ಕಳೆದ ಆರು ವರ್ಷಗಳಿಂದ ಸುಮಾರು 142 ಅಪ್ರಾಪ್ತ ಬಾಲಕಿಯರ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲನೋರ್ವ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಪ್ರಕರಣ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ.
ಹರಿಯಾಣದ ಜಿಂದ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 142 ಅಪ್ರಾಪ್ತ ಬಾಲಕಿಯರ ಮೇಲೆ ಪ್ರಾಂಶುಪಾಲ, ಕಳೆದ ಆರು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಬಗ್ಗೆ ಆರೋಪಿಸಿ, ದೂರು ಸ್ವೀಕರಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಜಿಂದ್ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಮೊಹಮ್ಮದ್ ಇಮ್ರಾನ್ ರಝಾ, “ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ನೇತೃತ್ವದ ತನಿಖಾ ಸಮಿತಿಯು ಒಟ್ಟು 390 ಹುಡುಗಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಈ ಪೈಕಿ ನಾವು 142 ದೂರುಗಳನ್ನು ರವಾನಿಸಿದ್ದೇವೆ. ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ತಿಳಿಸಿದ್ದೇವೆ. ಈ 142 ಬಾಲಕಿಯರಲ್ಲಿ ಹೆಚ್ಚಿನವರು ಪ್ರಾಂಶುಪಾಲರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದರೆ, ಉಳಿದವರು ಈ ಕೃತ್ಯಗಳಿಗೆ ಸಾಕ್ಷಿಯಾಗಿದ್ದಾರೆ. ಆರೋಪಿ ಪ್ರಾಂಶುಪಾಲರು ಸದ್ಯ ಜೈಲಿನಲ್ಲಿದ್ದಾರೆ” ಎಂದು ತಿಳಿಸಿದ್ದಾರೆ.
ಗಮನಾರ್ಹ ವಿಚಾರ ಏನೆಂದರೆ, ಸುಮಾರು 15 ಹುಡುಗಿಯರು ಈ ಹಿಂದೆ ಅಂದರೆ ಆಗಸ್ಟ್ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದರು ಎಂಬ ವಿಚಾರ ಕೂಡ ಬೆಳಕಿಗೆ ಬಂದಿದೆ.
ಹರಿಯಾಣ ಮಹಿಳಾ ಆಯೋಗವು ಸೆಪ್ಟೆಂಬರ್ 13 ರಂದು ಈ ಪತ್ರವನ್ನು ಗಮನಿಸಿ, ಸೂಕ್ತ ಕ್ರಮಕ್ಕಾಗಿ ಜಿಂದ್ ಪೊಲೀಸರಿಗೆ ರವಾನಿಸಿತ್ತು. ಆದರೆ, ಪೊಲೀಸರು ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ.
ಬಳಿಕ ಆರೋಪಿಯನ್ನು ನವೆಂಬರ್ 4 ರಂದು ಬಂಧಿಸಿ ನವೆಂಬರ್ 7 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.
ಸರ್ಕಾರಿ ಶಾಲೆಯ 60 ಬಾಲಕಿಯರು ಪ್ರಾಂಶುಪಾಲರ ವಿರುದ್ಧ ಹೇಳಿಕೆ ದಾಖಲಿಸಲು ಮುಂದೆ ಬಂದಿದ್ದರು ಎಂದು ರಾಜ್ಯ ಮಹಿಳಾ ಆಯೋಗ ಈ ಹಿಂದೆ ಹೇಳಿತ್ತು. ಆದರೆ, ಈಗ ಸಂಖ್ಯೆ 142ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ಕುರಿತು ಹೇಳಿಕೆ ನೀಡಿರುವ ಕಾನೂನು ತಜ್ಞರು, ‘ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಲಿಲ್ಲ. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ವರದಿಯಾದರೆ ಆದಷ್ಟು ಬೇಗ ಎಫ್ಐಆರ್ ದಾಖಲಾಗಬೇಕು. ಪೋಕ್ಸೊ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ. ಆದರೂ, ವಿಳಂಬಗೊಂಡಿದ್ದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಜಕಾರಣ ಮನೆತನಕ್ಕೆ ಮಾತ್ರ ಸೀಮಿತವಲ್ಲ; ಡಿ.6ರ ಬಳಿಕ ಎಲ್ಲ ವಿಚಾರ ತಿಳಿಸುತ್ತೇನೆ: ವಿ ಸೋಮಣ್ಣ
ಅಲ್ಲದೇ, ಈ ಘಟನೆಯ ಬಗ್ಗೆ ಧ್ವನಿ ಎತ್ತಿರುವ ಹರಿಯಾಣದ ಸಾಮಾಜಿಕ ಕಾರ್ಯಕರ್ತರು, ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಒಂದೂವರೆ ತಿಂಗಳು ಏಕೆ ಬೇಕಾಯಿತು ಎಂದು ಪ್ರಶ್ನಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ‘ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಶ್ರೇಣಿಯ ಮೂವರು (ಜಿಲ್ಲಾ) ಅಧಿಕಾರಿಗಳ ತಂಡ ನಡೆಸಿದ ತನಿಖೆಯಲ್ಲಿ ಪ್ರಾಂಶುಪಾಲರು ಪ್ರಾಥಮಿಕವಾಗಿ ತಪ್ಪಿತಸ್ಥರು ಎಂದು ತಿಳಿಸಿದ್ದಾರೆ. ಬಂಧಿತ ಪ್ರಾಂಶುಪಾಲರ ವಿರುದ್ಧ ಮುಂದಿನ ಕ್ರಮದ ಬಗ್ಗೆ ಆರೋಪಪಟ್ಟಿ ಸಲ್ಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ತೆಲಂಗಾಣ | ಸಚಿವ ಜಮೀರ್ ಅಹ್ಮದ್ ಖಾನ್ ತಂಗಿದ್ದ ಹೋಟೆಲ್ ಮೇಲೆ ಪೊಲೀಸರ ದಾಳಿ
ಪ್ರಾಂಶುಪಾಲರ ವಿರುದ್ಧದ ಆರೋಪಗಳ ತನಿಖೆಗಾಗಿ ನ. 16 ರಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ದೀಪ್ತಿ ಗಾರ್ಗ್ ನೇತೃತ್ವದಲ್ಲಿ ಆರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದ್ದು, ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಅಪ್ರಾಪ್ತ ಬಾಲಕಿಯರಿಗೆ ಕೌನ್ಸೆಲಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.