ತಾಪಮಾನ ಹೆಚ್ಚಳದಿಂದ ಬಸವಳಿದ್ದಿದ್ದ ರಾಜ್ಯದ ಜನತೆಗೆ ತಡವಾಗಿ ಆರಂಭವಾದ ಪೂರ್ವ ಮುಂಗಾರು ಮಳೆ ತಂಪೆರೆದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಮಳೆಯಾಗಿದೆ. ಇದೀಗ, ಶನಿವಾರ ಬೆಳಿಗ್ಗೆಯೇ ರಾಜ್ಯದ ಹಲವೆಡೆ ಮಳೆ ಆರಂಭವಾಗಿದೆ.
ಶನಿವಾರ ರಾಜ್ಯದ ಹಲವೆಡೆ ಮಳೆ
ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಶನಿವಾರ ಬೆಳಿಗ್ಗೆಯಿಂದ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಿದೆ. ಉಳಿದಂತೆ ಚಿಕ್ಕಮಗಳೂರು, ಶಿವಮೊಗ್ಗ, ಯಾದಗಿರಿ, ವಿಜಯನಗರ, ಗದಗ, ಬೆಳಗಾವಿ, ಧಾರವಾಡದಲ್ಲಿ ಶನಿವಾರ ಬೆಳಗ್ಗೆಯಿಂದ ಮಳೆಯಾಗುತ್ತಿದೆ. ಸದ್ಯ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಪೂರ್ವ ಮುಂಗಾರು ಮಳೆ ತಂಪೆರೆದಿದೆ.
ಹೊಸಪೇಟೆ, ಹೂವಿನಹಡಗಲಿ, ಕೂಡ್ಲಿಗಿ ಭಾಗದಲ್ಲಿ ತುಂತುರು ಮಳೆಯಾಗಿದೆ. ಯಾದಗಿರಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಉಡುಪಿಯಲ್ಲಿ ನಸುಕಿನ ಜಾವ ಎರಡು ಗಂಟೆಗೂ ಹೆಚ್ಚು ಅವಧಿ ಭಾರೀ ಮಳೆಯಾಗಿದೆ. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಬೆಳ್ಳಿಗೆಯಿಂದಲೇ ಮಳೆಯಾಗುತ್ತಿದೆ. ಚಿಕ್ಕೋಡಿಯಲ್ಲಿಯೂ ಮಳೆಯಾಗುತ್ತಿದೆ.
ನಾಲ್ಕೈದು ತಿಂಗಳ ಬೆಂಗಳೂರಿನಲ್ಲಿ ಮಳೆ
ಸುಮಾರು ನಾಲ್ಕೈದು ವರ್ಷದ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ತುಂತುರು ಮಳೆ ಸುರಿದಿದೆ. ಕಳೆದ ವರ್ಷ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ಕೊನೆಯದಾಗಿ ಮಳೆ ಸುರಿದಿತ್ತು. ಯಲಹಂಕ, ಕೆಂಗೇರಿ, ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು, ಡಾಬಸ್ ಪೇಟೆಯ ಭಾಗದಲ್ಲಿ ಕೆಲಕಾಲ ಮಳೆಯಾಗಿದೆ. ಇನ್ನುಳಿದ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ.
ಕುಂಬಳಗೋಡು, ನಾಗದೇವನಹಳ್ಳಿ, ಹುಣಸಮಾರನಹಳ್ಳಿ, ಅರಕೆರೆ, ರಾಜಾಧಿನುಕುಂಟೆ, ಬೆಟ್ಟ ಹಲಸೂರು, ಸೊನ್ನಪ್ಪನಹಳ್ಳಿ, ಯಲಹಂಕ ವ್ಯಾಪ್ತಿಯ ಕೆಲವು ಕಡೆ ಸಂಜೆ 5 ಗಂಟೆ ಸುಮಾರಿಗೆ ತುಂತುರು ಮಳೆಯಾಗಿದೆ. ಬ್ಯಾಟರಾಯನಪುರ ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲೂ ಮಳೆಯಾಗಿದೆ.
ಈ ಮೂಲಕ ತೀವ್ರ ಶಾಖದ ಅಲೆ ಮತ್ತು ನೀರಿನ ಕೊರತೆಯಿಂದ ತತ್ತರಿಸುತ್ತಿರುವ ನಗರದ ಜನರಿಗೆ ಅಲ್ಪ ಸಮಾಧಾನ ನೀಡಿತು. ಆದರೆ, ಬಹುತೇಕ ಭಾಗ ಬಿಸಿಗಾಳಿ ವಾತಾವರಣ ಮುಂದುವರೆದಿತ್ತು.
