- ಜುಲೈ 2026ರ ಒಳಗಾಗಿ ‘ವಾಟರ್ ಸರ್ಪ್ಲಸ್ ಬೆಂಗಳೂರು’ ಮಾಡುವತ್ತ ಸುಧಾರಣಾ ಕ್ರಮಗಳ ಅಳವಡಿಕೆ
- ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ ಹಾಗೂ ಅಂತರ್ಜಲ ಹೆಚ್ಚಳದ ಥ್ರೀ ಪ್ಲಾನ್ ಸ್ಟ್ರಾಟೆಜಿ
“ಜುಲೈ 1ರ ಒಳಗಾಗಿ ಬೆಂಗಳೂರು(‘ವಾಟರ್ ಸಫೀಶಿಯೆಂಟ್’) ನೀರಿನ ಸಮಸ್ಯೆ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಮಂಡಳಿಯ ವತಿಯಿಂದ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಮಾರ್ಚ್ 21ರಂದು ಮಂಡಳಿಯ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ ಹಾಗೂ ಮಳೆ ನೀರು ಮರುಪೂರಣದ ಮೂರು ಪ್ರಮುಖ ಯೋಜನೆಯ ಅಡಿಯಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿದ್ದೇವೆ” ಎಂದರು.
ನೀರಿನ ಉಳಿತಾಯಕ್ಕೆ ಒತ್ತು
“ಕಾವೇರಿ ನೀರು ಹಾಗೂ ಕೊಳವೆ ಬಾವಿಗಳ ಮೂಲಕ ಲಭ್ಯವಾಗುತ್ತಿರುವ ಶುದ್ದ ನೀರಿನ ಸಮರ್ಪಕ ಬಳಕೆ ಹಾಗೂ ಅದರ ದುರ್ಬಳಕೆಯನ್ನು ತಪ್ಪಿಸಿ ಉಳಿತಾಯಕ್ಕೆ ಒತ್ತು ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾವು ಸಾರ್ವಜನಿಕರಿಗೆ ಹಲವಾರು ಸೂಚನೆಗಳನ್ನು ನೀಡಿದ್ದೇವೆ. ಕುಡಿಯುವ ನೀರನ್ನ ಅನಗತ್ಯವಾಗಿ ಬಳಕೆ ಮಾಡದಂತೆ, ವಾಹನಗಳನ್ನು ತೊಳೆಯಲು ಬಳಸದಂತೆ ಹಾಗೂ ಏರಿಯೇಟರ್ ಮತ್ತು ಫ್ಲೋ ಕಂಟ್ರೋಲ್ ಬಳಸುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಯಲ್ಲೇ ಆದಷ್ಟು ಕಡಿಮೆ ನೀರನ್ನು ಬಳಕೆ ಮಾಡುವಂತೆ ಮನವಿಯನ್ನು ಮಾಡಲಾಗಿದೆ” ಎಂದು ಹೇಳಿದರು.
ಸಂಸ್ಕರಿಸಿದ ನೀರಿನ ಬಳಕೆಗೆ ಆದ್ಯತೆ
“ಅಂತರ್ಜಲ ಕುಸಿತದ ಕಾರಣ ಎದುರಾಗಿರುವ ಅಭಾವವನ್ನು ಸರಿದೂಗಿಸುವ ಹಿನ್ನಲೆ, ಈಗಾಗಲೇ ಬಲ್ಕ್ ಯೂಸರ್ಸ್ಗಳಿಗೆ ಹಂತ ಹಂತವಾಗಿ ಶೇಕಡಾ 20ರಷ್ಟು ನೀರನ್ನು ಕಡಿತಗೊಳಿಸುವ ಸೂಚನೆ ನೀಡಿದ್ದೇವೆ. ಇದೇ ವೇಳೆ ಅವರ ಸ್ವಚ್ಚತೆ ಹಾಗೂ ಇನ್ನಿತರೆ ಅವಶ್ಯಕತೆಗಳಿಗಾಗಿ ರಿಯಾಯಿತಿ ದರದಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿದ ನೀರನ್ನು ಒದಗಿಸುತ್ತಿದ್ದೇವೆ. ಸಂಸ್ಕರಿಸಿದ ನೀರಿನ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೂ ಅಗತ್ಯವಿರುವಷ್ಟು ಸಂಸ್ಕರಿಸಿದ ನೀರನ್ನು ನೀಡಲಾಗುತ್ತಿದೆ” ಎಂದರು.
“49 ಸಂಸ್ಥೆಗಳು ಸಂಸ್ಕರಿಸಿದ ನೀರನ್ನು ಈಗಾಗಲೇ ಬಳಸುತ್ತಿವೆ. 1300 ಎಂಎಲ್ಡಿ ಅಷ್ಟು ಸಂಸ್ಕರಿಸಿದ ನೀರು ನಮಗೆ ಲಭ್ಯವಿದ್ದು ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳೂ ತಮ್ಮ ದಿನನಿತ್ಯದ ಕುಡಿಯುವ ಅವಶ್ಯಕತೆಯನ್ನು ಹೊರತುಪಡಿಸಿ ಬೇರೆ ಕಾರ್ಯಗಳಿಗೆ ಉಪಯೋಗಿಸುವಂತೆ ಸೂಚನೆಯನ್ನು ನೀಡಲಾಗಿದೆ” ಎಂದು ಮಾಹಿತಿ ನೀಡಿದರು.
