ಸಿವಿಲ್ ವ್ಯಾಜ್ಯಗಳಲ್ಲಿ ಬಡವರಿಗೆ ಇನ್ನು ಆರು ತಿಂಗಳೊಳಗೆ ನ್ಯಾಯ ಸಿಗಲಿದೆ. ಬಡವರು, ಸಣ್ಣರೈತರು, ದುರ್ಬಲ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದವರ ವ್ಯಾಜ್ಯಗಳನ್ನು ಆದ್ಯತೆ ಮೇರೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸುವ ‘ಸಿವಿಲ್ ಪ್ರಕ್ರಿಯೆ ಸಂಹಿತೆ(ತಿದ್ದುಪಡಿ) ಮಸೂದೆ-2023’ಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದು, ಸೋಮವಾರ(ಮಾರ್ಚ್ 4)ರಂದು ರಾಜ್ಯದಲ್ಲಿ ಜಾರಿಗೆ ಬಂದಿದೆ.
ಕಾನೂನು ಸಚಿವ ಎಚ್ ಕೆ ಪಾಟಿಲ್ ಇದನ್ನು ಖಚಿತಪಡಿಸಿದ್ದು, “ಕೆಳಹಂತದ ನ್ಯಾಯಾಲಯಗಳಿಂದ ಹಿಡಿದು ಹೈಕೋರ್ಟ್ವರೆಗೂ ಇದು ಅನ್ವಯವಾಗುತ್ತದೆ. ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಡವರು, ಸಣ್ಣರೈತರು, ದುರ್ಬಲ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದವರ ವ್ಯಾಜ್ಯಗಳು 5 ರಿಂದ 10 ವರ್ಷಕ್ಕೂ ಹೆಚ್ಚು ಕಾಲದಿಂದ ಇತ್ಯರ್ಥವಾಗದೇ ಬಾಕಿ ಉಳಿದಿವೆ. ಸಕಾಲದಲ್ಲಿ ನ್ಯಾಯದಾನ ಮಾಡದೇ ತಡ ಮಾಡುವುದು ದ್ರೋಹ ಬಗೆಯುವುದಕ್ಕೆ ಸಮ ಎಂಬುದನ್ನು ಗಮನಿಸಿದ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ” ಎಂದು ಹೇಳಿದರು.
ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ ಪ್ರಕಾರ 6 ತಿಂಗಳ ಒಳಗೆ ನ್ಯಾಯದಾನ ಪಡೆಯಬಹುದಾದ ಫಲಾನುಭವಿಗಳು ಯಾರೆಂಬುದನ್ನು ಸ್ಪಷ್ಟ ವಿವರಣೆಯನ್ನು ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ ನೀಡಿದೆ.
- ಆರ್ಥಿಕವಾಗಿ ದುರ್ಬಲರು ಅಂದರೆ ಎಲ್ಲ ಮೂಲಗಳು ಸೇರಿ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಮೀರಿರದ ವ್ಯಕ್ತಿ.
- ಎರಡು ಹೆಕ್ಟೇರ್ ಒಣಬೇಸಾಯ ಭೂಮಿ ಇರುವವರು ಒಂದೂ ಕಾಲು ಹೆಕ್ಟೇರ್ ಮಳೆಯಾಶ್ರಿತ ಜಮೀನು ಹೊಂದಿರುವವರು.
- ನೀರಾವರಿ ಬೆಳೆ ಬೆಳೆಯಲು ಅಥವಾ ಕಬ್ಬು, ದ್ರಾಕ್ಷಿ, ತೆಂಗು, ಅಡಕೆ, ರೇಷ್ಮೆ ಬೆಳೆಯುವುದಕ್ಕಾಗಿ ಅರ್ಧ ಎಕರೆ ಭೂಮಿ ಹೊಂದಿರುವವರು.