ಗದಗದಲ್ಲಿ ಬೆಳಿಗ್ಗೆಯೆ ಶುರುವಾದ ಮಳೆ..
ಮಳೆಯಿಂದ ತಂಪಾದ ಇಳೆ… pic.twitter.com/xOoEp5B0fu— ಪ್ರಕಾಶ್ (@hsaka1310) April 20, 2024
ಶಿವಮೊಗ್ಗದಲ್ಲಿ ಸಿಡಿಲು ಬಡಿದು ರೈತ ಸಾವು
ಶಿವಮೊಗ್ಗ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಗುಡುಗ ಸಹಿತ ನಿರಂತರವಾಗಿ ಜೋರು ಮಳೆಯಾಗುತ್ತಿದೆ. ಇದರಿಂದ ತಾಪಮಾನ ತಗ್ಗಿದ್ದು, ವಾತಾವರಣ ತಂಪಾಗಿದೆ. ಶುಕ್ರವಾರ ಸಂಜೆ ಕೆಲವು ಹೊತ್ತು ಜೋರು ಮಳೆಯಾಗಿತ್ತು. ಆದರೆ ಮಧ್ಯರಾತ್ರಿಯಿಂದ ಮಳೆ ಅಬ್ಬರ ಜೋರಾಗಿದೆ. ಗುಡುಗು, ಮಿಂಚು ಕೂಡ ಹೆಚ್ಚಾಗಿದೆ. ಸಾಗರ, ಸೊರಬ, ಭದ್ರಾವತಿ, ಶಿಕಾರಿಪುರದಲ್ಲಿಯು ಗುಡುಗು ಸಹಿತ ಮಳೆಯಾಗುತ್ತಿದೆ.
ಇನ್ನು ಶಿವಮೊಗ್ಗ ಜಿಲ್ಲೆಯ ಹರಮಘಟ್ಟ ಗ್ರಾಮದಲ್ಲಿ ರೈತರೊಬ್ಬರಿಗೆ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ, ಸಿಡಿಲು ಬಡಿದು ರಾಕೇಶ್ ಎಂಬುವವರು ಸಾವನ್ನಪ್ಪಿದ್ದಾರೆ.
ಬೀದರ್ನಲ್ಲಿ ಸಿಡಿಲು ಬಡಿದು ರೈತ ಮಹಿಳೆ ಸಾವು
ಹಾಗೆಯೇ, ಬೀದರ್ನಲ್ಲಿಯೂ ಸಿಡಿಲು ಬಡಿದು ಒರ್ವ ರೈತ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಬೀದರ್ ತಾಲೂಕಿನ ಬರೂರ ಗ್ರಾಮದಲ್ಲಿ ಪುಷ್ಪಲತಾ ಎಂಬ ಮಹಿಳೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಮಳೆಯಿಂದ ರಕ್ಷಿಸಿಕೊಳ್ಳಲು ಮರದಡಿ ಕುಳಿತಿದ್ದಾಗ, ಮರಕ್ಕೆ ಸಿಡಿಲು ಬಡಿದು ದುರ್ಮರಣ ಹೊಂದಿದ್ದಾರೆ. ಘಟನೆ ಜನವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
30ಕ್ಕೂ ಹೆಚ್ಚು ಮರಗಳು ನೆಲಸಮ
ತುಮಕೂರು ಜಿಲ್ಲೆಯಲ್ಲಿ ಮಳೆ ಗಾಳಿ ಅವಾಂತರ ಸೃಷ್ಟಿ ಮಾಡಿದ್ದು, ಕುಣಿಗಲ್ ತಾಲೂಕಿನ ಡಿ. ಹೊಸಹಳ್ಳಿಯಲ್ಲಿ ಗಾಳಿಯ ರಭಸಕ್ಕೆ 30ಕ್ಕೂ ಹೆಚ್ಚು ಮರಗಳು ನೆಲಸಮವಾಗಿವೆ. ಶಾಲಾ ಕಟ್ಟಡದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಇನ್ನು ರಾಜೇಂದ್ರಪುರ ಗ್ರಾಮದಲ್ಲಿ 3ಮನೆಗಳ ಮೇಲ್ಛಾವಣಿ ಹಾರಿಹೋಗಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ತಡರಾತ್ರಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಕೊಪ್ಪ ರಸ್ತೆಯ ಇಸಾಕ್ ಎಂಬುವರ ಮನೆಯ ತೆಂಗಿನ ಮರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಪ್ರಧಾನಿ ಮೋದಿ; ಸಂಚಾರ ಮಾರ್ಗ ಬದಲಾವಣೆ
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಭಾಷಣ ಮುಗಿಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತು ಆರಂಭಿಸುತ್ತಿದ್ದಂತೆ, ಮಳೆ ಆರಂಭವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ಹಿಡಿದು ಸಿಎಂ ಭಾಷಣ ಕೇಳಿದ್ದಾರೆ.