ಅಂತರ್ಜಲ ಹೆಚ್ಚಳಕ್ಕೆ ಸಂಸ್ಕರಿಸಿದ ನೀರು ಕೆರೆಗಳಿಗೆ ತುಂಬಿಸುವುದು ಹಾಗೂ ಮಳೆ ನೀರು ಮರುಪೂರಣ
“ನಗರದ ಶೇಕಡಾ 40 ನೀರಿನ ಬೇಡಿಕೆಯನ್ನ ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗಿದ್ದೇವೆ. 1300 ಎಂಎಲ್ಡಿ ನೀರನ್ನು ಬಳಸಿಕೊಂಡು ಈಗಾಗಲೇ 14ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗುತ್ತಿದೆ. ಇನ್ನು ಹೆಚ್ಚಿನ ಕೆರೆಗಳನ್ನು ತುಂಬಿಸುವುದು ನಮ್ಮ ಆದ್ಯತೆಯಾಗಿದೆ. ಅದಲ್ಲದೇ, ನಮ್ಮ ವ್ಯಾಪ್ತಿಯಲ್ಲಿರುವ ಬತ್ತಿಹೋಗಿರುವ ಕೊಳವೆ ಬಾವಿಗಳನ್ನ ಬಳಸಿಕೊಂಡು ಅಂತರ್ಜಲ ಮತ್ತು ಮಳೆ ನೀರು ಮರುಪೂರಣಕ್ಕೆ ಆದ್ಯತೆಯನ್ನು ನೀಡಿದ್ದೇವೆ. ನಾವು ಉಪಯೋಗಿಸುತ್ತಿರುವಷ್ಟು ಅಂತರ್ಜಲವನ್ನು ಮರುಪೂರಣಗೊಳಿಸಬೇಕು. ಇದಕ್ಕಾಗಿ ಪ್ರತಿಯೊಂದು ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಸಂಧರ್ಭದಲ್ಲಿ ನಾವು 2 ಇಂಗುಗುಂಡಿಗಳನ್ನ ನಿರ್ಮಿಸುವುದನ್ನ ಕಡ್ಡಾಯಗೊಳಿಸಲಿದ್ದೇವೆ. ಇದನ್ನ ಸರಕಾರಿ ಸಂಸ್ಥೆಯಾದ ನಮ್ಮಿಂದಲೇ ಪ್ರಾರಂಭಿಸುತ್ತೇವೆ” ಎಂದು ಹೇಳಿದರು.
“2024ರ ಜುಲೈ 1 ರ ಒಳಗಾಗಿ ಬೆಂಗಳೂರನ್ನು ವಾಟರ್ ಸಫೀಶಿಯೆಂಟ್ ಮಾಡುವುದು ಹಾಗೂ ಜುಲೈ 2026ರ ಒಳಗಾಗಿ ಬೆಂಗಳೂರನ್ನ ವಾಟರ್ ಸರ್ಪ್ಲಸ್ ಮಾಡುವುದು ನಮ್ಮ ಗುರಿಯಾಗಿದೆ. ಈ ಎಲ್ಲ ಪ್ರಮುಖ ಯೋಜನೆಗಳ ಆಧಾರದ ಮೇಲೆ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದೇವೆ. ಈ ಅಭಿಯಾನದಲ್ಲಿ ನೀರಿನ ಉಳಿತಾಯ ಹಾಗೂ ಅದರಿಂದಾಗುವ ಗಳಿಕೆಯ ಬಗ್ಗೆಯೂ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಿದ್ದೇವೆ” ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಟ್ರೋ ಹಳಿಗೆ ಜಿಗಿದು ಯುವಕ ಆತ್ಮಹತ್ಯೆ
ಮುಂದಿನ ವಾರದಿಂದ ನೀರಿನ ದುರ್ಬಳಕೆಯ ವಿರುದ್ದ ದಂಡ ವಿಧಿಸುವ ಅಭಿಯಾನ
“ನೀರಿನ ದುರ್ಬಳಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಸಾರ್ವಜನಿಕರಿಗೆ ಗೈಡ್ಲೈನ್ಸ್ ಕೊಡಲಾಗಿತ್ತು. ಆದರೂ ಕೆಲ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಇನ್ನೂ ನೀರಿನ ದುರ್ಬಳಕೆಯನ್ನು ಮುಂದುವರೆಸಿದ್ದಾರೆ ಎನ್ನುವ ದೂರುಗಳು ಮಂಡಳಿಗೆ ಬಂದಿವೆ. ಈ ಹಿನ್ನೆಲೆ, ಜನರಿಗೆ ಇನ್ನಷ್ಟು ತಿಳುವಳಿಕೆಯನ್ನು ನೀಡುವ ಉದ್ದೇಶದಿಂದ ದಂಡ ವಿಧಿಸುವ ಅಭಿಯಾನವನ್ನು ಪ್ರಾರಂಭಿಸಲಾಗುವುದು” ಎಂದು ಹೇಳಿದರು.
“ನಮ್ಮ ಈ ಎಲ್ಲ ಕ್ರಮಗಳು ಜಲಮಂಡಳಿಯನ್ನು ಶ್ರೀಮಂತಗೊಳಿಸುವುದಕ್ಕೆ ಅಲ್ಲ, ನಗರವನ್ನು ನೀರಿನ ಲಭ್ಯತೆಯಲ್ಲಿ ಶ್ರೀಮಂತಗೊಳಿಸುವುದಾಗಿದೆ. ಸಾರ್ವಜನಿಕರು ಇಂತಹ ಸಂಕಷ್ಟ ಕಾಲದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಜಲಮಂಡಳಿಯ ಜೊತೆ ಕೈಜೋಡಿಸಬೇಕು” ಎಂದರು.