ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ಆ ಊರಿನಲ್ಲಿ ಅಂದು ಸಂತೆ. ವಾರದಲ್ಲೊಂದು ದಿನ ಸಂತೆಯೆಂದ ಬಳಿಕ ಹಳ್ಳಿಯೆಲ್ಲ ಅಂದು ಗದ್ದಲದಿಂದ ತುಂಬಿಯೇ ಇದ್ದಿತು. ಅದರಲ್ಲೂ ಜಿಲ್ಲಾ ಕಲೆಕ್ಟರರವರು ಖುದ್ದಾಗಿ ಚಿತ್ತೈಸಿದ್ದಾರೆ. ಜಮಾಬಂದಿಯಲ್ಲ, ಸ್ಥಳತನಿಖಿಯಲ್ಲ, ಕಚೇರಿಯಲ್ಲ- ಒಬ್ಬರೇ. ಎಂದಿನಂತೆ ಯಾರೂ ಸರಬರಾಯಿಯ ತೊಂದರೆಗೀಡಾಗಬಾರದೆಂದು ಈ ದೊರೆಗಳು ತಮ್ಮ ಬಟ್ಲರನನ್ನೆ ಸಂತೆಗೆ ಕಳುಹಿ ಎಲ್ಲ ಸಾಮಾನನ್ನು ನಗದಾಗಿ ಕ್ರಯಕ್ಕೆ ಕೊಂಡುಬರಲು ತಿಳಿಸಿದ್ದಾರೆ. ಮೊಕ್ಕಾಂ ನಾಲ್ಕು ದಿನವಂತೆ. ಉಗ್ರಾಣಿಗೆ ಮಿಕ್ಕ ಇಂತಹ ಸರ್ಕಿಟುಕಾಲಗಳಲ್ಲಾದರೆ ಆ ನಾಲ್ಕು ದಿನಗಳೂ ಒಂದೇ ಉದ್ದ ಹಗಲಿನಂತಾಗುತ್ತಿದ್ದಿತು; ಶಾನುಭಾಗರಿಗೆ ಕ್ರಾಸ್ ಸ್ಟಾಪು (Cross-staff)-ಸಂಕೋಲೆಗಳ ಸನ್ನಾಹದಿಂದ ರಿಕಾರ್ಡು ಲೆಕ್ಕಗಳ ಹಾಗೂ ಅಡಂಗಲುಗಳ ದಫ್ತರಿನಲ್ಲಿ ಅವಿತುಕೊಂಡಂತೆ ಜೀವಿಸುವಂತಾಗುತಿದ್ದಿತು. ಪಟೇಲರ ಮಾತೇ ಬೇಡ. ಗ್ರಾಮದ ಗ್ರಾಮವನ್ನೇ ತನ್ನ ಉದರದಲ್ಲಿಟ್ಟುಕೊಂಡು ಕಾಪಾಡುವ ಗ್ರಾಮದೇವತೆಯಾಗಿರುವ ಗ್ರಾಮೋದರನಾಗಿ ಮೆರೆವಂತಾಗುತಿದ್ದಿತು. ಈ ಸಲ ಮಾತ್ರ, ಉಗ್ರಾಣಿ, ಶಾನುಭಾಗರ ಎಮ್ಮೆಯಿದ್ದ ಹಟ್ಟಿಯ ಮಾಡಿಗೆ ಮುಳಿಛಾವಣಿ ಮಾಡುತಿದ್ದಾನೆ. ಶಾನುಭಾಗರು ಪಟೇಲರ ಒಕ್ಕಲುಗಳಿಗಾಗಿ ಹೊಸ ಚಾಲಗೇಣಿ ಚೀಟುಗಳನ್ನು ಬರೆದು ಅವುಗಳಿಗೆ ಅವರ ಬಲಗೈ (ಎಡಗೈ?) ಹೆಬ್ಬೆಟ್ಟಿನ ಮುದ್ರೆಗಳನ್ನು ಒತ್ತಿಕೊಳ್ಳುತ್ತಾರೆ. ಮತ್ತು ಪಟೇಲರು ವೀಳೆಯ ಜಗಿಯುತ್ತ ತೂಗುಮಂಚದ ಹಲಗೆಯ ಮೇಲೆ ಪವಡಿಸಿದ್ದು ಅಡಿಕೆ ಹಾಳೆಯ ಬೀಸಣಿಗೆಯಿಂದ ಗಾಳಿ ಹಾಕಿಕೊಳ್ಳುತ್ತಿದ್ದಾರೆ.
ಕಲೆಕ್ಟರರ ಸವಾರಿ ಆ ಊರಿಗೆ ಬಂದುದೇಕೆಂದು ಯಾರಿಗೂ ತಿಳಿದಿಲ್ಲ; ಅವರ ಆಫೀಸಿನ ಗುಮಾಸ್ತರಾಗಲಿ, ಪೇದೆಗಳಾಗಲಿ ಇದ್ದಿದ್ದರೆ, ಪಟೇಲರಿಂದ ಸಿಹಿಯಾಳಗಳನ್ನೂ, ಶಾನುಭಾಗರಿಂದ ನಸ್ಯವನ್ನೂ, ಉಗ್ರಾಣಿಯಿಂದ ಧೂಪದೆಣ್ಣೆಯ ಉಂಡೆಗಳನ್ನೂ ಕಾಣಿಕೆ ಪಡೆವಾಗ, ಕಲೆಕ್ಟರರ ಮನಸ್ಸಿನ ಇಂಗಿತವನ್ನು (ತಮಗೇ ತಿಳಿದಿದೆ ಎಂಬಂತೆ) ಮೆಲ್ಲನೆ ನಸುನಗುತ್ತ ಅಥವಾ ತುಸು ಗಂಭೀರವಾಗಿ ಸಣ್ಣ ಸ್ವರದಲ್ಲಿ ಸೂಚಿಸುತ್ತಿದ್ದರು. ಈಗ ದೊರೆಗಳ ಜತೆಯಲ್ಲಿ ಇರುವ ಪರಿವಾರವೆಲ್ಲವೂ ಒಬ್ಬ ಬಟ್ಲರನಲ್ಲೇ ಅಡಕವಾಗಿದ್ದಿತು. ದೊರೆಗಳಿಗೆ ಅಗತ್ಯವಾದುದನ್ನು ತರಲು ಅವನು ಗ್ರಾಮದಲ್ಲಿ ಕಾಣಸಿಗುವನು; ದೊರೆಗಳ ಜತೆಯವನಾಗಿ ಹಲವು ಜಿಲ್ಲೆಗಳಲ್ಲಿ ಇರುತಿದ್ದನಾದಕಾರಣ ಅವನ ಮಾತುಗಳು ಎಲ್ಲ ದ್ರಾವಿಡಭಾಷೆಗಳ ಒಂದು ಸಮ್ಮಿಲಿತ ಭಾಷೆಯಾಗಿ ಹೊರಡುತಿದ್ದುವು. ನಮ್ಮ ಶುದ್ಧ ತುಳುವರಿಗೆ ಅವನೊಡನೆ ಸಂಭಾಷಣೆ ಮಾಡುವುದೆಂದರೆ ಹಕ್ಕಿಗಳೊಡನೆ ಮಾತಾಡಿದ ಹಾಗಾಗುತಿದ್ದಿತು. ಅವನೊಡನೆ ಯಾವ ಭಾಷೆಯಿಂದ ಆಡಿದರೂ ಅವನಿಗೆ ತಿಳಿಯುತಿದ್ದಿತು. ಅವನ ನುಡಿಗಟ್ಟು ಮಾತ್ರ ಯಾವನಿಗೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಕಲೆಕ್ಟರರು ಬಂದುದೇಕೆಂದು ಯಾರಿಗೂ ತಿಳಿಯಲೇ ಇಲ್ಲ. ತಿಳಿಯದಿದ್ದರೆ ಸುಮ್ಮನಿರುವರೇ? ಊಹಾಪೋಹೆಗಳಿಗೆ ಪ್ರಾರಂಭವಾಯಿತು. ಯಾರೋ ಒಬ್ಬ ಜೈನ ಶ್ರೀಮಂತನು ಮಡಿದಿರುವನಂತೆ, ಅವನ ಆಸ್ತಿಗೆ ವಾರಸುದಾರರಿಲ್ಲದುದರಿಂದ, ಅವನ ಆಸ್ತಿಯ ನಿಗಾ ನೋಡಲು ಅದಕ್ಕೆ ಸರಕಾರವೇ ವಾರಸಿನದೆಂದು ತೀರ್ಮಾನಿಸಲು ಅವರು ಬಂದಿರುವರೆಂದರು; ಗುತ್ತಿನ ಮನೆಯವರು ಹೊಸ ಭೂತಗುಡಿಯನ್ನು ಕಟ್ಟಿಸಲು ತೋಡುವಾಗ ಅಲ್ಲಿ ಕೊಪ್ಪರಿಗೆ ದೊರೆತುದನ್ನು ಇವರು ಹೇಗೋ ತಿಳಿದುಕೊಂಡು ಅದರ ಗೊತ್ತುಹಚ್ಚಲು ಬಂದಿರುವರೆಂದರು; ಸಂಜೆಹೊತ್ತಿಗೆ ಕೆಲವರು ಎಮ್ಮೆಗಳನ್ನು ಯಾವುದೋ ಊರಿನಿಂದ ಈ ಗ್ರಾಮದ ಹಾದಿಯಾಗಿ ಸಾಗಿಸಿ ಮಾರುವರಂತೆ; ಅವರು ಕಳ್ಳರೆಂದು ಅವರನ್ನು ಹಿಡಿಯಲು ತಾವೇ ದಯಮಾಡಿಸಿದ್ದಾರೆಂದರು; ಹಲವು ಬೇನಾಮೀ ಅರ್ಜಿಗಳು ಪಟೇಲರ ವಿಷಯವಾಗಿ ಕಲೆಕ್ಟರರಿಗೆ ತಲುಪಿರಲು ಅವುಗಳ ವಿಚಾರಣೆಗಾಗಿ ಸ್ವತಃ ಚಿತ್ತೈಸಿರುವರೆಂದರು; ಪುನಃ ಹೊಸ ಸೆಟ್ಲ್ಮೆಂಟನ್ನು ಜ್ಯಾರಿಗೆ ತರುವರು, ಎಲ್ಲರಿಗೆ ದಾಕು ಹಾಕಿಸುವರು, ಆ ಊರನ್ನು ದೊಡ್ಡ ಶಹರನ್ನಾಗಿ ಮಾಡಿ ಈ ತಾಲೂಕಿನ ರಾಜಧಾನಿಯಾಗಬೇಕೆಂದು ಹೇಳುತ್ತಿರುವರು, ಯುದ್ಧಕ್ಕೆ ಜನ-ಸರಂಜಾಮುಗಳನ್ನು ಇಲ್ಲಿಂದ ಮಾಡುವ ಆಲೋಚನೆಯಲ್ಲಿರುವರು; ಇತ್ಯಾದಿ ಇತ್ಯಾದಿ ವದಂತಿಗಳು ಹರಡಿದವು- ಪಿಸುಮಾತಿನಲ್ಲೇ. ಇವೆಲ್ಲವೂ ಒಂದೆರಡುಮೂರು ಒಂದಾಗಿ, ಭೂತ ಗುಡಿಯ ಬಳಿಯಲ್ಲಿ ಕೆಲವರು ಎಮ್ಮೆಗಳನ್ನು ಕೂಡಿಸಿ ಯುದ್ಧದ ಸರಂಜಾಮಿಗಾಗಿ ಕಳುಹುವರಂತೆ- ಜೈನ ಶ್ರೀಮಂತನು ಮಡಿದಿರುವನೆಂದು ಬೇನಾಮೀ ಅರ್ಜಿಗಳನ್ನು ಪಟೇಲರು ಬರೆದುಕೊಂಡು ಮೃತರ ಆಸ್ತಿಯಿಂದ ಒಂದು ಕೊಪ್ಪರಿಗೆಯನ್ನು ಯುದ್ಧದ ಖರ್ಚಿಗೆ ಪಡೆಯುವಂತೆ ಸೂಚಿಸುವುದಕ್ಕಾಗಿ ಬಂದವರಂತೆ- ಎಂದೆಷ್ಟೋ ಹರಟೆಗಳೂ, ಪುರಾಣಗಳೂ, ಅನ್ಯಾಯವಾರ್ತೆಗಳೂ ಹಬ್ಬಿದುವು- ಪಿಸುಮಾತಿನಲ್ಲೇ.
ಪಿಸುಮಾತಿನಲ್ಲೇ- ಏಕೆಂದರೆ ಈ ದೊರೆಗಳಿಗೆ ತುಳು, ಕನ್ನಡ, ಕೊಂಕಣಿ ಭಾಷೆಗಳು ಚೆನ್ನಾಗಿ ಬರುತಿದ್ದುವು. ಶ್ರೀಮಂತರೊಬ್ಬರ ಮನೆಯಲ್ಲಿ ದೇವಾಲಯಕ್ಕಾಗಿ ಮೋಪನ್ನು ಕಾಡಿನಿಂದ ಕಡಿದು ತರಲು ನಡೆದ ಹಂಚಿಕೆಯೊಂದನ್ನು ಇವರು ವೇಷ ಪಲ್ಲಟಿಸಿ ರಾತ್ರಿಹೊತ್ತಿಗೆ ಹೊಂಚಿನಿಂದ ಕೇಳಿ, ಮರುದಿನ ಭಜಕರು ಕಾಡಿನಲ್ಲಿ ಪ್ರವೇಶಿಸುವಾಗ ಅಲ್ಲಿದ್ದು ಅವರನ್ನು ವಿಪರ್ಯಾಸಕ್ಕೊಡ್ಡಿದರೆಂದೂ ಗ್ರಾಮದಲ್ಲೊಂದು ವೃತ್ತಾಂತವು ಹರಡಿದ್ದಿತು. ಅದಲ್ಲದೆ ಆ ಬಟ್ಲರನೂ ಆಗಾಗ ಗ್ರಾಮದಲ್ಲಿ ಸುಳಿದಾಡುತ್ತಿದ್ದನು; ದೊರೆಗಳು ಬೆಳಿಗ್ಗೂ, ಸಂಜೆಗೂ ಒಬ್ಬರೇ ಗ್ರಾಮದಲ್ಲಿ ಯಾರೊಡನೆ ಮಾತಾಡದೆ, ದಡದಡನೆ ಮೂರು ನಾಲ್ಕು ಮೈಲು ಅಡ್ಡಾಡುತ್ತಿದ್ದರು. ಹೀಗಾಗಿ ಉಸಿರಿನೊಳಗೆ ಮಾತುಗಳು ಸುಳಿಯುವಂತೆ ಮಾತ್ರ ಗ್ರಾಮಸ್ಥರು ಪರಸ್ಪರವಾಗಿ ಇಂತಹ ಊಹೆಗಳನ್ನು ಆಡಿಕೊಳ್ಳುತ್ತಿದ್ದರು.
ಶಾನುಭಾಗರು ಪಟೇಲರ ಬರಹಗಾರರು. ಪಟೇಲರು ಪರಂಪರೆಯಾಗಿ ಬಂದಿದ್ದ ಹುದ್ದೆಯನ್ನು ನೋಡುತ್ತ ತಮ್ಮ ಒಕ್ಕಲುಗಳಷ್ಟೇ ಹೆಬ್ಬೆಟ್ಟಿನ ಮುದ್ರೆಯನ್ನೊತ್ತುವ ವಿದ್ಯಾವಂತರಾಗಿದ್ದರು. ಪಟೇಲರಿಗೆ ಅರ್ಧ ಗ್ರಾಮವೇ ಅಡಿಯಾಳಾಗಿದ್ದಿತು; ಇಂತಹವರ ಹಣೇಬರಹವೇ ಶಾನುಭಾಗರ ಕೈಯಲ್ಲಿದ್ದಿತು. ಉಗ್ಗಪ್ಪ ಶೆಟ್ರು ಪಟೇಲರು, ನಾರಾಯಣ ರಾಯರು ಶಾನುಭಾಗರು. ಆದರೂ ನಾರಾಯಣ ಶೆಟ್ರು ಎಂದು ಪಟೇಲರ ಹೆಸರು ಎಂದು ಚಾಲಗೇಣಿ ಒಕ್ಕಲುಗಳ ಹೇಳಿಕೆಯಿದ್ದಿತು. ಅವರಿಬ್ಬರೊಳಗೆ ಮೈತ್ರಿ, ವಿಶ್ವಾಸ ಅಷ್ಟಾಗಿದ್ದಿತು. ಈ ಒಕ್ಕಲುಗಳಿಗೆ ಜಿನಸಿನ ಅಂಗಡಿಯಾಗಿ ನಾರಾಯಣ ರಾಯರ ಅಂಗಡಿಯೇ ಇದ್ದಿತು. ಚಾಲಗೇಣಿ ಸಲ್ಲಿಸಿ ಒಕ್ಕಲುಗಳು ಏನಾದರೂ ಉಳಿಸಿದ್ದರೆ ಅದನ್ನು ಆ ಅಂಗಡಿ ನುಂಗುತಿದ್ದಿತು. ಈ ಅಂಗಡಿಯಲ್ಲಿ ವ್ಯಾಪಾರ ಮಾಡದಿದ್ದರೆ ಒಕ್ಕಲುಗಳಿಗೆ ಮುಂದಣ ವರ್ಷ ಗೇಣಿಗೆ ಯಾವ ಗದ್ದೆಯೂ ದೊರೆಯುವಂತಿರಲಿಲ್ಲ; ಶಾನುಭಾಗರಿಗೆ ಆಯವು ಹೆಚ್ಚುವಂತಿರಲಿಲ್ಲ. ಗ್ರಾಮ ಉದ್ಯೋಗಸ್ಥನೆಂದು ಗೌರವ ಮಾತ್ರವಿದ್ದರೆ ಸಾಕೇ? ಗೌರವವೆಂಬುದೇನು ಆಹಾರ ಪದಾರ್ಥವಲ್ಲವಷ್ಟೆ? ಅಂಗಡಿ ವ್ಯಾಪಾರವೇ ಶಾನುಭಾಗರ ಜೀವನ ವ್ಯಾಪಾರವಾಗಿದ್ದಿತು.
ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’
ಈ ಸಂತೆಯ ದಿನ ಕಲೆಕ್ಟರರು ಆ ಊರಿನಲ್ಲಿ ಮೊಕ್ಕಾಂ ಮಾಡಿದ ಮೂರನೆಯ ದಿನ. ಶಾನುಭಾಗರ ಮನೆಯಲ್ಲಿ ಶಾನುಭಾಗರೇ ಅಡುಗೆ ಮಾಡುವ ದಿನವಾಗಿ ಬಂದಿದ್ದಿತು. ಶಾನುಭಾಗರ ಕುಟುಂಬ ನಾಗಮ್ಮ ಕೆರೆಗೆ ಹೋಗಿದ್ದರು; ಅವರು ನಾಳಿನ ದಿನ ತಾನೇ ಮನೆಯೊಳಗೆ ಅಡುಗೆ ಮಾಡಬಹುದಾಗಿದ್ದಿತು. ಹೀಗಾಗಿ ಶಾನುಭಾಗರು ಪಟೇಲರ ಚಾವಡಿಯಿಂದ ಗೇಣಿ ಚೀಟುಗಳನ್ನು ಬೇಗನೇ ಬರೆದು ಮುಗಿಸಿ, ದಫ್ತರು ಕಟ್ಟಿ ಹೊರಡುವುದರಲ್ಲಿದ್ದರು. ಅಷ್ಟರಲ್ಲಿ ಪಟೇಲರ ಧರ್ಮಪತ್ನಿಯವರು ಕೆರೆಯಿಂದ ಮಿಂದು ಒಳಕ್ಕೆ ಬಂದವರೇ, ”ನನ್ನ ಗೆಜ್ಜೆಟೀಕು ಕಳವಾಗಿದೆ,” ಎಂದರು. ”ಕೆರೆಗೆ ಮೀಯಲು ಹೋದಾಗ ಅಲ್ಲಿ ನಾಗಮ್ಮನವರೊಡನೆ ಮಾತುಕತೆಯಾಯಿತು. ಮೀಯುತಿದ್ದೆವು. ನಾನು ಬಂದೆ. ನಾಗಮ್ಮ ಅಲ್ಲೇ ಇನ್ನೂ ಮೀಯುತ್ತಿದ್ದರು. ಅರ್ಧ ದಾರಿ ಬರುತ್ತಲೇ ಕೊರಳು ಹಗುರವಾಗಿ ತೋರಿತು. ತಲೆಯ ಮೇಲಕ್ಕೆ ಒಂದು ಕಾಗೆ ಕರ್ರೆಂದು ಕೂಗಿತು. ಕೊರಳು ಮುಟ್ಟಿದಾಗ ಎದೆಯಿಂದೇನೊ ಜೀವ ಹಾರಿತು! ಗೆಜ್ಜೆಟೀಕು ಇರಲಿಲ್ಲ. ಅದಕ್ಕಾಗಿ ಪುನಃ ಕೆರೆಗೆ ಓಡಿದೆ. ನಾಗಮ್ಮ ಮನೆಗೆ ಹಿಂತಿರುಗಿದ್ದರು. ಅವರ ಬೆನ್ನು ಹಿಡಿದು ನಡೆದೆ. ‘ನಿಮ್ಮಾಣೆ ನಾನರಿಯೆ’, ಎಂದರು. ಅಂತೂ ಇನ್ನಾರೂ ಅಲ್ಲಿಗೆ ಮೀಯಬಂದವರಿಲ್ಲ. ದನ ಕಾಯುವ ಹುಡುಗರು ಸಹ ಇದ್ದಿಲ್ಲ. ಭೂತಕ್ಕೊಂದು ತೆಂಗಿನಕಾಯಿ ಒಪ್ಪಿಸಬೇಕು. ಗೆಜ್ಜೆಟೀಕು ಬೇಗನೇ ಪತ್ತೆಯಾಗಬೇಕು,” ಎಂದು ಪಟೇಲರಿಗೆ ಧರ್ಮಪತ್ನಿಯ ದೂರು, ಮೊರೆ, ಕೂಗು.
ಶಾನುಭಾಗರು ಕಟ್ಟುತಿದ್ದ ದಫ್ತರು ಮೂಟೆಯ ಗಂಟು ಕಡಿದು ಗೇಣಿಚೀಟುಗಳೂ, ಲೆಕ್ಕದ ಪುಸ್ತಕಗಳೂ ಅದರ ಕರುಳಂತೆ ಹೊರಬಿದ್ದುವು. ಪಟೇಲರು ತೂಗುಮಂಚದಿಂದ ಫಕ್ಕನೆ ಏಳಲು ಯತ್ನಿಸಿ, ಹಲಗೆ ತೂಗಿ, ಯಾರೋ ಹಿಂದಣಿಂದ ನೂಕಿದಂತೆ ಜಗಲಿಯ ಮೇಲೆ ಬಿದ್ದರು! ಒಕ್ಕಲುಗಳಿಗೆ ನಗುವೂ ಇಲ್ಲ, ಅಳುವೂ ಇಲ್ಲ- ದಿಗಿಲು! ಕೂಡಲೇ ಕುಪ್ಪಣ್ಣಯ್ಯ (ಮಾರಿಗುಡಿಯ ಅರ್ಚಕ)ನನ್ನು ಕರೆಯಲು ಯಾವನನ್ನೋ ಓಡಿಸಿದ್ದಾಯಿತು.
ಕುಪ್ಪಣ್ಣಯ್ಯನೂ ತನ್ನನ್ನೇಕೆ ಶೆಟ್ಟಿ-ಅಲ್ಲ, ಪಟೇಲರು-ಕರೆದುದೆಂದು ಕರೆಯಲು ಬಂದಿದ್ದ ಆಳಿನಿಂದ ತಿಳಿದೇ, ಅತ್ತ ಬರುತ್ತಾ ದಾರಿಯಲ್ಲಿ ಒಂದು ಕೇರೆಹಾವು ಕಪ್ಪೆಯನ್ನು ಅಟ್ಟಿಹೋದುದನ್ನೂ ಒಂದು ಕೋಳಿ ಪಿಳ್ಳೆಯನ್ನು ಗಿಡುಗನು ಎತ್ತಿಕೊಂಡು ಹಾರಿಹೋದುದನ್ನೂ, ಶಕುನಗಳನ್ನಾಗಿ ತಿಳಿದು ನೆನಪಿನಲ್ಲಿಟ್ಟುಕೊಂಡು, ಚಾವಡಿಗೆ ಬರುವ ಮೊದಲೇ ಕಾಲು ತೊಳೆದುಕೊಂಡೇ ಬಂದನು.
ಕಾರ್ಯಕಾರಣಗಳನ್ನು ತಿಳಿಸುವ ಮೊದಲೇ ಕುಪ್ಪಣ್ಣಯ್ಯನು ಪಂಚಾಂಗವನ್ನು ತೆಗೆದುಕೊಂಡು, ತಾನು ದಾರಿಯಲ್ಲಿ ಕಂಡ ಶಕುನಗಳಲ್ಲಿ ಭರವಸೆಯನ್ನಿಟ್ಟು, ಕದ್ದವನನ್ನು ಬಲುವೇಗವಾಗಿ ಹಿಡಿದು ತರುವಂತೆ ಅವನ ಬೆನ್ನಿಗೆ ಮಾರಿಯಮ್ಮನು ಗಣಗಳನ್ನು ಕಳುಹಿರುವಳೆಂದೂ, ಅವನನ್ನು ಒಂದೇ ದಿನದಲ್ಲಿ ಎತ್ತಿಕೊಂಡು ಚಾವಡಿಗೆ ತಂದುಮುಟ್ಟಿಸಿ ಕೋಳ ಹಾಕುವರೆಂದೂ ಇತ್ಯಾದಿ ಹೇಳಿ, ಕಾಣೆಯಾದ ಗೆಜ್ಜೆಟೀಕಿನ ಮುನ್ನೂರು ರೂಪಾಯಿಗಳ ನಷ್ಟದ ನೋವನ್ನು ಕಡಿಮೆಯಾಗುವಂತೆ ಮಾಡಿದನು. ಎರಡು ಸೇರು ಅಕ್ಕಿ, ಎರಡು ತೆಂಗಿನಕಾಯಿ, ಒಂದು ಕುಂಬಳಕಾಯಿ, ಇಷ್ಟು ಕಾಣಿಕೆ ಪಡೆದು, ವೀಳೆಯ ಜಗಿದು, ಶಾನುಭಾಗರೊಡನೆ ತನ್ನ ಮನೆಯ ದಾರಿ ಹಿಡಿದು ನಡೆದನು.
ಶಾನುಭಾಗರಿಗೆ ಸಿಡಿಲು ಬಡಿದಂತಾಗಿದ್ದಿತು. ನಾಗಮ್ಮ ಅವರ ಮೂರನೆಯ ಹೆಂಡತಿ. ತಂದೆತಾಯಿ ಇಲ್ಲದ ಆ ಅನಾಥ ಕನ್ಯೆಯನ್ನು ನಾರಾಯಣ ರಾಯರು ವಿವಾಹವಾಗಿ ಎರಡು ವರ್ಷ ಮಾತ್ರ ದಾಟಿದ್ದಿತು. ನಾಗಮ್ಮ ತೀರ ಹಳ್ಳಿಯ ಹುಡುಗಿ- ಹದಿನೈದೇ ವರ್ಷ ವಯಸ್ಸಿನ ಹುಡುಗಿ. ನಾರಾಯಣ ರಾಯರಿಗೆ ಪುತ್ರಸಂತತಿಯಿದ್ದಿದ್ದರೆ ಇವಳನ್ನು ಅವರು ವಿವಾಹವಾಗುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ನಾರಾಯಣರಾಯರ ಪ್ರಥಮ ಪತ್ನಿಯು ಪುತ್ರರತ್ನವನ್ನು ಹಿಂದೆ ಬಿಟ್ಟಿದ್ದರೆ ನಾಗಮ್ಮನು ರಾಯರ ಸೊಸೆಯಾಗಬಹುದೆಂದು ನಾವೂ ನೀವೂ ತಪ್ಪಾಗಿ ಎಣಿಸುವಂತಾಗುತ್ತಿದ್ದಿತು. ಅನಾಥೆ, ಗತಿಹೀನೆ, ಮೂಢೆ, ಅದು ಕಾರಣವೇ ಅವಳಲ್ಲಿ ಠಕ್ಕಿಲ್ಲ, ವಂಚನೆಯಿಲ್ಲ, ಸರಳ ಸ್ವಭಾವ. ತಿಂಗಳಲ್ಲಿ ಅವೇ ಮೂರು ದಿನ ಹಿತ್ತಲ ಹೊರಗೆ ಯಾರೊಡನೆಯಾದರೂ ಮುಕ್ತಭಾಷಣ ಮಾಡಬಹುದಾಗಿದ್ದಿತು. ತಿಂಗಳಲ್ಲಿ ಇಪ್ಪತ್ತೇಳು ದಿನವೂ ಹಿತ್ತಲಲ್ಲಿಯೇ ಇರುವಳು. ಯಾರೊಡನೆ ಮಾತಾಡುವುದಕ್ಕೂ ಜಾತಿ ಕಟ್ಟಳೆ ಇದೆ. ಪತಿದೇವನ ಗೌರವಸಂರಕ್ಷಣೆಯ ಭಾರ ಬೇರೆ. ಹೀಗಾಗಿ ಹಳ್ಳಿಯ ಹವೆ, ಹಿತ್ತಲ ಹೊರಗೆ ಉಸಿರಾಡಲು ದೊರೆವುದೆಂದರೆ ತಿಂಗಳಲ್ಲಿ ಅವೇ ಮೂರು ದಿನ. ಮನೆಯಲ್ಲಿನ ಬಟ್ಟೆಗಳನ್ನು ಒಗೆದೂ, ತಾನೂ ಸುಖವಾಗಿ ಮಿಂದೂ, ಮನೆಗೆ ಬಂದು- ಅವೇ ಮೂರು ದಿನ ಸ್ವಯಂಪಾಕದ ಕಷ್ಟ, ಹಾಳಾದ ಅಡುಗೆಯ ನಷ್ಟ, ಇವುಗಳನ್ನು ತಿಳಿದ ಸಿಡುಮೋರೆಯ ಗಂಡನಿಕ್ಕುವ ಕೂಳಿಷ್ಟು ಸಂತೋಷವಾಗಿ ಉಣ್ಣುವಳಾದರೂ, ಹೊರಬಯಲಲ್ಲಿ, ಕೆರೆಯ ಬಳಿಯಲ್ಲಿ ಕಾಣಿಸಿದ ಇತರ ಹೆಂಗಸರೊಡನೆ ಆಡಿದ ಸಂಭಾಷಣೆಯ ನೆನಪೇ ಈ ಅನ್ನವು ಪರಮಾನ್ನವಾಗುವಂತೆ ಈ ಪದಾರ್ಥಗಳಿಗೆಲ್ಲ ಒಗ್ಗರಣೆ ಹಾಕಿದಂತೆ ಅವಳಿಗೆ ತೃಪ್ತಿಯನ್ನೂ, ರುಚಿಯನ್ನೂ ಉಂಟುಮಾಡುತಿದ್ದಿತು.
ಸಿಡಿಲು ಬಡೆದಂತಾಗಿದ್ದ ಶಾನುಭಾಗರು ಮನೆಗೆ ಬಂದು ಮುಟ್ಟುತ್ತಲೇ ತನಗೆ ಬಡೆದಂತಾಗಿದ್ದ ಸಿಡಿಲನ್ನು ನಾಗಮ್ಮನ ಮೇಲೆ ಕೆಡವಿದರು. ಎರಡು ಮಾರು ದೂರದಿಂದ, ”ಬಂದ ಮನೆಗೆ ಬೆಂಕಿ ಇಟ್ಟಿಯಾ? ಹುಟ್ಟಿದಲ್ಲಿ ಸುಟ್ಟು ಸುಡುಗಾಡು ಮಾಡಿದೆ. ಅಷ್ಟೇ ಸಾಲದಾಗಿದ್ದಿತೆ?” ಎಂದೊಮ್ಮೆಗೇ ಶಾನುಭಾಗರು ನುಡಿದ ಮಾತುಗಳ ಅರ್ಥವು ಅವಳಿಗೆ ತಿಳಿಯಲೇ ಇಲ್ಲ. ಅವಳು ಮನೆಯ ಮಾಡು ನೋಡಿದಳು; ದಿಗಿಲಿನಿಂದ ನೋಡಿದಳು; ಬೆಂಕಿಯ ಮಾತಿರಲಿ, ಹೊಗೆ ಕೂಡ ಏಳುತ್ತಿಲ್ಲ. “ನಾನು ಮನೆಯೊಳಗೆ ಕಾಲಿಡುವುದೇ ನಾಳೆ ಮಿಂದಾದಬಳಿಕವಲ್ಲವೆ? ಆಗ ತಾನೆ ಬೆಂಕಿ ಮುಟ್ಟಬಹುದಲ್ಲವೆ?” ಎಂದಳು. ಶಾನುಭಾಗರು ಮೈ ಮುರಿದುಕೊಂಡು ಇವಳು ತನ್ನನ್ನೇ ಹೀಯಾಳಿಸಿದಳೆಂದು ಸಿಟ್ಟಾಗಿ ”ನೀನು ಮನೆಯೊಳಗೆ ಕಾಲಿಡುವುದು ನಾಳೆ! ಮಿಂದಾದಮೇಲೆ! ‘ನಾಳೆ’ಯೆಂದರೆ ಗಣಪತಿಯ ಮದುವೆಯಾದ ‘ನಾಳೆ’! ನೀನಿನ್ನು ಮೀಯುವುದುಂಟೆ? ನಿನ್ನನ್ನು ಮೀಯಿಸುವುದು, ಅಲ್ಲಿಂದಲೇ ಕೊಂಡೊಯ್ಯುವುದು-ಸ್ಮಶಾನಕ್ಕೆ!” ಎಂದು ಗರ್ಜಿಸಿಬಿಟ್ಟರು-ಒಂದು ಮಾರು ದೂರದಿಂದ.
ಶಾನುಭಾಗರು ಸಿಡಿಲೆರಗಿದಂತಾಗಿದ್ದರಷ್ಟೆ! ಈ ಹುಡುಗಿಯು (ಶಾನುಭಾಗರ ಪತ್ನಿ) ನಕ್ಷತ್ರಗಳನ್ನೇ ಕಂಡಳು. ಅವಳಿಗೆ ಈ ಮಾತುಗಳ ಅರ್ಥವಾಗಲಿಲ್ಲ. ಆದರೂ ಅಭಿಪ್ರಾಯವಾಯಿತು; ತನ್ನ ಮೇಲೆ ಏನೋ ಭಯಂಕರ ಅಪರಾಧ ಅಥವಾ ಅಪವಾದದ ಆರೋಪವಾಗಿದೆಯೆಂದು. ಅಂಗಳದಲ್ಲಿ ನಿಂತವಳು ಕೂತಳು. ಶಾನುಭಾಗರ- ತಮ್ಮ ಎಲವಸ್ತ್ರ, ಕೈಕೋಲುಗಳನ್ನು ಜಗಲಿಯ ಮೇಲೆ ಮಡಗಿದರು. ಹಟ್ಟಿಯ ಮಾಡಿಗೆ ಮುಳಿಛಾವಣಿ ಮಾಡುತ್ತಿದ್ದ ಉಗ್ರಾಣಿಯು ಈ ಸಂಭಾಷಣೆಗೆ ಕಿವಿಕೊಟ್ಟನು:

“ನೀನು ಕೆರೆಯಲ್ಲಿ ಮೀಯುತ್ತಿದ್ದಾಗ ಮತ್ತಾರಿದ್ದರು?”
“ಪಟೇಲರ ಹೆಂಡತಿ. ಬೇರೆ ಯಾವ ಹೆಂಗಸರು ಸಹ ಇದ್ದಿಲ್ಲ. ಗಂಡಸರ ಮಾತಿರಲಿ.”
“ಗಂಡಸರು ಸಾಯಲಿ! ಪಟೇಲರ ಹೆಂಡತಿಯೊಡನೆ ಏನು ಮಾತಾಡುತ್ತಿದ್ದೆ?”
“ಅವಳು, ಈ ದಿನ ಸಂತೆಯ ದಿನವಲ್ಲ, ಮುಂದಿನ ವಾರ ಸಂತೆಯ ದಿನ, ಅಂದರೆ ಇನ್ನೆಂಟು ದಿನಗಳಲ್ಲಿ ತನ್ನ ತಾಯಿಯ ಮನೆಗೆ ಹೋಗುತ್ತೇನೆಂದಳು. ‘ನನ್ನ ತಂದೆಯ ಮನೆಯೂ ಅಲ್ಲೇ ಹತ್ತಿರ. ಆದರೆ ನನಗೆ ತಂದೆತಾಯಿಯಿಬ್ಬರೂ ಇಲ್ಲ’ ಎಂದೆ. ಅವಳು ಸ್ವಲ್ಪ ಮರುಗಿದಳು. ಹಾಗೇ ಅವಳು ಮಿಂದು ಹೋದಳು. ಅವಳು- ಮೀಯುವ ನೀರು ಮಡಿಯಾಗಲೆಂದು ಸ್ವಲ್ಪ ಕಾದು ನಾನು ಮಿಂದು ಬಂದೆ. ಅಷ್ಟೆ.”
