ಇಸ್ರೇಲ್ ಹುಟ್ಟುಹಾಕಿರುವ ಹಮಾಸ್ ಹಾಗೂ ಇಸ್ರೇಲ್ ದೇಶಗಳ ನಡುವಿನ ದಾಳಿ ಹಾಗೂ ಪ್ರತಿದಾಳಿಗಳ ವಿರುದ್ಧ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಸಿಪಿಎಂ ಪಕ್ಷ ಜಂಟಿಯಾಗಿ ತುಮಕೂರಿನ ಟೌನ್ಹಾಲ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಮೃಗೀಯ ಅಮಾನವೀಯ ದಾಳಿಗಳನ್ನು ಕೂಡಲೇ ನಿಲ್ಲಿಸುವಂತೆ ಪ್ರತಿಭಟನಾಕಾರರು ಒಕ್ಕೊರಲಿನಿಂದ ಒತ್ತಾಯಿಸಿದರು.
ಚಿಂತಕ ಸಿ ಯತಿರಾಜು ಮಾತನಾಡಿ, “ಎರಡು ದೇಶಗಳ ಸಾವಿರಾರು ನಾಗರಿಕರು, ಮಕ್ಕಳು ಕೊಲ್ಲಲ್ಪಡುತ್ತಿದ್ದಾರೆ. ಆಸ್ತಿಪಾಸ್ತಿಗಳು, ಜೀವನಾಶಕ್ಕೆ ಈ ದಾಳಿಗಳು ಕಾರಣವಾಗುತ್ತಿವೆ. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನಿರ್ಣಯಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ಇಸ್ರೇಲ್ ದೇಶ ಪ್ಯಾಲಸ್ತೇನಿಯರ ನೆಲಗಳನ್ನು ಬೇಕಾಬಿಟ್ಟಿಯಾಗಿ ಆಕ್ರಮಿಸಿಕೊಂಡಿರುವುದು ಮತ್ತು ಪಶ್ಚಿಮ ದಂಡೆಯಲ್ಲಿ ಯಹೂದಿ ವಸಾಹತುಶಾಹಿ ಸ್ಥಾಪನೆಗೆ ಕ್ರಮ ವಹಿಸುತ್ತಿದೆ. ಬೆಳೆಯುತ್ತಿರುವ ಜನಾಂಗೀಯ ದ್ವೇಷ ಮತ್ತು ಮತೀಯ ಮೂಲಭೂತವಾದ ಪ್ರಪಂಚದ ಜನತೆಯ ಸಂಕಷ್ಟಕ್ಕೆ ಕಾರಣವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘಟನೆ ಮುಖಂಡ ಪಿ ಎನ್ ರಾಮಯ್ಯ ಮಾತನಾಡಿ, “ಮಾನವ ಹಕ್ಕುಗಳ ರಕ್ಷಣೆಗೆ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು” ಎಂದು ಅಗ್ರಹಿಸಿದರು.
ಹೋರಾಟಗಾರ ಪಂಡಿತ್ ಜವಾಹರ್ ಮಾತನಾಡಿ, “ಯುದ್ಧದಿಂದ ಸರ್ವನಾಶವೇ ಹೊರತು ಎಂದೂ ಪ್ರಗತಿ–ಮುನ್ನೆಡೆಗೆ ಹಾದಿಯಲ್ಲ. ಶಾಂತಿ-ಪ್ರೀತಿಯ ಸ್ಥಾಪನೆಗೆ, ಮಾತುಕತೆಯೇ ಜಗತ್ತಿನ ಜೀವ ಪರರ ಮಂತ್ರ ಅಗಬೇಕು” ಎಂದರು.
ಸಿಪಿಎಂನ ಸೈಯದ್ ಮುಜೀಬ್ ಮಾತನಾಡಿ, “ಈ ಯುದ್ದದ ಬಗ್ಗೆ ಬಹಳಷ್ಟು ಸುಳ್ಳುಗಳನ್ನು ಸಾಮ್ರಾಜ್ಯಶಾಹಿ ಮಾಧ್ಯಮಗಳು ಹರಡುತ್ತಿವೆ. ಜೀವರಕ್ಷಕ ಆಸ್ಪತ್ರೆ, ಜನವಸತಿ ಪ್ರದೇಶಗಳ ಮೇಲಿನ ದಾಳಿಯು ಮಕ್ಕಳು–ಮಹಿಳೆಯರನ್ನು ಸಂಕಷ್ಟಕ್ಕೆ ಸಿಲುಕಿಸುವ ಹಿಂಸೆಯನ್ನು, ದ್ವೇಷವನ್ನು ಸಮರ್ಥಿಸುವ ನಡೆ ಮತ್ತು ಪ್ರವೃತ್ತಿಗಳು ಜೀವವಿರೋಧಿಯಾಗಿದೆ. ಇದನ್ನು ಜನಾಂಗೀಯ ದ್ವೇಷ ಮತ್ತು ರಾಜಕೀಯ ಲಾಭಕ್ಕೆ ನಡೆಸಲಾಗುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ರಾಜ್ಯದಲ್ಲಿ ಬರ ನಿರ್ವಹಣೆಗೆ ₹ 400 ರಿಂದ ₹ 500 ಕೋಟಿ ಮೀಸಲು: ಜಿ ಪರಮೇಶ್ವರ್
ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಸಂಚಾಲಕ ಬಿ.ಉಮೇಶ್, ಎಂ ಎಸ್ ಎಸ್ ಕಲ್ಯಾಣಿ, ಎಐಟಿಯುಸಿ ಗಿರೀಶ್, ಸಿಐಟಿಯುನ ಎನ್ ಕೆ ಸುಬ್ರಮಣ್ಯ, ಯುವ ಮುಖಂಡ ಸೈಯದ್ ಮುದಸಿರ್, ಇನ್ಸಾಪ್ ಸಂಘಟನೆ ರಫಿಕ್, ಜನವಾದಿ ಮಹಿಳಾ ಸಂಘದ ಕಲ್ಪನಾ, ವಿದ್ಯಾರ್ಥಿ ಸಂಘಟನೆ ಅಶ್ಚಿನಿ, ಸಮುದಾಯದ ಅಶ್ವಥಯ್ಯ, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಆರುಣ್, ಆಟೋ ಯೂನಿಯನ್ ಇಂತಿಯಾಜ್ ಪಾಷ, ರೈತ ಸಂಘಟನೆ ಎಸ್ ಎನ್ ಸ್ವಾಮಿ, ಅಜ್ಜಲ್ ಷರೀಪ್, ತಮೀಜ್ ಉದ್ದಿನ್, ಮೌಲಾನ ಯುಸೂಪ್, ಉಮರ್ ಫಾರುಕ್ ಸೇರಿದಂತೆ ಇತರರು ಇದ್ದರು.