ಶ್ವಾನಗಳಲ್ಲಿಯೇ ಅತ್ಯಂತ ಅಪಾಯಕಾರಿ ಮತ್ತು ಕ್ರೂರವಾಗಿರುವ 23 ತಳಿಗಳ ನಾಯಿಗಳ ಸಂತಾನೋತ್ಪತ್ತಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿ ಆದೇಶಿಸಿತ್ತು. ಇದೀಗ, ಈ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಭಾರತ ಸರ್ಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು 2024ರ ಮಾರ್ಚ್ 12 ರಂದು ಹೊರಡಿಸಿದ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನಲ್ಲಿ ವಾಸವಿರುವ ಕಿಂಗ್ ಸೋಲ್ಮನ್ ಡೇವಿಡ್ ಮತ್ತು ಮರ್ಡೋನಾ ಜಾನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಅಮೆರಿಕನ್ ಸ್ಟಾಫರ್ಡ್ ಶೈರ್, ಟೆರಿಯರ್, ಡೋಗೋ ಅರ್ಜೆಂಟೇನೋ, ಬುಲ್ ಡಾಗ್, ಕಂಗಲ್, ಸೆಂಟ್ರಲ್ ಏಷ್ಯನ್ ಷಫರ್ಡ್ ಡಾಗ್ ಸೇರಿದಂತೆ ಕ್ರೂರ ಹಾಗೂ ಅಪಾಯಕಾರಿ ಶ್ವಾನಗಳ ತಳಿಗಳ ಸಂತಾನೋತ್ಪತ್ತಿ ನಿಷೇಧಿಸುವ ಸಲುವಾಗಿ ಅವುಗಳ ಮಾಲೀಕರು ಸಂತಾನಹರಣಕ್ಕಾಗಿ ಅಗತ್ಯವಿರವ ಕ್ರ್ರಿಮಿನಾಶಕಗಳನ್ನು ಬಳಕೆ ಮಾಡಬೇಕು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ 2024ರ ಮಾರ್ಚ್ 12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಸುತ್ತೋಲೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮತ್ತು ಕರ್ನಾಟಕ ಮುಖ್ಯ ಕಾರ್ಯದರ್ಶಿ ಹಾಗೂ ಕೆನಲ್ ಕ್ಲಬ್ ಆಫ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದ್ದಾರೆ.
ಅರ್ಜಿ ವಿಚಾರಣೆ ವೇಳೆ, “ಮನುಷ್ಯನ ಜೀವಕ್ಕೆ ಅಪಾಯಕಾರಿ ಮತ್ತು ಉಗ್ರ ರೀತಿಯಲ್ಲಿ ವರ್ತನೆ ತೋರುವ ತಳಿಯ ಶ್ವಾನಗಳನ್ನು ಗುರುತಿಸುವುದಕ್ಕೆ ಆಳವಾದ ಅಧ್ಯಯನದ ಅಗತ್ಯವಿದೆ. ಆದರೆ, ಸುತ್ತೋಲೆಯಲ್ಲಿ ಉಲ್ಲೇಖಿಸದ ಹಲವು ತಳಿಗಳು ಕ್ರೂರ ವರ್ಗಕ್ಕೆ ಸೇರಲಿವೆ” ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ವಿವರಿಸಿದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸೇಟರ್ ಜನರಲ್, “ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ದೆಹಲಿ ನ್ಯಾಯಾಲಯ ಈ ಸಂಬಂಧ ನಿರ್ದೇಶನ ನೀಡಿದೆ. ಅಲ್ಲದೆ, ಕೇಂದ್ರ ಸರ್ಕಾರ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಬೇಕು. ಅರ್ಜಿದಾರರ ಮನವಿಯನ್ನು ಪರಿಗಣಿಸಿ ಆದೇಶದ ಪ್ರತಿ ಲಭ್ಯವಾದ ಮೂರು ತಿಂಗಳೊಳಗೆ ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ. ಈ ಹಿನ್ನೆಲೆ, ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ” ಎಂದು ತಿಳಿಸಿದರು.
ದೆಹಲಿ ಹೈಕೋರ್ಟ್ ಆದೇಶದಲ್ಲಿ ಅಪಾಯಕಾರಿ ಶ್ವಾನಗಳ ತಳಿ ನಿಷೇಧಿಸುವ ಕುರಿತಂತೆ ಸಂಬಂಧಪಟ್ಟ ಎಲ್ಲ ಪಾಲುದಾರರೊಂದಿಗೆ ಚರ್ಚೆ ನಡೆಸಬೇಕು. ಅಲ್ಲದೇ, ಕೆನ್ನೆಲ್ ಕ್ಲಬ್ ಆಫ್ ಇಂಡಿಯಾ ಕೂಡಾ ಒಂದಾಗಿದ್ದು, ಈ ಕ್ಲಬ್ನ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಬೇಕು. ಆದರೆ, ಆ ಕೆಲಸ ಆಗಿಲ್ಲ. ಹೀಗಾಗಿ, ಕೇಂದ್ರದ ಪರ ವಕೀಲರು ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಪರಿಗಣಿಸಿರುವ ಎಲ್ಲ ಅಂಶಗಳಿರುವ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲಿಯವರೆಗೂ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗುವಂತೆ ಸುತ್ತೋಲೆಗೆ ತಡೆ ನೀಡುತ್ತಿರುವುದಾಗಿ ಕೋರ್ಟ್ ಆದೇಶಿಸಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಎಲ್ಲ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಕಡ್ಡಾಯ : ಅಲೋಕ್ ಕುಮಾರ್ ಆದೇಶ
ಅಪಾಯಕಾರಿ ಎಂದು ಹೆಸರಿಸಲಾದ ನಾಯಿಗಳು
ಪಿಟ್ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೋಗೊ ಅರ್ಜೆಂಟಿನೋ, ಅಮೇರಿಕನ್ ಬುಲ್ಡಾಗ್, ಬೋರ್ಬೋಲ್, ಕಂಗಲ್, ಸೆಂಟ್ರಲ್ ಏಷ್ಯನ್ ಶೆಫರ್ಡ್ ಡಾಗ್, ಕಕೇಶಿಯನ್ ಶೆಫರ್ಡ್ ಡಾಗ್, ಸೌತ್ ರಷ್ಯನ್ ಶೆಫರ್ಡ್ ಡಾಗ್, ಟೊರ್ನ್ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ, ಅಕಿಟಾಟ್, ಮಾ ಟೆರಿಯರ್ಗಳು, ರೊಡೇಸಿಯನ್ ರಿಡ್ಜ್ಬ್ಯಾಕ್, ವುಲ್ಫ್ ಡಾಗ್ಸ್, ಕೆನರಿಯೊ, ಅಕ್ಬಾಶ್ ಡಾಗ್, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ, ಮತ್ತು ಸಾಮಾನ್ಯವಾಗಿ ಬಂದೋಗ್ ಎಂದು ಕರೆಯಲ್ಪಡುವ ಪ್ರತಿಯೊಂದು ನಾಯಿ.
ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು 2024ರ ಏಪ್ರಿಲ್ 5ಕ್ಕೆ ಮುಂದೂಡಿತು.