“ಹೆತ್ತವರು ಸತ್ತರೂ ಅವರ ಹೆಸರಿಗೂ ಮಸಿ ಬಳೆಯಲು ಅವರ ನೆನಪೇಕೆ ನಿನಗೆ? ನೀರು- ಮಡಿಯಾಗಲೆಂದು ಕಾಯುತಿದ್ದೆಯಾ? ಅಥವಾ ಅವಳು ಅತ್ತ ಹೋಗುತ್ತಲೇ ಅವಳು ಅಲ್ಲಿ ಬಿಟ್ಟುದನ್ನು ಎತ್ತಿತರಲು ಕಾಯುತಿದ್ದೆಯಾ?”
“ಅವಳು ಬಿಟ್ಟುದೇನು?-ಓಹೋ! ನಾನು ಬರುವಾಗ ದಾರಿಯಲ್ಲಿ ನನ್ನನ್ನು ಪುನಃ ಮಾತಾಡಿಸಿ ತನ್ನ ಕೊರಳ ಗೆಜ್ಜೆಟೀಕನ್ನು ಕೆರೆಯ ಬಳಿ ನೋಡಿದೆನೆ?-ಎಂದಳು. ಅವಳ ಕೊರಳಿಗಿದ್ದಾಗ ಸಹ ನಾನು ನೋಡಿದ್ದಿಲ್ಲ ಎಂದೆನು. ಅಷ್ಟೇ, ಅವಳು ಅತ್ತ ಹೋದಳು, ನಾನು ಇತ್ತ ಬಂದೆ.”
”’ಇತ್ತ ಬಂದೆ’ ಎನ್ನಬೇಡ, ‘ಇತ್ತ ತಂದೆ’ ಎನ್ನು. ಎಲ್ಲಿಟ್ಟಿದ್ದಿ ಅದನ್ನು? ಈಗಲೇ ಕೊಡು. ನಾನು ಬಡವನು. ಈ ಮನೆ, ಹಿತ್ತಿಲು ಎಲ್ಲವೂ ಪಟೇಲರದು. ಅವರ ಪಟೇಲಿಕೆಯೂ, ನನ್ನ ಶಾನುಭೋಗಿಕೆಯೂ ನನ್ನವಾದರೂ, ನಮ್ಮಿಬ್ಬರ ಜೀವನವು ನಡೆಯುತ್ತಿರುವುದು ಅವರ ಅನುಗ್ರಹದಿಂದ. ಬಡತನವಿದ್ದರೆ ಚಿಂತಿಲ್ಲ. ಮೂಗುತಿಯಿದ್ದರೆ ಸಾಕು. ಮಂಗಲ ಸೂತ್ರ ಸಾಕು; ಗೆಜ್ಜೆಟೀಕಿನ ಆಸೆ ಮಾಡಬೇಡ. ಇದಾರಿಗೂ ಗೊತ್ತಿಲ್ಲ. ನಿನ್ನಲ್ಲಿ ಯಾರೂ ತಪ್ಪೆಣಿಸಿಲ್ಲ. ಭೂತಕ್ಕೆ ಹೇಳಿಕೊಂಡಿದ್ದಾರೆ. ಮಾರೀ ಗುಡಿಗೆ ಬಲಿಯಾಗುವೆ. ಅದನ್ನು ಇತ್ತ ಕೊಡು. ಅಥವಾ ಎಲ್ಲಿದೆಯೆಂದು ಹೇಳು. ನಾನು ಅದು ಕೆರೆಯ ಬಳಿಯಲ್ಲೇ ಸಿಕ್ಕಿತೆಂದು ಪಟೇಲರಿಗೆ ಹೇಳಿ ನಂಬಿಸಿ ಬರುತ್ತೇನೆ. ಇತ್ತ ಕೊಡು. ಮೂರನೆಯವಳು ನೀನು. ನೀನು ಸತ್ತರೆ ನನಗೆ ಬಹಳ ಸಂಕಷ್ಟ. ಇನ್ನೊಂದು ಮದುವೆಯಾಗುವುದೂ ಕಷ್ಟ. ನಾನು ಅಡುಗೆ ಮಾಡಿಕೊಂಡಿರುವುದೂ ಕಷ್ಟ, ಮಕ್ಕಳಿಲ್ಲದೆ ಸಾಯುವುದೂ ಕಷ್ಟ. ಮನೆಕೆಲಸಕ್ಕೆ ಇಟ್ಟುಕೊಂಡು ಇತರರಿಂದ ಮನೆವಾರ್ತೆ ಸಾಗಿಸುವುದೂ ಕಷ್ಟ. ಇತ್ತ ಕೊಡು, ಅಯ್ಯೋ-ನಿನ್ನನ್ನು ಮುಟ್ಟುವುದಕ್ಕಿಲ್ಲವಲ್ಲಾ! ಶೂರ್ಪನಖಿಯಂತೆ ನಿನ್ನನ್ನು ಮಾಡಿಬಿಡುತ್ತಿದ್ದೆ. ಆದರೂ ನೋಡು. ದಂಡಿಸಬೇಕಾಗುವುದು; ಅನ್ನಾಹಾರ ಕೊಡಲಾರೆ. ಇತ್ತ ಕೊಡು. ಇಲ್ಲದಿದ್ದರೆ ತಲೆಯ ಮೇಲೆ ಕಲ್ಲು ಹೊತ್ತು ಹಾಕುತ್ತೇನೆ. ಬೇಗ ಕೊಡು.”
ನಾಗಮ್ಮ ಅಂಗಳದಲ್ಲಿ ಬಿಸಿಲಿಗೇ ಕೂತಿದ್ದಳು. ನಕ್ಷತ್ರ ಕಂಡು ಕೂತಿದ್ದವಳು ಈಗ ಆ ನಕ್ಷತ್ರಗಳೆಲ್ಲ ಒಂದಾಗಿ ಚಂದ್ರನಂತಾಗಿ, ಆ ಚಂದ್ರನೇ ಅಡ್ಡವಾಗಿ ಕಪ್ಪು ಮೋಡದಂತಾಗಿ, ಅದರಿಂದ ಜಡಿಮಳೆ ಸುರಿದಂತಾಗಿ… ಗೊಳೋ ಎಂದು ಅತ್ತಳು. ಮುಟ್ಟಾದವಳು ನೀರನ್ನು, ಮೀಯುವ ಮೊದಲು ಕುಡಿಯಲಾರದೆ, ಹಸಿವು ನೀರಡಿಕೆಗಳಿಂದ ಬೆಳಗ್ಗಿನಿಂದಲೂ ಬಾಡಿದ್ದಳು. ಪತಿದೇವನ ಒಂದೊಂದು ವಾಕ್ಯ, ಅದರೊಡನೆ ಹರಿದ ಬಿಸಿ ಉಸಿರು, ಅವನ ಕೈಕಣ್ಣುಗಳ ಕರಾಳ ಅಭಿನಯ, ಅವನ ಭೂತ, ಮಾರಿ, ಶೂರ್ಪನಖಿಗಳ ಹೆಸರೆತ್ತಿದ ಬಗೆ, ನೋಟಕ್ಕಿಂತ ನಾಲಗೆಯ ತೀಕ್ಷ್ಣತೆ, ಇವುಗಳೆಲ್ಲಕ್ಕೂ ಮೇಲಾಗಿ “ತಲೆಯ ಮೇಲೆ ಕಲ್ಲು ಹೊತ್ತು ಹಾಕುವ” ಹೊಸ ವಾಗ್ದಾನ- ಇವುಗಳಿಂದಾಗಿ “ಇತ್ತ ಕೊಡು” ಎಂದು ಅವನು ಒಮ್ಮೊಮ್ಮೆ ಹೇಳುತ್ತಿದ್ದಂತೆ, ಒಂದೊಂದಾಗಿ ಅವಳ ಪ್ರಾಣಗಳು ಅವಳ ದೇಹವನ್ನು ಬಿಡುವಂತಾಗಲು, “ಬೇಗ ಕೊಡು” ಎಂದು ಅವನು ಕೊನೆಯ ಸಲ ಗರ್ಜಿಸಿದ್ದೇ, ಬಿಸಿಯಾದ ಅಂಗಳದ ಧೂಳಿನಲ್ಲಿ ತನ್ನ ಕಣ್ಣೀರ ಧಾರೆಯಿಂದ ತಂಪನ್ನುಂಟುಮಾಡುತ್ತ ಅಲ್ಲೇ ಮಲಗಿದಳು.
ಶಾನುಭಾಗರು ಬಿಡುವರೆ? “ಈ ಆಟ ನನ್ನೊಡನೆಯೆ? ಇಷ್ಟರಲ್ಲೇ ಭೂತ ಹಿಡಿಯಿತೆ? ಮಾರಿ ಬಡಿಯಿತೆ?” ಎನ್ನುತ್ತ ನಿಜವಾಗಿಯೂ ಒಂದು ಕಲ್ಲನ್ನೆತ್ತಿಕೊಂಡು ಅವಳ ತಲೆಯನ್ನು ಈಗಲೇ ಜಜ್ಜುವೆನೆಂಬಂತೆ ಅಭಿನಯಿಸಿದರು. ನಾಗಮ್ಮನ ಕೈಮೈಗಳು ರವಷ್ಟೂ ಕದಲಲಿಲ್ಲ.
ಸಂಭಾಷಣೆಯ ಸ್ವಾರಸ್ಯವನ್ನು ಕೇಳುತ್ತಿದ್ದ ಉಗ್ರಾಣಿ ಪೂವನು ಮೆಲ್ಲನೆ ಮಾಡಿನಿಂದ ಕೆಳಕ್ಕಿಳಿದು, ಸದ್ದಿಲ್ಲದೆ ಶಾನುಭಾಗರ ಹಿಂದಕ್ಕೆ ಬಂದು, ಅವರ ಕೈಗಳಿಂದ ಆ ಕಲ್ಲನ್ನು ಫಕ್ಕನೆ ಕಿತ್ತುಕೊಂಡು ಅದನ್ನು ದೂರಕ್ಕೊಗೆದನು.
ಬಹುಶಃ ತಾತ್ಕಾಲಿಕ ಉನ್ಮತ್ತತೆಯಿಂದ ನಾಗಮ್ಮನನ್ನು ಕೊಂದುದಕ್ಕೆಂದು ಶಾನುಭಾಗರು ಜನ್ಮಾಂತ್ಯದವರೆಗೂ ಬಂದೀಖಾನೆಗೆ ಹೋಗಬಹುದಾಗಿದ್ದ ಪ್ರಸಂಗದಿಂದ ಅವರನ್ನು ಪೂವನೇ ಉಳಿಸಿದನು. ಉಗ್ರಾಣಿಯೆಂದರೆ ಗ್ರಾಮಪೋಲೀಸಲ್ಲವೆ? ಕೈಯಲ್ಲಿದ್ದ ಕಲ್ಲು ಮಾಯವಾದೊಡನೆ ಶಾನುಭಾಗರಿಗೆ ಹಿಡಿದ ಆವೇಶವು- ಪಾತ್ರಿಯ ಕೈಯ್ಯಲ್ಲಿದ್ದ ಬೆತ್ತಮುದ್ರಿಕೆ ಕಿತ್ತರೆ ಮುಗಿವಂತೆ- ಮುಗಿಯಿತು.
“ಶಾನುಭಾಗರೆ! ಒಂದು ಕೊಡಪಾನ ನೀರು ತಂದು ಅಮ್ಮನ ಮುಖದ ಮೇಲೆ ಚೆಲ್ಲಬಾರದೆ? ನೀವು ತಡಮಾಡಿದರೆ ಅವರು ಸತ್ತಾರು. ಇಲ್ಲವೇ ನಾನೇ ತಂದು ಚೆಲ್ಲುತ್ತೇನೆ,” ಎಂದನವನು.
ಪೂವನೇನು ಬ್ರಾಹ್ಮಣನೆ? ಅವನು ಚೆಲ್ಲುವ ನೀರಿನ ಒಂದು ತಟಕಾದರೂ ಅವಳ ತುಟಿಗೆ ಅಂಟಿದರೆ ಅವಳ ಜಾತಿ ಕೆಡುವುದಲ್ಲ! ತಾವೇ ಓಡಿಹೋಗಿ ಒಂದು ಚೆಂಬು ನೀರನ್ನು ತಂದು ಅವಳ ತಲೆಯ ಮೇಲೆ ತಮ್ಮ ನಡುಗುವ ಕೈಗಳಿಂದ ಚೆಲ್ಲಿದರು, ಸುರಿದರು. “ನಿನ್ನನ್ನು ಮೀಯಿಸುವುದು,” ಎಂದು ಅವಳನ್ನು ಬೆದರಿಸಿ ಆಗ ಹೇಳಿದ ಮಾತಿನ ನೆನಪಾಗಿದ್ದಿತೆ ಶಾನುಭಾಗರಿಗೆ?
ಹುಡುಗಿ ಮೆಲ್ಲನೆ ಕಣ್ಣೆರದು ನೋಡಿದಳು. ಉಗ್ರಾಣಿಯು, “ಅಮ್ಮಾ! ಏಳಿ ಏಳಿ, ಇಲ್ಲಿ ಬಿಸಿಲು ಬಹಳ. ಹಟ್ಟಿಯ ಛಾವಣಿ ಮುಗಿದಿದೆ. ಅಲ್ಲಿ ಹೋಗಿ ಕೂತಿರಿ. ಊಟಕ್ಕಾದೊಡನೆ ಕರೆಯುವರು,” ಎಂದನು.
ಶಾನುಭಾಗರ ಮಾತಿಲ್ಲ. ಅಮ್ಮ ಮೆಲ್ಲನೆ ಅಲ್ಲಿಗೆ ಹೋಗಿ ಕೂತಳು. ಶಾನುಭಾಗರ ಅಂದಿನ ಅಡಿಗೆ-ಏನು ಹೇಳಬಹುದು! ನಳಪಾಕ, ಭೀಮಪಾಕ ಕೇಳಿರಬಹುದಷ್ಟೇ- ಇದು ಶಾನುಭಾಗಪಾಕ. ಉಪ್ಪನ್ನು ಬೇಯಿಸಿದರೆ ಅಕ್ಕಿಯನ್ನವಾಗುವುದುಂಟೆ? ಅಕ್ಕಿಯ ತೋವೆಗೆ ಒಗ್ಗರಣೆ ಹಿಡಿದೀತೇ? ಬದನೆ ಸುಟ್ಟದ್ದು ಸುಟ್ಟು ಬೂದಿಯಾಯಿತು. ಬೂದಿಯ- ಗೊಜ್ಜು ಆಗುವುದುಂಟೆ? ಹೀಗಿರುವಾಗ ಬಡಿಸುವುದೇನು? ಉಣ್ಣುವುದೇನು?
ಆದರೆ ಸುಖಸಂತೃಪ್ತಿ ಇಷ್ಟರಲ್ಲೇ ಒದಗಿತು. ಪುಣ್ಯಕ್ಕೆ ಅಂದು ಸ್ಮಾರ್ತ ಏಕಾದಶಿ. ನಾಗಮ್ಮನ ಅಪರಾಧ ಅಪವಾದಗಳೂ, ನಾರಾಯಣ ರಾಯರ ಉನ್ಮಾದಪ್ರಮಾದಗಳೂ ಈ ವಿಪರ್ಯಾಸದಿಂದಾದ ಉಪವಾಸದಿಂದ ಪ್ರಾಯಶ್ಚಿತ್ತ ಹೊಂದಿ ಮಾಯವಾದುವು.
ಪಟೇಲರ ಮನೆಯಲ್ಲಿ ಗೆಜ್ಜೆಟೀಕು ಸಿಕ್ಕುವ ಹಾಗೆ ಎಷ್ಟೋ ದೇವರಿಗೆ ಎಂತೆಂತಹವೋ ಹರಕೆಗಳಾದವು. ಆದರೂ ಗೆಜ್ಜೆಟೀಕಿನ ಒಂದು ಗೆಜ್ಜೆಯಾದರೂ ಠೀಕಾಗಿ ಎಲ್ಲಿದೆಯೆಂದು ತಿಳಿಯಲೂ ಇಲ್ಲ; ಅದನ್ನು ಪಟೇಲರ ಪತ್ನಿ ಹಬ್ಬಕ್ಕೆ ಹೆಂಗಸು ಏನು ಮಾಡಿರಬಹುದೆಂಬ ಪ್ರಶ್ನೆಗೆ ಯಾವ ಮಂತ್ರವಾದಿ, ಪೂಜಾರಿ, ಜೋಯಿಸ ಮೊದಲಾದವರ ಟೀಕೆಯೂ ಹೊರಡಲಿಲ್ಲ.
ರಾತ್ರಿಯೂ ನಿರಾಹಾರವೆ! ನಾಗಮ್ಮ ಹಟ್ಟಿಯಲ್ಲೇ! ನಾರಾಯಣ ರಾಯರು ಜಗುಲಿಯಲ್ಲೇ! ಗ್ರಾಮಪೋಲೀಸು-ಉಗ್ರಾಣಿ ಮನೆ-ಹಟ್ಟಿಗಳಲ್ಲಿನ ಇವರಿಬ್ಬರ ಕಾವಲಿಗಾಗಿ ಇಲ್ಲೇ.
