ಅನಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ ಪಡೆದಿರುವ ಪಿಜಿಗಳ ವಿರುದ್ದ ಕ್ರಮ ಕೈಗೊಂಡು ವಾರದೊಳಗೆ ವರದಿ ಸಲ್ಲಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಏಪ್ರಿಲ್ 5ರಂದು ನೇರ ಫೋನ್ ಇನ್ ಕಾರ್ಯಕ್ರಮ ನಡೆಸಿದ ಅವರು, ನೀರು ಮತ್ತು ಒಳಚರಂಡಿ ಕುರಿತ ನಾನಾ ಅಹವಾಲುಗಳನ್ನು ಆಲಿಸಿದರು. ಸಾರ್ವಜನಿಕರು ತಮ್ಮ ವಲಯ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಗಳ ಕುರಿತು ಅಧ್ಯಕ್ಷರಿಂದ ನೇರವಾಗಿ ಪರಿಹಾರ ಪಡೆದುಕೊಂಡರು.
ಕಾಡುಗೋಡಿ ವಾರ್ಡ್ ಅಂಬೇಡ್ಕರ್ ನಗರದಲ್ಲಿ ಅನಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ ಪಡೆದಿರುವ 43 ಜನರು ಪಿಜಿಗಳನ್ನು ನಡೆಸುತ್ತಿದ್ದಾರೆ ಎಂದು ನಿವಾಸಿಯೊಬ್ಬರು ಅಧ್ಯಕ್ಷರಿಗೆ ದೂರವಾಣಿ ಮೂಲಕ ದೂರು ನೀಡಿದರು.
ಇದಕ್ಕೆ ಸ್ಪಂದಿಸಿದ ಜಲಮಂಡಳಿ ಅಧ್ಯಕ್ಷರು, “ನಗರದ ಹಲವಾರು ಭಾಗಗಳಿಂದ ಇಂತಹ ದೂರುಗಳು ಬರುತ್ತಿವೆ. ವಾಣಿಜ್ಯ ಉದ್ದೇಶದ ಸಂಪರ್ಕ ಪಡೆದುಕೊಂಡು ಪಿಜಿಗಳನ್ನು ನಡೆಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅನಧಿಕೃತವಾಗಿ ನೀರಿನ ಮತ್ತು ಒಳಚರಂಡಿ ಸಂಪರ್ಕ ಪಡೆದುಕೊಳ್ಳುವುದು ಹಾಗೂ ಆ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು ಸರಿಯಲ್ಲ. ಇದರಿಂದ ಜಲಮಂಡಳಿಗೆ ನಷ್ಟವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಒಂದು ವಾರದೊಳಗೆ ಈ ಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ನೀಡಬೇಕು” ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
“ದಾಖಲಾದ ದೂರಗಳನ್ನ ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಇದನ್ನ ಖಚಿತ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು ದೂರುಗಳನ್ನು ಲಿಖಿತ ರೂಪದಲ್ಲಿ ಸಂಬಂಧ ಪಟ್ಟ ಮುಖ್ಯ ಇಂಜಿನೀಯರ್ಗಳಿಗೆ ಕಳುಹಿಸಿಕೊಡಬೇಕು. ಸಮಸ್ಯೆಗಳನ್ನು ಪರಿಹರಿಸಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ವಾರದೊಳಗೆ ವರದಿಯನ್ನು ಸಲ್ಲಿಸಬೇಕು” ಎಂದು ಸೂಚನೆ ನೀಡಿದರು.
“ಹಾರೋಹಳ್ಳಿಯ ಮಾಗಡಿ ರಸ್ತೆ ಬಳಿಯ ತುಂಗಭದ್ರಾ ಬಡಾವಣೆ ನಿವಾಸಿ ವಿದ್ಯಾ ಅವರು ಬೆಂಗಳೂರು ಜಲಮಂಡಳಿಯ ಕೊಳವೆ ಬಾವಿಯಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇನ್ನಷ್ಟು ಆಳಕ್ಕೆ ಕೊರೆಯಿಸಿದಲ್ಲಿ ನೀರಿನ ಪ್ರಮಾಣ ಹೆಚ್ಚಿಗೆಯಾಗುತ್ತದೆ. ಮೊದಲಿನ ಪ್ರಮಾಣದಲ್ಲಿ ನೀರು ನಮ್ಮ ಬಡಾವಣೆ ಜನರಿಗೆ ಸಿಗುತ್ತದೆ. ಈ ಮೂಲಕ ಅನುಕೂಲವಾಗುತ್ತದೆ ಎನ್ನುವುದನ್ನ ಅಧ್ಯಕ್ಷರ ಗಮನಕ್ಕೆ ತಂದರು. ಇಂದೇ ಆ ಕೊಳವೆ ಬಾವಿಗೆ ಅಗತ್ಯವಿರುವ ಹೆಚ್ಚಿನ ಪೈಪ್ ಅಳವಡಿಸಿ” ಎಂದು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅನಿರೀಕ್ಷಿತವಾಗಿ ಬೈಕ್ ಸವಾರನಿಗೆ ಗುದ್ದಿದ್ದ ಕೋಲೆ ಬಸವ: ವಿಡಿಯೋ ವೈರಲ್
ವಿಲ್ಸನ್ ಗಾರ್ಡ್ನ ಬಳಿಯ ಬಿಟಿಎಸ್ ರಸ್ತೆಯ ಬಳಿ ಜಲಮಂಡಳಿ ಪೈಪ್ ನಿಂದ ನೀರು ಸೋರಿಕೆಯಾಗುತ್ತಿದೆ ಎಂದು ವೀಣಾ ಅವರು ದೂರು ನೀಡಿದರು. ನೀರು ಸೋರಿಕೆಯ ತಡೆಯಲು ಇಂದೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅಧ್ಯಕ್ಷರು, ವಾರದೊಳಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ 1916 ಗೆ ದೂರು ನೀಡುವಂತೆ ವೀಣಾ ವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ, ಮುಖ್ಯ ಎಂಜನಿಯರ್ಗಳಾದ ಎಲ್.ಕುಮಾರನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ್ ಕೆ.ಎನ್., ಗಂಗಾಧರ್ ಬಿ.ಸಿ., ದೇವರಾಜು ಎಂ., ಜಯಶಂಕರ್, ಅಪರ ಮುಖ್ಯ ಎಂಜನಿಯರ್ ಮಧುಸೂಧನ್ ಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.