- ದೀರ್ಘಕಾಲಿಕ ನೀರಾವರಿ ಸೌಲಭ್ಯ ಹೊಂದಿರುವ ಅಥವಾ ವರ್ಷದಲ್ಲಿ ಒಂದಕ್ಕಿಂತ ಹೆಚ್ಚುವರಿ ನೀರಾವರಿ ಬೆಳೆ ಬೆಳೆಯುವ ಸೌಲಭ್ಯಗಳಿರುವ ಕಾಲು ಹೆಕ್ಟೇರ್ ಭೂಮಿ ಹೊಂದಿರುವವರು ಸಿವಿಲ್ ಪ್ರಕ್ರಿಯಾ ಸಂಹಿತೆ ಕಾಯ್ದೆ ಪ್ರಕಾರ 6 ತಿಂಗಳ ಒಳಗೆ ನ್ಯಾಯದಾನ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
“ಕಾನೂನು ತಜ್ಞರು, ವಕೀಲರು ಮತ್ತು ಸಂಬಂಧಿಸಿದ ಇತರ ತಜ್ಞರ ಜತೆ ಸಮಾಲೋಚನೆ ನಡೆಸಿ 2023ರ ಜುಲೈನಲ್ಲಿ ಮಸೂದೆಗೆ ತಿದ್ದುಪಡಿ ತರಲಾಯಿತು. ಆ ಬಳಿಕ ವಿಧಾನ ಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದೇ ಅದನ್ನು ರಾಷ್ಟ್ರಪತಿಯವರಿಗೆ ಕಳುಹಿಸಿದ್ದರು. ಈ ಮಸೂದೆಗೆ ರಾಷ್ಟ್ರಪತಿಯವರು ಫೆಬ್ರವರಿಯಲ್ಲಿ ಅಂಕಿತ ಹಾಕಿದ್ದು, ಈಗ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ” ಎಂದು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
“ಕಾಯ್ದೆಯ ಅನುಷ್ಠಾನಕ್ಕೆ ಅಗತ್ಯವಿರುವ ಮಾರ್ಗಸೂಚಿಯೊಂದನ್ನು ಹೊರಡಿಸಲಾಗಿದೆ. ನ್ಯಾಯಾಲಯಗಳು ನಿತ್ಯವೂ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಬಡವರು, ಸಣ್ಣರೈತರು, ದುರ್ಬಲ ವರ್ಗದವರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಮೇವಿನ ಕೊರತೆ; ಜಾನುವಾರುಗಳ ಮಾರಾಟಕ್ಕೆ ಮುಂದಾದ ರೈತರು
“ಈಗ ಹೊಸ ಕಾನೂನು ಜಾರಿಯಾದ ಕಾರಣ ನ್ಯಾಯಾಲಯಗಳ ಮೇಲೆ ಸ್ವಲ್ಪಮಟ್ಟಿಗೆ ಒತ್ತಡ ಆಗಬಹುದು. ತ್ವರಿತ ನ್ಯಾಯದಾನದ ವಿಚಾರದಲ್ಲಿ ಈ ಹೊಸ ಕ್ರಮದ ಅಗತ್ಯವಿತ್ತು. ಸಿವಿಲ್ ಪ್ರಕರಣಗಳ ಪೈಕಿ ಸರ್ಕಾರಕ್ಕೆ ಸಂಬಂಧಿಸಿದ್ದು ಶೇ.30 ರಿಂದ ಶೇ.40ರಷ್ಟು ಇದ್ದರೆ, ಕೈಗಾರಿಕೆಗಳು ಮತ್ತು ರಿಯಲ್ಎಸ್ಟೇಟ್ಗೆ ಸಂಬಂಧಿಸಿದ ಶೇ.25ರಷ್ಟು ಪ್ರಕರಣಗಳಿವೆ” ಎಂದು ಸಚಿವ ಎಚ್ ಕೆ ಪಾಟಿಲ್ ವಿವರಿಸಿದರು.