ನಾರಾಯಣ ರಾಯರಿಗೆ ನಿದ್ದೆ ಹತ್ತದು. ಶೆಟ್ಟಿಯ ಮಾತನ್ನು ಪಟೇಲನಂತೂ- ಮುನ್ನೂರು ರೂಪಾಯಿ ಮೌಲ್ಯದ ಸೊತ್ತನ್ನು ಕಳಕೊಂಡ ಉಗ್ರಪ್ಪ ಶೆಟ್ಟಿಯಂತೂ- ನಂಬದಿರಲಾರನು. ತಿಂಗಳಿಗೊಂದು ಮುಡಿ ಅಕ್ಕಿಕೊಟ್ಟು ಆತನು ಚಿಕ್ಕ ಸಾಲೆಯ ಮಾಸ್ತರರನ್ನು ತನ್ನ ಕೆಲಸಕ್ಕೆ ಇಟ್ಟುಕೊಳ್ಳುವನು. ಒಕ್ಕಲುಗಳ ಭತ್ತ (ಕಾಣಿಕೆಗಳು ಸಹ) ತನಗೆ ತಪ್ಪುವುದು. ಇತ್ತ ಅಂಗಡಿಮನೆಗಳನ್ನು ಬಿಡಬೇಕೆನ್ನುವನು; ವ್ಯಾಜ್ಯವಾಗಲಿಲ್ಲ-ಅವನ ಅಕ್ಕಿ ದಾಸ್ತಾನು ಇಡುವ ಸ್ಥಳಕ್ಕಾಗಿ. ಅದರಿಂದ ಉಪ್ಪನ್ನದ ಕಾಸುಗಳು ಮಾಯವಾಗುವುವು. ಇಷ್ಟಕ್ಕೆಲ್ಲ ಕಾರಣ ನಾಗಮ್ಮ ಆ ಕೆರೆಗೆ ಮೀಯುವುದಕ್ಕೆ, ಶೆಟ್ಟಿ ಹೋದಾಗಲೇ ಹೋದುದರಿಂದಾಯಿತು. ನಾಗಮ್ಮನ ಮೇಲೆ ಖಂಡಿತ ಸಂಶಯವಿದ್ದರೂ ಆತನ ರಿಕಾರ್ಡೆಲ್ಲ ತನ್ನ ಸ್ವಾಧೀನದಲ್ಲಿರುವುದಕ್ಕಿಂತಲೂ ಆತನ ಒಕ್ಕಲುಗಳ ಗೇಣಿಚೀಟು ರಶೀಧಿಗಳೆಲ್ಲ ತನ್ನಿಂದಾಗಬೇಕಾದುದರಿಂದ, ತನ್ನ ಬದಲು ಮತ್ತೊಬ್ಬ ದೊರೆವವರೆಗೆ ನಾಗಮ್ಮನ ಮೇಲೆ ಸಂಶಯವಿಲ್ಲದಂತೆ ಪಟೇಲನು ತೋರಿಸಿಕೊಳ್ಳುವನು. ಆದುದರಿಂದ ತಾನೇ ನಾಗಮ್ಮನಲ್ಲಿ ಸಂಶಯವುಳಿಯದಂತೆ ಪ್ರಮಾಣ ಮಾಡಲು ಸರ್ವ ಪ್ರಯತ್ನಗಳನ್ನು ಮಾಡಬೇಕಾಗಿದೆ- ಎಂದು ಇಡೀ ರಾತ್ರಿ ಚೆನ್ನಾಗಿ ಆಲೋಚಿಸಿ ನಿಶ್ಚೈಸುತ್ತಲೇ ಮುಂಜಾವಿನ ಹುಂಜವು ಕೂಗಲು, ನಾಗಮ್ಮನನ್ನು- ಅಂತರಿಕ್ಷದಲ್ಲಿ ಗಾಳಿಪಟದಂತೆ (ಪಿಶಾಚಿಯಂತೆ ಎನ್ನಲು ಹೇಸುವೆವು) ಅಲೆದಾಡುತ್ತಿದ್ದ ಕನಸಿನಲ್ಲಿ ಇಡೀ ರಾತ್ರಿಯನ್ನು ಕಳೆದ ನಾಗಮ್ಮನನ್ನು- ಎಬ್ಬಿಸಿ, ಉಗ್ರಾಣಿ ಕಾವಲಲ್ಲಿ ಕೆರೆಗೆ ಹೋಗಿ ಮಿಂದುಬಾರೆಂದು ಕಳುಹಿಸಿದನು.
ನಾಗಮ್ಮನೊಬ್ಬಳೇ ಹೋಗಿದ್ದರೆ- ಇನ್ನಾರೂ ದಾರಿಯಲ್ಲಿ ಸಿಕ್ಕರೆ ಹಿಂದಿನ ದಿನದ ವೃತ್ತಾಂತ ಹೊರಡಬಹುದು; ಅವಳಾದರೂ ನೀರಲ್ಲಿ ಮುಳುಗಿ ಸಾಯುವಂತೆ ಪ್ರಯತ್ನಿಸಲೂಬಹುದು- ಎಂದೇ ಶಾನುಭಾಗರ ಎಚ್ಚರಿಕೆಯಿದ ಅವಳು ಮಿಂದು ಬರುವುದರೊಳಗೆ ಮುಂದಿನ ಕಾರ್ಯಕ್ರಮವು ಗೊತ್ತಾಗಬೇಕಾಗಿದೆ.
ಅದೇ ವರ್ಷವೇನೋ ನಮ್ಮ ಸೆಟ್ಲ್ಮೆಂಟು ಆಗಿದ್ದಿತು. ಯುಗ ಯುಗಕ್ಕೆ ಭಗವಂತನು ಅವತಾರವನ್ನೆತ್ತುವ ಹಾಗೆ ತಲಾಂತರಕ್ಕೊಮ್ಮೆ ನಮ್ಮಲ್ಲಿ ಸೆಟ್ಲಮೆಂಟಿನ ಅವತಾರವಾಗುವುದುಂಟು. ಅಧರ್ಮವನ್ನು ಕಿತ್ತು, ಧರ್ಮವ ದೃಢಗೊಳಿಸಿ ಭಗವಂತನು ವೈಕುಂಠಕ್ಕೆ ತೆರಳುವನು. ಪ್ರಪಂಚವನ್ನು ಅಳೆದು ಬಲಿಯನ್ನು ಮೆಟ್ಟಿ ವಾಮನನು ಇಂದ್ರನ ಪದವಿಗೆ ಕೊರತೆಯಿಲ್ಲದಂತೆ ಮಾಡಿದನು. ಸೆಟ್ಲ್ಮೆಂಟು ಮಾಡಲು ಬರುವ ಉದ್ಯೋಗಸ್ಥರು ಭೂಮಿಯನ್ನೆಲ್ಲ ಅಳೆದು ಯಾರನ್ನೂ ಮೆಟ್ಟುವುದಿಲ್ಲವೆಂದರೂ, ದೇಶದ ಸುಧಾರಣೆಯ ಖರ್ಚಿಗೆ ಕೊರತೆಯಿಲ್ಲದಂತೆ ಮಾಡುವ ವಾಮನಾವತಾರಿಗಳೇ ಆಗಿ ಮೂವತ್ತು ವರುಷಗಳವರೆಗೆ ತಮ್ಮ ನಿಜಗೃಹವನೈದುವರು.
ಈ ಅಧಿಕಾರಿಗಳ ಪರಿವಾರದಲ್ಲಿ ಆಗ ನೂರಾರು ಆಳುಗಳು ಬಂದಿದ್ದರು. ಇಲ್ಲಿಯ ಅಲೆದಾಟ ಮುಗಿದ ಬಳಿಕ ಇವರಲ್ಲಿ ಹೆಚ್ಚಿನವರಿಗೆ ಸ್ವದೇಶಕ್ಕೆ ಹಿಂದಿರುಗಲು ಮನವೇತಕ್ಕೆ ಒಡಂಬಡುವುದಿಲ್ಲವೋ ತಿಳಿಯದು. ಇವ ಜೀವನಕ್ಕೆ ತಾಯ್ನಾಡು ಹಾಲೂಡಿಸದಿರಬಹುದು. ಇಲ್ಲಿಟ್ಟ ಕಾಲು ಹಿಂದೆಗೆಯಲು ಈ ವೀರರಿಗೆ ಮನ ಒಪ್ಪದಿರಬಹುದು. ಆಗಲೇ ಇವರು ತಮ್ಮ ಸರ್ವಾಂಗಪರಿಣತ ಬುದ್ದಿಯನ್ನು ಪ್ರಕಟಿಸಿರುವರು. ಕೆಲವರ ”ಬೀಡಾ, ಸೋಡಾ” ಮಾರುವರು. ಕೆಲವರು ಕಂಚಿನ ಪಾತ್ರೆಗಳನ್ನು ಎರಕ ಹೊಯ್ಯುವರು. ಕೆಲವರು ಜಟ್ಕಾ ಸಾರಥಿಗಳಾಗುವರು. ಕೆಲವರು ನಾರುಹುಣ್ಣಿನ ಕೈಕಾಲುಗಳನ್ನು ಪ್ರದರ್ಶಿಸುವ ಅಭಿನಯ ಮಾಡುತ್ತ, ತೋಡಿ ರಾಗದಲ್ಲಿ ತಮ್ಮ ದುಃಖವನ್ನು ಹಾಡುತ್ತ ತೋಡುಗಳ ಮಗ್ಗುಲಲ್ಲೂ, ಸಾರಂಗ ರಾಗದಲ್ಲಿ ತಮ್ಮಂತರಂಗವನ್ನು ಬಹಿರಂಗಪಡಿಸುತ್ತ ದಾರಿದಾರಿಗಳಲ್ಲೂ ನಿಂತು ಕಾಸುಗಳನ್ನು ಕೂಡಿಸುವರು. ಕೆಲವರು ಉತ್ತಮವಾದ ಕಾವಿಯ ಬಟ್ಟೆ ಧರಿಸಿ ಬೇಸಿಗೆಯಲ್ಲಿ ಉಪ್ಪಾರ ಮೇಸ್ತ್ರಿಗಳಾಗಿಯೂ, ಮಳೆಗಾಲದಲ್ಲಿ ಗೋಕರ್ಣಕ್ಕೆ ಹೋಗುವ ಯಾತ್ರಿಕರಾಗಿಯೂ ಪುರುಷಾರ್ಥ, ಪರಮಾರ್ಥಗಳೆರಡನ್ನೂ ಸಾಧಿಸುವರು. ಯಾವ ಊರಾದರೇನು? ಯಾವ ಜಾತಿಯಾದರೇನು? ಯಾವುದೊಂದು ಉದ್ಯೋಗದಿಂದ ಬದುಕಬಲ್ಲವರೇ ಬಲ್ಲವರು. ಒಂದೊಂದು ವೇಳೆ ರೈಲ್ವೆ ಸ್ಟೇಶನು, ಸಂತೆ, ಮಾರ್ಕೆಟು ಮೊದಲಾದವುಗಳ ಬಳಿಯಲ್ಲಿ ಇವರ ಕೈಯಲ್ಲಿ ಯಾರು ಯಾರ ಕಿಸೆಯಲ್ಲಿಂದ ಮಾಯವಾದ ವಸ್ತುಗಳು ದೊರೆತುದುಂಟು. ಜ್ಯೋತಿಷ್ಯ, ಶಕುನ ಫಲ ಹೇಳುವುದರಲ್ಲಿ ಅಸಾಧಾರಣ ಪಾಂಡಿತ್ಯವುಳ್ಳವರೂ ಇವರಲ್ಲಿರುವರು. ಸಂಸ್ಕೃತವನ್ನು ಇವರ ಬಾಯಿಯಿಂದ ಕೇಳಿದರೆ ದೇವತೆಗಳೂ ಮರುಗುವರು- ಇವರಲ್ಲಿಷ್ಟು ಸಂಸ್ಕೃತಿಯಿಲ್ಲೆಂದು. ಇವರು ಕನ್ನಡವನ್ನಾಡಿದರೂ ಅದು ತುಳು, ತುಳುವನ್ನಾಡಿದರೂ ಅದು ತಮಿಳೋ, ಮಲೆಯಾಳಿಯೋ ಆಗಿ ವಿಚಿತ್ರ ಪ್ರತ್ಯಯಗಳನ್ನೂ, ವಿಶೇಷ ಧ್ವನಿಗಳನ್ನೂ ಕೂಡಿ ಹೊರಡುತಿದ್ದುದರಿಂದ, ಇವರು ಯಾವ ಭಾಷೆಯನ್ನಾಡಿದರೂ ಅದು ಆ ಭಾಷೆಯಾಗಿರದೆ ಮನುಷ್ಯಮಾತ್ರರಿಗೆ ಸಂಬಂಧವಿರದ ದೇವಭಾಷಾಸಾರೂಪ್ಯವನ್ನು ಹೊಂದುವಂತಾಗುವುದು. ಇದಕ್ಕಾಗಿಯೇ ಮಾತೆಲ್ಲವೂ ನಾನೇ- ಅಕ್ಷರವೆಲ್ಲವೂ ನಾನೇ- ಎಂದು ಹಿರಿಯರ ಪವಿತ್ರ ವಾಕ್ಯವಿದೆ.
ಹೀಗೆ ಹಿಂದುಳಿದ ಆಳುಗಳಲ್ಲಿ ಆ ವೂರಿಗೆ ಸಮೀಪದ ಗ್ರಾಮದಲ್ಲಿ ಕಲ್ಲುಕುಟಿಗ- ಮಂತ್ರವಾದಿ- ಕಂಚುಗಾರನೊಬ್ಬನಿದ್ದನು. ಪ್ರೇತಗಳ ಉಚ್ಚಾಟನೆ, ಭೂತಬಾಧಾನಿವಾರಣೆ, ಗ್ರಹಪೀಡಾ ಶಾಂತಿ, ಇವುಗಳಿಂದ ಹಣ ಸಂಪಾದನೆಯಾಗದಿದ್ದರೆ ಮಾತ್ರ ಇವನು ಕಂಚುಗಾರನು; ಅದೂ ಸಾಗದಿದ್ದರೆ ಕಲ್ಲುಕುಟಿಗನು. ಆದರೆ ತನಗಾಗಿ ಒಂದು ತೋಟವನ್ನೂ ಮಾಡಿಕೊಂಡಿರಲಿಲ್ಲ. ಅಂತಹ ನಿಪುಣ. ತೋಟಗಾರನಾಗುವ ಬದಲು ಮಾಟಗಾರನಾಗುವುದುತ್ತಮವೆಂದೇ ಇವನ ಅಭಿಪ್ರಾಯವೆಂದು ಗ್ರಾಮದಲ್ಲಿನ ವೀರಭದ್ರಗುಡಿಯ ಕೀಳುಶಾಂತಿ- ಮೇಲುಶಾಂತಿಗಳು ಇವನನ್ನು ದೂರುತ್ತ ತಮ್ಮ ಮಾತ್ಸರ್ಯವನ್ನು ಸಮಾಧಾನಮಾಡಿಕೊಳ್ಳುತ್ತಿದ್ದರು.
ಇವನ ನೆನಪು ಶಾನುಭಾಗರಿಗೆ ಆ ದಿನ ಬೆಳಿಗ್ಗೆ ಉಂಟಾಯಿತು. ಪೂವನು ರಾತ್ರೆಗೆ ಮನೆಗೆ ಬಾರದಿರಲು ಕಾರಣವೇನೆಂದು ಸುಖನಿದ್ರೆಯಿಂದೆದ್ದುಬಂದ ಬಾಡಿದ ಮೋರೆಯ ರುಕ್ಕು ಹೆಂಗಸು (ಉಗ್ರಾಣಿಯ ಪತ್ನಿ) ಈ ನೆನಪಿಗೆ ಹಾಯಾಗಿ ಒದಗಿದಳು. ರುಕ್ಕು ಹೆಂಗಸನ್ನು ಒಮ್ಮೆ ಕಂಡಮೇಲೆ ಅವಳ ನೆನಪು ಅಳಿಸಿಹೋಗುವುದು ಕಡಿಮೆ. ಆವೂರಿನಲ್ಲಿ ಯಾವುದೊಂದು ಬಗೆಯಲ್ಲಿ ಗಣನೆಗೆ ಬರುವ ಯಾವ ಗಂಡಸೂ, ಹೆಂಗಸೂ ಇವಳೊಡನೆ ಸಂಭಾಷಿಸದೆ ಇಲ್ಲ. ಕ್ಷತ್ರಿಯರ ಮೈಕಟ್ಟು, ಕುದುರೆಯ ನಡಿಗೆ, ಡ್ರಿಲ್ ಜಮೇದಾರನ ಬಾಯಿ! ಇವನ್ನು ನೋಡಿಯೇ ಕೆಲವರು ಇವಳು “ಗ್ರಾಮ ಪೋಲೀಸಿ” ಎಂದು ಕುಚೋದ್ಯ ಮಾಡುತ್ತಿದ್ದರು. ಆದರೂ ರುಕ್ಕು ನಿಜವಾಗಿಯೂ ರುಕ್ಮಿಣಿಯ ತದ್ಭವರೂಪವಾಗಿದ್ದಳು, ಎಂದರೆ ಅವಳ ಬಣ್ಣನೆ ಮುಗಿವಂತಿದೆ.
ಶಾನುಭಾಗರು ನಸುನಕ್ಕರು. ರುಕ್ಕುವಿಗೆ ತನ್ನ ಈ ಮನೋರಮಣನ ವಿಷಯವಾಗಿ ಧೈರ್ಯವೂ ನಿಶ್ಚಿಂತೆಯೂ ಆಗಲು, ಅವರು, “ರುಕ್ಕೂ- ಆ ಮಂತ್ರವಾದಿಯನ್ನು ಇಲ್ಲಿಗೆ ಬರಮಾಡಬೇಕು. ಈ ಗಳಿಗೆಯಲ್ಲಿ ನಾಗಮ್ಮ ಮಿಂದುಬರುವಾಗ ಅವನು ಇಲ್ಲಿ ಹಾಜರಿರಬೇಕು,” ಎಂದು ಉಗ್ರಾಣಿಗೆ ಕೊಡುವ ಅಪ್ಪಣೆಗಳನ್ನು ಉಗ್ರಾಣೀಪತ್ನಿಗೆ (ವಿನಯದಿಂದ) ಕೊಡುತ್ತ, ಅವಳ ಕುತೂಹಲಸಮಾಧಾನಕ್ಕಾಗಿ ಏಕೆಂಬ ಯಾವತ್ತೂ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಿದರು. ರುಕ್ಕು (ಸಿಟ್ಟಾಗಬಾರದು) ಬೆಕ್ಕಿನಂತೆ ಮಂತ್ರವಾದಿಯ ಮನೆಯ ಕಡೆಗೆ ತೆರಳಿದಳು; ಒಂದೆರಡು ಬಾರಿ ಹಿನ್ನೋಟ ಬೀರಿದಳು; ಅದೇಕೆಂದು ಯಾರು ಬಲ್ಲರು? ಇದು ಅವಳ ಪದ್ಧತಿಯೆಂದೇ ಕೆಲವರು, ಇದು ರುಕ್ಕುವಿನ ಸೊಕ್ಕು ಎಂದೇ ಕೆಲವರು ಎನ್ನುವುದಿದ್ದಿತು. ಇರಲಿ; ನಮಗೇನು?
