೆ ವೇಳೆ ನಕಲಿ ಆದೇಶ ಪತ್ರ ಎಂಬುವುದು ಬೆಳಕಿಗೆ ಬಂದಿದೆ. ಸದ್ಯ ಈ ಕುರಿತು ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿ ಸಿದ್ದೇಶ ಪೊತಲಕಟ್ಟಿ ಅವರು ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದು ನಕಲಿ ಪತ್ರ
ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಕಾಲೋನಿ ಮೂಲ ಸೌಕರ್ಯಗಳ ಅಭಿವೃದ್ಧಿ ಹೆಸರಿನಲ್ಲಿ ನಕಲಿ ಆದೇಶ ಹೊರಡಿಸಲಾಗಿದೆ.
ವಕ್ಫ್ ಬೋರ್ಡ್ ಕಾರ್ಯದರ್ಶಿ ನಾಗರಾಜ್ ಅವರ ಹೆಸರಿನಲ್ಲಿ ನಕಲಿ ಆದೇಶ ಹೊರಡಿಸಲಾಗಿದ್ದು, ಈ ನಕಲಿ ಆದೇಶದಲ್ಲಿ ನಾಲ್ಕು ಕೋಟಿ ಗುತ್ತಿಗೆ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಾ.31ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ
ಸದ್ಯ ನಕಲಿ ಆದೇಶವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದ್ದ ನಕಲಿ ಗುತ್ತಿಗೆ ನಿಖಿಲ್ ವಿರುದ್ಧ ಸರ್ಕಾರಿ ವಕ್ಫ್ ಬೋರ್ಡ್ ಕಾರ್ಯದರ್ಶಿ ನಾಗರಾಜ್ ಅವರು ದೂರು ನೀಡಿದ್ದಾರೆ.
ಸದ್ಯ ಈ ಎರಡು ಪ್ರಕರಣಗಳನ್ನು ವಿಧಾನಸೌಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.