ಕರಾವಳಿಯಲ್ಲಿ ಭರ್ಜರಿ ಮಳೆ…
ಬೇಸಿಗೆಕಾಲ V/S ಮಳೆಗಾಲ#uttarakannada #Karwar #Ankola #pramod pic.twitter.com/H9qtKJaHew— Pramod (@pramodankolaVK) April 20, 2024
ಹಾಸನದಲ್ಲಿ ಆಲಿಕಲ್ಲು ಮಳೆ ಆಗಿದೆ. ರಾಯಚೂರಿನ ಸಿಂಧನೂರಲ್ಲಿ ಮೊದಲ ಮಳೆಯಾಗಿದ್ದು, ಯುವಕನೊಬ್ಬ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದ್ದಾನೆ. ಕೊಡಗಿನಲ್ಲಿ ಒಂದು ವಾರದಿಂದ ಮಳೆ ಆಗುತ್ತಿದ್ದು, ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.
ಮಂಡ್ಯದಲ್ಲಿ ಆದಿಚುಂಚನಗಿರಿ ಕಮಾನು ಉರುಳಿತ್ತು. ಇದರ ಸಿಸಿಟಿವಿ ದೃಶ್ಯ ಇದೀಗ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ. ಮಂಗಳೂರು ನಗರ ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ. ತಡರಾತ್ರಿ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಬಂಟ್ವಾಳ, ಪುತ್ತೂರು ಭಾಗದಲ್ಲೂ ತುಂತುರು ಮಳೆಯಾಗಿದೆ.
ಬೆಂಗಳೂರಿನಲ್ಲಿ ಏಪ್ರಿಲ್ 23 ರವರೆಗೆ ಬಿಸಿ ವಾತಾವರಣ
ಬೆಂಗಳೂರಿನಲ್ಲಿ ಏಪ್ರಿಲ್ 23 ರವರೆಗೆ ಬಿಸಿ ವಾತಾವರಣ ಮುಂದುವರೆಯಲಿದೆ. ಬೆಂಗಳೂರಿನ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
“ಏಪ್ರಿಲ್ 19 ರಿಂದ ಏಪ್ರಿಲ್ 21ರವರೆಗೆ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗಾಳಿಯ ವೇಗ ಗಂಟೆಗೆ 30ರಿಂದ 40 ಕಿಮೀ ತಲುಪುವ ಸಾಧ್ಯತೆಯಿದೆ. ಮಿಂಚು ಸಹಿತ ಗುಡುಗು ಸಹಿತ ಗಾಳಿ ಬೀಸುತ್ತದೆ” ಎಂದು ತಿಳಿಸಿದೆ.
“ಕರ್ನಾಟಕದ ಇತರ ನಗರಗಳು ಏಪ್ರಿಲ್ 23 ರವರೆಗೆ ತಂಪು ವಾತಾವರಣ ಇರಲಿದೆ. ಮಳೆಯ ಹೊರತಾಗಿಯೂ ಗರಿಷ್ಠ ತಾಪಮಾನದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುವುದಿಲ್ಲ. ಮುಂದಿನ ದಿನಗಳಲ್ಲಿ ದಕ್ಷಿಣ ರಾಜ್ಯದಾದ್ಯಂತ 2-3 ಡಿಗ್ರಿ ಸೆಲ್ಸಿಯಸ್ನ ಕ್ರಮೇಣ ಏರಿಕೆಯಾಗಲಿದೆ” ಎಂದು ಅಂದಾಜಿಸಿದೆ.