ರುಕ್ಕು ಮಂತ್ರವಾದಿಯ ಮನೆಗೆ ಹೋಗುವಾಗ- ಅವನು ಹಣೆಗೆ ಭಸ್ಮ ಹಚ್ಚಿಕೊಳ್ಳುತ್ತ, ಕೈಲಾಸದಲ್ಲಿ ಪಾರ್ವತಿಯನ್ನೇ ಅರ್ಧಾಂಗವನ್ನಾಗಿಟ್ಟುಕೊಂಡ ಶಿವಶಂಕರನನ್ನು ಆತನ ಯೋಗನಿದ್ರೆಯಿಂದ ಎಬ್ಬಿಸುವಂತೆ ಕೂಗುತಲಿದ್ದಾನೆ! ರುಕ್ಕುವಿಗೆ ವೀಳೆಯ ಜಗಿಯಕೊಟ್ಟು, ಗ್ರಾಮ ಉದ್ಯೋಗಸ್ಥರಾಗಿರುವ ಶಾನುಭಾಗರು ತನ್ನಂತಹ ಪ್ರಜೆಯನ್ನು ಅಷ್ಟು ತ್ವರೆಯಾಗಿ ಬರಲು ಹೇಳಿಕಳುಹಿಸಿದ ಕಾರಣವೇನೆಂದು ರುಕ್ಕುವು ತಿಳಿಸದೆಯೇ ತಿಳಿದುಕೊಂಡನು. ಕವಡಿಗಳ ಚೀಲ, ಪಂಚಾಂಗದಂತಹದೊಂದು ಪುಸ್ತಕ, ಜೇಡಿಯ ತುಂಡು, ಎಲ್ಲವನ್ನೂ ತೆಗೆದುಕೊಂಡು ಎದ್ದು ರುಕ್ಕುವಿನೊಡನೆಯೇ ಶಾನುಭಾಗರಲ್ಲಿಗೆ ಬಂದರು. ಹಾದಿಯಲ್ಲಿ ನಡೆದು ಬರುತ್ತ ಅವರೊಳಗೆ ನಡೆದ ಮಾತುಕತೆ ಬರೆಯಲು ನಾವು ಸಮರ್ಥರಲ್ಲ. ಅದನ್ನು ಬರೆಯಬೇಕೆಂದಿದ್ದೆವು; ಬರೆದರೆ ಅವನಾಡುವ ಆ ದೇವಭಾಷಾಸಾರೂಪ್ಯ ಹೊಂದಿದ ತುಳುಕನ್ನಡಗಳ ಪರಿಚಯವು ಸಾಕಷ್ಟಾಗುತಿದ್ದಿತು. ಆದರೆ ಅದಕ್ಕನುಕೂಲವಾದ ಅಕ್ಷರ ಸಾರೂಪ್ಯವುಳ್ಳ ಅಚ್ಚಿನ ಮೊಳೆಗಳು ಇನ್ನೂ ಸಿದ್ಧವಾಗಿಲ್ಲ. ಈ ಮಂತ್ರವಾದಿಯೇ ಮಾತ್ರ ಅದನ್ನು ಕಂಚಿನಲ್ಲಿ ಎರಕ ಹೊಯ್ದು ಕೊಡಬಹುದಾಗಿದ್ದಿತು. ಆದರೆ ಅದಕ್ಕೂ ಅವನಿಗೆ ಪ್ರೋತ್ಸಾಹ ದೊರೆತಿಲ್ಲ. ಈ ದಿನಗಳೇ ಇಂತಹವು. ಉದ್ಯೋಗ ಮಾಡಬಲ್ಲವರು ನಿರುದ್ಯೋಗಿಗಳಾಗುವಂತೆ ನಾವು ಮಾಡುತ್ತೇವೆ. ಕೂಡಲೇ ನಿರುದ್ಯೋಗಿಗಳ ಸಮಸ್ಯೆ ಬಿಡಿಸಲು ಗಂಭೀರ ತರ್ಕಗಳನ್ನು ಮಾಡುತ್ತೇವೆ. ಹೀಗಾಗಿ ಕಂಚುಗಾರನು ಮಂತ್ರವಾದಿಯಾಗಬೇಕಾಯಿತಲ್ಲದೆ ನೂತನಭಾಷಾಶಬ್ದಗಳನ್ನು ಮುದ್ರಣ ಮಾಡಲು ಯೋಗ್ಯ ಸಹಾಯಕನಾಗಲಾರದೆ ಉಳಿಯುವಂತಾದ ದೋಷವು ಇತರರ ಪಾಲಿಗೆ ಬಂದಿತು.

ಶಾನುಭಾಗರು ಮಂತ್ರವಾದಿಯನ್ನು ಕೂಡಿಸುತ್ತಲೇ ಅವನು ತಾನು ಕಲ್ಲುಕುಟಿಗನಾಗಿದ್ದು ಕಟ್ಟಿದ ಯಾವುದೋ ಒಂದು ಮನೆಯ ಕೋಣೆಗಳ ನಕಾಶವನ್ನು ಜೇಡಿಮಣ್ಣಿನ ತುಂಡಿನಿಂದ ಬರೆದು, ಆಯಾ ಕೋಣೆಯಲ್ಲಿ ಇಷ್ಟಿಷ್ಟು ಕವಡಿಗಳನ್ನಿಟ್ಟು, ನಾಲ್ಕಾರು ದೇವರ ಹೆಸರುಗಳನ್ನು ಉಚ್ಚರಿಸಿ ಪ್ರಶ್ನೆ ಹೇಳತೊಡಗಿದನು. ನಮ್ಮ ಮಾತಿನಲ್ಲಿ ಅದರ ಅಭಿಪ್ರಾಯ ಚಮತ್ಕಾರವು ಹೀಗಾಗಿದೆ:-
ಬಹು ಬೆಲೆಯದೊಂದು ವಸ್ತು ಕಾಣೆಯಾಗಿದೆ. ಅದನ್ನು ಯಾರೋ ಒಬ್ಬರು ಕದ್ದಿರಬಹುದಾಗಿ ಅನುಮಾನವೂ ಇದೆ. ಕದ್ದಿರಬಹುದಾದ ವ್ಯಕ್ತಿ ಕದ್ದುದಲ್ಲ. ಆದರೆ ಜಲದುರ್ಗೆಯ ಪ್ರೇರಣೆಯಿಂದ ಆ ವಸ್ತುವನ್ನು ಅಡಗಿಸಿಟ್ಟ ಮಾಯೆಯಾಗಿದೆ. ಆ ವ್ಯಕ್ತಿಯನ್ನು ಹಿಡಿದ ಜಲದುರ್ಗೆಯನ್ನು ಉಚ್ಚಾಟನೆಗೊಳಿಸಬೇಕು. ಆಗ ದುರ್ಗೆ ಬಿಟ್ಟುಹೋಗುವಾಗ ಆ ವಸ್ತುವನ್ನು ವ್ಯಕ್ತಿಯ ಕೈಯಿಂದ ತಂದೊಪ್ಪಿಸುವಳು. ಜಲದುರ್ಗೆಯನ್ನು ಓಡಿಸಲು ಅಗ್ನಿದರ್ಶನವಾಗಬೇಕು. ಅಗ್ನಿಕುಂಡವನ್ನು ಮಾಡಿ ವ್ಯಕ್ತಿಯನ್ನು ಅದರ ಬಳಿ ನಿಲ್ಲಿಸಿ, ಕುಳ್ಳಿರಿಸಿ, ಬೆಂಕಿಯನ್ನು ಮುಟ್ಟಿಸಿ, ಕಂಡಗಳಿಂದ ಮೀಯಿಸಿ ವ್ಯಕ್ತಿಯ ಮೈಯಲ್ಲಿ ತುಂಬಿರುವ ಜಲದುರ್ಗೆಯನ್ನು ಓಡಿಸುವ ಪ್ರಯತ್ನ ಮಾಡಿದಲ್ಲಿ ಕಾರ್ಯವು ಕೈಗೂಡುವುದು.
ಇಷ್ಟು ಚೆನ್ನಾಗಿ, ವಿಜ್ಞಾನಶಾಸ್ತ್ರಕ್ಕೆ ಸರಿಯಾಗಿ, ಗ್ರಾಮ್ಯ ನಂಬಿಕೆಗಳಿಗೆ ಒಪ್ಪುವಂತೆ, ರುಕ್ಕುವಿನೊಡನೆ ನಾಲ್ಕ ಮಾತು ಆಡುವುದರೊಳಗೆ ಇವನು ಹೇಗೆ ಸ್ಪಷ್ಟವಾಗಿ ಪ್ರಶ್ನೆಯನ್ನು ಉತ್ತರಿಸುವನೆಂಬುದು ಚಮತ್ಕಾರವಲ್ಲವೆ! ಮಂತ್ರವಾದಿಯೆಂದರೆ ಸುಮ್ಮನೆ ಮಂತ್ರಬಲದಿಂದಲೇ ಆಗಲಾರನು; ವಾದಿಯೂ ಆಗಿರಬೇಕು.
ಆಗಲೇ ಮಿಂದು ಬಂದ ನಾಗಮ್ಮನನ್ನೇ ಜಲದುರ್ಗೆಯು ಪ್ರವೇಶ ಹೊಂದಿದ್ದಾಳೆಂದು, ನಾರಾಯಣ ರಾಯರು ಉಗ್ರಾಣಿಯಿಂದ ಒಂದು ಚಿಕ್ಕ ಹೊಂಡ ತೋಡಿಸಿ, ಅದರಲ್ಲಿ ಕಂಟಿಕಡ್ಡಿ ಎಲೆಗಳನ್ನು ಕೂಡಹಾಕಿ, ಬೆಂಕಿ ಹೊತ್ತಿಸಿ, ಆಗಾಗ ಛಾವಣಿಗಾಗಿ ತಂದಿದ್ದ ಹುಲ್ಲನ್ನು ಉರಿಸಿ, ಅಗ್ನಿಕುಂಡವನ್ನು ನಿರ್ಮಿಸಿ, ಮಂತ್ರವಾದಿಯು ಕಾರ್ಯಕ್ರಮವನ್ನು ಪ್ರಾರಂಭಿಸಬಹುದೆಂದರು.
ನಾಗಮ್ಮನಿಗೆ ಕನಸಿನಲ್ಲಿ ಕಂಡುದೆಲ್ಲ ಮಾಯವಾಗಿದ್ದಿತಾದರೂ ಮನಸ್ಸಿನಲ್ಲೇನೂ ಮಾಯವಾಗಿದ್ದಿಲ್ಲವಷ್ಟೆ. “ಕಲ್ಲಿನ ಬದಲಾಗಿ ಕೆಂಡ”ವೆಂದೆಣಿಸಿದಳು. ಬಾಯಿ ಬಾರದು.
ಮಂತ್ರವಾದಿಯೂ ಗಂಡನೂ ಕೇಳುತ್ತಲೇ ಇದ್ದ ಪ್ರಶ್ನೆಗಳಿಗೆ “ನಾನೊಂದೂ ಅರಿಯೆ,” ಎಂದೇ ಉತ್ತರ ಕೊಡುತ್ತಿದ್ದಂತೆ- ಕುಂಡದ ಬಳಿ ಅವಳು ಕೂತಿರಬೇಕೆಂದಾಯಿತು. ಮಿಂದುಟ್ಟ ಒದ್ದೆ ಸೀರೆಯು ಮೈಮೇಲೆಯೇ ಒಣಗಹತ್ತಿತು. ಕೂದಲು ಕಟ್ಟಿಕೊಂಡಿರಲಿಲ್ಲ, ಒಣಗಲೆಂದು; ಅದೆಲ್ಲ ಬೆಂಕಿಯ ಧಗೆಗೆ ಒಣಗುತ್ತ, ಗಾಳಿಗೆ ತೂಗುತ್ತ, ಬೆಂಕಿಯ ನಾಲಿಗೆಗಳನ್ನು ಸೋಕುತ್ತ, ಅಷ್ಟಷ್ಟೇ ತುದಿಗಳು ಸುಡುತ್ತ ಕರಿಯಾದುವು. ನಿರಾಹಾರ, ದುಃಖ, ಜಾಗರಣ ಇವುಗಳಿಂದಾಗಿ ಕೆಂಪಗೆ ಉರಿಯುತ್ತಿದ್ದ ಕಣ್ಣುಗಳಲ್ಲಿ ಈ ಕುಂಡದಿಂದೇಳುವ ಹೊಗೆಯು ಇನ್ನಷ್ಟು ಉರಿಯನ್ನೂ ಚುರುಕನ್ನೂ ಹಬ್ಬಿಸಿತು. ಬಾಡಿದ ಮುಖ ಒಣಗಿತು. ಬಳಲಿದ ದೇಹ ದಣಿಯಿತು. ಜ್ವರವೇರಿತು.
ಕುಂಡದಲ್ಲಿ ಇನ್ನೂ ಮುಳಿಹುಲ್ಲು, ಕಡ್ಡಿಗಳು ಮತ್ತು ಸೌದೆಯ ಚೂರು ಸುರಿಯಲು, ಪ್ರಶ್ನೆಗಳು ಮಳೆಗರೆಯಲು ಉತ್ತರವು ಹೊರಡದಿರಲು- ನಾಗಮ್ಮನು ದೊಪ್ಪನೆ ಕುಂಡದೊಳಗೆ ಬಾಗಿ ಬಿದ್ದಳು. ನಾರಾಯಣ ರಾಯರು ಅವಳನ್ನು ಎತ್ತಲು ಧಾವಿಸಿದರು. ಮಂತ್ರವಾದಿಯು ತಾನೇ ಅವಳನ್ನು ಎತ್ತಿದನು. ತಲೆ, ಮುಖ, ಎದೆಯ ಬಟ್ಟೆ- ಇಷ್ಟೇ ಸ್ವಲ್ಪ ಸ್ವಲ್ಪ ಮಾತ್ರ ಸುಟ್ಟಿದ್ದುವು. ಮಂತ್ರವಾದಿಯು, “ಜಲದುರ್ಗೆಯಿನ್ನು ಕೂಡಲೇ ಹೊರಡುವಳು,” ಎಂದನು. ನಾರಾಯಣ ರಾಯರು, ”ಸುಟ್ಟಲ್ಲಿಗೆ ಏನು ಮುಟ್ಟಿಸಬೇಕು?” ಎಂದರು. ಬೆಣ್ಣೆಯೆಂದಾಯಿತು; ಅದಿಲ್ಲ. ಸೆಗಣಿಯೆಂದಾಯಿತು. ಈ ವೇಳೆಗೆ ತಕ್ಕ ಬೆಣ್ಣೆ!
ನಾಗಮ್ಮನ ಮಾತಿಲ್ಲ! ಉಸಿರೇಳುತ್ತಿದೆ! ಬೆದರಿದರು! ಆದರೂ ಮಂತ್ರವಾದಕ್ಕೆ ಆತಂಕವೇ?
ಅಷ್ಟರಲ್ಲಿ ಪಟೇಲರ ಮನೆಯಿಂದ ಹತ್ತಿಪ್ಪತ್ತು ಮಂದಿ ಒಕ್ಕಲುಗಳು ಶಾನುಭಾಗರಲ್ಲಿಗೆ ಅವರನ್ನು ಕರೆಯಬಂದರು. ”ನಿನ್ನೆಯಿಂದ ಶಾನುಭಾಗರೇ ಇಲ್ಲ. ಗೆಜ್ಜೆಟೀಕನ್ನು ಹಿಡಿದು ಗಂಡನು ಮಾಯವಾದನೇ? ನೋಡೋಣ!” ಎಂದು ಪಟೇಲರು ಈ ನೆವದಿಂದ ಒಕ್ಕಲುಗಳನ್ನು ಅಲ್ಲಿಗೇ ಕಳುಹಿಸಿದ್ದರು. ಈ ಪರಿಯನ್ನು ನೋಡಿ ಅವರಿಗೆ ಅರ್ಥವಾಗದೇ? ಆದರೂ ಮಂತ್ರವಾದದ ಕಾರ್ಯಕ್ಕೆ ವಿಘ್ನವಾದೀತೆಂದು ಅವರೂ ಸುತ್ತುಗಟ್ಟಿ ನಿಂತರು.
ಮಂತ್ರವಾದವೇನೋ ಸಾಗಿತು; ನಾಗಮ್ಮನಿಗೆ ಮಾತ್ರ ಪ್ರಜ್ಞೆಯಿಲ್ಲ.
ಮಂತ್ರವಾದಿಯು, ”ಇನ್ನು ರಾಹುಕಾಲ, ಇದು ದಾಟುವತನಕ ನನ್ನಿಂದೇನೂ ಸಾಗದು,” ಎಂದು ದೂರವಾದನು. ಶಾನುಭಾಗರು, ”ಇನ್ನೂ ಬಾಯಿ ಬಿಡುವುದಿಲ್ಲಯ್ಯ! ನಿನ್ನದೆಂತಹ ಮಂತ್ರ?” ಎಂದು ಗದರಿಸಿದರು; ಅಂತರಂಗದಲ್ಲಿ ಬೆದರಿದರು. ಜನ ಕೂಡಿದುದಕ್ಕೆ ಒಮ್ಮೆ ಹೆದರಿದರು; ಮತ್ತೊಮ್ಮೆ ”ನಾನೆಷ್ಟು ಪಟೇಲರಿಗಾಗಿ ಸೊತ್ತು ಸಿಗುವಂತೆ ಪ್ರಯತ್ನಿಸುತ್ತಿದ್ದೇನೆಂದು ಇವರೂ ಸಾಕ್ಷ್ಯ ನುಡಿಯುವರು. ಚೆನ್ನಾಯಿತು” ಎಂದು ಸಮಾಧಾನ ಮಾಡಿಕೊಂಡರು.
ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು
ಸುಮಾರು ಹನ್ನೆರಡು ಹೊಡೆಯುವ ಹೊತ್ತು. ಕಲೆಕ್ಟರರ ಬಟ್ಲರನು ಶಾನುಭಾಗರಲ್ಲಿಗೆ ಬಂದನು. ಅವನು ಎರಡು ತಾಸುಗಳ ಹಿಂದೆ ಆ ಕಂಚುಗಾರನಲ್ಲಿಗೆ ಹೋಗಿದ್ದನು. ಕಲೆಕ್ಟರರು ಅಂದೇ ರಾಜಧಾನಿಗೆ ಹೊರಡುವರು. ಅವರಿಗೆ ಆ ಊರಲ್ಲಿ ಜನರು ಪೂಜಿಸುವ ದೇವತೆಗಳ ಕಂಚಿನ ವಿಗ್ರಹಗಳಿದ್ದರೆ ಬೇಕಾಗಿದ್ದಿತು. ಅಂತಹವನ್ನು ಅವರೆಷ್ಟೋ ಸಂಗ್ರಹಿಸಿದ್ದಾರೆ. ಕಂಚುಗಾರನು ಇಲ್ಲಿಗೆ ಬಂದುದನ್ನು ತಿಳಿದು ಬಟ್ಲರನೂ ಇಲ್ಲಿಗೇ ಬಂದಿದ್ದನು.
