“ಶಾಸಕರು, ಸಚಿವರ ಒಡೆತನದ ಖಾಸಗಿ ಶಾಲೆ, ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ಶಾಲೆ, ಆಸ್ಪತ್ರೆಗಳನ್ನು ಕಡೆಗಣಿಸಲಾಗುತ್ತಿದೆ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.
ಚಿಕ್ಕಮಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದು 7 ತಿಂಗಳಾಗಿದೆ. ಆರೋಗ್ಯ ಸೇವೆಗಾಗಿ ₹600 ಕೋಟಿ ಬಿಡುಗಡೆಯಾಗಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳಿಗೆ ಒಂದೇ ಒಂದು ಮಾತ್ರೆ ಬಂದಿಲ್ಲ. ಜನರು ಹೊರಗಡೆ ದುಬಾರಿ ಬೆಲೆ ಕೊಟ್ಟು ಔಷಧಿ ಖರೀದಿಸುವ ಸ್ಥಿತಿ ಇದೆ. ರಾಜ್ಯದಲ್ಲಿ ಆಸ್ಪತ್ರೆ ಸ್ಥಿತಿ ದುಸ್ತರವಾಗಿದೆ. ಹಣ ಬಿಡುಗಡೆ ಮಾಡಲು ಕಿಕ್ಬ್ಯಾಕ್ ಆರೋಪ ಇದೆ” ಎಂದರು.
ಸಿದ್ದರಾಮಯ್ಯನವರ ಕನ್ನಡ ಪ್ರೇಮ ಇಷ್ಟೇನಾ?
“ಇಂದು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಪರ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯನವರಿಗೆ ಇದರ ಬಗ್ಗೆ ಕಾಳಜಿ ಇಲ್ಲವಾ? ನಿಮ್ಮ ಶಾಸಕರು, ಸಚಿವರಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ಆಸ್ಪತ್ರೆ, ಶಾಲೆಗಳನ್ನು ಕಡೆಗಣಿಸುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸದಸ್ಯರು, ಅಧ್ಯಕ್ಷರು, ಪದಾಧಿಕಾರಿಗಳ ನೇಮಕವಾಗಿಲ್ಲ. ಅಲ್ಲಿ ಹಣ ಇಲ್ಲ. ಸರ್ಕಾರಿ ಕಾರ್ಯಕ್ರಮಕ್ಕೆ ಬರುವ ಕಲಾವಿದರಿಗೆ ಸರಿಯಾಗಿ ಹಣ ಕೊಟ್ಟಿಲ್ಲ, ಮೊದಲು ಅವರಿಗೆ ಹಣ ನೀಡಿ” ಎಂದರು.
“ತಾವು ಭ್ರಷ್ಟಾಚಾರ ವಿರೋಧಿಗಳು ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದರೆ ಈಶ್ವರಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟರು, ಮಾಡಾಳ್ ವಿರೂಪಾಕ್ಷಪ್ಪನವರನ್ನು ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಲಾಗಿತ್ತು. ಇವೆಲ್ಲಾ ಕಣ್ಮುಂದೆ ಇರುವಾಗ ಪ್ರಧಾನಿ ಮೋದಿಯವರು ಹೇಗೆ ತಾವು ಭ್ರಷ್ಟಾಚಾರ ವಿರೋಧಿಸುವುದಾಗಿ ಹೇಳುತ್ತಾರೆ ಎಂದು ಪ್ರಶ್ನಿಸಿದರು. ಆಮ್ ಆದ್ಮಿ ಪಕ್ಷದ ನಾಯಕರ ಮನೆಯಲ್ಲಿ ಒಂದು ರೂಪಾಯಿ ಸಿಕ್ಕಿಲ್ಲ. ಅಂದರೂ ನಾನಾ ತನಿಖಾ ಸಂಸ್ಥೆಗಳನ್ನು ಬಳಸಿ ಮಟ್ಟ ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ” ಎಂದರು.
“ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇದೆ. ಇನ್ನು ಜೆಡಿಎಸ್ ಬಗ್ಗೆ ಮಾತನಾಡುವುದೇ ಬೇಡ. ಮನೆಯಲ್ಲಿ ಎಲ್ಲರಿಗೂ ಒಂದೊಂದು ಹುದ್ದೆ ನೀಡಲಾಗಿದೆ. ಜನಸಾಮಾನ್ಯರು ಶಾಸಕರು, ಸಂಸದರು ಆಗಲು ಸಾಧ್ಯವಿಲ್ಲವಾ ಎಂದು ಜನರನ್ನು ಕೇಳುತ್ತೇನೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪೊಲೀಸರನ್ನು ಆಟವಾಡಿಸಲು ರಾಜಭವನಕ್ಕೆ ಬಾಂಬ್ ಬೆದರಿಕೆ: ಬಂಧನ
“ರಾಜ್ಯದಲ್ಲಿ ಬರ ಬಂದಿದ್ದು ರೈತರು ಸಮಸ್ಯೆಗಳಿಗೆ ಸಿಲುಕಿದ್ದಾರೆ. ರೈತರ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೇನೆ. ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಅವರಿಗೆ ಸರಿಯಾದ ಸಮಯಕ್ಕೆ ಕಾರ್ಖಾನೆಗಳು ಹಣ ನೀಡುತ್ತಿಲ್ಲ. ಪಂಜಾಬ್ನಲ್ಲಿ ಕಬ್ಬಿಗೆ ₹3,800 ಬೆಂಬಲೆ ಬೆಲೆ ನೀಡಲಾಗುತ್ತಿದೆ. ಒಂದೇ ವಾರದಲ್ಲಿ ಹಣ ಸಿಗುತ್ತಿದೆ. ರಾಜ್ಯದಲ್ಲಿ ₹2,700 ಮಾತ್ರ ಬೆಲೆ ಇದ್ದು, ತೂಕದಲ್ಲಿ ಕೂಡ ಮೋಸ ಮಾಡಲಾಗುತ್ತಿದೆ. ಸರ್ಕಾರವೇ ಸಕ್ಕರೆ ಕಾರ್ಖಾನೆ ಮುಂದೆ ವೇ ಬ್ರಿಡ್ಜ್ ಸ್ಥಾಪಿಸಲಿ” ಎಂದು ಒತ್ತಾಯಿಸಿದರು.
ಬರಗಾಲ ಘೋಷಣೆ ಮಾಡದೆ ತಾರತಮ್ಯ
ಚಿಕ್ಕಮಗಳೂರು ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ, ತಾಲ್ಲೂಕು ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು ಭಾಗವಹಿಸುವ ಮೂಲಕ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಚಂದ್ರು ರವರು ಭಾಗವಹಿಸಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಹಲವು ತಾಲೂಕುಗಳನ್ನು ಬರಗಾಲ ಘೋಷಣೆ ಮಾಡದೆ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಸರಿ ಇಲ್ಲ ಎಂದು ಸರ್ಕಾರದ ನಿಲುವನ್ನು ಖಂಡಿಸಿದರು.