ಕರ್ನಾಟಕ ವಿಧಾನಸಭಾಗೆ ಮತದಾನ ಬುಧವಾರ ನಡೆಯುತ್ತಿದೆ. ಆದರೆ, ಮತದಾನ ಆರಂಭಕ್ಕೂ ಮುನ್ನವೇ ಹಲವು ಕಡೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಮತದಾನಕ್ಕೆ ಅಡಚಣೆ ಉಂಟಾಗಿದೆ.
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಗೋಕುಲಂ ಲಯನ್ಸ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಆರಂಭದಲ್ಲೇ ಇವಿಎಂ ಕೈ ಕೊಟ್ಟಿತು. ಹೀಗಾಗಿ 45 ನಿಮಿಷ ತಡವಾಗಿ ಮತದಾನ ಪ್ರಾರಂಭವಾಗಿದೆ.
ಮಂಡ್ಯ ನಗರದ ಗುತ್ತಲಿನ ಅರಕೇಶ್ವರ ನಗರದ ಬೂತ್ ನಂ.230ರಲ್ಲಿ ಮಾಕ್ ಪೋಲಿಂಗ್ ಸಿದ್ಧತೆ ವೇಳೆ ಇವಿಎಂ ಕೈಕೊಟ್ಟು, ಬಳಿಕ ತಾಂತ್ರಿಕ ವರ್ಗದಿಂದ ಪರಿಶೀಲನೆ ನಡೆಸಿ ಸರಿಪಡಿಸಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಆಚಂಗಿ ಗ್ರಾಮದಲ್ಲಿ ಇವಿಎಂ ಕೈಕೊಟ್ಟಿದ್ದು, ಕೆಲಕಾಲ ಮತದಾರರು ಕಾಯಬೇಕಾದ ಪರಿಸ್ಥಿತಿ ಉಂಟಾಯಿತು. ಅಂತೆಯೇ ಕಾರ್ಕಳ ತಾಲೂಕಿನ ಈದುವಿನಲ್ಲಿ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನ ತಡವಾಗಿ ಆರಂಭವಾಗಿದೆ.
ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಬೂತ್ ಸಂಖ್ಯೆ 198 ಹಾಗೂ ಗಿಣಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ 217ರಲ್ಲಿ ಇವಿಎಂ ತಾಂತ್ರಿಕ ಸಮಸ್ಯೆಯಾಗಿತ್ತು. ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಮತಗಟ್ಟೆ ಸಂಖ್ಯೆ 105ಯಲ್ಲಿ ಮತಯಂತ್ರ ಕೆಟ್ಟಿದ್ದರಿಂದ ಹಲವರು ಮತದಾನ ಮಾಡದೇ ಮರಳಿ ಮನೆಗೆ ತೆರಳಿದರು.
ಗದಗ ನಗರದ ಮುನ್ಸಿಪಲ್ ಕಾಲೇಜಿನ ಮತಗಟ್ಟೆಯಲ್ಲಿ ಮತಯಂತ್ರವನ್ನು ಕತ್ತಲಿನಲ್ಲಿಟ್ಟಿರುವುದರಿಂದ ಚಿಹ್ನೆ, ಗುರುತು ಸರಿಯಾಗಿ ಕಾಣುತ್ತಿಲ್ಲ ಎಂದು ಚುನಾವಣಾ ಸಿಬ್ಬಂದಿಯ ಮೇಲೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರು ಆಕ್ರೋಶ ವ್ಯಕ್ತಪಡಿಸಿದ್ದು, ಬಳಿಕ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಅಕ್ರಮ | ಸಿವಿಜಿಲ್ ಆ್ಯಪ್ನಲ್ಲಿ 6 ಸಾವಿರಕ್ಕೂ ಹೆಚ್ಚು ದೂರು ದಾಖಲು
ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದ ಮತಗಟ್ಟೆ 224, 233, 234 ಮುಂತಾದ ಕಡೆ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸರತಿ ಸಾಲು ಬೆಳೆಯಿತು. ದೋಷ ಸರಿಪಡಿಸಲು ಮತಗಟ್ಟೆಗೆ ಸಿಬ್ಬಂದಿ ದೌಡಾಯಿಸಿದರು.
ರಾಯಚೂರು ಜಿಲ್ಲೆಯ ಮಸ್ಕಿ, ರಾಯಚೂರು ನಗರ ಕ್ಷೇತ್ರಗಳ ಕನಿಷ್ಠ ಮೂರು ಮತಗಟ್ಟೆಗಳಲ್ಲಿ ಇವಿಎಂ ದೋಷ ಕಾಣಿಸಿಕೊಂಡು ಮತದಾನ ಸ್ಥಗಿತಗೊಂಡಿತು. ಸುಮಾರು ಒಂದು ಗಂಟೆ ಕಾಲ ಮತದಾನದಲ್ಲಿ ವಿಳಂಬವಾಯಿತು.