“ಪಂಜುರ್ಲಿಯದೊಂದು ಚೆಲುವಾದ ವಿಗ್ರಹ ಉಂಟು. ನಾಲ್ಕು ರೂಪಾಯಿಗೆ ಕೊಡಬಹುದು. ಗಿರಾಕಿಗಳಿಲ್ಲದೆ ಒಳಗೇ ಉಳಿದಿದೆ. ಹೊಸ ಭೂತಗುಡಿಯೇ ಆಗಲಿಲ್ಲವಲ್ಲ. ನೀವಾದರೂ ಕೊಂಡು ಹೋಗಿರಿ. ಈ ಮಂತ್ರವಾದ ಮುಗಿಯುತ್ತಲೇ ಇನ್ನೆರಡು ತಾಸುಗಳಲ್ಲಿ ಬಂಗಲೆಗೆ ತರುತ್ತೇನೆ,” ಎಂದು ಕಂಚುಗಾರನೆಂದನು. ಬಟ್ಟರನು ಅಲ್ಲಿಂದ ಎಲ್ಲವನ್ನೂ ನೋಡಿ ಹೊರಟುಹೋದನು.
ಕಂಚುಗಾರನ ಮನಸ್ಸು ನಾಲ್ಕು ರೂಪಾಯಿ ಸಿಗುವ ವ್ಯಾಪಾರದ ಮೇಲೆ. ಶಾನುಭಾಗರ ಮನಸ್ಸು ಮಂತ್ರವಾದ ಮುಗಿಸದಿರುವ ಮಂತ್ರವಾದಿ ಕಂಚುಗಾರನ ಮೇಲೆ. ಹೀಗಾಗಿ ಸ್ವಲ್ಪ ಕಲ್ಮಷ ಹುಟ್ಟಿತು. ಮಂತ್ರ ಮುಗಿಸದೆ, ಜಲದುರ್ಗೆಯನ್ನು ಹೊರಡಿಸದೆ ಕಂಚುಗಾರನು ಹೋಗಲಾರನು; ಅವನು ಹೋಗದೆ, ಪಂಜುರ್ಲಿಯ ವಿಗ್ರಹ ಕಲೆಕ್ಟರರ ಕೈಸೇರದು. ಅಂತೂ ರಗಳೆಗಿಟ್ಟಿದೆ.
ಅರೆತಾಸಿನೊಳಗೆ ಪಟೇಲರು, ಉಗ್ರಾಣಿ ಮತ್ತು ಶಾನುಭಾಗರು ಕಲೆಕ್ಟರರ ಬಂಗಲೆಗೆ ಬರಬೇಕೆಂದೂ, ಕಂಚುಗಾರನೂ ಅಲ್ಲಿಗೆ ಬರಬೇಕೆಂದೂ ದೊರೆಗಳ ಅಪ್ಪಣೆಯಾಗಿದೆಯೆಂದು ಬಟ್ಲರನೇ ಅಲ್ಲಿಗೆ ಬಂದು ತಿಳಿಸಿದನು. ಮೀರುವುದಕ್ಕುಂಟೇ? ಇಷ್ಟೂ ಮಂದಿ ಹೊರಡುವಾಗ ದೊರೆಗಳೇ ಅಲ್ಲಿಗೆ ದಯಮಾಡಿಸಿದರು!
”ನಿಮಗೆಲ್ಲರಿಗೆ ಅಲ್ಲಿಗೆ ಬರಹೇಳಿದ್ದೆ. ಆದರೆ ಇಲ್ಲಿ ನಿಮ್ಮ ಮತ ಸಂಬಂಧವಾದ ಏನೋ ಕೆಲಸವಾಗುತ್ತಿದೆಯೆಂದು ಪುನರಾಲೋಚಿಸಿ, ಅದನ್ನು ಭಂಗಗೊಳಿಸಬಾರದೆಂದು ನಾನೇ ಇಲ್ಲಿಗೆ ಬಂದೆ. ಇದೇನಾಗುತ್ತಲಿದೆ?” ಎಂದು ಅಪ್ಪಣೆ ಕೊಡಿಸಿದರು.
ತುಳು, ತಮಿಳು, ಕನ್ನಡ ಎಲ್ಲವೂ ಕಲೆಕ್ಟರರಿಗೆ ಗೊತ್ತಾಗುವುದೆಂದು ಎಲ್ಲರಿಗೂ ಗೊತ್ತು. ಮಂತ್ರವಾದಿಯ ಮಾತುಗಳು ಹೀಗಾದುವು:-
“ಇದು ಜಲದುರ್ಗೆಯ ಉಚ್ಚಾಟನೆ. ಈ ಹೆಂಗಸಿನ ದೇಹವನ್ನು ನಿನ್ನೆ ಇವಳು ಕೆರೆಯಲ್ಲಿ ಮೀಯುವಾಗ ಪ್ರವೇಶಿಸಿ, ಇವಳ ಮೂಲಕ ಪಟೇಲರ ಹೆಂಡತಿಯ ಗೆಜ್ಜೆಟೀಕನ್ನು ಅಡಗಿಸಿಡುವಂತೆ ಆ ದೇವತೆಯು ಮಾಡಿರುವಳು. ಮಂತ್ರದಿಂದ ನೋಡಿದ್ದಲ್ಲಿ ಇವಳೇ ಕದ್ದವಳೆಂದು ತಿಳಿದುಬರುತ್ತಿದೆ.”
ಕಲೆಕ್ಟರರು (ಗಂಭೀರವಾಗಿ ನಕ್ಕು):- “ವಿಚಿತ್ರ ಮಂತ್ರವಾದ! ಇನ್ನೇನು ಮಾಡಬೇಕು?”
ಮಂತ್ರವಾದಿ:- “ಅಗತ್ಯವಾದಲ್ಲಿ ಆ ಕುಂಡದಲ್ಲಿ ಇವಳನ್ನು ಕೂಡ್ರಿಸಬೇಕು. ಏನೂ ಅಪಾಯವಿಲ್ಲ.”
ಕಲೆಕ್ಟರರು:- ”ಇವಳೇ ಕದ್ದಳೆಂದು ಪ್ರಶ್ನೆಯಲ್ಲಿ ಹೇಗೆ ತಿಳಿಯಿತು?”
ಮಂತ್ರವಾದಿ:- “ಗ್ರಹಚಾರಫಲದಿಂದ.”
ಕಲೆಕ್ಟರರು:- “ಆಶ್ಚರ್ಯ! ಇಲ್ಲಿ ಬರಲು ನಿನಗೆ ಹೇಳಿದವರು ಯಾರು?”
ಮಂತ್ರವಾದಿ:- ”ಏನೂ ತಿಳಿಯದ ಈ ಹೆಂಗಸು.”
ಉಗ್ರಾಣಿ:- ”ಬಡವೆ, ಅವಳ ತಪ್ಪಿಲ್ಲ, ದೇವರೇ! ನನ್ನ ಹೆಂಡತಿಯವಳು.”
ಕಲೆಕ್ಟರರು:- ”ನಿನ್ನನ್ನು ಇಲ್ಲಿ ಕರೆಕಳುಹಿಸಿದ್ದುದು ಯಾರು?”
ಶಾನುಭಾಗರು:- “ನಾನು, ದೇವರೇ! ನನ್ನ ಹೆಂಡತಿ ಒಬ್ಬಳೇ ಮಾತ್ರ ಕೆರೆಯಲ್ಲಿ ಮೀಯುತ್ತಿದ್ದಳಂತೆ. ಆಗ ತಾನೇ ಪಟೇಲರ ಹೆಂಡತಿಯ ಗೆಜ್ಜೆಟೀಕು ಕಾಣೆಯಾಯಿತೆಂದು ತಿಳಿಯ ಬಂದಿತು. ಇವಳು ಎಷ್ಟು ವಿಚಾರಿಸಿದರೂ ತನಗೆ ತಿಳಿದಿಲ್ಲವೆಂದಳು. ಹೀಗಾಗಿ ಮಂತ್ರವಾದಿಯನ್ನು ಕರೆದುತರಬೇಕಾಯಿತು. ಈಗ ಸತ್ಯ ಹೊರಡುತ್ತಿದೆ.”
ಕಲೆಕ್ಟರರು ಪಟೇಲರ ಹೆಂಡತಿಯನ್ನು ಕರೆಯಿಸಿದರು. ಆಕೆ ಎಲ್ಲವನ್ನೂ ಹಿಂದೆ ಹೇಳಿದಂತೆಯೆ ಹೇಳಿದಳು.
ಪಟೇಲರನ್ನು ವಿಚಾರಿಸಲು, ತಾನು ಯಾರನ್ನೂ ಅನುಮಾನಿಸಿಲ್ಲವಾದರೂ, ದೇವತೆಗಳಿಗೆಲ್ಲ ಹರಕೆ ಹೇಳಿಕೊಂಡಿದ್ದೇನೆಂದು ಅವರ ಮಾತು. ಖಂಡಿತವಾಗಿಯೂ ಆಭರಣ ಸಿಕ್ಕುವುದೆಂದೇ ಅವರ ವಿಶ್ವಾಸ!
ಕಲೆಕ್ಟರರು:- ”ಆಭರಣ ಸಿಕ್ಕಿದರೆ?”
ಪಟೇಲರು:- ”ನನಗಾಯಿತು. ಇನ್ನು ಅದನ್ನು ನನ್ನ ಹೆಂಡತಿ, ಮೈಮೇಲಿನ ಪರಿವೆಯಿಲ್ಲದ ಹೆಂಡತಿ, ಇಟ್ಟುಕೊಳ್ಳುವುದು ಬೇಡ. ಮುನ್ನೂರು ರೂಪಾಯಿ, ದೇವರೇ!” ಅವರ ಒಂದೊಂದು ನಿಟ್ಟುಸಿರಿಗೂ ಮುನ್ನೂರು ಮುನ್ನೂರು ರೂಪಾಯಿಯ ಬೆಲೆ ಬರುವಂತಿದ್ದಿತು.
ಪಟೇಲರ ಹೆಂಡತಿ:- “ಆದೀತು, ನೀವು ಕೊರಳಿಗಿಟ್ಟುಕೊಳ್ಳಿ. ಹೇಗೂ ತೋಳುಸರಿಗೆ, ಒಂಟಿ, ಕೈ ಬಳೆ ಇತ್ಯಾದಿ ಇವೆ; ಚಾವಡಿಯಲ್ಲಿ ಶೃಂಗಾರವಾದೀತು.”
ಶಾನುಭಾಗರು:- “ನನಗಿಷ್ಟು ಕಷ್ಟವಾಗಿದೆ. ದೇವರೇ! ಈ ಖರ್ಚಿನ ಹಣವನ್ನಾದರೂ ಪಡೆಯಬೇಕಲ್ಲವೇ ಪಟೇಲರಿಂದ? ಇಲ್ಲದಿದ್ದರೆ ಅವರ ಉದ್ಯೋಗಕ್ಕೆ ಸಂಬಂಧಪಟ್ಟ ರಿಕಾರ್ಡು, ಅವರ ಮನೆತನದ ಲೆಕ್ಕಾಚಾರ, ಇವನ್ನೆಲ್ಲ ನಾನೇಕೆ ಮಾಡುತ್ತಿರಬೇಕು? ಇಲ್ಲವೇ, ಆ ಕೆಲಸ, ಈ ಮನೆ ಅಂಗಡಿಗಳಾದರೂ ನನಗೆ ಶಾಶ್ವತ ಸಿಗಬೇಕು.”
ಉಗ್ರಾಣಿಯ ಹೆಂಡತಿ:- “ಮಂತ್ರವಾದವು ಕೈಗೂಡುವಂತೆ ಅವನನ್ನು ನಾನೇ ಕರೆದುತಂದವಳು. ನನಗೇನು ಬಹುಮಾನ?”
ಉಗ್ರಾಣಿ:- “ಶಾನುಭಾಗರ ಮತ್ತು ಅವರ ಹೆಂಡತಿಯ ಜಾಗ್ರತೆ ನೋಡುತ್ತ ಕಾವಲು ನಿಂತವನು ನಾನು. ಇಲ್ಲದಿದ್ದರೆ ಇಲ್ಲಿ ನಿನ್ನೆ ಒಂದೋ, ಎರಡೋ ಹೆಣ ಬೀಳುತ್ತಿರಲಿಲ್ಲವೇ?”
ಇಷ್ಟಾಗುವಾಗ, ನಾಗಮ್ಮನು ಅತಿ ಕಷ್ಟದಿಂದ, ”ಹೂಂ,” ಎಂದು ಕಣ್ತೆರೆದಳು.
“ಶಹಬಾಸ್! ಕೊಡು ನನ್ನ ಸೊತ್ತನ್ನು!” ಎಂದು ಮಂತ್ರವಾದಿ ವಿಕಾರವಾಗಿ ಆರ್ಭಟಿಸಿದನು! “ಕೂಡಲೇ ಕೊಡು, ಗೊತ್ತಿದೆ ನನಗೆ. ದೇವರಿಲ್ಲಿದ್ದಾರೆ, ಪಂಜುರ್ಲಿಯನ್ನು ಮಾರಬೇಕವರಿಗೆ. ತಡಮಾಡಬೇಡ!”
ನಾಗಮ್ಮನು ಒಂದು ಮಾತನ್ನೂ ಆಡಲಿಲ್ಲ. ಮಂತ್ರವಾದಿ ಇನ್ನೂ ಇನ್ನೂ ವಿಕಾರವಾಗಿ ಮುಖಮಾಡಿ ಅವಳನ್ನು ಚುರಚುರನೆ ನೋಡಿದನು.
ಕಲೆಕ್ಟರರು ಮೆಲ್ಲನೆ ದಿಗ್ಭ್ರಾಂತರಾದಂತೆ ಮಾಡಿ, ಮೈಯ್ಯಲೆಲ್ಲ ಹುಡುಕಿದಂತೆ ನಟಿಸಿ, ತಮ್ಮ ಅಂಗಿ ಕಿಸೆಯಿಂದ ಗೆಜ್ಜೆಟೀಕನ್ನು ಹೊರಗೆತ್ತಿ, ಏನೂ ಒಂದೂ ತಿಳಿಯದವರಂತೆ, ”ಇದೆಲ್ಲಿಯದು, ನನ್ನ ಚೀಲದಲ್ಲಿ? ನಾನೇನೋ ಸುರುಳಿಕಟ್ಟಿದ ಹಾವಿನಂತಾಗಿದೆಯೆಂದು ಬೆದರಿದ್ದೆ!” ಎಂದರು.
ಸರ್ವರಿಗೂ ಆಶ್ಚರ್ಯವಾಯಿತು. ದೊರೆಗಳ ಮೇಲಿಂದ ದೇವಿ ದಯೆದೋರಿದಳು. ರಾಜದೈವ, ರಾಜಮರ್ಯಾದೆ ಕೊಟ್ಟಿತು. ಅಂತೂ ಗೆಜ್ಜೆಟೀಕು ದೊರೆಯಿತು.
ಮಂತ್ರವಾದಿಯ ಮುಖ ಬಹಳವಾಗಿ ಅರಳಿತು. ಇನ್ನೂ ಅದು ಅರಳಿದ್ದಲ್ಲಿ ಅವನ ಬಾಯಿ ಸೀಳಿ ಹೋಗುತಿದ್ದಿತು. ಪಟೇಲರು ತಮ್ಮ ಬಳೆತೊಟ್ಟ ಕೈಯನ್ನು ಬಹಳ ಮೇಲಕ್ಕೆತ್ತಿ, ”ಓ, ಓ,” ಎಂದರು. ಅವರ ಹೆಂಡತಿ ನಕ್ಕು ಉಕ್ಕಿ, ಬಿಕ್ಕಿ ಅತ್ತಳು. ಶಾನುಭಾಗರು ನಿಂತವರು ಕೂತರು; ಕೂತು ಎದ್ದುನಿಂತರು. ಉಗ್ರಾಣಿಯು ಕೈಬೀಸಿ ಸಂಕೋಲೆಯಿಂದ ಹೊಲವನ್ನು ಅಳೆದಂತೇನೋ ಅಭಿನಯ ಮಾಡಿದನು. ರುಕ್ಕು ಆ ಗೆಜ್ಜೆಟೀಕನ್ನೇ ನೋಡಿ ಕಣ್ಣಿನಿಂದಲೇ ಅದನ್ನು ನುಂಗುವಳೋ ಎಂಬಂತಿದ್ದಳು.
ಧರ್ಮಾವತಾರಿಗಳಾದ ದೊರೆಗಳ ಸನ್ನಿಧಾನ ಪ್ರಭಾವದಿಂದಲೇ ಈ ಒಡವೆಯು ತಾನಾಗಿ ದೊರೆಯುವಂತಾಯಿತೆಂದು ಅವರ ಮಹಿಮೆಯನ್ನು ಕೊಂಡಾಡಲು ಒಕ್ಕಲಕೂಟವು ಬಾಯ್ದೆರೆಯಿತು. ಎಲ್ಲರ ಕಣ್ಣುಗಳೂ ದೊರೆಗಳ ಮೇಲೆಯೇ!
”ಪಟೇಲರೇ! ನಿಮ್ಮ ಸೊತ್ತು ದೊರೆಯಿತಲ್ಲ! ಇನ್ನೇನೆನ್ನುವಿರಂತೆ?” ಎಂದು ದೊರೆಗಳು ಪಟೇಲರನ್ನು ಕೇಳಿದರು.
”ನಾವು ಹೇಳಿಕೊಂಡ ಹರಕೆಗಳನ್ನು ಆಯಾ ದೇವತೆಗಳಿಗೆ ಸಲ್ಲಿಸುತ್ತೇವೆ. ಇನ್ನು ಈ ಒಡವೆಯು ಮರೆಯಾಗದಂತೆ ಎಚ್ಚರವನ್ನು ತೆಗೆದುಕೊಳ್ಳುತ್ತೇವೆ. ಎಂತೂ ಮಂತ್ರವಾದಿಯವರ ಪ್ರಯತ್ನಗಳಿಗೆ ಅವರಿಗೆ ಬಹುಮಾನ ಕೊಡಬೇಕಾಗಿದೆ.”
”ಪಟೇಲರೇ! ಈ ಹುಡುಗಿಗೆ ತಲೆಮೈ ಸುಟ್ಟಿವೆ. ಬಹಳ ಕಂಗಾಲಾಗಿದ್ದಾಳೆ. ಇವಳ ಮೇಲೆ ಮಂತ್ರವಾದ ನಡೆದೇ ಇದು ದೊರವಂತಾಗಿದೆಯಲ್ಲ! ಅವಳಿಗೇನು ಕಷ್ಟಪರಿಹಾರ?
”ಅವಳಿಗೇನು? ಮಾಮೂಲಿನಂತೆ ಮುತ್ತೈದೆಯರಿಗೆ ನಮ್ಮ ಗುತ್ತಿನಿಂದ ಉಪಚಾರಗಳು ಸಲ್ಲುವುದುಂಟು. ಅದನ್ನು ಕೊಡಿಸುತ್ತೇನೆ. ಅವಳ ಮೇಲೆ ಉಂಟಾದ ಗುಮಾನು ನಿಜವಾದಂತಾಯಿತು. ಈ ಮಂತ್ರವೆಲ್ಲ ಅವಳ ಮೇಲೆ ನಡೆಯದಿರುತ್ತಿದ್ದರೆ ಒಡವೆ ಸಿಗುತಿತ್ತೇ?”
“ಶಾನುಭಾಗರೇನಂತೆ?”
“ದೈವಹಿಡಿದು ಹೀಗೆಲ್ಲ ನನಗೆ ನಗೆಗೇಡು ಮಾಡುವ ಹೆಂಡತಿಯಿಂದೇನು? ನನ್ನ ಸಂಕಟ ಅಪಾರ. ದೇವರೇ!”
“ಮಂತ್ರವಾದಿ, ಇಷ್ಟು ವಿಚಿತ್ರವಾದ, ಅದ್ಭುತವಾದ ಶಕ್ತಿಯು ನಿನ್ನಲ್ಲಿರುವಾಗ ಈ ಹಾಳು ಗ್ರಾಮದಲ್ಲಿ ನೀನಿನ್ನು ವಾಸಮಾಡುವುದು ಪ್ರಯೋಜನಕರವೇ? ರಾಜಧಾನಿಗೆ ಹೋಗೋಣ.”
”ಅಪ್ಪಣೆಯಾದಂತೆ.”
ಪಟೇಲರು, ಶಾನುಭಾಗರು, ಮೊದಲಾದವರು ಮಂತ್ರವಾದಿಯನ್ನು ವರ್ಗಾಯಿಸುವುದು ಬೇಡವೆಂದು ದೊರೆಯನ್ನು ಕೇಳಿಕೊಂಡರು.

ಆಗ ದೊರೆಯವರು ಅಪ್ಪಣೆ ಕೊಡಿಸಿದುದೇನೆಂದರೆ:-
”ನಿನ್ನೆ ಬೆಳಿಗ್ಗೆ ಕೆರೆಯಲ್ಲಿ ಮೀನು ಶಿಕಾರಿಮಾಡಲು ನಾನು ಹೋಗಿದ್ದೆ. ಹಿಂದಿರುಗುವಾಗ ಒಂದು ಕಡೆ ವೀಳೆಯ ಕಟ್ಟಿದ್ದ ಚಿಕ್ಕ ವಸ್ತ್ರವೊಂದೂ, ಅದರ ಅಡಿಯಲ್ಲಿ ಈ ಆಭರಣವೂ ಅಲ್ಲಿದ್ದುದನ್ನು ಕಂಡೆ. ಅವನ್ನು ಎತ್ತಿಕೊಂಡು ಬಂಗಲೆಗೆ ಬಂದು, ಅವುಗಳ ವಾರಸಿ ಹುಡುಕಿಕೊಡಲು ಪೋಲೀಸ್ ಆಫೀಸರರು ಅವನ್ನು ಅಮಾನತು ಇರಿಸಬೇಕೆಂದು ಸೂಚನೆ ಬರೆದು, ಈ ಹೊತ್ತು ರಾಜಧಾನಿಗೆ ಹೋಗುವಾಗ ಒಡವೆಯನ್ನು ಕೊಂಡುಹೋಗಬೇಕೆಂದು ಚೀಲದಲ್ಲಿ ಮಡಗಿಕೊಂಡಿದ್ದೆ. ಆದರೂ ಇಟ್ಟ ಸ್ಥಳವನ್ನು ಮರೆತು ಈ ಬಡಹುಡುಗಿಯೇ ಅದನ್ನು ಕದ್ದಿರಬಹುದೆಂದು ನೀವು ಊಹಿಸುವಂತೆ ಆದುದಕ್ಕೆ ಕಾರಣ ಯಾರು? ಪಟೇಲರೂ ಶಾನುಭಾಗರೂ ಕಾಣೆಯಾದುದನ್ನು ಗ್ರಾಮದಲ್ಲಿ ತಲಾಸಿ ಮಾಡುವ ಕ್ರಮವೇನೆಂದು ಕೇಳಿದ್ದೆ. ಈಗ ತಿಳಿದೆ; ಕಣ್ಣಾರೆ ಕಂಡೆ. ಮಂತ್ರಗಾರನಿಗೆ ಹೇಳಿಕೆ ಹೋಗುತ್ತಲೇ ಎಲ್ಲವನ್ನೂ ಅವನು ಈ ಹೆಂಗಸಿಂದ ತಿಳಿದು, ಪ್ರಶ್ನೆಯನ್ನು ಕಂಡಂತೆಯೇ ಹೇಳುವನು. ಸಣ್ಣ ಹಳ್ಳಿ, ಏನೊಂದು ಸುದ್ದಿ ಮನೆಯಿಂದ ಮನೆಗೆ ಸುಲಭವಾಗಿ ಹರಡುತ್ತದೆ. ಅದೇ ‘ಗ್ರಹಚಾರ ಫಲ’ವಾಗಿ ತೋರಬಹುದು. ಏನೂ ಅರಿಯದ ಈ ಬಡ ಹುಡುಗಿಯ ಮೇಲೆ ಬಹಳ ಅತ್ಯಾಚಾರ ನಡೆದಿದೆ. ಇದಕ್ಕೆ ಹೊಣೆಗಾರನು ಈ ಮಂತ್ರವಾದಿಯೇ. ಇವನನ್ನು ರಾಜಧಾನಿಗೆ ವರ್ಗಾಯಿಸಿ ಅಲ್ಲಿ ಇವನ ವಿಚಾರಣೆ ನಡೆಯಬೇಕಾಗಿದೆ.
“ಹಳ್ಳಿಯ ಜನರಲ್ಲಿರುವ ಮೂಢನಂಬಿಕೆಗಳನ್ನು ತನ್ನ ಪ್ರಯೋಜನಕ್ಕೆ ಬರುವಂತೆ ತಿದ್ದಿಕೊಂಡು, ಹಳ್ಳಿಗರನ್ನು ಕೊಳ್ಳೆಹೊಡೆವ ಈ ಮಂತ್ರಗಾರನು ಈಗ ಮಾಡಿರುವ ಈ ತಕ್ಷೀರಿಗೆ ಎರಡು ವರ್ಷ ಕಠಿಣ ಸಜೆಯನ್ನಾದರೂ ಅನುಭವಿಸಬೇಕಾದೀತು. ಅವರಿಗೆ ಸಹಾಯಕರಾಗಿದ್ದ ಶಾನುಭಾಗರು, ಈ ಹೆಂಗಸು, ಈ ಉಗ್ರಾಣಿ, ಮೊದಲಾದವರ ಅಪರಾಧವು ಎಷ್ಟಾಗುವುದೆಂದು ನೋಡಿದರೆ, ಶಾನುಭಾಗರ ಅನ್ಯಾಯವು ಬಹಳವಾಗಿರುವಂತೆ ತೋರುತ್ತದೆ. ಇವರು ಈ ಕೆಲಸಕ್ಕೆ ಯೋಗ್ಯರಲ್ಲ. ಆದರೆ ಬರ್ತರಫ್ ಮಾಡಿದರೆ ಆ ಬಡ ಹೆಂಗಸು ಇನ್ನೂ ಹೆಚ್ಚಾಗಿ ನರಳುವಂತಾಗುವುದು. ಅದಕ್ಕಾಗಿ ಇವರ ನಡತೆಯನ್ನು ನಜರಿನಲ್ಲಿಟ್ಟುಕೊಳ್ಳುವೆವು. ಇಂತಹವರು ಪಟೇಲರ ಖಾಸಗಿ ಕೆಲಸ ಮಾಡುತ್ತಿದ್ದು, ಪಟೇಲರು ಇವರ ಹಂಗಿನ ಮನುಷ್ಯರಾಗಿರುವ ಕಾರಣ, ಸ್ವತಃ ಓದುಬರಹ ಬಲ್ಲ ಯೋಗ್ಯರು ಯಾರೂ ಪಟೇಲರ ಕುಟುಂಬದಲ್ಲಿದ್ದಾರಾದರೆ, ಅವರನ್ನು ಹುಡುಕಿ, ಪಟೇಲಿಕೆಯನ್ನು ಅವರಿಗೆ ಕೊಡುವುದು ಉತ್ತಮವೆಂದು ತೋರುತ್ತದೆ. ಉಗ್ರಾಣಿ! ನಿನ್ನ ನಜರು ನಿನ್ನ ಹೆಂಡತಿಯ ಮೇಲೂ ಇರತಕ್ಕದ್ದಲ್ಲವೇ?”
ಅತಿ ಸುಲಭವಾಗಿರುವ ಮಾತುಗಳಲ್ಲಿ ಈ ಅಭಿಪ್ರಾಯವನ್ನು ದೊರೆಗಳು ಅಪ್ಪಣೆ ಕೊಡಿಸಿದರು. ಆಗತಾನೇ ಒಕ್ಕಲುಗಳು ಆ ಮಂತ್ರವಾದಿಯ ಕಡೆಗೂ ರುಕ್ಕುವು ಈ ಬಡ ಹುಡುಗಿಯ ಕಡೆಗೂ ಧಾವಿಸಿದರು. ತಮ್ಮನ್ನು ಬಗೆಬಗೆಯಾಗಿ ಸುಲಿದ ಮಂತ್ರವಾದಿಯನ್ನು ಕೊನೆಯ ಬಾರಿ ಕಾಣುವುದಕ್ಕೆಂದು ಒಕ್ಕಲುಗಳು ತವಕಗೊಂಡರು. ರುಕ್ಕುವು ದೊರೆಗಳು ನಾಗಮ್ಮನಲ್ಲಿಟ್ಟ ಕನಿಕರವನ್ನು ತಿಳಿದು, ಎಷ್ಟೆಂದರೂ ಅವಳ ಹೆಂಗರುಳು ಕರಗಿ, ನಾಗಮ್ಮನ ಆರೈಕೆ ಮಾಡತೊಡಗಿದಳು. ತಾನು ಉಗ್ರಾಣಿಯ ಹೆಂಡತಿ, ಅಥವಾ, ತಾನು ಬ್ರಾಹ್ಮಣ ಹೆಂಗಸಲ್ಲವೆಂಬ ವಿಚಾರಗಳಾದರೂ ಅವಳಲ್ಲಿ ಉಂಟಾಗಲಿಲ್ಲ. ಪಟೇಲರು ಐವತ್ತು ರೂಪಾಯಿ ರೊಕ್ಕವನ್ನು, ಎಲವಸ್ತ್ರದ ಸೆರಗಿನಿಂದ ಗಂಟುಬಿಚ್ಚಿ, ಹೆಂಡತಿಯ ಕೈಯಿಂದ ನಾಗಮ್ಮನ ಬಳಿ ಭಕ್ತಿಯಿಂದ ಕಾಣಿಕೆ ಇಡಿಸಿದರು. ಉಗ್ರಾಣಿಯು ಕಂಚುಗಾರನ (ಮಂತ್ರವಾದಿಯ) ಮನೆಗೆ ಓಡಿಹೋಗಿ, ಪಂಜುರ್ಲಿಯ ವಿಗ್ರಹ ತಂದು, ಬಟ್ಲರನ ಕೈಯಲ್ಲಿ ಭಕ್ತಿಯಿಂದ ಕಾಣಿಕೆಯಿಟ್ಟನು. ಶಾನುಭಾಗರು ದೊರೆಗಳು ನಿಂತಲ್ಲಿಯೇ ತಾವು ಕೂತರು. ಹೀಗೊಂದು ಕೊನೆಯ ಅಂಕದ ತೆರೆ ಇಳಿಯುವ ಸನ್ನಿವೇಶವಾಯಿತು. ನಂತರ ದೊರೆಗಳು ಆ ಗೆಜ್ಜೆಟೀಕನ್ನು ಪಟೇಲರಿಗೆ ಕೊಟ್ಟರು. ಮಂತ್ರವಾದಿಯನ್ನು, ನಾಲ್ಕು ರೂಪಾಯಿ (ವಿಗ್ರಹದ ಬೆಲೆ) ಕೊಟ್ಟು, ಇನ್ನು ಮಾಟಗಾರನಾಗುವ ಬದಲು ತೋಟಗಾರನಾಗಬೇಕೆಂದು ಬೋಧಿಸಿದರು. ತಮ್ಮ ಚೀಲದಿಂದ ಎಂತಹದೋ ಮುಲಾಮನ್ನು ನಾಗಮ್ಮನ ಸುಟ್ಟ ಗಾಯಗಳಿಗೆ ಹಚ್ಚಲು ಕೊಡಿಸಿದರು. ಅಲ್ಲಿಂದ ನಸುನಗುತ್ತ ಬಂಗಲೆಗೆ ಹೊರಟರು.
”’ಸುಮ್ಮನೇ ಸೆಟ್ಲ್ಮೆಂಟ್ ಮಾಡುತ್ತಾರೆ, ತೀರ್ವೆ ಹೆಚ್ಚಿಸುತ್ತಾರೆ,’ ಎಂದು ದೂರುತ್ತಾರಲ್ಲ! ಇವರೇ ದೊರೆಗಳು. ಸೆಟ್ಲ್ಮೆಂಟ್ ಬಾಬುಗಳನ್ನು ವಿಚಾರಮಾಡುತ್ತ ತೀರ್ವೆ ಕೊಡಿಸುವವರು ನಿಜ. ಆದರೆ ಏನೂ ಹೇಳಿರಿ. ದೊರೆಗಳು ಎಷ್ಟು ಚೆನ್ನಾಗಿ ನ್ಯಾಯ ತೀರಿಸಿದರು! ಬ್ರಿಟಿಷರಲ್ಲಿರುವ ನ್ಯಾಯಬುದ್ಧಿಯ ಮಂತ್ರಬಲವು ಎಂತಹ ಮಂತ್ರವಾದವನ್ನೂ ಗೆಲ್ಲುವುದಲ್ಲವೇ?” ಎಂದು ಶಾನುಭಾಗರು ಪಟೇಲರಿಗೂ ಪಟೇಲರು ಶಾನುಭಾಗರಿಗೂ ಹೇಳುತ್ತಿರುವಾಗ ಒಕ್ಕಲುಗಳು ಕೇಳುತ್ತ ವಿಸ್ಮಿತರಾಗಿದ್ದರು.
ರುಕ್ಕುವಂತೂ ನಾಗಮ್ಮನನ್ನು ಬಿಟ್ಟಳೆಂಬ ಜಲದುರ್ಗೆಗಿಂತ ನೂರುಮಡಿ ಹೆಗ್ಗಳಿಕೆಯ ನೆಲದುರ್ಗೆಯಾಗಿ, ನಾಗಮ್ಮನ ಪೂರ್ಣ ಸೌಖ್ಯವಾಗುವತನಕವೂ ಅವಳ ಸೇವೆ ಮಾಡಿದಳು. ಶಾನುಭಾಗರ ಹಟ್ಟಿಯಲ್ಲಿ ಮಾತ್ರ ಎಮ್ಮೆಯಿಲ್ಲ. ಅದು ಚೊಕ್ಕವಾಗಿ, ಸುಂದರವಾಗಿ, ಹದವಾಗಿ, ರುಕ್ಕು ಪೂವರ ಸಂಸಾರಕ್ಷೇತ್ರವಾಯಿತು.
ಯಾವ ಮಂತ್ರದ ಬಲವೂ ಇಲ್ಲದೆ ರುಕ್ಕುವು ಈಗ ಒಂದು ಮಗುವಿನ ತಾಯಿಯಾಗಿದ್ದಾಳೆ. ಮಗುವಿ ಹೆಸರು ನಾಗಮ್ಮ. ರುಕ್ಕುವು ಈ ನಾಗಮ್ಮನನ್ನು ಗೆಜ್ಜೆಟೀಕಿಗಿಂತಲೂ ಬಿಗಿಯಾಗಿ ಕೊರಳಿಗೆ ಕಟ್ಟಿಕೊಂಡಿದ್ದಾಳೆ.
(ಕೃಪೆ: ಮಲ್ಲಿಗೆ ಮಾಸಪತ್ರಿಕೆ. ‘ಅಂದಿನ ಆವೂರು’, ಮಿತ್ರಮಂಡಳಿ, ಮಂಗಳೂರು, 1941)

ಕಾಮತರ ‘ಕದ್ದವರು ಯಾರು?’
ಕನ್ನಡ ನವೋದಯದ ಆರಂಭಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಹಳಷ್ಟು ಕನ್ನಡ ಚಟುವಟಿಕೆಗಳ ಕೇಂದ್ರವಾಗಿತ್ತು. ಹಲವಾರು ಪತ್ರಿಕೆಗಳು ಅಲ್ಲಿಂದ ಪ್ರಕಟವಾದವು. ಹಲವಾರು ಮುದ್ರಣಾಲಯ, ಪ್ರಕಾಶನ ಮಂದಿರಗಳು ತಲೆಯೆತ್ತಿದವು. ಅನೇಕ ಜನ ಲೇಖಕರು ಕೃತಿರಚನೆ ಮಾಡಿದರು. ಆದರೆ ದುರ್ದೈವದಿಂದ ಅಲ್ಲಿಯ ಪತ್ರಿಕೆಗಳು ಆ ಜಿಲ್ಲೆಯ ವ್ಯಾಪ್ತಿಯನ್ನು ದಾಟಿ ಅಖಿಲ ಕರ್ನಾಟಕದ ಓದುಗರನ್ನು ತಲುಪಲಿಲ್ಲ. ಇದರಿಂದಾಗಿ ಆ ಪತ್ರಿಕೆಗಳಿಗಾಗಿಯೇ ತಮ್ಮ ಬರವಣಿಗೆಯ ಶಕ್ತಿಯನ್ನೆಲ್ಲ ಮೀಸಲಾಗಿರಿಸಿದ ಆ ಜಿಲ್ಲೆಯ ಹಲವಾರು ಜನ ಲೇಖಕರ ಪರಿಚಯ ಜಿಲ್ಲೆಯ ಹೊರಗಿನವರಿಗೆ ಹೆಚ್ಚಾಗಿ ಆಗಲಿಲ್ಲ. ಹೀಗೆ ಅಖಿಲ ಕರ್ನಾಟಕ ಮಟ್ಟದಲ್ಲಿ ಅಪರಿಚಿತರಾಗಿ ಉಳಿದ ಲೇಖಕರಲ್ಲಿ ದಿ. ಎಂ.ಎನ್. ಕಾಮತರೂ (ಮುಂಡೂರು ನರಸಿಂಹ ಕಾಮತ: 1883-1940) ಒಬ್ಬರು. ಅವರು ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ಸಾವಿರಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾಗಿ ತಿಳಿದುಬರುತ್ತದೆ. ಆದರೆ ಅವರು ಜೀವಿಸಿದ್ದಾಗ ಅವರ ಒಂದು ಪುಸ್ತಕವೂ ಪ್ರಕಟವಾಗಲಿಲ್ಲ.
ಸಾಮಾನ್ಯವಾಗಿ ಶ್ರೀನಿವಾಸರಿಗಿಂತ ಮುಂಚೆ ಕನ್ನಡದಲ್ಲಿ ಸಣ್ಣಕತೆಗಳನ್ನು ಬರೆದರೆಂದು ತೆಗೆದುಕೊಳ್ಳಲಾಗುವ ಹೆಸರುಗಳಲ್ಲಿ ಕಾಮತರದೂ ಒಂದಾಗಿದೆ. ಆದರೆ ಈ ವಿಷಯದಲ್ಲಿ ಸ್ವಲ್ಪ ಸಂದೇಹವಿದೆ. 1910 ಡಿಸೆಂಬರ್ ಅಥವಾ 1911ರ ಜನೇವರಿ ಸುಮಾರಿಗೆ ತಾವು ತಮ್ಮ ಮೊದಲ ಕಥೆ ಬರೆದುದಾಗಿ ಶ್ರೀನಿವಾಸರು ಹೇಳುತ್ತಾರೆ. ಅದೇನಿದ್ದರೂ ಅವರ ಮೊದಲ ಕಥೆ ಪ್ರಕಟವಾದದ್ದು 1911ರಲ್ಲಿ ಮೈಸೂರಿನಿಂದ ಹೊರಡುತ್ತಿದ್ದ ‘ಮಧುರವಾಣಿ’ ಮಾಸಪತ್ರಿಕೆಯಲ್ಲಿ ಎಂಬುದಂತೂ ಖಚಿತವಾಗಿದೆ. ಕಾಮತರ ಕಥೆಗಳು ಪ್ರಕಟವಾಗಲು ಆರಂಭವಾದದ್ದು ಯಾವಾಗ ಎಂಬುದು ಇನ್ನೂ ಸಂದಿಗ್ಧವಾಗಿಯೇ ಇದೆ. ದಿ. ಗೋವಿಂದ ಪೈಯವರು ಒಂದೆಡೆ “ಇವರ ಕಥೆಗಳನ್ನು 1912ರಲ್ಲೋ ಅಥವಾ ಅದರ ಆಚೀಚೆಯೋ ಮೈಸೂರಿನ ‘ಮಧುರವಾಣಿ’ಯಲ್ಲೇನೋ ಓದಿದಂತೆ ನನಗೆ ನೆನಪಿದೆ” ಎಂದಿದ್ದಾರೆ (ಅಂದಿನ ಆವೂರು, ಪುಟ: xx). ಪೈಯವರ ನೆನಪನ್ನು ನಂಬುವದಾದರೆ ಕಾಮತರ ಕಥೆಗಳು ಪ್ರಕಟವಾದದ್ದು ಬಹುಶಃ ಶ್ರೀನಿವಾಸರ ಕಥೆ ಪ್ರಕಟವಾದ ನಂತರ ಎಂದು ನಿರ್ಣಯಿಸಬೇಕಾಗುತ್ತದೆ. ಹೆಚ್ಚಿನ ಸಂಶೋಧನೆ ಈ ವಿಷಯವನ್ನು ಖಚಿತ ಪಡಿಸಬೇಕು.
ಕನ್ನಡದ ಆರಂಭದ ಕತೆಗಾರರೆಂದು ಅನೇಕ ವಿಮರ್ಶಕರು ಕಾಮತರ ಹೆಸರನ್ನು ಸ್ಮರಿಸಿದ್ದಾರಾದರೂ ಬಹಳಷ್ಟು ಜನ ಅವರ ಕಥೆಗಳನ್ನು ನೋಡಿಯೇ ಇಲ್ಲ. ಅದರಿಂದಾಗಿ ಅವರ ಕಥೆಗಳನ್ನು ಕುರಿತು ಬರೆಯುವ ಗೋಜಿಗೆ ಯಾರೂ ಹೋಗಿಲ್ಲ. ಅವರು ಬರೆದಿದ್ದಾರೆನ್ನಲಾದ ‘ಸಹಸ್ರಾರು ಲೇಖನಗಳಲ್ಲಿ’ (ಅಂದಿನ ಆವೂರು, ಪುಟ: xix) ಸಣ್ಣ ಕತೆಗಳ ಒಟ್ಟು ಸಂಖ್ಯೆ ಎಷ್ಟೆಂಬುದು ತಿಳಿಯುವುದಿಲ್ಲ. ಕಾಮತರ ಮರಣಾನಂತರ ‘ಅಂದಿನ ಆವೂರು’ (1941) ಎಂಬ ಸಂಭಾವನಾ ಗ್ರಂಥವೊಂದು ಪ್ರಕಟವಾಗಿದೆ. ಇದರಲ್ಲಿ ಮೊದಲ ಭಾಗದಲ್ಲಿ ಕಾಮತರನ್ನು ಕುರಿತ ನೆನಪಿನ ಲೇಖನಗಳಿವೆ. ಎರಡನೆಯ ಭಾಗದಲ್ಲಿ ಕಾಮತರ ಐದು ಕತೆಗಳನ್ನು ಸಂಕಲಿಸಿ ಕೊಡಲಾಗಿದೆ. (ಅಲಭ್ಯವಾಗಿರುವ ಈ ಪುಸ್ತಕವನ್ನು ನನಗೆ ಒದಗಿಸಿದವರು ಸ್ನೇಹಿತರಾದ ಶ್ರೀ ಶೇಖರ ಇಡ್ಯ ಅವರು.) ಇನ್ನೊಂದು ಕಥೆ ಉಡುಪಿಯ ಕಿರಿಯರ ಪ್ರಪಂಚ ಪ್ರಕಟಿಸಿರುವ ‘ಮಧುವನ'(1935)ದಲ್ಲಿ ಬಂದಿದೆ. ಮತ್ತೊಂದು ಮಂಗಳೂರಿನ ಮಿತ್ರಮಂಡಳಿಯ ‘ನಮ್ಮ ಕತೆಗಳು'(1932)ದಲ್ಲಿದೆ. ಉಳಿದ ಕಥೆಗಳು ನೋಡಲು ಸಿಗುವದಿಲ್ಲ. ಕಥೆಗಳನ್ನಲ್ಲದೆ ಕಾಮತರು ಕವಿತೆ, ನಾಟಕ, ಲೇಖನಗಳನ್ನೂ ಬರೆದಿದ್ದಾರೆಂದೂ, ಕೆಲವು ಕವಿತೆಗಳು ಆ ಕಾಲದ ದಕ್ಷಿಣ ಕನ್ನಡ ಜಿಲ್ಲೆಯ ಪಠ್ಯಪುಸ್ತಕಗಳಲ್ಲಿ ಸೇರಿವೆಯೆಂದೂ ತಿಳಿಯುತ್ತದೆ. ಅವಿನ್ನೂ ಪುಸ್ತಕ ರೂಪದಲ್ಲಿ ಸಂಗ್ರಹವಾಗಿಲ್ಲ. ಈ ದಿಸೆಯಲ್ಲಿ ಸಂಶೋಧನೆ, ಸಂಪಾದನೆ ನಡೆಸುವವರಿಗೆ ಬೇಕಾದಷ್ಟು ಅವಕಾಶಗಳಿವೆ. ಈಚೆಗೆ ಎಂ.ಎನ್. ಕಾಮತರ ಬರಹಗಳನ್ನು ಸಂಪುಟಗಳ ರೂಪದಲ್ಲಿ ಪುತ್ತೂರಿನ ಕರ್ನಾಟಕ ಸಂಘ ಪ್ರಕಟಿಸಿದೆ.
ಇದಲ್ಲದೆ ”ಕಾಮತರ ಕತೆಗಳು ಹೆಚ್ಚಾಗಿ ಬಂಗಾಲಿ ಕತೆಗಳ ಭಾಷಾಂತರಗಳಾಗಿರುವುವು. ಅವರು ಸ್ವತಂತ್ರವಾಗಿ ಬರೆದ ಕತೆಗಳೇ ಕಡಿಮೆ; ಬರೆದಿದ್ದರೆ ಅವು ಕೂಡ ಬಂಗಾಲಿ ಕತೆಗಳ ರೀತಿಯ ಅನುಕರಣೆಗಳಾಗಿರುವುವು” ಎಂದು ಬೆಟಗೇರಿ ಕೃಷ್ಣಶರ್ಮರು ಒಂದೆಡೆ (ಜನಪದ ಜೀವನ, ಮೊದಲ ನುಡಿ, ಪುಟ: 20) ಬರೆದಿದ್ದಾರೆ. ಹೆಚ್ಚಿನ ಸಂಶೋಧನೆ ಈ ಮಾತನ್ನು ಖಚಿತಪಡಿಸಿ ಅವರ ಸ್ವತಂತ್ರ ಕತೆಗಳ ಸಂಖ್ಯೆಯನ್ನು ನಿರ್ಣಯಿಸಬೇಕಾಗಿದೆ.
“ಮಧುವನ” ಆಂಥಾಲಜಿ ಇನ್ನೂ ಸಿಗುತ್ತಿದೆ. ‘ಅಂದಿನ ಆವೂರು’ ಮಾತ್ರ ಎಲ್ಲೂ ಸಿಗುತ್ತಿಲ್ಲ. ಅನೇಕ ಜನ ಆಸಕ್ತರು ಇದರಲ್ಲಿಯ ಕಥೆಗಳನ್ನು ನೋಡಿಲ್ಲವಾದ್ದರಿಂದ ಆ ಪುಸ್ತಕದಿಂದಲೇ ಒಂದು ಕಥೆಯನ್ನು ಆರಿಸಲಾಗಿದೆ.
ಕಾಮತರ ಸಣ್ಣ ಕತೆಗಳಲ್ಲಿ ಆಧುನಿಕ ಸಣ್ಣಕತೆಯ ಲಕ್ಷಣಗಳಿನ್ನೂ ಸ್ಪಷ್ಟವಾಗಿಲ್ಲವೆಂದೇ ಹೇಳಬೇಕು. ಅವರ ಕಥೆಗಳೆಲ್ಲಾ ಹಾಸ್ಯಪ್ರಧಾನವಾದುವು. ಅವುಗಳ ಬಂಧ ಹರಟೆಯ ಬಂಧದಂತೆ ಬಹಳ ಸಡಿಲವಾಗಿದೆ. ಕೇಂದ್ರವಸ್ತುವನ್ನು ದಾಟಿ ಬರವಣಿಗೆ ಬಹಳ ದೂರಕ್ಕೆ ಹೋಗಿಬಿಡುತ್ತದೆ. ‘ಮಧುವನ’ದಲ್ಲಿ ಪ್ರಕಟವಾಗಿರುವ ‘ಆ ಮಗು’ ಎಂಬ ಕಥೆಯೊಂದನ್ನು ಬಿಟ್ಟರೆ ಉಳಿದ ಕಥೆಗಳೆಲ್ಲಾ ಸ್ವಲ್ಪ ಬೇಸರ ತರಿಸುವಷ್ಟು ಉದ್ದವಾಗಿವೆ. ಬರವಣಿಗೆಯಲ್ಲಿ ಸಂಕ್ಷಿಪ್ತತೆ ಇಲ್ಲ. ಹಾಸ್ಯ ಅನೇಕ ಸಲ ಹರಟೆ ಮತ್ತು ಪ್ರಹಸನಗಳ ಧಾಟಿಯನ್ನು ನೆನಪಿಗೆ ತರುತ್ತದೆ.
‘ಕದ್ದವರು ಯಾರು?’ ಕಾಮತರ ಉಳಿದ ಕತೆಗಳಿಗಿಂತಲೂ ಸಣ್ಣಕತೆಯ ಸ್ವರೂಪಕ್ಕೆ ಹೆಚ್ಚು ಸಮೀಪವಾಗಿರುವ ಬರವಣಿಗೆ. ಒಂದು ‘ಕಥೆ’ ಎನ್ನಬಹುದಾದ ಸನ್ನಿವೇಶವನ್ನು ಕೇಂದ್ರದಲ್ಲಿಟ್ಟುಕೊಂಡು ಬರವಣಿಗೆ ಬೆಳೆದಿದೆ. ಉಳಿದ ಕತೆಗಳಲ್ಲಿ ಕೇಂದ್ರ ಇಷ್ಟು ಕೂಡ ಸಬಲವಾಗಿಲ್ಲ. ‘ಬೊಗ್ಗು ಮಹಾಶಯನು’ ಎಂಬ ಕತೆಯಲ್ಲಿ ನಿಜವಾದ ಕಳ್ಳ ಜಜ್ಜಿ ಸಾಹೇಬರಿಗೆ ಸಹಾಯ ಮಾಡಿ ಸುರಕ್ಷಿತ ಸ್ಥಳಕ್ಕೆ ಮುಟ್ಟಿಸುವ, ನಂಬಿಗಸ್ತ ಆಳೆಂದು ಬಂದವನು ಕಳ್ಳನಾಗಿ ಮೋಸ ಮಾಡುವ ಕುತೂಹಲಕಾರಿಯಾದ ಸನ್ನಿವೇಶವಿದ್ದರೂ ಆರಂಭದ 8-9 ಪುಟಗಳಲ್ಲಿಯ ಆವೂರಿಗೆ ಕೋರ್ಟು ಬಂದದ್ದು, ಗಾಡಿಯ ಪ್ರಯಾಣ, ಜಜ್ಜಿ ಸಾಹೇಬರ ಧರ್ಮಭೀರುತ್ವ ಇತ್ಯಾದಿ ವಿವರಗಳು ಕತೆಗೆ ಅನಗತ್ಯವಾಗಿ ಬೆಳೆದಿವೆ. ‘ಆವೂರು ಮಠ’, ‘ವೈದ್ಯರಾಜ ಧನ್ವಂತರಿ’ ಮೊದಲಾದವನ್ನು ‘ಸಣ್ಣ ಕತೆ’ಗಳೆಂದು ಕರೆಯುವುದು ಕಷ್ಟ. ಈ ಐದೂ ಕತೆಗಳನ್ನು ‘ಆವೂರು’ ಎಂಬ ಹೆಸರಿನ ಒಂದೇ ಊರಿನಲ್ಲಿ ನಡೆದಂತೆ ಬರೆದಿರುವದೊಂದು ವಿಶೇಷ.
‘ಕದ್ದವರು ಯಾರು?’ ಕಥೆ ಸುಮಾರು 70-80 ವರ್ಷಗಳಷ್ಟು ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಜೀವನದ ಚಿತ್ರವನ್ನು ಕೊಡುತ್ತದೆ. ಆ ಬದುಕಿನ ಭಾಗವೇ ಆಗಿರುವ ದಾರಿದ್ರ್ಯ, ಮೌಢ್ಯ, ಶೋಷಣೆ, ಸ್ವಾರ್ಥ ಇತ್ಯಾದಿಗಳ ಜೊತೆಗೆ ಯುರೋಪಿನ ಅಧಿಕಾರಿಗಳ ಮುಖಾಂತರವಾಗಿ ಪ್ರವೇಶಿಸಿದ ಆಧುನಿಕತೆಯ ಚಿತ್ರವೂ ಕಥೆಯಲ್ಲಿ ಬಂದಿದೆ. ಆದರೆ ಇವೆರಡರ ಮುಖಾಮುಖಿಯಲ್ಲಿ ಅಂಥ ವಿಶೇಷವೇನೂ ಇಲ್ಲ. ಸ್ವಾಭಾವಿಕವಾಗಿಯೇ ಆಧುನಿಕತೆಯ ಬಗ್ಗೆ ಕತೆಗಾರನ ದೃಷ್ಟಿಕೋನದಲ್ಲಿ ಒಲವು ಕಾಣುತ್ತದೆ. ಅದು ಆಂಗ್ಲ ದೊರೆಗಳ ಬಗೆಗಿನ ಗೌರವವೆನಿಸುವವರೆಗೂ ಹೋಗಿದೆ. ಸ್ವಲ್ಪ ದೊಡ್ಡ ದನಿಯ ಹಾಸ್ಯದ ಧಾಟಿಯಲ್ಲಿ ಕತೆ ಹೇಳಲಾಗಿದೆ. ಒಟ್ಟಿನಲ್ಲಿ ಇಂದಿನ ಬದುಕಿಗೆ ಈ ಕಥೆಗಳು ಅಷ್ಟೇನೂ ಪ್ರಸ್ತುತವೆನಿಸುವದಿಲ್ಲ. ಹಾಗೆಯೇ ಹಳೆಯ ಕಾಲದ ಜೀವನಮೌಲ್ಯಗಳನ್ನು ಪುನರ್ನಿರ್ಮಿಸುವ ಮೂಲಕ ಇಂದಿನ ಜೀವನ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವದಿಲ್ಲ.
ಕನ್ನಡ ಸಣ್ಣಕತೆಯ ಆರಂಭದ ಲೇಖಕರಲ್ಲಿ ಒಬ್ಬರೆಂಬ ಕಾರಣಕ್ಕಾಗಿ ಕಾಮತರ ಕತೆಗಳಿಗೆ ಐತಿಹಾಸಿಕ ಮಹತ್ವವಿದೆ. ಆ ದೃಷ್ಟಿಯಿಂದಲೇ ಅವರ ಕತೆಗಳನ್ನು ಓದಬೇಕು. ಬಹುಶಃ ಅವರ ಎಲ್ಲ ಕತೆಗಳೂ ಪ್ರಕಟವಾದ ಮೇಲೆ ಇವಕ್ಕಿಂತ ಒಳ್ಳೆಯ ಕತೆಗಳು ಅವುಗಳಲ್ಲಿ ಸಿಗಬಹುದೋ ಏನೊ!
(ವಿಮರ್ಶೆ: ಡಾ. ಗಿರಡ್ಡಿ ಗೋವಿಂದರಾಜ, ಕೃಪೆ: ಮಲ್ಲಿಗೆ ಮಾಸಪತ್ರಿಕೆ)